Coastalwood: 9ನೇ ತರಗತಿ ಫೇಲಾದ ದಡ್ಡ ಹುಡುಗ 'ದಸ್ಕತ್' ಗೆದ್ದ ಕಥೆ!
ಆ ಕಣ್ಣುಗಳಲ್ಲಿ ಕನಸಿತ್ತು. ನೆಮ್ಮದಿಯ ನಿದ್ದೆ ಹತ್ತಿತ್ತು. ಆದರೆ ಉಳ್ಳವರ ಕೊಬ್ಬಿನ ಬೊಬ್ಬೆಗೆ ಆ ಕನಸೇ ಮರೆಯಾಗಿದೆ. ಕಣ್ಣಿಗೆ ನಿದ್ದೆ ಇಲ್ಲದಂತಾಗಿದೆ. ಅನ್ಯಾಯದ ವಿರುದ್ಧ ಸಿಡಿದೆದ್ದ ಶೇಖರನ ಎದೆ, ಕಣ್ಣುಗಳಲ್ಲಿ ರೋಷದ ಬೆಂಕಿ ಇನ್ನೂ ಹಾಗೆ ಇದೆ. ಇದು ದಸ್ಕತ್ 9ನೇ ತರಗತಿ ಫೇಲಾದ ದಡ್ಡ ಹುಡುಗ 'ದಸ್ಕತ್' ಗೆದ್ದ ಕಥೆ.
'ದಸ್ಕತ್', ತುಳುನಾಡಿನ ಸಿನಿಮಾ ಇತಿಹಾಸದಲ್ಲಿ ಹೊಸ ಷರಾ ಬರೆದಿದೆ. ಇದೇ ದಸ್ಕತ್ನಲ್ಲಿ ನಟನೆಯಿಂದ ದಂಗಾಗಿಸಿರೋದು ನಾಯಕ ನಟ ದೀಕ್ಷಿತ್ ಕೆ. ಅಂಡಿಂಜೆ. ಚಿತ್ರರಂಗದ ಹಿನ್ನೆಲೆಯಿಲ್ಲದೆ, ಬಣ್ಣದ ಬದುಕಿನಲ್ಲಿ ಮಿಂದೇಳುವ ಕನಸು ಕಂಡ ದೀಕ್ಷಿತ್, ತಮ್ಮ ಮೊದಲ ಚಿತ್ರದಲ್ಲೇ ಪ್ರೇಕ್ಷಕರ ಮನಗೆದ್ದಿದ್ದಾರೆ.

ದಸ್ಕತ್ ಶೇಖರನ ಪಾತ್ರಕ್ಕಾಗಿ ಬಿಸಿಲಿನಲ್ಲಿ ಮಲಗಿ ಕಪ್ಪಾಗಿದ್ದ ದೀಕ್ಷಿತ್!
ದಸ್ಕತ್, ದೀಕ್ಷಿತ್ ಪಾಲಿಗೆ ಕೇವಲ ಸಿನಿಮಾವಲ್ಲ. ಒಂದು ವರ್ಷ ಈ ಸಿನಿಮಾದೊಳಗೆ ಜೀವಿಸಿದ್ದಾರೆ. ತಮ್ಮನ್ನು ತಾವು ಶೇಖರನಂತೆ ಬದಲಾಯಿಸಿಕೊಂಡಿದ್ದಾರೆ. ಒಂದು ವರ್ಷ ಶೇಖರನ ಪಾತ್ರಕ್ಕೆ ತಕ್ಕಂಥ ಮೈಬಣ್ಣಕ್ಕಾಗಿ, ಚಿತ್ರೀಕರಣಕ್ಕೂ ವಾರದ ಮೊದಲೇ ಬಿಸಿಲಿನಲ್ಲಿ ಮಲಗಿದ್ದರು. ಎಲೆ ಅಡಿಕೆ ತಿಂದು ಬಿಳಿ ಹಲ್ಲುಗಳನ್ನು ಕೆಂಬಣ್ಣಕ್ಕೆ ಬದಲಾಯಿಸಿದ್ದರು. ನಡೆ, ನುಡಿಯಲ್ಲೂ ಶಕ್ತಿಮೀರಿ ಶ್ರಮಪಟ್ಟು ಶೇಖರನ ಪಾತ್ರಕ್ಕೆ ಜೀವ ತುಂಬಿದ್ದರು. ಇದೇ ಪರಿಶ್ರಮಕ್ಕಿಂದು ಫಲ ಸಿಕ್ಕಿದೆ. ದಸ್ಕತ್ ಕರಾವಳಿಯಾದ್ಯಾಂತ ಸೂಪರ್ ಹಿಟ್ ಆಗಿದೆ. ಚಿತ್ರರಂಗಕ್ಕೆ ದೀಕ್ಷಿತ್ ಅನ್ನೋ ಉದಯೋನ್ಮುಖ ನಾಯಕ ನಟನ ಸೇರ್ಪಡೆಯಾಗಿದೆ. ಅಷ್ಕಕ್ಕೂ ದೀಕ್ಷಿತ್ ಇಂದು ದಸ್ಕತ್ ಚಿತ್ರದ ಹೀರೋ ಆಗಿ ಮಿಂಚಿದ್ದಾರೆ. ಆದರೆ, ಇಲ್ಲಿವರೆಗೆ ನಡೆದು ಬಂದ ದಾರಿ ಸುಲಭದಾಗಿರಲಿಲ್ಲ. ಅಲ್ಲಿ ಅಕ್ಷರಶಃ ಕಲ್ಲು ಮುಳ್ಳಿನ ದಾರಿಗಳಿದ್ದವು.
9ನೇ ತರಗತಿ ಫೇಲ್, ಅಪ್ಪನ ಅಗಲಿಕೆ
28 ವರ್ಷದ ಚಿರಯುವಕ ದೀಕ್ಷಿತ್ ಮೂಲತಃ ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಅನ್ನೋ ಪುಟ್ಟ ಗ್ರಾಮದವರು. ಬಣ್ಣದ ಬದುಕಿನ ಹಸಿವು ಬಾಲ್ಯದಲ್ಲಿ ಇರಲಿಲ್ಲ. ಯಾಕಂದ್ರೆ ಸಾಕಿ ಸಲಹಿದ ಅಪ್ಪ ಇರೋವರೆಗೂ ಬದುಕು ಚೆನ್ನಾಗಿತ್ತು. ಅದ್ಯಾವಾಗ ತಂದೆ ಅಗಲಿದ್ರೋ, ಆ ಬಳಿಕ ದೀಕ್ಷಿತ್ಗೆ ನಿಜವಾದ ಬದುಕಿನ ಅರಿವಾಗಿತ್ತು. ಅಮ್ಮ, ಇಬ್ಬರು ತಂಗಿಯರ ಜವಾಬ್ದಾರಿ ಕಣ್ಮುಂದೆ ಇತ್ತು. ಚೆನ್ನಾಗಿ ಓದಿ ಏನಾದ್ರೂ ಸಾಧಿಸ್ಬೇಕು ಅಂತಿದ್ರು, ಸರಸ್ವತಿ ಅಷ್ಟಾಗಿ ಒಲಿದಿರಲಿಲ್ಲ. ಗಣಿತದ ಲೆಕ್ಕಚಾರದಲ್ಲಿ ಎಡವಿದ ದೀಕ್ಷಿತ್ 9ನೇ ತರಗತಿಯಲ್ಲಿ ಫೇಲ್ ಆಗಿದ್ದರು. ಮತ್ತೊಮ್ಮೆ 9ನೇ ತರಗತಿಯಲ್ಲೇ ಕುಳಿತು ಜ್ಯೂನಿಯರ್ಸ್ ಜೊತೆ ಓದೋದಕ್ಕೆ ಬಿಲ್ಕುಲ್ ತಯಾರಿರಲಿಲ್ಲ.

ರಾತ್ರಿ ಶಾಲೆ ಪಾಠ ಕಲಿತ ದೀಕ್ಷಿತ್!
ತನಗೆ ವಿದ್ಯೆ ತಲೆಗೆ ಹತ್ತಲ್ಲ ಅಂತ ಮಂಗಳೂರಿನಲ್ಲಿ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಆದರೆ ಓದುವ ಮನಸಿತ್ತು. 9ನೇ ತರಗತಿ ಅರ್ಧಕ್ಕೆ ಬಿಟ್ಟು ಬಂದ ಕೊರಗಿತ್ತು ಹೀಗಾಗಿ ಮುಂದೆ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡು ಸಂತ ಅಲೋಷಿಯಸ್ನ ರಾತ್ರಿ ಕಾಲೇಜು ಸೇರಿ ನೇರವಾಗಿ ಎಸ್ಎಸ್ಎಲ್ಸಿ ಪರೀಕ್ಷೆ ಕಟ್ತಾರೆ. ಮೊದಲ ಅಟೆಂಪ್ಟ್ನಲ್ಲೇ ಹೈಸ್ಕೂಲ್ ಮುಗಿಸಿದ್ರು. ಮುಂದೆ ಪಿಯುಸಿ ಶಿಕ್ಷಣ ಕೂಡ ಇಲ್ಲೇ ಮುಗಿಸ್ತಾರೆ. ಇದರ ಜೊತೆ ಜೊತೆಗೆ ದೀಕ್ಷಿತ್ ವಿಜೆ ದೇವ್ ಅವರ ಶ್ರೀ ಮೂಕಾಂಬಿಕಾ ಚೆಂಡೆ ತಂಡವನ್ನು ಸೇರಿಕೊಳ್ತಾರೆ. ಬಹುಶಃ ದೀಕ್ಚಿತ್ ಬದುಕು ತಿರುವು ಪಡೆದಿದ್ದು ಇಲ್ಲಿಂದಲೇ.. ಇಲ್ಲಿಂದಾನೆ ದೀಕ್ಷಿತ್ಗೆ ಬಣ್ಣದ ಬದುಕಿನಲ್ಲಿ ಮಿಂಚುವ, ಕಲಾವಿದನಾಗುವ ಹಂಬಲ ಜಾಸ್ತಿ ಆಗುತ್ತೆ. ಮಾತನಾಡೋಕೆ ಭಯ ಪಡ್ತಿದ್ದ ಹುಡುಗ ತಾನ್ಯಾಕೇ ಕಾರ್ಯಕ್ರಮ ನಿರೂಪಣೆ ಮಾಡಬಾರದು ಅಂತ ಒಂದು ಹೆಜ್ಜೆ ಮುಂದೆ ಇಡ್ತಾರೆ. ಆರ್ಕೆಸ್ಟ್ರಾ ನಿರೂಪಣೆ ಮಾಡ್ತಾ ನಾನ್ಯಾಕೆ ಹಾಡ್ಬಾರ್ದು ಅಂತ ಅದಕ್ಕೂ ಸೈ ಅಂತಾರೆ. ಮುಂದೆ ಹಾಡು ಮತ್ತು ನಿರೂಪಣೆಯಲ್ಲೇ ತಮ್ಮ ವೃತ್ತಿಯನ್ನಾಗಿ ಬದಲಾಯಿಸ್ತಾರೆ. ನಾಯಕ ನಟನಾಗುವ ಮೊದಲು ದೀಕ್ಷಿತ್ ಹಾಡು ಮತ್ತು ನಿರೂಪಣೆಯಿಂದ ಹಾಡಿನಿಂದ ಇಡೀ ಕರಾವಳಿಯ ಮನೆ ಮಾತಾಗಿದ್ದರು. ಈಗ ದಸ್ಕತ್ನ ಹೀರೋ ಆಗಿ ಪ್ರೇಕ್ಷಕರ ಮನೆ ಮನಸು ಎರಡು ಗೆದ್ದಿದ್ದಾರೆ. ಅಷ್ಟಕ್ಕೂ ದಸ್ಕತ್ ದೀಕ್ಷಿತ್ ನಟಿಸಿದ್ದ ಮೊದಲ ಸಿನಿಮಾ ಏನಲ್ಲ.
ಮೊದಲು 'ಎನ್ನ ಸರ್ದಾರ' ಎನ್ನುವ ತುಳು ಆಲ್ಬಂ ಸಾಂಗ್ ಒಂದರಲ್ಲಿ ನಟಿಸಿದ್ದರು. 'ಚಾಪ್ಟರ್ ದೀಕ್ಷಿತ್' ಮೊದಲ ಸಿನಿಮಾ. ಈ ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು. ನಂತರ 'ಅರೆಮರ್ಲೆರ್', 'ಕನಸು ಮಾರಾಟಕ್ಕಿದೆ', 'ವೃಷ್ಟಿ ಕನ್ನಡ ಸಿನಿಮಾ', 'ಕಸರತ್', 'ವನಜಾ', 'ಮಾಯೆ', 'ಗಿಲ್ಬಿಸ್ಟಿಕ್ ಫ್ಯಾಮಿಲಿ' ವೆಬ್ ಸೀರಿಸ್ ಗಳಲ್ಲಿ ನಟಿಸುವ ಅವಕಾಶ ಅರಸಿ ಬಂದಿತ್ತು. ಆದರೆ, ನಾಯಕನಾಗಿ ನಟಿಸುವ ದೀಕ್ಷಿತ್ ಕನಸನ್ನು ನನಸು ಮಾಡಿದ್ದು 'ದಸ್ಕತ್' ಚಿತ್ರತಂಡ.


Click it and Unblock the Notifications











