ಉಪೇಂದ್ರ ನಿರ್ದೇಶಿಸಿದ 'UI'ನಿಂದ ಎಷ್ಟು ಲಾಸ್ ಆಯ್ತು? ಲಹರಿ ವೇಲು ಕೊಟ್ಟ ಉತ್ತರವೇನು?
ಉಪೇಂದ್ರ ನಿರ್ದೇಶನದ ಸಿನಿಮಾಗಾಗಿ ಸಿನಿಮಾ ಪ್ರಿಯರು ಎದುರು ನೋಡುತ್ತಿರುತ್ತಾರೆ. ಇದೂವರೆಗೂ ಅವರು ನಿರ್ದೇಶಿಸಿದ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಿವೆ. ಉಪ್ಪಿ ಆಕ್ಷನ್ ಕಟ್ ಹೇಳಿದ ಒಂದೊಂದು ಸಿನಿಮಾ ಕೂಡ ವಿಭಿನ್ನ ಅನುಭವವನ್ನು ನೀಡಿದೆ. ಉಪ್ಪಿ ಡೈರೆಕ್ಷನ್ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳೋ ಸಿನಿಮಾವನ್ನು ನೋಡುವುದಕ್ಕೆ ಜನರು ತುದಿಗಾಲಲ್ಲಿ ನಿಂತಿರುತ್ತಾರೆ.
ಉಪ್ಪಿ ಆಕ್ಷನ್ ಕಟ್ ಹೇಳಿದ ಸಿನಿಮಾ ಬಾಕ್ಸಾಫೀಸ್ನಲ್ಲಿ ಸೋತಿರೋ ಉದಾಹರಣೆನೇ ಇಲ್ಲ. ಆದರೆ, 2024ರಲ್ಲಿ ನಿರ್ದೇಶಿಸಿದ 'ಯುಐ' ಸಿನಿಮಾ ನಿರೀಕ್ಷೆ ಮಾಡಿದಷ್ಟು ಬಾಕ್ಸಾಫೀಸ್ನಲ್ಲಿ ಸದ್ದು ಮಾಡಲಿಲ್ಲ. ಬಿಡುಗಡೆಗೂ ಮುನ್ನ ಸಿನಿಮಾ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಾಕಿತ್ತು. ಹೀಗಾಗಿ 'ಯುಐ' ಪ್ಯಾನ್ ಇಂಡಿಯಾ ಹಿಟ್ ಆಗುತ್ತೆ ಅನ್ನೋ ಭರವಸೆಯಿತ್ತು. ಆದರೆ, ಬಾಕ್ಸಾಫೀಸ್ನಲ್ಲಿ ಆ ಮಟ್ಟದಲ್ಲಿ ನಿರೀಕ್ಷೆ ಮುಟ್ಟಲಿಲ್ಲ.

ಹೀಗಾಗಿ ಸ್ಯಾಂಡಲ್ವುಡ್ನಲ್ಲಿ 'ಯುಐ' ಸಿನಿಮಾ ಪ್ಲಾಪ್. ನಿರ್ಮಾಣ ಸಂಸ್ಥೆಗೆ ಸಿಕ್ಕಾಪಟ್ಟೆ ನಷ್ಟ ಆಗಿದೆ ಅನ್ನೋ ಪುಕಾರುಗಳು ಹಬ್ಬಿದ್ದವು. ಆದರೂ, 'ಯುಐ' ನಿರ್ಮಾಣ ಸಂಸ್ಥೆ ಎಲ್ಲಿಯೂ ಪ್ರತಿಕ್ರಿಯೆ ನೀಡಿರಲಿಲ್ಲ. ಆದ್ರೀಗ ಲಹರಿ ವೇಲು ಫಸ್ಟ್ ಡೇ ಫಸ್ಟ್ ಶೋ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ 'ಯುಐ' ಸಿನಿಮಾದ ನಷ್ಟದ ಬಗ್ಗೆ, ಸದ್ಯ ಕನ್ನಡ ಚಿತ್ರರಂಗದ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
'ಯುಐ' ಸಿನಿಮಾ ಬಾಕ್ಸಾಫೀಸನಲ್ಲಿ ಹೀನಾಯವಾಗಿ ಸೋತಿದೆ ಅನ್ನೋ ಮಾತು ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ಏನು ಎಂದು ಕೇಳಿದಾಗ, ಲಹರಿ ವೇಲು ಪ್ರತಿಕ್ರಿಯೆ ಹೀಗಿತ್ತು. "ನನಗೆ ಅದರ ಬಗ್ಗೆ ಯಾರೂ ಎಲ್ಲಿಯೂ ಕೇಳಿಲ್ಲ. ನಮ್ಮ ಇಡೀ ಸಂಸ್ಥೆಯ 50 ವರ್ಷದ ಇತಿಹಾಸದಲ್ಲಿ ನಮಗೆ ನಷ್ಟ ಆಗಿದೆ ಅಂತ ಹೇಳಿಯೇ ಇಲ್ಲ. ಕಾರಣ ಏನಂದ್ರೆ, ಇದೇ ಇಂಡಸ್ಟ್ರಿ ನಮಗೆ ಎಲ್ಲಾ ಕೊಟ್ಟಿದೆ. ಲಾಭ ಬಂದಾಗ ಒಳ್ಳೆಯದಾಗಿದೆ.. ಇದು ಬ್ಯುಸಿನೆಸ್." ಎಂದು ಲಹರಿ ವೇಲು ಹೇಳಿದ್ದಾರೆ.
ಚಿತ್ರರಂಗದಲ್ಲಿ ಹರಿದಾಡುತ್ತಿರುವ ಗಾಸಿಪ್ ಬಗ್ಗೆನೂ ಲಹರಿ ವೇಲು ಪ್ರತಿಕ್ರಿಯೆ ನೀಡಿದ್ದಾರೆ. "ಗಾಂಧಿನಗರದಲ್ಲಿ ಗಾಸಿಪ್ ಸಾವಿರ ಮಾಡುತ್ತಾರೆ ಬಿಡಿ. ಈವಾಗ ಅಲ್ಲ. 50 ವರ್ಷದಿಂದ ನಾನು ನೋಡುತ್ತಿದ್ದೇನೆ. ಸೂಪರ್ ಹಿಟ್ ಆಗಿರೋ ಸಿನಿಮಾ ಪ್ರೇಮಲೋಕನಾ ಫ್ಲಾಪ್ ಅಂದ್ರು. ದುಡ್ಡು ಬಂದಿದೆ ಅಂದರೂ ಇಲ್ಲಾ ಅಂದರು. ಅವರನ್ನೆಲ್ಲ ತಡೆಯೋಕೆ ಆಗುತ್ತಾ? ಗಾಸಿಪ್ಗೆ ನಾನು ಉತ್ತರ ಕೊಡುವುದಿಲ್ಲ. ನನ್ನ ಆತ್ಮಸಾಕ್ಷಿಗೆ ಬದುಕುತ್ತಿದ್ದೇನೆ. ಅದಕ್ಕೆ ಉತ್ತರ ಕೊಡುತ್ತೇನೆ." ಎಂದು ಹೇಳಿದ್ದಾರೆ.

ಇನ್ನು ಎಐನಿಂದ ಕನ್ನಡ ಚಿತ್ರರಂಗದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು. ಅದಕ್ಕೆ ಹೇಗೆ ಒಗ್ಗಿಕೊಳ್ಳಬೇಕು ಎಂದು ಹೇಳಿದ್ದಾರೆ. "ಎಐನ ಹೇಗೆ ಫೇಸ್ ಮಾಡುತ್ತೇವೆ ಅನ್ನೋ ನೋಡಬೇಕು. ತಂತ್ರಜ್ಞಾನವನ್ನು ನಾವು ಒಪ್ಪಿಕೊಳ್ಳಲೇಬೇಕಾಗುತ್ತೆ. ಅದನ್ನು ಬಿಟ್ಟು ನಾವು ಏನೂ ಮಾಡುವುದಕ್ಕೆ ಆಗುವುದಿಲ್ಲ. ಅದರಿಂದ ಬಹಳ ಒಳ್ಳೆಯದೂ ಇದೆ. ಅದರಿಂದ ಮುಂದೆ ಏನು? ಇಂಡಸ್ಟ್ರಿಯಲ್ಲಿ ಏನು ಬದಲಾವಣೆ ಅನ್ನೋದು ಕಾದು ನೋಡಬೇಕಿದೆ" ಎಂದು ಲಹರಿ ವೇಲು ಹೇಳಿದ್ದಾರೆ.
ಇನ್ನು ಸದ್ಯ ಕನ್ನಡ ಚಿತ್ರರಂಗದ ಪರಿಸ್ಥಿತಿ ಬಗ್ಗೆನೂ ಲಹರಿ ವೇಲು ಮಾತಾಡಿದ್ದಾರೆ."ನೋಡಿ ಸಿನಿಮಾ ಅನ್ನೋದು ಸವಾಲಾಗಿದೆ. ಕನ್ನಡ ಚಿತ್ರರಂಗ ಒಂದೇ ಅಲ್ಲ. ತೆಲುಗು ಇರಬಹುದು, ತಮಿಳು ಇರಬಹುದು, ಮಲಯಾಳಂ ಇರಬಹುದು, ಹಿಂದಿನೂ ಇರಬಹುದು. ಇಲ್ಲಿ ಅಷ್ಟೇ ನಮ್ಮ ಜನ ಬಂದು ಸಿನಿಮಾ ನೋಡ್ತಿಲ್ಲ ಅಂತ ಅಷ್ಟೇ ಅಲ್ಲ. ಕಂಟೆಂಟ್ ಚೆನ್ನಾಗಿದ್ದರೆ, ಜನರು ಬಂದು ಸಿನಿಮಾ ನೋಡುತ್ತಾರೆ. ನಮ್ಮ ಜನಾನೇ ಸಿನಿಮಾವನ್ನು ಗೆಲ್ಲಿಸಿದ್ದಾರೆ. ನಾನು ನೋಡಿದ 50 ವರ್ಷದ ಇತಿಹಾಸವಿದೆ" ಎಂದು ಲಹರಿ ವೇಲು ಇದೇ ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications















