ಕತ್ತಿನ ಹಿಂಭಾಗದಲ್ಲಿ ಗಣೇಶನ ಟ್ಯಾಟೂ; ಟ್ರೋಲಿಗರಿಗೆ ಆಹಾರವಾದ ಕಿಚ್ಚನ ಪುತ್ರಿ ಸಾನ್ವಿ ಸುದೀಪ್
ಕಿಚ್ಚನ ಪುತ್ರಿ ಸಾನ್ವಿ ಸುದೀಪ್ ಆಗಾಗ ಟ್ರೋಲಿಗರಿಗೆ ಆಹಾರ ಆಗುತ್ತಲೇ ಇರುತ್ತಾರೆ. ಇದೇನು ಕಿಚ್ಚನಿಗೂ ಅವರ ಪುತ್ರಿಗೂ ಹೊಸದೇನು ಅಲ್ಲ. ಆಗಾಗ ಏನಾದರೂ ವಿಷಯಕ್ಕೆ ಸಾನ್ವಿ ಸುದೀಪ್ ಅವರನ್ನು ಟೀಕೆ ಮಾಡುತ್ತಲೇ ಇರುತ್ತಾರೆ. ಆದರೆ, ಅದ್ಯಾವುದಕ್ಕೂ ಸಾನ್ವಿ ಸುದೀಪ್ ತಲೆ ಕೆಡಿಸಿಕೊಂಡಿಲ್ಲ. ಕೆಲವೊಮ್ಮೆ ಇಂಗ್ಲಿಷ್ನಲ್ಲಿಯೇ ಮಾತಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇನ್ನೊಮ್ಮೆ ಧರಿಸಿದ ಉಡುಪಿನ ವಿಚಾರಕ್ಕೆ ಟೀಕೆಗಳನ್ನು ಎದುರಿಸಿದ್ದರು.
ಕಿಚ್ಚ ಸುದೀಪ್ ಕೂಡ ಹಲವು ಸಂದರ್ಶನಗಳಲ್ಲಿ ತಮ್ಮ ಮಗಳ ಬಗ್ಗೆ ಟೀಕೆ ಮಾಡುವುದನ್ನು ಖಂಡಿಸಿದ್ದರು. ಟೀಕಾಕಾರರಿಗೆ ಖಡಕ್ ಸಂದೇಶವನ್ನು ರವಾನೆ ಮಾಡಿದ್ದರು. ಹೀಗಿದ್ದರೂ ಮಗಳ ವಿರುದ್ಧ ಟೀಕೆ ಮಾಡುವುದು ಮಾತ್ರ ಕಮ್ಮಿಯಾಗಿಲ್ಲ. ಎರಡು ದಿನಗಳ ಹಿಂದಷ್ಟೇ ಸಾನ್ವಿ ಸುದೀಪ್ ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ವಿಡಿಯೋ ಒಂದನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು.

ಸಾನ್ವಿ ಸುದೀಪ್ ತನ್ನ ಕತ್ತಿನ ಹಿಂಭಾಗದಲ್ಲಿ ಗಣೇಶನ ಟ್ಯಾಟುವನ್ನು ಹಾಕಿಸಿಕೊಂಡಿದ್ದರು. ಆ ವಿಡಿಯೋವನ್ನು ನೋಡುತ್ತಿದ್ದಂತೆ ಟ್ರೋಲಿಗರು ಆಕ್ಟಿವ್ ಆಗಿದ್ದಾರೆ. ಹಾಗೇ ನೆಟ್ಟಿಗರು ಕೂಡ ನೆಗೆಟಿವ್ ಆಗಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಗಣೇಶನನ್ನು ಮೈಮೇಲೆ ಹಚ್ಚೆ ಹಾಕಿಸಿಕೊಳ್ಳುವುದನ್ನು ಒಪ್ಪಿಕೊಂಡಿಲ್ಲ. ಇದು ತಪ್ಪು ಎಂದು ಬಹುತೇಕ ಮಂದಿ ಟೀಕೆಯನ್ನು ಮಾಡಿದ್ದಾರೆ. ಹಾಗಿದ್ದರೆ, ನೆಟ್ಟಿಗರು ಏನು ಹೇಳಿದ್ದಾರೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಸಾನ್ವಿ ಸುದೀಪ್ ಮಾಡಿದ ವಿಡಿಯೋಗೆ ಕಾಮೆಂಟ್ಗಳು ಬಹುತೇಕ ನೆಗೆಟಿವ್ ಆಗಿದೆ. ಒಬ್ಬರು "ದೇವ್ರು ಮನಸಲ್ಲಿ ಇರ್ಬೇಕು ಮೈ ಮೇಲೆ ಅಲ್ಲ" ಎಂದು ಹೇಳಿದ್ದರೆ, ಇನ್ನೊಬ್ಬರು "ತುಂಬಾ ತುಂಬಾ ತುಂಬಾ ಚೆನ್ನಾಗಿದೆ ಮೇಡಂ.. ಆದ್ರೆ ನನಗೆ ತಿಳಿದಿರೋದ್ ಒಂದು ಮಾತು ಹೇಳ್ತಿನಿ ಬೇಜಾರು ಮಾಡ್ಕೋಬೇಡಿ ಪ್ಲೀಸ್. ಗಣಪತಿಯನ್ನು ಬೆನ್ನ ಮೇಲೆ ಹಾಕಿಸಿಕೊಳ್ಳಬಾರದು. ಕೈ ರಟ್ಟೆ ಮೇಲೆ ಹಾಕಿಸಿಕೊಳ್ಳಬಹುದಿತ್ತು." ಎಂದು ಸಲಹೆಯನ್ನು ನೀಡಿದ್ದಾರೆ. ಮತ್ತೊಬ್ಬರು "ಇದು ನಮ್ಮ ಸಂಸ್ಕೃತಿ ಅಲ್ಲ.. ದೇವರು ಪೂಜೆಗೆ ಸೀಮಿತ ಹೊರತು ನಿಮ್ಮ ಸೋಕಿಗೆ ಅಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ.
ಗಣೇಶನ ಟ್ಯಾಟೋಗೆ ಬಂದ ಬಹುತೇಕ ಕಾಮೆಂಟ್ಗಳು ನೆಗೆಟಿವ್ ಆಗಿದೆ. "ಬೇರೆ ಅವರು ಮಕ್ಕಳು ಮಾಡಿದ್ರೆ ತಪ್ಪು, ಚಪ್ರಿ ಮತ್ತೆ ಇನ್ನು ಏನೇನೋ ಕರೆಯುತ್ತೀರ. ಅದೇ ಶ್ರೀಮಂತರ ಮಕ್ಕಳು ಮಾಡಿದ್ರೆ ಟ್ರೆಂಡು. ಅದು ಇದು ಏನೇನೋ.. ಬಡವರು ಮಾಡಿದ್ರೆ, ತಪ್ಪು ಶ್ರೀಮಂತರ ಮಕ್ಕಳು ಮಾಡಿದ್ರೆ ತಪ್ಪಲ್ಲ ಅಷ್ಟೇ.." ಎಂದಿದ್ದಾರೆ. ಹಾಗೇ ಇನ್ನೊಬ್ಬರು "ಅಕ್ಕ ನಿನಗೆ ಇಂಗ್ಲೀಷ್ ಬರುತ್ತದೆ ಅಂತ ಗೊತ್ತು. ದಯವಿಟ್ಟು ಕನ್ನಡದಲ್ಲಿ ಮಾತಾಡು. ಒಬ್ಬ ದೊಡ್ಡ ಸ್ಟಾರ್ ಮಗಳು, ನಿಮ್ಮ ಅಪ್ಪ ನನ್ ಬಾಸ್" ಎಂದು ಹೇಳಿದ್ದಾರೆ.
ಇನ್ನು ಕೆಲವು ಕಾಮೆಂಟ್ಗಳಲ್ಲಿ ಬುದ್ಧಿ ಹೇಳಿದ್ದಾರೆ. "ದೊಡ್ಡವರು ಆದರ್ಶವಾಗಿ ಬದುಕಬೇಕು, ದೇವರಿಗೆ ಗೌರವ ಕೊಡಬೇಕು, ಈ ರೀತಿ ವರ್ತನೆಗಳನ್ನು ನಿಲ್ಲಿಸಿ" ಎಂದು ಹೇಳಿದ್ದಾರೆ. ಮತ್ತೊಬ್ಬರು ಹ್ಯೂಮರ್ಸ್ ಆಗಿ ಕಾಮೆಂಟ್ಗಳನ್ನು ಮಾಡಿದ್ದಾರೆ. "ಏಕಾಂತದ ಟೈಮ್ ಅಲ್ಲಿ.. ಏಕದಂತನ ಕಥೆ ಏನು?" ಎಂದಿದ್ದಾರೆ. ಹಾಗೆ ಕೆಲವರು ಸಾನ್ವಿ ಸುದೀಪ್ ಬೆಂಬಲಕ್ಕೆ ನಿಂತಿದ್ದಾರೆ. "ನೂರ್ ಜನ ಬುದ್ದಿ ಹೇಳೋಕೆ ಬರ್ತಾರೆ ನೋಡಿ" ಎಂದು ಸಾನ್ವಿಗೆ ಸಪೋರ್ಟ್ ಮಾಡಿದ್ದಾರೆ.
ಸಾನ್ವಿ ಸುದೀಪ್ ಕತ್ತಿನ ಹಿಂಭಾಗದಲ್ಲಿ ಗಣೇಶನ ಟ್ಯಾಟೂ ಹಾಕಿಸಿಕೊಂಡಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ನೆಟ್ಟಿಗರು ಸುದೀಪ್ ಪುತ್ರಿಯ ವಿರುದ್ಧ ಗರಂ ಆಗಿದ್ದಾರೆ. ಆದರೆ, ಈ ಕಾಮೆಂಟ್ಗಳಿಗೆ ಸಾನ್ವಿ ಸುದೀಪ್ ಎಂದಿನಂತೆ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ. ಸುದೀಪ್ ಬೆಂಬಲಿಗರು ಸಾನ್ವಿ ಪರವಾಗಿ ನಿಂತು ಬ್ಯಾಟ್ ಬೀಸುತ್ತಿದ್ದಾರೆ.


Click it and Unblock the Notifications
