ಸುದೀಪ್-ಎಂಎನ್ ಕುಮಾರ್ ವಿವಾದ ಹಿಂದಿರೊ ಮಾಸ್ಟರ್ ಮೈಂಡ್ ಸೂರಪ್ಪ ಬಾಬು? ವೀರಕಪುತ್ರ ಶ್ರೀನಿವಾಸ್ ಕಿಡಿ
ಕಳೆದೊಂದು ವಾರದಿಂದ ಕಿಚ್ಚ ಸುದೀಪ್ ವಿರುದ್ಧ ಕನ್ನಡದ ಇಬ್ಬರು ನಿರ್ಮಾಪಕರು ಗಂಭೀರ ಆರೋಪ ಮಾಡಿದ್ದಾರೆ. ಸಿನಿಮಾ ಮಾಡಿಕೊಡುವುದಾಗ ಹಣ ಪಡೆದು ಕೈಗೆ ಸಿಗುತ್ತಿಲ್ಲ ಅಂತ ನಿರ್ಮಾಪಕ ಎಂಎನ್ ಕುಮಾರ್ ಆರೋಪ ಮಾಡಿದ್ರೆ, ಇನ್ನೊಂದು ಕಡೆ ಸಿನಿಮಾ ರೈಟ್ಸ್ ತರಿಸಿದ್ರು ಆದರೆ, ಸಿನಿಮಾ ಮಾಡಿಲ್ಲ ಅಂತ 'ಹುಚ್ಚ' ಸಿನಿಮಾದ ನಿರ್ಮಾಪಕ ರೆಹಮಾನ್ ದೂಷಿಸಿದ್ದಾರೆ.
ಈ ವಿವಾದ ಸ್ಯಾಂಡಲ್ವುಡ್ನಲ್ಲಿ ಅಷ್ಟೇ ಅಲ್ಲ, ಐದು ಪ್ರಮುಖ ಚಿತ್ರರಂಗದಲ್ಲೂ ಚರ್ಚೆಯಾಗುತ್ತಿದೆ. ಸುದೀಪ್ ಹಾಗೂ ನಿರ್ಮಾಪಕರಿಬ್ಬರ ನಡುವಿನ ಜಟಾಪಟಿ ಮುಂದುವರೆದಿದೆ. ಇರಡೂ ಕಡೆಯಿಂದಲೂ ತಂತ್ರ-ಪ್ರತಿತಂತ್ರಗಳು ನಡೆಯುತ್ತಲೇ ಇವೆ.

ಈ ಮಧ್ಯೆ ಡಾ.ವಿಷ್ಣುವರ್ಧನ್ ಅಭಿಮಾನಿ ವೀರಕಪುತ್ರ ಶ್ರೀನಿವಾಸ್ ಈ ವಿವಾದಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಪರ ಬ್ಯಾಟ್ ಬೀಸಿದ್ದು ಹೊಸ ಬಾಂಬ್ ಸಿಡಿಸಿದ್ದಾರೆ. ಸುದೀಪ್ ಹಾಗೂ ಎಂಎನ್ ಕುಮಾರ್ ನಡುವಿನ ವಿವಾದ ಹಿಂದಿನ ಮಾಸ್ಟರ್ ಮೈಂಡ್ ಸೂರಪ್ಪ ಬಾಬು ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಷ್ಟಕ್ಕೂ 'ಕೋಟಿಗೊಬ್ಬ 3' ಸಿನಿಮಾ ನಿರ್ಮಾಪಕ ಹೆಸರು ಕೇಳಿ ಬರುತ್ತಿರೋದ್ಯಾಕೆ? ವೀರಕಪುತ್ರ ಶ್ರೀನಿವಾಸ್ ಏನಂತಾರೆ? ಇಲ್ಲಿದೆ ಡಿಟೈಲ್ಸ್.
ಈ ಸೀನ್ಗೆ ಸೂರಪ್ಪ ಬಾಬು ಬಂದಿದ್ದೇಗೆ?
ಕಿಚ್ಚ ಸುದೀಪ್ ವಿರುದ್ಧ ನಿರ್ಮಾಪಕ ಎಂಎನ್ ಕುಮಾರ್ ಆರೋಪದ ಹಿಂದೊಬ್ಬರು ಮಾಸ್ಟರ್ ಇದ್ದಾರೆ. ಅವರು ನಿರ್ಮಾಪಕ ಸೂರಪ್ಪ ಬಾಬು ಎಂದು ವಿಷ್ಣುದಾದನ ಅಭಿಮಾನಿ ಹಾಗೂ ಸುದೀಪ್ಗೆ ಆತ್ಮೀಯರೂ ಆಗಿರುವ ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ. ಅಲ್ಲದೆ ಯಾರಿಗೋ ಹತ್ತಿರ ಆಗುವುದಕ್ಕೆ ಸುದೀಪ್ ತೇಜೋವಧೆ ಮಾಡಲಾಗಿತ್ತಿದೆ ಎಂದಿದ್ದಾರೆ.

"ಸುದೀಪ್ ಹೆಂಗೂ ಸಿಗೋದಿಲ್ಲ ಅಂತ ಗೊತ್ತಾದ್ಮೇಲೆ ಯಾರಿಗೋ ಹತ್ತಿರ ಆಗಲು ಸುದೀಪ್ ಸರ್ ಅವರ ಮಾನಹರಣ ಮಾಡುತ್ತಿದ್ದೀರ. ಅವರ ತೇಜೋವಧೆ ಮಾಡುತ್ತಿದ್ದೀರ. ಬೇರೆ ಯಾರಿಗೋ ಹತ್ತಿರ ಆಗೋಕೆ ಮಾಡುತ್ತಿದ್ದೀರ ಅನ್ನೋದು ನನ್ನ ಖಚಿತವಾದ ಆರೋಪ ಸರ್" ಎಂದು ನಿರ್ಮಾಪಕ ಕುಮಾರ್ಗೆ ಕಿಚ್ಚ ಸುದೀಪ್ ಆತ್ಮೀಯರಾದ ವೀರಕಪುತ್ರ ಶ್ರೀನಿವಾಸ್ ಆರೋಪ ಮಾಡಿದ್ದಾರೆ.
ಸೂರಪ್ಪ ಬಾಬು ಮಾಸ್ಟರ್ ಮೈಂಡ್?
ವೀರಕಪುತ್ರ ಶ್ರೀನಿವಾಸ್ 'ಕೋಟಿಗೊಬ್ಬ 3' ಸಿನಿಮಾದ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಆರೋಪ ಮಾಡುವುದಕ್ಕೆ ಕಾರಣವಿದೆ. ಕಳೆದ ವರ್ಷ ಸೂರಪ್ಪ ಬಾಬು 'ಕೋಟಿಗೊಬ್ಬ 3' ಸಿನಿಮಾ ಮಾಡಿ ಕೋಟಿಗಟ್ಟಲೆ ಹಣ ಕಳೆದುಕೊಂಡಿದ್ದರು. ಅಂದಿನಿಂದ ಸುದೀಪ್ ವಿರುದ್ಧ ಅಸಮಧಾನಗೊಂಡಿದ್ದರು ಅಂತ ಸುದ್ದಿ ಓಡಾಡುತ್ತಿತ್ತು. ಈ ಬೆನ್ನಲ್ಲೇ ಕಿಚ್ಚ ಹಾಗೂ ಕುಮಾರ್ ವಿವಾದಕ್ಕೆ ಸೂರಪ್ಪ ಬಾಬು ಕಾರಣ ಅನ್ನೋ ಆರೋಪ ಕೇಳಿ ಬಂದಿದೆ.
"ಈ ಸೀನ್ನಲ್ಲಿ ಎಲ್ಲೂ ಸೂರಪ್ಪ ಬಾಬು ಕಾಣಿಸಿಕೊಳ್ಳುತ್ತಿಲ್ಲ. ನಂಬಿ ಸೂರಪ್ಪ ಬಾಬು ಇದರ ಹಿಂದೆ ಇರುವ ಮಾಸ್ಟರ್ ಮೈಂಡ್. ಇಂತಹದ್ದೊಂದು ಗಂಭೀರ ಆರೋಪ ಮಾಡುತ್ತಿದ್ದೇನೆ. ಯಾಕಂದ್ರೆ, ನಾನು ಜೊತೆಯಲ್ಲಿರುವಾಗಲೇ ಅನೇಕ ಪತ್ರಕರ್ತರಿಗೆ ಸೂರಪ್ಪ ಬಾಬು ಅವರು ಫೋನ್ ಮಾಡಿದ್ದಾರೆ. ನಾಳೆ ಸುದೀಪ್ ಅವರ ವಿರುದ್ಧ ಪ್ರೆಸ್ಮೀಟ್ ಮಾಡುತ್ತಿದ್ದೇವೆ ಸರ್ ನಿಮ್ಮ ಸಪೂರ್ಟ್ ಬೇಕು. ನನಗೆ ಗೆಲುವು ಆಗುವ ರೀತಿ ನೋಡಿಕೊಳ್ಳಬೇಕು ಅಂತ ಮಾತಾಡುತ್ತಿದ್ದರು. ನೀವು ಯಜಮಾನ್ರು(ಡಾ.ವಿಷ್ಣುವರ್ಧನ್) ಜೊತೆಯಲ್ಲಿ ಇದ್ದವರು. ಅದಕ್ಕೆ ನಾವು ನಿಮ್ಮ ಜೊತೆಯಲ್ಲಿದ್ದೀವಿ." ಎಂದು ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.
ಕಾಲ್ ಶೀಟ್ ಕೊಟ್ಟವರಿಗೆ ಮೋಸ
ಇಷ್ಟೇ ಅಲ್ಲದೆ 'ಕೋಟಿಗೊಬ್ಬ 2' ಸಿನಿಮಾದಿಂದ ನಷ್ಟ ಆಗಿದ್ದರಿಂದ 'ಕೋಟಿಗೊಬ್ಬ 3'ಗೆ ಸುದೀಪ್ ಕಾಲ್ಶೀಟ್ ಕೊಟ್ಟಿದ್ದನ್ನು ವೀರಕಪುತ್ರ ಶ್ರೀನಿವಾಸ್ ನೆನೆದಿದ್ದಾರೆ. ಅಂದು ಸೂರಪ್ಪ ಬಾಬು ಇದೇ ಕಿಚ್ಚ ಸುದೀಪ್ ಬಗ್ಗೆ ಆಡಿದ ಮಾತನ್ನು ರಿವೀಲ್ ಮಾಡಿದ್ದಾರೆ.
"ಒಂದು ಸಾರಿ ನೀವೇ ಬಸವೇಶ್ವರ ನಗರ ಹೊಟೇಲ್ನಲ್ಲಿ ಕೂತು ಕೋಟಿಗೊಬ್ಬ 2ನಲ್ಲಿ ನನ್ನ ತಪ್ಪುಗಳಿಂದಾಗಿ, ನನಗೆ ನಷ್ಟ ಆಯ್ತು. ಸುದೀಪ್ ಸರ್ಗೆ ನಾನು ಬೇಜಾರು ಮಾಡಿದೆ. ಇನ್ನು ಅವರು ನನಗೆ ಕಾಲ್ಶೀಟ್ ಕೊಡೋದಿಲ್ಲ ಅಂತ ಅಂದ್ಕೊಂಡಿದ್ದೆ. ಆದರೆ, ಆ ವ್ಯಕ್ತಿ ತುಂಬಾ ದೊಡ್ಡ ಮನುಷ್ಯ. ನನಗೆ ಇಬ್ಬರು ಹೆಣ್ಣು ಮಕ್ಕಳು ಇರೋದು ಗೊತ್ತಾಯ್ತಂತೆ. ಅದಕ್ಕೆ ಜಾಕ್ ಮಂಜು ಅವರಿಂದ ಹೇಳಿಸಿ, ನನ್ನನ್ನು ಮನೆಗೆ ಕರೆಸಿಕೊಂಡು ಕೋಟಿಗೊಬ್ಬ 3 ಮಾಡೋಕೆ ಕಾಲ್ ಶೀಟ್ ಕೊಟ್ಟಿದ್ದಾರೆ ಅಂತ ನೀವೇ ಹೇಳಿದ್ರಿ. ಅಂತಹ ನಟನ ಬಗ್ಗೆ ಪಿತೂರಿ ಮಾಡುತ್ತೀರಲ್ಲ ಸರ್." ಎಂದು ಸೂರಪ್ಪ ಬಾಬು ಮೇಲೆ ಗಂಭೀರ ಆರೋಪ ಮಾಡಿದ್ದಾರೆ.


Click it and Unblock the Notifications











