ನೀವು-ನಾವು ತಿಳ್ಕೊಂಡಿರೋದೇ ತಪ್ಪು.. 'ಯುಐ'ನಲ್ಲಿ ವಿಲನ್ ಸತ್ಯನೂ ಅಲ್ಲ ಕಲ್ಕಿನೂ ಅಲ್ಲ; ಮತ್ಯಾರು?
ಒಂದು ಸಿನಿಮಾ ಚರ್ಚೆ ಹುಟ್ಟಾಕಬೇಕು. ಸಿನಿಮಾದಿಂದ ಆಚೆ ಬಂದ್ಮೇಲೂ ಒಂದೊಂದು ಪಾತ್ರದ ಬಗ್ಗೆ ಸೀನ್ ಬಗ್ಗೆ ಪ್ರೇಕ್ಷಕರು ತಲೆ ಕೆಡಿಸಿಕೊಳ್ಳಬೇಕು. ಥಿಯೇಟರ್ನಿಂದ ಹೊರ ಬಂದ್ಮೇಲೂ ಸಿನಿಮಾದ ಪಾತ್ರಗಳು ಕಾಡುತ್ತಲೇ ಇರಬೇಕು. ಆಗಲೇ ಆ ಸಿನಿಮಾ ಜನರನ್ನು ಕಾಡಿದೆ ಅಂತ ಅರ್ಥ. ಸಾಮಾನ್ಯವಾಗಿ ಉಪೇಂದ್ರ ನಿರ್ದೇಶನದ ಸಿನಿಮಾನೂ ಹಾಗೇ ಒಂದು ಚರ್ಚೆಯನ್ನಂತೂ ಹುಟ್ಟಾಗುತ್ತೆ.
ಈ ಹಿಂದೆ ಉಪ್ಪಿ ನಿರ್ದೇಶಿಸಿದ ಸಿನಿಮಾಗಳ ಒಂದೊಂದು ಪ್ರೇಮ್ ಅನ್ನು ಈಗ ಡಿಕೋಡ್ ಮಾಡುತ್ತಿದ್ದಾರೆ. ಇನ್ನು 'ಯುಐ' ಸಿನಿಮಾ ನೋಡಿದವರು ಸುಮ್ಮನೆ ಕೂರುವುದಿಲ್ಲ. ಈ ಬಾರಿ ಕೆಲವರು ತಲೆಗೆ ಹುಳ ಬಿಟ್ಟುಕೊಂಡಿಲ್ಲ. ಮತ್ತೆ ಕೆಲವರು ತಲೆಗೆ ಹುಳ ಬಿಟ್ಟುಕೊಂಡು ಉಪೇಂದ್ರ ಹೇಳುವುದಕ್ಕೆ ಹೊರಟಿರುವ ಒಳಾರ್ಥವನ್ನು ಹುಡುಕುವುದಕ್ಕೆ ಹೊರಟಿದ್ದಾರೆ.

ಸಿನಿಮಾ ರಿಲೀಸ್ ಆಗಿ ಒಂದು ವಾರದ ಬಳಿಕ 'ಯುಐ' ಸಿನಿಮಾ ಬಗ್ಗೆ ಉಪೇಂದ್ರ ಒಂದು ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. ಇದೂವರೆಗೂ 'ಯುಐ' ಸಿನಿಮಾದಲ್ಲಿರುವ ಸತ್ಯ ಹಾಗೂ ಕಲ್ಕಿ ಎರಡು ಕ್ಯಾರೆಕ್ಟರ್ಗಳಲ್ಲಿ ಕಲ್ಕಿನೇ ವಿಲನ್ ಎಂದು ಭಾವಿಸಿದ್ದರು. ಆದರೆ, ಉಪ್ಪಿಅವರಿಬ್ಬರೂ ವಿಲನ್ ಅಲ್ಲ ಅಂತ ಹೇಳಿದ್ದಾರೆ. ಸೀದಾ ಪ್ರೇಕ್ಷಕರ ಕಡೆಗೆ ಬೊಟ್ಟು ಮಾಡಿ ತೋರಿಸಿದ್ದಾರೆ.
ಸತ್ಯನೂ ಅಲ್ಲ ಕಲ್ಕಿನೂ ಅಲ್ಲ
ಉಪೇಂದ್ರ ಕಲ್ಕಿ ಹಾಗೂ ಸತ್ಯ ಎರಡು ಪಾತ್ರಗಳ ಮೂಲಕ ಸಮಾಜದ ಹುಳುಕುಗಳನ್ನು ಎತ್ತಿ ಹಿಡಿಯುವುದಕ್ಕೆ ಹೊರಟಿದ್ದಾರೆ. ಇಬ್ಬರದ್ದೂ ಬೇರೆ ಬೇರೆ ಸಿದ್ಧಾಂತ. ಹೀಗಾಗಿ ಈ ಸಿನಿಮಾ ನೋಡುವ ಪ್ರೇಕ್ಷಕನಿಗೆ ಸತ್ಯ ಒಳ್ಳೆಯವನು. ಕಲ್ಕಿ ಕೆಟ್ಟವನು ಅಂತ ಅನಿಸುತ್ತೆ. ಅದೆಷ್ಟೋ ಮಂದು ಕಲ್ಕಿನೇ 'ಯುಐ' ಸಿನಿಮಾ ವಿಲನ್ ಎಂದು ಹೇಳಿದ್ದಾರೆ. ಆದರೆ, ಉಪ್ಪಿ ಪ್ರಕಾರ ಸತ್ಯನೂ ವಿಲನ್ ಅಲ್ಲ. ಕಲ್ಕಿನೂ ವಿಲನ್ ಅಲ್ಲ.

ಇಲ್ಲಿ 'U' ವಿಲನ್
'ಯುಐ' ಸಿನಿಮಾದಲ್ಲಿ ಜನರೇ ವಿಲನ್. ಸತ್ಯ ಹಾಗೂ ಕಲ್ಕಿ ತನ್ನ ತಾಯಿಗೆ ಆಗಿರುವ ಅನ್ಯಾಯದ ವಿರುದ್ಧ ತಮ್ಮದೇ ಸಿದ್ಧಾಂತವನ್ನಿಟ್ಟುಕೊಂಡು ಹೋರಾಟ ಮಾಡುತ್ತಾರೆ. ಇಲ್ಲ ಸೇಡು ತೀರಿಸಿಕೊಳ್ಳುತ್ತಾರೆ ಅಂತ ಅಂದುಕೊಳ್ಳಬಹುದು. ಆದರೆ, ಅವರಿಬ್ಬರನ್ನೂ ಅಂತಹ ನಿರ್ಧಾರಕ್ಕೆ ಬಂದಿದ್ದು ಕಾರಣ ಸಮಾಜ. ಅಂದರೆ, ಜನರು. ಹೀಗಾಗಿ ಈ ಸಿನಿಮಾದಲ್ಲಿ ಜನರೇ ವಿಲನ್ ಅನ್ನೋದು ಉಪ್ಪಿ ವಾದ.
ಉಪ್ಪಿ ಹೇಳಿದ್ದೇನು?
"ನಾನು ಒಂದೇ ಒಂದು ಪ್ರಶ್ನೆ ಕೇಳುತ್ತೇನೆ. ಈ ಸಿನಿಮಾಗೆ ವಿಲನ್ ಯಾರು ಹೇಳಿ? ನಿಮಗೆ ವಿಲನ್ ಯಾರು ಅಂತ ಗೊತ್ತಾಗಿಬಿಟ್ಟರೆ, ಈ ಸಿನಿಮಾ ಆರಾಮಾಗಿ ಅರ್ಥ ಆಗುತ್ತೆ. ನಾನು ಇನ್ನೊಂದು ಆಫರ್ ಕೊಡುತ್ತೇನೆ. ಈ ಸಿನಿಮಾವನ್ನು ಇನ್ನೊಮ್ಮೆ ನೋಡಿ ವಿಲನ್ ಯಾರು ಅಂತ ಹೇಳಿ. ನಾನೇ ವಿಲನ್ ಅಂತ ನೀವು ಒಪ್ಪಿಕೊಳ್ಳುತ್ತಿಲ್ಲ ನೋಡಿ. ನಾನೇ ವಿಲನ್ ಅಂತ ಹೇಳಿ." ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದಾರೆ.
ನಾನು ವಿಲನ್.. ನೀವು?
ನಾನು ವಿಲನ್ ಅಂತ ಒಪ್ಪಿಕೊಳ್ಳುತ್ತೇನೆ. ಆದರೆ, ನೀವು ವಿಲನ್ ಅಂತ ಯಾಕೆ ಒಪ್ಪಿಕೊಳ್ಳಲ್ಲ ಎಂದು ಉಪೇಂದ್ರ ಪ್ರಶ್ನೆ ಮಾಡಿದ್ದಾರೆ. "ಸತ್ಯ ವಿಲನ್ ಅಥವಾ ಕಲ್ಕಿ ವಿಲನ್ ಅಂತ ಹೇಳುತ್ತಿದ್ದೀರ. ಆದರೆ ಅವರಿಬ್ಬರು ಅಲ್ಲೊಂದು ಉದ್ದೇಶವನ್ನು ಇಟ್ಟುಕೊಂಡು ಹೋಗುತ್ತಿದ್ದಾರೆ. ಒಂದು ಸಾಲಿನಲ್ಲಿ ಹೇಳುವುದಾದರೆ, ಒಬ್ಬ ತಾಯಿಗೆ ಸಮಸ್ಯೆ ಆಗಿದೆ. ಆ ತಾಯಿಗೆ ಒಬ್ಬ ಒಂದು ಐಡಿಯಾಲಜಿಯಲ್ಲಿ ಪರಿಹಾರ ಕೊಡುವುದಕ್ಕೆ ಹೋಗುತ್ತಾನೆ. ಇನ್ನೊಬ್ಬ ಇನ್ನೊಂದು ಐಡಿಯಾಲಜಿಯಲ್ಲಿ ಪರಿಹಾರ ಕೊಡುವುದಕ್ಕೆ ಹೋಗುತ್ತಾನೆ. ಹಾಗಿದ್ದರೆ ಇಲ್ಲಿ ವಿಲನ್ಗಳು ಯಾರು? ಇಲ್ಲಿ ನಾನು ವಿಲನ್ ಅಂತ ಹೇಳಿಕೊಳ್ಳುವುದಕ್ಕೆ ರೆಡಿಯಿದ್ದೇನೆ. ನಿಮ್ಮಲ್ಲಿ ಒಬ್ಬರೂ ವಿಲನ್ ಅಂತ ಒಪ್ಪಿಕೊಳ್ಳುವುದಕ್ಕೆ ರೆಡಿಯಿಲ್ಲ." ಎಂದಿದ್ದಾರೆ ಉಪೇಂದ್ರ.


Click it and Unblock the Notifications











