ಏಪ್ರಿಲ್ಅನ್ನು ಮಾಯವಾದ ತಿಂಗಳು ಎಂದು ಘೋಷಿಸಿ: ಸರ್ಕಾರಕ್ಕೆ ರಿಯಲ್ ಸ್ಟಾರ್ ಉಪ್ಪಿ ಸಲಹೆ
'ಸೂಪರ್' ಚಿತ್ರದಲ್ಲಿ ತಮ್ಮ ರಾಜಕೀಯ ಆಡಳಿತದ ಪರಿಕಲ್ಪನೆಯನ್ನು ಹೊರಗೆಡವಿದ್ದ ರಿಯಲ್ ಸ್ಟಾರ್ ಉಪೇಂದ್ರ, ವಾಸ್ತವ ರಾಜಕಾರಣದಲ್ಲಿಯೂ ಅಂತಹ ಕೆಲವು ವಿಭಿನ್ನ ಪ್ರಯೋಗಗಳತ್ತ ಒಲವು ಪ್ರದರ್ಶಿಸುತ್ತಿರುತ್ತಾರೆ. ಕೊರೊನಾ ವೈರಸ್ ಸೋಂಕು ಪಿಡುಗಿನ ಸಂದರ್ಭದಲ್ಲಿಯೂ ಉಪೇಂದ್ರ ಸರ್ಕಾರಗಳಿಗೆ ವಿಭಿನ್ನ ಸಲಹೆಗಳನ್ನು ನೀಡುತ್ತಿದ್ದಾರೆ.
ಲಾಕ್ಡೌನ್ ವಿಚಾರದಲ್ಲಿ ಕೆಲವು ದಿನಗಳ ಹಿಂದೆ ಉಪೇಂದ್ರ ರಾಜ್ಯ ಸರ್ಕಾರಕ್ಕೆ ಎರಡು ಸಲಹೆಗಳನ್ನು ನೀಡಿದ್ದರು. ಶೇ. 100ರಷ್ಟು ಲಾಕ್ಡೌನ್ ಜಾರಿಗೆ ತನ್ನಿ. ಸರ್ಕಾರಿ ವ್ಯವಸ್ಥೆಯನ್ನು ಬಳಸಿಕೊಂಡು ಜನರ ಮನೆ ಬಾಗಿಲಿಗೇ ಅಗತ್ಯ ವಸ್ತುಗಳನ್ನು ಪೂರೈಸಿ, ಇದರಿಂದ ಹೊರಗೆ ಜನರು ಅಡ್ಡಾಡುವುದು, ಮಾರುಕಟ್ಟೆಯಲ್ಲಿ ಸೇರುವುದು ತಪ್ಪುತ್ತದೆ.. ಇಲ್ಲವೇ ಸಂಪೂರ್ಣವಾಗಿ ಲಾಕ್ಡೌನ್ ಜವಾಬ್ದಾರಿ ಕೊಟ್ಟುಬಿಡಿ ಎಂದು ಉಪೇಂದ್ರ ಹೇಳಿದ್ದರು. ಈಗ ವೈರಸ್ ವಿರುದ್ಧದ ಹೋರಾಟಕ್ಕೆ ಆರ್ಥಿಕ ಶಕ್ತಿ ತುಂಬಲು ಮತ್ತೊಂದು ಸಲಹೆಯನ್ನು ಅವರು ನೀಡಿದ್ದಾರೆ. ಮುಂದೆ ಓದಿ...

ಮಾಯವಾದ ತಿಂಗಳೆಂದು ಘೋಷಿಸಿ
ಲಾಕ್ಡೌನ್ ಆದ ಏಪ್ರಿಲ್ ತಿಂಗಳನ್ನು ಎಲ್ಲರೂ 2020 ವರ್ಷದ 'ಮಾಯವಾದ ತಿಂಗಳು' ಎಂದು ಅಧಿಕೃತವಾಗಿ ಘೋಷಣೆ ಮಾಡುವಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳಿಗೆ ಉಪೇಂದ್ರ ಸಲಹೆ ನೀಡಿದ್ದಾರೆ.
ಲಾಕ್ಡೌನ್: ಯಡಿಯೂರಪ್ಪ ಮುಂದೆ ಎರಡು ಐಡಿಯಾ ಇಟ್ಟ ಉಪೇಂದ್ರ
ಎಲ್ಲವನ್ನೂ ಬಿಟ್ಟುಕೊಡಿ
ಈ ತಿಂಗಳಲ್ಲಿ ಎಲ್ಲ ಜನರಿಗೂ ಬರುವ ಸಂಬಳ, ಬಾಡಿಗೆ, ವಿದ್ಯುತ್, ನೀರಿನ ಬಿಲ್, ಇಎಂಐ ಬಡ್ಡಿ ಮುಂತಾದವೆಲ್ಲವನ್ನೂ ಎಲ್ಲರೂ ಬಿಟ್ಟುಕೊಟ್ಟು ಜನರು ಮತ್ತು ಸರ್ಕಾರಕ್ಕೆ ಆಗುವ ಹೊರೆಯನ್ನು ಇಳಿಸಿಕೊಳ್ಳಬಹುದಲ್ಲವೇ? ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಅವರು ಅರ್ಥಶಾಸ್ತ್ರಜ್ಞರ ಅಭಿಪ್ರಾಯ ಬಯಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್ಗೆ ಮೆಚ್ಚುಗೆ
ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿದ್ದನ್ನು ಉಪ್ಪಿ ಮೆಚ್ಚಿಕೊಂಡಿದ್ದಾರೆ. 'ಇಂದಿನ ಪ್ರಧಾನ ಮಂತ್ರಿ ಹಾಗೂ ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಇಡಿಯೋ ಕಾನ್ಫರೆನ್ಸ್ ಮಾತು ಕಥೆ ಬಹಳ ಇಷ್ಟವಾಯಿತು. ಕೊರೊನಾ ಸಮಸ್ಯೆ ಮುಗಿದ ನಂತರವೂ ಇದೇ ರೀತಿ ಹೆಚ್ಚು ತಂತ್ರಜ್ಞಾನ ಬಳಸಿ ಆಡಳಿತ ನಡೆಸುವಂತಾಗಲಿ' ಎಂದು ಉಪ್ಪಿ ಹೇಳಿದ್ದಾರೆ.
ಎಲ್ಲ ಸಿಎಂಗಳೂ ಇದನ್ನು ಮಾಡಲಿ
'ಎಲ್ಲ ಮುಖ್ಯಮಂತ್ರಿಗಳೂ ಹೀಗೆ ಪ್ರತಿ ಕ್ಷೇತ್ರದ ಸಚಿವರ ಜತೆ ಮಾತುಕಥೆ ನಡೆಸಿ ಜನ ನೇರವಾಗಿ ತಮ್ಮ ಸಮಸ್ಯೆ ಹೇಳಿಕೊಂಡು ಪರಿಹಾರ ಸಿಗಲಿ. ಅದನ್ನು ಮಾಧ್ಯಮಗಳು ಹೀಗೆ ಪ್ರಸಾರ ಮಾಡಲಿ. ವಿಧಾನಸೌಧದ ಸಂಸ್ಕೃತಿ ಬದಲಾಗಲಿ' ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

1. ಸಂಪೂರ್ಣ ಲಾಕ್ಡೌನ್
ಶೇಕಡಾ ನೂರಕ್ಕೆ ನೂರು ಲಾಕ್ಡೌನ್.
* ಸಂಪೂರ್ಣ ಸರ್ಕಾರಿ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದ ಯೋಜನೆಯಿಂದ ಬಳಸಿಕೊಂಡು ಅಗತ್ಯ ವಸ್ತುಗಳನ್ನು ಮನೆ ಮನೆಗೆ ತಲುಪಿಸಿ
* ಹಾಲು, ತರಕಾರಿ, ಧಾನ್ಯಗಳನ್ನು ಒಂದು ಜಾಗದಲ್ಲಿ ಕೊಳ್ಳಲು ಬಿಟ್ಟರೆ ಜನ ಸೇರೇ ಸೇರುತ್ತಾರೆ.
* ಬೇಕರಿ, ದಿನಸಿ ಮತ್ತು ಅಗತ್ಯ ವಸ್ತುಗಳಿಗಾಗಿ ಸಂತೆ, ಅಂಗಡಿ ತೆರೆದರೆ ಅಲ್ಲೂ ಜನ ಸೇರುತ್ತಾರೆ.
2. ಜನರಿಗೇ ಲಾಕ್ಡೌನ್ ಜವಾಬ್ದಾರಿ ನೀಡಿ
ಜನರಿಗೆ ಜವಾಬ್ದಾರಿ ಕೊಟ್ಟು ಸಂಪೂರ್ಣವಾಗಿ ಲಾಕ್ಡೌನ್ ತೆರೆಯಿರಿ. ಅಂದರೆ ಅವರವರೇ ಜವಾಬ್ದಾರಿ ತೆಗೆದುಕೊಂಡು ಅಂತರ ಕಾಯ್ದುಕೊಂಡು(ಸೋಷಿಯಲ್ ಡಿಸ್ಟೆನ್ಸಿಂಗ್) ಮಾಸ್ಕ್ ಧರಿಸಿ ಅವರವರ ವ್ಯವಹಾರವನ್ನು ಮುಂದುವರಿಸುವುದು.
* ' ಜನರನ್ನು ಜನರು ಎಷ್ಟೇ ಮೂರ್ಖರು ಅಂದುಕೊಂಡರೂ (ಹೀಗೆ ನಾಯಕರು ಮಾಡಿಬಿಟ್ಟಿದ್ದಾರೆ) ಅವರವರ ಪ್ರಾಣಕ್ಕೆ ಅವರ ಮಕ್ಕಳ ಪ್ರಾಣಕ್ಕೆ ಬೆಲೆ ಕೊಟ್ಟೇ ಕೊಡುತ್ತಾರೆ ಎಂಬ ನಂಬಿಕೆಯಿಂದ ಹೇಳುತ್ತಿದ್ದೇನೆ.
* ಲಾಕ್ಡೌನ್ ಮಾಡಿಕೊಂಡ ಜನರನ್ನು ಹಾಲು ರೇಷನ್ ಖರೀದಿಸುವುದಕ್ಕೆ ಬಿಟ್ಟು ಜನ ಗುಂಪು ಸೇರಿದಾಗ ಜನರನ್ನು ಬೈಯುವುದು ಎಷ್ಟು ಸರಿ? ಇಷ್ಟೆಲ್ಲ ಲಾಕ್ಡೌನ್ ಮಾಡಿನೇ ನಮ್ ದಡ್ಡ ಜನರು ಹೀಗೆ ಇನ್ನು ಲಾಕ್ಡೌನ್ ತೆಗೆದ್ರೆ ರೋಡ್ ರೋಡಲಿ ಹೆಣಗಳು ಬೀಳುತ್ತೆ ಅಂತ ಹೇಳುವವರಿಗೆ(ಹೆದರುವವರಿಗೆ) ಒಂದು ಕಿವಿ ಮಾತು.
ಹೀಗೆ ಲಾಕ್ಡೌನ್ ಮುಂದುವರಿಸಿದರೂ ಅದೇ ಪರಿಸ್ಥಿತಿ ಬರಬಹುದು ಯೋಚನೆ ಮಾಡಿ ಮಲಗಿದ್ರೆ -ಸಾವು|ಕೂತಿದ್ರೆ -ರೋಗ| ನಡಿತಿದ್ರೆ-ಜೀವನ- ನಿಮ್ಮ ಉಪೇಂದ್ರ.


Click it and Unblock the Notifications











