ಉಪೇಂದ್ರ, ರಾಧಿಕಾ ಪಂಡಿತ್ ಅತ್ಯುತ್ತಮ ನಟ ನಟಿ
ಇದೇನಿದು ಮೊನ್ನೆ ತಾನೆ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾದವಲ್ಲಾ. ಈಗ ಇದ್ಯಾವ ಪ್ರಶಸ್ತಿ ಅಂತಿದ್ದೀರಾ. ಇದು ನವರಸ ನಾಯಕ ಜಗ್ಗೇಶ್ ಕೊಟ್ಟಿರುವ ಪ್ರಶಸ್ತಿ. ಹೌದು ಜಗ್ಗೇಶ್ ಅವರ ಮಟ್ಟಿಗೆ ಅತ್ಯುತ್ತಮ ನಟ ನಟಿ ಇವರಿಬ್ಬರಂತೆ.
ಕನ್ನಡ ಚಿತ್ರರಂಗದಲ್ಲಿ ಯಾರು ಅತ್ಯುತ್ತಮ ನಟ ನಟಿ ಎಂಬ ಪ್ರಶ್ನೆಗೆ ಜಗ್ಗೇಶ್ ಕೊಟ್ಟಿರುವ ಉತ್ತರ ಇದು. ಅಪ್ಪಿತಪ್ಪಿಯೂ ಅವರು ರಮ್ಯಾ ಹೆಸರನ್ನು ಹೇಳಿಲ್ಲ. ಕಾರಣ ಗೊತ್ತೇ ಇದೆಯಲ್ಲಾ. 'ನೀರ್ ದೋಸೆ' ಚಿತ್ರದ ವಿವಾದದ ಕಾರಣ ಇಬ್ಬರ ನಡುವೆಯೂ ಬೂದಿಮುಚ್ಚಿದ ಕೆಂಡದಂತಿದೆ.
ಉಪೇಂದ್ರ ಅವರು ಬಹಳ ಶಿಸ್ತಿನ ನಟ ಹಾಗೂ ರಾಧಿಕಾ ಪಂಡಿತ್ ಅವರು ತಮ್ಮನ್ನು ತಾವು ನಿರೂಪಿಸಿಕೊಂಡಿದ್ದಾರೆ ಎಂದಿದ್ದಾರೆ ಜಗ್ಗೇಶ್. ಇನ್ನೂ ಮುಂದುವರಿದು, ಉಪೇಂದ್ರ ಒಬ್ಬ ಅದ್ಭುತ ನಟ, ತಂತ್ರಜ್ಞ ಹಾಗೂ ಸಂಪೂರ್ಣ ತಯಾರಾದ ನಿರ್ದೇಶಕ. ತಮ್ಮ ಚಿತ್ರಗಳ ಮೂಲಕ ಏನು ಹೇಳಬೇಕೆಂದಿದ್ದಾರೆ ಅದನ್ನು ಅವರು ಬಹಳ ನಿಷ್ಠೆಯಿಂದ ಮಾಡುತ್ತಾರೆ ಎಂದಿದ್ದಾರೆ ಜಗ್ಗೇಶ್.
ಹಾಗೆಯೇ ರಾಧಿಕಾ ಪಂಡಿತ್ ಬಗ್ಗೆ ಮಾತನಾಡುತ್ತಾ, "ರಾಧಿಕಾ ಪಂಡಿತ್ ಅವರ ಕೆಲಸ ನನಗೆ ಇಷ್ಟ. ಬೇರೆಯವರ ತರಹ ಅವರು ಬಿಟ್ಟಿ ಪ್ರಚಾರಕ್ಕಾಗಿ ಇಲ್ಲದ ಕಸರತ್ತುಗಳನ್ನು ಮಾಡಲ್ಲ" ಎಂದಿದ್ದಾರೆ. ಬಳಿಕ ಅವರು ನೀರ್ ದೋಸೆ ಚಿತ್ರದ ಬಗ್ಗೆ ಮಾತನಾಡುತ್ತಾ, ನೀರ್ ದೋಸೆ ಚಿತ್ರ ಖಂಡಿತ ಬಿಡುಗಡೆಯಾಗುತ್ತದೆ. ಈ ಚಿತ್ರಕ್ಕೆ ಯಾರ್ಯಾರು ಸಹಿ ಹಾಕಿದ್ದಾರೆ ಅವರೆಲ್ಲಾ ಅಭಿನಯಿಸುತ್ತಾರೆ ಎಂದಿದ್ದಾರೆ ನವರಸ ನಾಯಕ. (ಏಜೆನ್ಸೀಸ್)


Click it and Unblock the Notifications











