ಮೊದಲ ಸಲ ಜೀವದಾನ ಪಡೆದಿದ್ದ ನಟಿ ಶೋಭ ಎರಡನೇ ಸಲ ಜೀವ ಬಿಟ್ಟರು
ದೇವರ ದರ್ಶನಕ್ಕೆಂದು ಹೋಗುತ್ತಿದ್ದ ನಟಿ ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ ಘಟನೆ ಬುಧವಾರ ಚಿತ್ರದುರ್ಗದಲ್ಲಿ ನಡೆದಿತ್ತು. 'ಮಗಳು ಜಾನಕಿ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದ ಶೋಭ ಯಾರೂ ನಿರೀಕ್ಷಿಸಿದ ರೀತಿ ದುರಂತ ಅಂತ್ಯ ಕಂಡಿದ್ದಾರೆ.
ಮಗಳು ಜಾನಕಿ ಚಿತ್ರದಲ್ಲಿ ಆನಂದ್ ಬೆಳಗೂರ್ ತಾಯಿ ಪಾತ್ರದಲ್ಲಿ ಅದ್ಭುತ ಅಭಿನಯ ಮಾಡುತ್ತಿದ್ದ ಮಂಗಳಕ್ಕ (ಶೋಭ), ನಿಜ ಜೀವನದಲ್ಲಿ ಇಬ್ಬರು ಮಕ್ಕಳನ್ನ ಅನಾಥರನ್ನಾಗಿ ಬಿಟ್ಟು ಹೋಗಿದ್ದಾರೆ. ಶೋಭ ಅವರು ನಟನೆ ಆರಂಭಿಸುವುದಕ್ಕು ಮೊದಲು ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದರು.
ದುರಂತ ಅಂದ್ರೆ ಡ್ರೈವಿಂಗ್ ಸ್ಕೂಲ್ ಒಡತಿ ಕಾರಿನಲ್ಲಿ ಚಲಿಸುವಾಗ ರಸ್ತೆ ಅಪಘಾತದಲ್ಲಿ ಅಸುನೀಗಿದ್ದಾರೆ. ಬೇಸರದ ಸಂಗತಿ ಅಂದ್ರೆ ನಾಲ್ಕು ತಿಂಗಳ ಹಿಂದೆಯಷ್ಟೇ ಹೀಗೆ ಅಪಘಾತವಾಗಬೇಕಿದ್ದ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದರಂತೆ. ಆದ್ರೆ, ವಿಧಿಯ ಆಟದ ಮುಂದೆ ಶೋಭ ಅವರ ಅದೃಷ್ಟ ಕೈಹಿಡಿಯಲಿಲ್ಲ. ಅಂದ್ಹಾಗೆ, ಈ ಶೋಭ ಅವರ ಹಿನ್ನೆಲೆ ಏನು? ಅವರ ನಟಿಸಿದ ಡಿ.ಎನ್.ಎ ಚಿತ್ರದ ನಿರ್ದೇಶಕರು ಈ ಬಗ್ಗೆ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ.....

ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದರು ಶೋಭ
''ಒಂಬತ್ತು ವರ್ಷಗಳ ಹಿಂದೆ ಮೈಸೂರಿನಲ್ಲಿ ನಾನು ಪೊಲೀಸ್ ಡಿಪಾರ್ಟ್ಮೆಂಟ್ಗೆ ಒಂದು ಟೆಲಿಚಿತ್ರ ಮಾಡುತ್ತಿದ್ದೆ. ಅಲ್ಲಿನ ರಂಗಭೂಮಿ ಕಲಾವಿದರನ್ನು ಉಪಯೋಗಿಸಿಕೊಂಡು, ಆಗ ಪರಿಚಯವಾದ ಕಲಾವಿದೆ ಶೋಭ ಮೈಸೂರು. ಒಳ್ಳೆಯ ಕಲಾವಿದೆ ಅಭಿನಯಕ್ಕೆ ಬೇಕಾದ ಆಕರ್ಷಕ ಕಣ್ಣುಗಳು, ಚಿಕ್ಕದಾಗಿ ಒಂದು ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದರು'' - ಪ್ರಕಾಶರಾಜ್ ಮೇಹು- ಡಿಎನ್ಎ ಚಿತ್ರದ ನಿರ್ದೇಶಕ

ಸಾಧಿಸಬೇಕೆಂಬ ಆಕಾಂಕ್ಷೆ ಅವರಲ್ಲಿತ್ತು
''ಏನಾದರೂ ಸಾಧಿಸಬೇಕೆಂಬ ಆಕಾಂಕ್ಷೆ, ಬೆಂಗಳೂರಿಗೆ ಬಂದು ಸೀರಿಯಲ್, ಸಿನೆಮಾದಲ್ಲಿ ಅಭಿನಯಿಸಿ ಎಂದು ಹೇಳಿದೆ. ನಂತರ ಬೆಂಗಳೂರಿಗೆ ಬಂದರು. ಮೊದಮೊದಲು ಒಂದಷ್ಟು ಗೆಳೆಯರಿಗೆ ಹೇಳಿದೆ. ಅವರ ಚಿತ್ರಾಭಿನಯ ಜೀವನ ಹೀಗೆ ಆರಂಭವಾಯ್ತು, ಒಂದಷ್ಟು ಸೀರಿಯಲ್ಗಳಲ್ಲಿ ಒಳ್ಳೊಳ್ಳೆಯ ಪಾತ್ರಗಳನ್ನೆ ನಿರ್ವಹಿಸಿದರು, ಸೀರಿಯಲ್ಗಳಿಗಿಂತ ಸಿನೆಮಾದಲ್ಲಿ ಹೆಚ್ಚು ಹೆಚ್ಚು ಪಾತ್ರಮಾಡಬೇಕೆಂಬ ಬಯಕೆ ಅವರಿಗೆ ಹೆಚ್ಚಾಗತೊಡಗಿತು. ಕೆಲವು ಸಿನೆಮಾಗಳಲ್ಲಿ ಅಭಿನಯಿಸಿದರೂ ಸಹ ಹೇಳಿಕೊಳ್ಳುವಂಥ ಸಿನೆಮಾಗಳಾಗಲೀ, ಪಾತ್ರಗಳಾಗಲೀ ದೊರಕಲಿಲ್ಲ'' - ಪ್ರಕಾಶರಾಜ್ ಮೇಹು- ಡಿಎನ್ಎ ಚಿತ್ರದ ನಿರ್ದೇಶಕ

ಡಿಎನ್ಎ ಸಿನಿಮಾ ಮಾಡಿದ್ರು
''ನಾನು "ಡಿಎನ್ಎ" ಸಿನೆಮಾ ಆರಂಭಿಸುವ ಸಮಯದಲ್ಲಿ ಅವರಿಗೆ ಕಥೆ ಹೇಳಿ ಈ ಒಂದು ಪಾತ್ರವನ್ನು ನೀವು ಮಾಡಬೇಕೆಂದಾಗ ಬಹಳ ಖುಷಿಪಟ್ಟರು ಮತ್ತು ನಿರ್ದೇಶನ ವಿಭಾಗದಲ್ಲೂ ನಾನು ಕೆಲಸ ಮಾಡಲೇಬೇಕೆಂದು ಹಠಮಾಡಿ ಸಹಾಯಕ ನಿರ್ದೇಶಕಿಯಾಗಿಯೂ ಕೆಲಸ ಮಾಡಿದರು'' - ಪ್ರಕಾಶರಾಜ್ ಮೇಹು- ಡಿಎನ್ಎ ಚಿತ್ರದ ನಿರ್ದೇಶಕ

ಕೊಡಗಿನಲ್ಲಿ ಜಸ್ಟ್ ಮಿಸ್ ಆಗಿದ್ದರು
''ಈಗ್ಗೆ ಮೂರು ನಾಲ್ಕು ತಿಂಗಳ ಹಿಂದೆ "ನಾನು ಸಾವಿನ ಮನೆ ತಟ್ಟಿಬಂದೆ, ಕೊಡಗಿಗೆ ಹೋಗಿದ್ದೆವು ತಿರುವಿನಲ್ಲಿ ಕಾರು ಬ್ಯಾಲೆನ್ಸ್ ತಪ್ಪಿ ಉರುಳುವುದರಲ್ಲಿತ್ತು ಕೂದಲೆಳೆಯ ಅಂತರದಲ್ಲಿ ತಪ್ಪಿ ನಾವೆಲ್ಲ ಬದುಕಿದೆವು" ಅಂದಿದ್ದರು. ಆದರೆ ಆ ಜೀವದಾನ ಕೇವಲ ನಾಲ್ಕು ತಿಂಗಳ ಮಟ್ಟಿಗೆ ಅಷ್ಟೇನಾ? ಡ್ರೈವಿಂಗ್ ಸ್ಕೂಲ್ ಒಡತಿಯ ಸಾವು ಆಕ್ಸಿಡೆಂಟ್ ನಲ್ಲಿಯೇ ಆಗಬೇಕಿತ್ತಾ?'' - ಪ್ರಕಾಶರಾಜ್ ಮೇಹು- ಡಿಎನ್ಎ ಚಿತ್ರದ ನಿರ್ದೇಶಕ


Click it and Unblock the Notifications











