ತಂದೆ ಗೌಡ್ರ ಮೇಲಿನ ಸಿಟ್ಟಿಗೆ ಎಚ್ಡಿಕೆ ಸೂರ್ಯವಂಶ ಚಿತ್ರ ನಿರ್ಮಿಸಿದ್ದೇ?
'ತಂದೆಯ ಮಾತನ್ನು ಕೇಳದ ಇವನೊಬ್ಬ ನಿಷ್ಫ್ರಯೋಜಕ' ಈ ಡೈಲಾಗ್ ಬರುವುದು ವಿಷ್ಣುವರ್ಧನ್ ಅವರ ಸೂಪರ್ ಹಿಟ್ ಸೂರ್ಯವಂಶ ಚಿತ್ರದ್ದು. ಈ ಡೈಲಾಗಿಗೂ, ಕುಮಾರಸ್ವಾಮಿಗೂ ಏನು ಸಂಬಂಧ?
ಸಂಬಂಧವಿದೆ, ಜೀವನದಲ್ಲಿ ಯಾವುದೇ ಕೆಲಸವನ್ನು ಪೂರ್ತಿಯಾಗಿ ಮುಗಿಸದೇ, ಅರ್ಧದಲ್ಲೇ ಕೈಬಿಡುತ್ತಿದ್ದ ಕುಮಾರಸ್ವಾಮಿಯ ಮುಂದಿನ ಭವಿಷ್ಯದ ಬಗ್ಗೆ ತಂದೆ ದೇವೇಗೌಡ್ರಿಗೆ ಬಹಳ ಚಿಂತೆಯಿತ್ತಂತೆ.
ರಾಜಕೀಯ ಜೀವನ ಆರಂಭಿಸುವ ಮುನ್ನ ಎಚ್ ಡಿ ಕುಮಾರಸ್ವಾಮಿ, ಸಿನಿಮಾ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡ್ಡಿದ್ದವರು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. (ಎಚ್ಡಿಕೆ ಹೋಂ ಬ್ಯಾನರಿನಲ್ಲಿ ಸಿನಿಮಾ ಮಾಡಿದ್ದೇನೆ)
ಚಿತ್ರ ನಿರ್ಮಾಪಕರಾಗುವ ಮುನ್ನ ಕುಮಾರಸ್ವಾಮಿ, ಹಳೇ ಮೈಸೂರು ಭಾಗದಲ್ಲಿ ಸಿನಿಮಾ ವಿತರಕರಾಗಿದ್ದರು, ತನ್ನದೇ ಚಿತ್ರಮಂದಿರವೊಂದನ್ನು ಹೊಂದಿದ್ದರು. ಚಿತ್ರೋದ್ಯಮದ ಪಲ್ಸ್ ಅಂದೇ ಕುಮಾರಸ್ವಾಮಿ ಅರಿತಿದ್ದರು.
ಮೈಸೂರಿನಲ್ಲಿ ಚೆನ್ನಾಂಬಿಕ ಫಿಲಂಸ್ ಬ್ಯಾನರ್ ಹುಟ್ಟುಹಾಕಿದ ಕುಮಾರಸ್ವಾಮಿ, ಎಷ್ಟೋ ಸಿನಿಮಾಗಳ ರೀಲ್ ಗಳನ್ನು ಬೆಂಗಳೂರಿನಿಂದ ತಾನೇ ಮೈಸೂರು ಪ್ರಾಂತ್ಯಕ್ಕೆ ತೆಗೆದುಕೊಂಡು ಬಂದ ಉದಾಹರಣೆಗಳಿವೆ ಎಂದು ಚೆನ್ನಾಂಬಿಕ ಫಿಲಂಸಿನ ಉದ್ಯೋಗಿ ನೆನಪಿಸಿಕೊಂಡಿದ್ದಾರೆ. (ಸದ್ದಿಲ್ಲದೇ ಎಚ್ಡಿಕೆ ವಿದೇಶಕ್ಕೆ ಹಾರಿದ್ದು ಯಾಕೆ)
ಕುಮಾರಸ್ವಾಮಿ ಸೂರ್ಯವಂಶ ಚಿತ್ರ ನಿರ್ಮಿಸಿದ್ದು, ತಂದೆ ಮೇಲಿನ ಸಿಟ್ಟಿಗಾ?, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ. (ಮಾಹಿತಿ: ಪ್ರಜಾ ಟಿವಿ)

ಡಾ. ರಾಜ್ ಚಿತ್ರಗಳು
ಡಾ. ರಾಜ್ ಚಿತ್ರದಿಂದ ಪ್ರೇರಿತರಾಗಿದ್ದ ಕುಮಾರಸ್ವಾಮಿ ಅವರಂತೇ ಡ್ರೆಸ್ ಹಾಕಿಕೊಳ್ಳುತ್ತಿದ್ದರಂತೆ. ಚಿತ್ರಮಂದಿರದ ಪ್ರೊಜೆಕ್ಟರ್ ರೂಂನಲ್ಲಿ ಇಡೀ ಚಿತ್ರ ವೀಕ್ಷಿಸುತ್ತಿದ್ದೆ. ಇದರಿಂದ ಪ್ರೇಕ್ಷಕ ಯಾವ ಸನ್ನಿವೇಶಕ್ಕೆ ಹೆಚ್ಚು ಸ್ಪಂದಿಸುತ್ತಾನೆ ಎನ್ನುವುದು ತಿಳಿಯುತ್ತಿತ್ತು ಎಂದು ಅಂದಿನ ಘಟನೆಗಳನ್ನು ಎಚ್ಡಿಕೆ ಮೆಲುಕು ಹಾಕಿಕೊಂಡಿದ್ದಾರೆ.

ಕನ್ನಡ ಚಿತ್ರಗಳು
ಕನ್ನಡ ಚಿತ್ರಗಳ ಮಾರ್ಕೆಟ್ ರೇಟನ್ನು ಏರಿಸದವನು ನಾನು. 5 ರಿಂದ 6 ಲಕ್ಷಕ್ಕೆ ಮಾರಾಟವಾಗುತ್ತಿದ್ದ ಕನ್ನಡ ಚಿತ್ರಗಳ ವಿತರಣೆ ಹಕ್ಕನ್ನು ಹತ್ತು ಲಕ್ಷಕ್ಕೂ ಹೆಚ್ಚಿನ ಮೊತ್ತಕ್ಕೆ ಮೊದಲು ಖರೀದಿಸಲು ಆರಂಭಿಸಿದ್ದೆ- ಕುಮಾರಸ್ವಾಮಿ.

ಅಂಬರೀಶ್ ಅಭಿನಯದ ಇಂದ್ರಜಿತ್ ಚಿತ್ರ
ಅಂಬರೀಶ್ ಅಭಿನಯದ ಇಂದ್ರಜಿತ್ ಮತ್ತು ಪ್ರಭಾಕರ್ ಅವರ ಚಿತ್ರವನ್ನು ಹದಿನೈದು ಲಕ್ಷಕ್ಕೆ ಖರೀದಿಸಿ, ಹಳೇ ಮೈಸೂರು ಭಾಗದಲ್ಲಿ ವಿತರಣೆ ಮಾಡಿದ್ದೆ. ನಾನೇ ಖುದ್ದಾಗಿ ನನ್ನ ಹಳೇ ಅಂಬಾಸಡರ್ ಕಾರಿನಲ್ಲಿ ಸಿನಿಮಾ ರೀಲ್ ತೆಗೆದುಕೊಂಡು ಹೋಗುತ್ತಿದ್ದೆ ಎಂದು ಕುಮಾರಸ್ವಾಮಿ ಹಳೇ ನೆನಪನ್ನು ಪ್ರಜಾ ಟಿವಿಯ ಕಾರ್ಯಕ್ರಮವೊಂದರಲ್ಲಿ ಮೆಲುಕು ಹಾಕಿಕೊಂಡಿದ್ದಾರೆ.

ಸೂರ್ಯವಂಶ ಚಿತ್ರ
ಸೂರ್ಯವಂಶ ಚಿತ್ರದಲ್ಲಿ ತಂದೆ ತನ್ನ ಕೊನೆಯ ಮಗನನ್ನು (ಕನಕ) ಆಟಕ್ಕುಂಟು, ಲೆಕ್ಕಕ್ಕಿಲ್ಲ, ನಿಷ್ಫ್ರಯೋಜಕ' ಎನ್ನುವ ಹಾಗೇ ನೋಡುತ್ತಿದ್ದರು. ಸಿನಿಮಾ ವಿತರಕರಾಗುವ ಮುನ್ನ ಕುಮಾರಸ್ವಾಮಿಯವರನ್ನೂ ತಂದೆ ಗೌಡ್ರು, ಚಿತ್ರದಲ್ಲಿರುವ ಮಟ್ಟಕ್ಕಿಲ್ಲವಾದರೂ, ಕೆಲಸಕ್ಕೆ ಬಾರದವನು ಎನ್ನುವ ರೀತಿಯಲ್ಲೇ ಟ್ರೀಟ್ ಮಾಡುತ್ತಿದ್ದರಂತೆ.

ಚಿತ್ರ ನಿರ್ಮಾಣ
ಸ್ವಂತ ಕಾಲಿನಲ್ಲಿ, ಯಾರ ಬೆಂಬಲವೂ ಇಲ್ಲದೇ ಕುಟುಂಬಕ್ಕೆ ಸಾಧಿಸಿ ತೋರಿಸಬೇಕು ಎನ್ನುವ ಕುಮಾರಸ್ವಾಮಿಯ ಛಲಕ್ಕೆ ಸ್ಪೂರ್ತಿಯಾಗಿ ಕಂಡಿದ್ದು ಸೂರ್ಯವಂಶ ಚಿತ್ರದ ಚಿತ್ರಕಥೆ. ತಂದೆಯ ಅನುಮತಿ ಪಡೆಯದೇ ಸೀದಾ ಈ ಚಿತ್ರ ನಿರ್ಮಾಣಕ್ಕೆ ಕುಮಾರಸ್ವಾಮಿ ಮುಂದಾದರು.

ಗೌಡ್ರಿಗೂ ಗೊತ್ತಿರಲಿಲ್ಲ
ಚಿತ್ರ ಬಿಡುಗಡೆಗೆ ತನಕವೂ ದೇವೇಗೌಡರಿಗೂ ಮಗ ಚಿತ್ರ ನಿರ್ಮಿಸಿದ್ದಾನೆ ಎನ್ನುವ ಅರಿವಿರಲಿಲ್ಲವಂತೆ. ಸೂರ್ಯವಂಶ ಚಿತ್ರದಲ್ಲಿ ಕೆಲಸಕ್ಕೆ ಬಾರದವನ್ನು ಎಂದು ದೂರವಿಟ್ಟಿದ್ದ ಪುತ್ರ, ಮುಂದೆ ದೊಡ್ಡ ಉದ್ಯಮಿಯಾಗಿ ತಂದೆಯ ಹೆಸರನ್ನು ಮತ್ತಷ್ಟು ಏರಿಸುತ್ತಾನೆ.

ಚಂದ್ರ ಚಕೋರಿ ಚಿತ್ರ
ಸೂರ್ಯವಂಶ ಚಿತ್ರ ಸೂಪರ್ ಹಿಟ್ ಆದ ಮೇಲೆ, ಇನ್ನೊಂದು ಚಿತ್ರವನ್ನು ಕೈಗೆತ್ತಿ ಕೊಂಡರು. ಅದು ಮುರಳಿ ಅಭಿನಯದ, ಎಸ್ ನಾರಾಯಣ್ ನಿರ್ದೇಶನದ ಚಂದ್ರ ಚಕೋರಿ ಚಿತ್ರ. ಈ ಚಿತ್ರ ಕೂಡಾ ಕುಮಾರಸ್ವಾಮಿಗೆ ಬಾಕ್ಸಾಫೀಸಿನಲ್ಲಿ ಭರ್ಜರಿ ಬೆಳೆ ತಂದುಕೊಟ್ಟಿತ್ತು. ಈಗ ಮಗನ ಜಾಗ್ವಾರ್ ಚಿತ್ರದ ಮೂಲಕ ಕುಮಾರಸ್ವಾಮಿ ಮತ್ತೆ ಚಿತ್ರ ನಿರ್ಮಿಸುತ್ತಿದ್ದಾರೆ. (ಸದ್ದಿಲ್ಲದೇ ನಡೀತಾ ಇದೆ ಜಾಗ್ವಾರ್ ಶೂಟಿಂಗ್)


Click it and Unblock the Notifications











