ರಾಜಮೌಳಿ,ಜೂ.ಎನ್ಟಿಆರ್,ವಿಕ್ರಂ ಅಂತ ದಿಗ್ಗಜರೊಂದಿಗೆ ಕಾಣಿಸಿಕೊಂಡ ವರದರಾಜ್ ಯಾರು? ಎಲ್ಲಿಯವರು?
ಪರಭಾಷೆಯ ಸಿನಿಮಾಗಳನ್ನು ಕನ್ನಡದಲ್ಲೇ ನೋಡಬೇಕು ಅನ್ನೋದು ಅದೆಷ್ಟೋ ಮಂದಿಗೆ ಇಂದಿಗೂ ಇದೆ. ತೆಲುಗು, ತಮಿಳು, ಮಲಯಾಳಂ ಅಂತಹ ಭಾಷೆಗಳಲ್ಲಿ ನಿರ್ಮಾಣಗೊಂಡಿರುವ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಕನ್ನಡದಲ್ಲಿ ನೋಡಿ ಖುಷಿ ಪಟ್ಟವರು ಅದೆಷ್ಟೋ ಮಂದಿ. ಆದರೆ, ಪರಭಾಷೆಯ ಸಿನಿಮಾಗಳನ್ನು ಕನ್ನಡಕ್ಕೆ ತರೋದು ಯಾರು? ಅದರ ಹಿಂದೆ ಯಾರಿದ್ದಾರೆ? ಅನ್ನೋದು ಬಹುತೇಕ ಮಂದಿಗೆ ಗೊತ್ತಿಲ್ಲ. ಆದರೆ, ಟೈಟಲ್ ಕಾರ್ಡ್ನಲ್ಲಿ ಒಂದು ಹೆಸರನ್ನಂತೂ ಕಾಮನ್ ಆಗಿ ಎಲ್ಲರೂ ನೋಡಿರುತ್ತಾರೆ. ಅವರೇ ವರದರಾಜ್ ಚಿಕ್ಕಬಳ್ಳಾಪುರ.
ಪರಭಾಷೆಯ ದಿಗ್ಗಜರೆಲ್ಲರಿಗೂ ವರದರಾಜ್ ಚಿಕ್ಕಬಳ್ಳಾಪುರ ಯಾರು ಅನ್ನೋದು ಗೊತ್ತಿದೆ. ಮೂವಿ ಮಾಂತ್ರಿಕ ರಾಜಮೌಳಿ, ತೆಲುಗಿನ ಯಂಗ್ ಟೈಗರ್ ಜೂ.ಎನ್ಟಿಆರ್, ತಮಿಳು ಸ್ಟಾರ್ ನಟ ವಿಕ್ರಂ, ಗಾಯಕರಾದ ಶ್ರೇಯಾ ಘೋಷಾಲ್, ಸಿದ್ಧ್ ಶ್ರೀರಾಮ್ ಅಂತಹವೊಂದಿಗೆ ಕೆಲಸ ಮಾಡಿರುವ ಅಪ್ಪಟ ಕನ್ನಡ ಪ್ರತಿಭೆ ವರದರಾಜ್ ಚಿಕ್ಕಬಳ್ಳಾಪುರ. ಅಂದ್ಹಾಗೆ ವರದರಾಜ್ ಚಿಕ್ಕಬಳ್ಳಾಪುರ 2019ರಲ್ಲಿ ಬಿಡುಗಡೆಯಾದ 'ರಂಗಸ್ಥಳ' ಸಿನಿಮಾಗೆ ಹಾಡುಗಳನ್ನು ಬರೆಯುವ ಮೂಲಕ ಚಿತ್ರರಂಗಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದರು. ಕಳೆದ ನಾಲ್ಕು ವರ್ಷಗಳ ಗ್ಯಾಪ್ನಲ್ಲಿ ಸುಮಾರು 96 ಪರಭಾಷೆಯ ಸಿನಿಮಾಗಳಿಗೆ ಸಂಭಾಷಣೆಕಾರರಾಗಿ ಹಾಗೂ ಗೀತರಚನೆಕಾರರಾಗಿ ದುಡಿದಿದ್ದಾರೆ.

ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ಅವಕಾಶವಿರಲಿಲ್ಲ. ಹೀಗಾಗಿ ವರದರಾಜ್ ನೂರಾರು ಭಕ್ತಿಗೀತೆ ಹಾಗೂ ವಿಡಿಯೋ ಸಾಂಗ್ಗಳನ್ನು ರಚಿಸುತ್ತಿದ್ದರು. ಅಲ್ಲದೆ ಪೂಜಾ ಗಾಂಧಿ ಅಭಿನಯದ 'ತವರಿನ ಋಣ' ಸಿನಿಮಾಗೆ 'ಕೇಳೇ ಮೈನ' ಎಂಬ ಹಾಡನ್ನು ಬರೆದಿದ್ದರು. ಆದರೆ, ಆ ಸಿನಿಮಾ ಕಾರಣಾಂತರಗಳಿಂದ ರಿಲೀಸ್ ಆಗಲಿಲ್ಲ. 2019ರಲ್ಲಿ ಕರ್ನಾಟಕದಲ್ಲಿಯೂ ಡಬ್ಬಿಂಗ್ ಸಿನಿಮಾ ರಿಲೀಸ್ ಮಾಡಲು ಅವಕಾಶ ಸಿಕ್ಕಿತ್ತು. ಈ ವೇಳೆ ರಾಮ್ ಚರಣ್ ಅಭಿನಯದ ತೆಲುಗು ಸಿನಿಮಾ 'ರಂಗಸ್ಥಲಂ' ಕನ್ನಡಕ್ಕೆ 'ರಂಗಸ್ಥಳ'ವಾಗಿ ಡಬ್ ಆಗಿ ರಿಲೀಸ್ ಆಗಿತ್ತು.
'ರಂಗಸ್ಥಳ' ಸಿನಿಮಾಗಾಗಿ 'ಎಂಥ ಮುದ್ದಾಗಿದೀಯೇ' ಹಾಗೂ 'ಗಂಗಮ್ಮ ರಂಗಮ್ಮ' ಹಾಡುಗಳು ಕನ್ನಡದ ಸಿನಿರಸಿಕರಿಗೂ ಮೆಚ್ಚುಗೆ ಆಯ್ತು. ಆ ಬಳಿಕ 'ಕಾಂಚನ 3' ಸಿನಿಮಾಗೆ ಸಾಹಿತ್ಯ ರಚಿಸಿದರು. ಈ ಎರಡು ಸಿನಿಮಾಗಳ ಬಳಿಕ ವರದರಾಜ್ ಪರಭಾಷೆಯ ಸಿನಿಮಾ ಮಂದಿಗೆ ಚಿರಪರಿಚಿತರಾಗಿದ್ದರು. ಮೂರನೇ ಚಿತ್ರದಲ್ಲಿ ಹಾಡುಗಳ ಜೊತೆ ಸಂಭಾಷಣೆಯನ್ನೂ ಬರೆಯಲು ಆರಂಭಿಸಿದ್ರು. ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಸೈರಾ ನರಸಿಂಹ ರೆಡ್ಡಿ'ಗೆ ಹಾಡುಗಳ ಜೊತೆ ಜೊತೆಗೆ ಸಂಭಾಷಣೆಗಳನ್ನೂ ರಚಿಸಿದರು. ಇಲ್ಲಿಂದ ವರದರಾಜ್ ಹಿಂದೆ ತಿರುಗಿ ನೋಡಿಯೇ ಇಲ್ಲ.

ಈಗಾಗಲೇ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಿಂದ ಕನ್ನಡಕ್ಕೆ ಡಬ್ ಸಿನಿಮಾಗಳಿಗೆ ಸಂಭಾಷಣೆ ಹಾಗೂ ಗೀತರಚನೆಯನ್ನು ಮಾಡಿದ್ದಾರೆ. ದಳಪತಿ ವಿಜಯ್ ಸಿನಿಮಾ 'ಮಾಸ್ಟರ್ ', ವಿಜಯ್ ದೇವರಕೊಂಡ ಸಿನಿಮಾ 'ಗೀತ ಗೋವಿಂದಂ', ರಾಜಮೌಳಿಯ 'RRR', 'ಮಗಧೀರ' ಸೇರಿದಂತೆ 'ಬೃಂದಾವನಂ', 'ಮಿಥುನಂ', 'ವಡ ಚೆನ್ನೈ', 'ಇಮೈಕ್ಕ ನೋಡಿಗಳ್ ', 'ಕಾತುವಾಕ್ಕುಲ ರೆಂಡು ಕಾದಲ್', 'ಬೀಸ್ಟ್ ', 'ವಿಕ್ರಮ್ ', 'ಪೊನ್ನಿಯನ್ ಸೆಲ್ವನ್ 1', 'ಪಾಲಾರ್' 'ಪುಷ್ಪ' ದಂತಹ ಹಲವು ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹಾಗೇ ಕನ್ನಡದಿಂದ ತೆಲುಗು ಭಾಷೆಗಳಿಗೆ ಡಬ್ ಆಗಿರುವ 'ಕೆಂಪೇಗೌಡ 2', 'ಪೊಗರು', 'ಕಿಸ್ ', 'ವಂಚನ' 'ರೆಮೋ', 'ಉಗ್ರಾವತಾರಂ', ' ಅನಗನಗಾ ಓಕ ಅಡವಿ ', 'ಕಬ್ಜ' ಮತ್ತು 'ಟೆರರ್ ' ಹೀಗೆ ಹಲವು ಸಿನಿಮಾಗಳಿಗೆ ವರದರಾಜು ಸಾಹಿತ್ಯ ಮತ್ತು ಸಂಭಾಷಣೆ ರಚಿಸಿದ್ದಾರೆ.
ವರದರಾಜ್ ಮೂಲತ: ಚಿಕ್ಕಬಳ್ಳಾಪುರದವರು. ಬೆಂಗಳೂರಿನ ಆರ್ .ಸಿ. ಕಾಲೇಜಿನಲ್ಲಿ ವಿದ್ಯಾಬ್ಯಾಸ ಮಾಡಿದ್ದಾರೆ. ಬಿ.ಬಿ.ಎಂ, ಎಂ.ಬಿ.ಎ ಪದವೀಧರರು ಹೌದು. ಗಡಿ ಭಾಗದವರದ್ದಾರಿಂದ ಕನ್ನಡದ ಜೊತೆಗೆ ತೆಲುಗಿನಲ್ಲೂ ಹಿಡಿತ ಚೆನ್ನಾಗಿತ್ತು. ಕನ್ನಡ ಸಾಹಿತ್ಯವಲ್ಲದೆ, ತೆಲುಗು ಸಾಹಿತ್ಯವನ್ನೂ ಚೆನ್ನಾಗಿ ಓದಿ ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ ಡಬ್ಬಿಂಗ್ ಕೆಲಸ ಬಹುಬೇಗನೇ ಅವರ ಕೈ ಹಿಡಿದಿದೆ. ಇನ್ನು 'ಶಾಕುಂತಲಂ', 'ಪುಷ್ಪ 2', 'ಪೊನ್ನಿಯನ್ ಸೆಲ್ವನ್ 2', 'ಹರಿಹರ ವೀರಮಲ್ಲು', 'ದಸರಾ' NTR 30, ಮುಂತಾದ ಚಿತ್ರಗಳಿಗೆ ವರದರಾಜು ಸಾಹಿತ್ಯ ಮತ್ತು ಸಂಭಾಷಣೆ ರಚಿಸುತ್ತಿದ್ದು, ಇನ್ನಷ್ಟೇ ಈ ಸಿನಿಮಾ ರಿಲೀಸ್ ಆಗಬೇಕಿವೆ.


Click it and Unblock the Notifications











