ಉಪ್ಪಿಯ ಉತ್ತಮ ಪ್ರಜಾಕೀಯ ಪಾರ್ಟಿಗೆ 'ಆಟೋ ರಿಕ್ಷಾ' ಗುರುತು: ಮೀಟರ್ ಹಾಕದೆ ಸ್ಪರ್ಧೆಗೆ ರೆಡಿ!
ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಸುತ್ತಿದೆ. ಈಗಾಗಲೇ ಚುನಾವಣಾ ರಂಗು ಕಾವೇರಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಅಖಾಡಕ್ಕೆ ಇಳಿದಿವೆ. ರಾಜಕೀಯ ಮುಖಂಡರು ತಮ್ಮ ತಮ್ಮ ಕ್ಷೇತ್ರದಲ್ಲಿ ಭರ್ಜರಿಯಾಗಿ ಪ್ರಚಾರ ಮಾಡಲು ಆರಂಭಿಸಿದ್ದಾರೆ. ಈ ಮಧ್ಯೆ ರಿಯಲ್ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷ ಕೂಡ ಚುನಾವಣೆಗೆ ಸದ್ದಿಲ್ಲದೆ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಚುನಾವಣಾ ಆಯೋಗ ಉಪ್ಪಿಯ ಉತ್ತಮ ಪ್ರಜಾಕೀಯ ಪಕ್ಷಕ್ಕೆ 'ಆಟೋರಿಕ್ಷಾ' ಗುರುತನ್ನು ನೀಡಿದೆ. ಈ ಬಗ್ಗೆ ಉಪೇಂದ್ರ ತಮ್ಮ ಟ್ವಿಟರ್ ಖಾತೆಯ ಮೂಲಕ ಸಂತಸ ವಿಷಯವನ್ನು ಹಂಚಿಕೊಂಡಿದ್ದಾರೆ.
ಚುನಾವಣಾ ಆಯೋಗ ಪಕ್ಷದ ಸಿಂಬಲ್ ಅನ್ನು ನೀಡುತ್ತಿದ್ದಂತೆ ಉಪ್ಪಿ ಟ್ವೀಟ್ ಮಾಡಿದ್ದಾರೆ. "ಉತ್ತಮ ಪ್ರಜಾಕೀಯ ಪಕ್ಷಕ್ಕೆ ಈ ಬಾರಿಯ 2023 ವಿಧಾನಸಭಾ ಚುನಾವಣೆಗೆ ಕಾಮನ್ ಸಿಂಬಲ್ 'ಆಟೋ ರಿಕ್ಷಾ' ಚಿಹ್ನೆ ಲಭಿಸಿದೆ. ಎಲ್ಲರಿಗೂ ಶುಭಾಶಯಗಳು" ಎಂದು ಟ್ವೀಟ್ ಮಾಡಿದ್ದಾರೆ. ಉತ್ತಮ ಪ್ರಜಾಕೀಯ ಪಕ್ಷದಿಂದ ಸ್ಪರ್ಧೆ ಮಾಡುವ ಅಭ್ಯರ್ಥಿಗಳು 'ಆಟೋರಿಕ್ಷಾ'ವನ್ನು ಚಿಹ್ನೆಯಾಗಿ ಬಳಸ ಬೇಕೆಂದು ಚುನಾವಣಾ ಆಯೋಗ ಹೇಳಿದೆ. ಉತ್ತಮ ಪ್ರಜಾಕೀಯ ಪಕ್ಷ ನೋಂದಾಯಿತ ಮಾನ್ಯತೆ ಇಲ್ಲ ಪಕ್ಷವಾಗಿರುವ ಕಾರಣ ಪ್ರತಿಬಾರಿ ಚುನಾವಣಾ ಆಯೋಗದಿಂದ ಚಿಹ್ನೆಯನ್ನು ಪಡೆಯಬೇಕಿದೆ.
ಉತ್ತಮ ಪ್ರಜಾಕೀಯ ಪಕ್ಷ ಉಪ್ಪಿಯ ವಿಭಿನ್ನ ಕಾನ್ಸೆಪ್ಟ್. ರಾಜಕೀಯ ಬದಲು ಪ್ರಜಾಕೀಯ ಮಾಡಬೇಕು. ಚುನಾಯಿತ ಪ್ರತಿನಿಧಿಗಳು ಕಾರ್ಮಿಕರಂತೆ ಕೆಲಸ ಮಾಡಬೇಕು ಎಂಬ ಧ್ಯೆಯವನ್ನು ಇಟ್ಟುಕೊಂಡು ಈ ಪಕ್ಷವನ್ನು ಸ್ಥಾಪನೆ ಮಾಡಿದ್ದಾರೆ. 2018ರಲ್ಲಿ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ ಕೊಡಲು ನಿರ್ಧರಿಸಿದ್ದರು. ಹೀಗಾಗಿ ಕೆಪಿಜೆಪಿ ಜೊತೆ ಕೈ ಜೋಡಿದ್ದರು. ಆದರೆ, ಕೆಪಿಜೆಪಿ ಪಕ್ಷದ ಜೊತೆ ಹೊಂದಾಣಿಕೆಯಾಗದ ಬೆನ್ನಲ್ಲೇ ಉಪೇಂದ್ರ ಉತ್ತಮ ಪ್ರಜಾಕೀಯ ಪಕ್ಷ ಕಟ್ಟಿದ್ದರು. ಹಣವನ್ನು ಖರ್ಚು ಮಾಡದೇ ಚುನಾವಣೆಗೆ ಪ್ರಚಾರ ಮಾಡುವ ಧ್ಯೆಯ ಹೊಂದಿದ್ದಾರೆ.

ಉಪೇಂದ್ರ ಪಕ್ಷದ ಕಲ್ಪನೆಯೇ ವಿಭಿನ್ನವಾಗಿದೆ. ಹಲವೆಡೆ ಯುವಕರು ಉಪ್ಪಿ ಪಕ್ಷದ ಪರವಾಗಿ ಒಲವನ್ನು ಬೆಳೆಸಿಕೊಂಡಿದ್ದಾರೆ. ಈ ಪಕ್ಷ ಬ್ಯಾನರ್ ಕಟ್ಟಿ ಪ್ರಚಾರ ಮಾಡುವುದಿಲ್ಲ. ಅದಕ್ಕಾ ಖರ್ಚು ಕೂಡ ಮಾಡುವುದಿಲ್ಲ. ರ್ಯಾಲಿಗಳನ್ನು ಮಾಡುವುದಿಲ್ಲ. ಅಭ್ಯರ್ಥಿಗಳು ಚುನಾವಣೆಗೆ ಬೇಕಾಗಿರೋ ಕನಿಷ್ಟ ವೆಚ್ಚವನ್ನು ಮಾತ್ರ ಭರಿಸಬೇಕು ಎಂದು ಸೂಚನೆಯನ್ನು ನೀಡಿದ್ದಾರೆ. ಈಗಾಗಲೇ ಗ್ರಾಮ ಪಂಚಾಯ್ತಿ ಲೆವೆಲ್ನಲ್ಲಿ ಪ್ರಜಾಕೀಯ ಪಕ್ಷಕ್ಕೆ ಬೆಂಬಲ ಸಿಗುತ್ತಿದೆ. ಇನ್ನು ಒಂದೆರಡು ಚುನಾವಣೆಗಳಲ್ಲಿ ಪ್ರಜಾಕೀಯ ಪಕ್ಷ ಪ್ರಮುಖ ರಾಜಕೀಯ ಪಕ್ಷಗಳೊಂದಿಗೆ ಪೈಪೋಟಿಗೆ ಇಳಿಯಬಹುದು. ಅಲ್ಲದೆ ಈ ಬಾರಿ ಈ ಪಕ್ಷದಿಂದ ಎಲ್ಲೆಲ್ಲಿ ಅಭ್ಯರ್ಥಿಗಳು ನಿಲ್ಲುತ್ತಾರೆ? ಅಭ್ಯರ್ಥಿಗಳನ್ನು ಉಪ್ಪಿ ಯಾವ ರೀತಿ ಆಯ್ಕೆ ಮಾಡುತ್ತಾರೆ? ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಇದೆ.
ಪ್ರಜಾಕೀಯದ ಜೊತೆ ಉಪೇಂದ್ರ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಸದ್ಯ ರಿಯಲ್ ಉಪ್ಪಿಯ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಬಿಡುಗಡೆ ಸಜ್ಜಾಗಿದೆ. ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ನಲ್ಲಿ ಈ ಸಿನಿಮಾ ಮಾರ್ಚ್ 17ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಇದರ ಜೊತೆಗೇ ಉಪ್ಪಿ ಬಹಳ ದಿನಗಳ ಬಳಿಕ ನಿರ್ದೇಶಿಸುತ್ತಿರುವ 'ಯುಐ' ಸಿನಿಮಾ ಕೂಡ ಭರ್ಜರಿಯಾಗಿ ಶೂಟಿಂಗ್ ನಡೆಯುತ್ತಿದೆ. ಇನ್ನೇನು ಈ ಸಿನಿಮಾದ ಶೂಟಿಂಗ್ ಕೂಡ ಕೊನೆಯ ಹಂತ ತಲುಪಿದ್ದು, ಇದೇ ವರ್ಷ ರಿಲೀಸ್ ಆಗಲಿದೆ. ಚುನಾವಣೆ ಒತ್ತಡ ವೇಳೆನೂ ಉಪೇಂದ್ರ ಸಿನಿಮಾ ಶೂಟಿಂಗ್ ಮಾಡುತ್ತಾರಾ? ಇಲ್ಲ ಚುನಾವಣೆಗೆ ಒತ್ತು ಕೊಡುತ್ತಾರಾ? ಅನ್ನೋ ಕುತೂಹಲವಿದೆ.


Click it and Unblock the Notifications











