'ಬಂಗಾರದ ಮನುಷ್ಯ' ಯಶಸ್ಸಿನ ಸಂಭ್ರಮದಲ್ಲಿ ಕಣ್ಣನ್ನು ಕಳೆದುಕೊಂಡಿದ್ದ ಚಿತ್ರಮಂದಿರದ ಮಾಲೀಕ ನಿಧನ
ಕನ್ನಡ ಚಿತ್ರರಂಗವನ್ನು ಬೆಳೆಸುವುದಕ್ಕೆ ಸಾಕಷ್ಟು ಮಂದಿ ಶ್ರಮಿಸಿದ್ದಾರೆ. ಸಿನಿಮಾರಂಗ ಅಂದ್ಮೇಲೆ ನಟರು, ನಿರ್ಮಾಪಕರು, ನಿರ್ದೇಶಕರಿಂದ ಹಿಡಿದು ವಿತರಕರು ಹಾಗೂ ಪ್ರದರ್ಶಕರವರೆಗೂ ಅವರದ್ದೇ ಕೊಡುಗೆಯಿದೆ. ಕನ್ನಡ ಚಿತ್ರರಂಗಕ್ಕಾಗಿ ಹಲವು ಕುಟುಂಬಗಳು ಬಹಳಷ್ಟು ವರ್ಷಗಳಿಂದ ಕಲಾ ಸೇವೆ ಮಾಡುತ್ತಾ ಬಂದಿವೆ. ಅದರಲ್ಲಿ ಕೆಸಿಎನ್ ಕುಟುಂಬ ಕೂಡ ಒಂದು. ಇಂದು (ಫೆಬ್ರವರಿ 17) ಈ ಕುಟುಂಬದ ಹಿರಿಯರಾದ ಕೆ.ಸಿ. ರುದ್ರೇಗೌಡರನ್ನು ಕಳೆದುಕೊಂಡಿದೆ.
ಕೆಸಿಎನ್ ನಿರ್ಮಾಣ ಸಂಸ್ಥೆಯ ಮಾಲೀಕರಾದ ಕೆ ಸಿ ಎನ್ ಗೌಡ ಅವರ ಮತ್ತೊಬ್ಬ ಸಹೋದರೇ ಕೆ.ಸಿ. ರುದ್ರೇಗೌಡರು. ಇವರು ಇಂದು (ಫೆಬ್ರವರಿ 17) ನಿಧನರಾಗಿದ್ದಾರೆ. ಇವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಸಿನಿಮಾ ಮಂದಿರಗಳ ಮಾಲೀಕರಾಗಿ ಕೆ.ಸಿ. ರುದ್ರೇಗೌಡರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು.

ಚಿತ್ರಮಂದಿರ ಮಾಲೀಕರಾಗಿ ಸೇವೆ ಸಲ್ಲಿಸಿದ್ದ ಕೆ.ಸಿ. ರುದ್ರೇಗೌಡರು ಜೀವನದಲ್ಲಿ ಒಂದು ಕಹಿ ಘಟನೆ ನಡೆದಿತ್ತು. ಆ ಘಟನೆಯನ್ನು ಚಿತ್ರರಂಗದ ಗಣ್ಯರು ನೆನಪಿಸಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಡಾ.ರಾಜ್ಕುಮಾರ್ ನಟಿಸಿದ 'ಬಂಗಾರದ ಮನುಷ್ಯ' ದೊಡ್ಡ ಇತಿಹಾಸವನ್ನೇ ಸೃಷ್ಟಿಸಿತ್ತು. ತಮ್ಮ ಚಿತ್ರಮಂದಿರದಲ್ಲಿ ಈ ಸಿನಿಮಾದ 358ನೇ ದಿನದ ಪ್ರದರ್ಶನ ಕಾಣುತ್ತಿತ್ತು. ಈ ವೇಳೆ 'ಬಂಗಾರದ ಮನುಷ್ಯ' ಸಿನಿಮಾವನ್ನು ನಿಲ್ಲಿಸಿ, ಮತ್ತೊಂದು ಅಣ್ಣಾವ್ರ ಸಿನಿಮಾವನ್ನ ಪ್ರದರ್ಶನ ಮಾಡುವುದಕ್ಕೆ ಮುಂದಿದ್ದಾರು. ಅದುವೇ 'ಪಾರ್ವತಿ ಕಲ್ಯಾಣ'.
ಅದ್ಯಾವಾಗ 'ಬಂಗಾರದ ಮನುಷ್ಯ' ಸಿನಿಮಾವನ್ನು ತೆಗೆದು 'ಪಾರ್ವತಿ ಕಲ್ಯಾಣ' ಸಿನಿಮಾವನ್ನು ಪ್ರದರ್ಶನ ಮಾಡುತ್ತಾರೆಂಬ ಸುದ್ದಿ ಹಬ್ಬಿತೋ ಆಗಲೇ ಅಭಿಮಾನಿಗಳು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕುವುದಕ್ಕೆ ಶುರು ಮಾಡಿದ್ದರು. 1973ರ ಮಾರ್ಚ್ 23ರ ಶುಕ್ರವಾರ ಬೆಳಗ್ಗೆ ಸಾವಿರಾರು ಸಂಖ್ಯೆಯಲ್ಲಿ ಕನ್ನಡದ ಅಭಿಮಾನಿಗಳು ಕೆಂಪೇಗೌಡ ರಸ್ತೆಯ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿದರು.
ಇದೇ ಸಮಯದಲ್ಲಿ ಮೈಸೂರು ಬ್ಯಾಂಕ್ ಸುತ್ತಮುತ್ತ ಕಲ್ಲು ತೂರಾಟ, ಗುಂಪು ಗಲಭೆ ಎಲ್ಲವೂ ಆರಂಭವಾಯ್ತು. ಆಗ ನೂರಾರು ಮಂದಿ ಮೀಸಲು ಪೊಲೀಸ್ ಪಡೆ ಕರೆಸಿ ಲಾಠಿ ಪ್ರಹಾರ ಮಾಡಿಸಲಾಯ್ತು. ಹಲವಾರು ಸುತ್ತಿನ ಅಶ್ರುವಾಯು ಪ್ರಯೋಗ ಮಾಡಲಾಯಿತು. ಈ ಗಲಾಟೆಯಲ್ಲಿ ಹಲವು ಮಂದಿ ಪೊಲೀಸರಿಗೆ ಗಾಯವಾದವು.ಆ ಸಮಯದಲ್ಲಿ ಅಲ್ಲಿ ನೆರೆದಿದ್ದ ಗುಂಪು ಕಲ್ಲು ಬೀಸುವುದಕ್ಕೆ ಶುರು ಮಾಡಿದ್ದರು. ಈ ವೇಳೆ ಕೆ.ಸಿ. ರುದ್ರೇಗೌಡರ ಕಣ್ಣಿಗೆ ಹಾನಿ ಆಯ್ತು. ಇದರಿಂದ ಅವರು ಕಣ್ಣು ಕಳೆದುಕೊಳ್ಳಬೇಕಾಯ್ತು ಎಂದು ಸೋಶಿಯಲ್ ಮೀಡಿಯಾದ ಪೋಸ್ಟ್ನಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಸಿನಿಮಾ ಮಂದಿ ಈ ವಿಷಯವನ್ನು ಹಂಚಿಕೊಳ್ಳುತ್ತಿದ್ದಾರೆ.


Click it and Unblock the Notifications











