ಹಿರಿಯ ನಟಿ ಶಾಂತಮ್ಮ ನಿಧನ: ಪುನೀತ್ ರಾಜ್ ಕುಮಾರ್ ಕಂಬನಿ
ಕನ್ನಡ ಚಿತ್ರರಂಗದ ಹಿರಿಯ ನಟ ಬಿ. ಶಾಂತಮ್ಮ (95) ಭಾನುವಾರ ಸಂಜೆ 5.45ರ ವೇಳೆಗೆ ಮೈಸೂರಿನಲ್ಲಿ ನಿಧನರಾದರು. 1956ರಲ್ಲಿ ಚಿತ್ರರಂಗ ಪ್ರವೇಶಿಸಿದ್ದ ಅವರು 160ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು.
Recommended Video
ಮೈಸೂರಿನಲ್ಲಿರುವ ಮಗಳ ಮನೆಯಲ್ಲಿ ಅವರು ವಾಸವಿದ್ದರು. ವಯೋಸಹಜ ಆರೋಗ್ಯ ಸಮಸ್ಯೆಯಿಂದಾಗಿ ಅವರು ಕಾವೇರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶನಿವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಅವರು ಹಠಾತ್ತಾಗಿ ಕುಸಿದುಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಬೆಡ್ಗಳು ಖಾಲಿ ಇಲ್ಲ ಎಂದು ಅವರನ್ನು ಎಲ್ಲಿಯೂ ದಾಖಲಿಸಿಕೊಂಡಿರಲಿಲ್ಲ. ಕಾವೇರಿ ಆಸ್ಪತ್ರೆಗೆ ದಾಖಲು ಮಾಡುವ ವೇಳೆ ಮಧ್ಯರಾತ್ರಿ 1 ಗಂಟೆ ಆಗಿತ್ತು ಎನ್ನಲಾಗಿದೆ. ಉಸಿರಾಟದ ಸಮಸ್ಯೆಯಿಂದ ಅವರು ಬಳಲುತ್ತಿದ್ದರು ಎನ್ನಲಾಗಿದೆ.
ಶಾಂತಮ್ಮ ಅವರು ಮೂವರು ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಅವರ ಅಂತ್ಯ ಸಂಸ್ಕಾರ ಸೋಮವಾರ ನಡೆಯಲಿದೆ. ಮುಂದೆ ಓದಿ.

ಪತಿಯ ಪ್ರೋತ್ಸಾಹದಿಂದ ನಟನೆ
ಡಾ. ರಾಜ್ ಕುಮಾರ್ ಅವರ ಅನೇಕ ಸಿನಿಮಾಗಳಲ್ಲಿ ಶಾಂತಮ್ಮ ನಟಿಸಿದ್ದರು. ಹೀಗಾಗಿ ರಾಜ್ ಕುಮಾರ್ ಅವರ ಕುಟುಂಬಕ್ಕೆ ಬಹಳ ಆಪ್ತರಾಗಿದ್ದರು. ಶಾಂತಮ್ಮ ಅವರ ಪತಿ ಗೋಕಾಕ್ ಕಂಪೆನಿಯಲ್ಲಿ ನೃತ್ಯ ಮಾಸ್ಟರ್ ಆಗಿದ್ದರು. ಮದುವೆಯ ನಂತರವೇ ಶಾಂತಮ್ಮ ಚಿತ್ರರಂಗಕ್ಕೆ ಬಂದಿದ್ದರು. ಅವರು ಸಿನಿಮಾ ರಂಗಕ್ಕೆ ಬರುವುದಕ್ಕೆ ತವರು ಮನೆಯಲ್ಲಿ ಒಪ್ಪಿಗೆ ಇರಲಿಲ್ಲವಾದರೂ ಪತಿಯ ಪ್ರೋತ್ಸಾಹದಿಂದ ನಟನೆಗೆ ಇಳಿದಿದ್ದರು.

ರಾಜ್ ಕುಮಾರ್ ಜತೆ ಮೊದಲ ಸಿನಿಮಾ
1956ರಲ್ಲಿ ಡಾ. ರಾಜ್ ಕುಮಾರ್ ಅಭಿನಯದ ನಾಲ್ಕನೆಯ ಚಿತ್ರ 'ಹರಿಭಕ್ತ'ದ ಮೂಲಕ ಶಾಂತಮ್ಮ ಚಿತ್ರರಂಗ ಪ್ರವೇಶಿಸಿದ್ದರು. ರಣಧೀರ ಕಂಠೀರವ, ಇಂದಿನ ಭಾರತ, ಶಬರಿಮಲೆ, ಚಿನ್ನಾರಿಮುತ್ತ, ಚಂದವಳ್ಳಿ ತೋಟ, ಬಾಂಬೆ ದಾದಾ, ಗಜೇಂದ್ರ, ಶ್ರುತಿ ಸೇರಿದಾಗ, ರೂಪಾಯಿ ರಾಜ ಸೇರಿದಂತೆ ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಸಹ ನಟಿಸಿದ್ದರು. ಅವರು ಹಿರಿಯ ನಟಿ ಬಿ. ಜಯಮ್ಮ ಅವರ ಸಂಬಂಧಿಯೂ ಹೌದು. ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ನಾಯಕ ನಟರೊಂದಿಗೂ ಅವರು ನಟಿಸಿದ್ದರು. ರಜನಿಕಾಂತ್ ಜತೆ ಸಹ ಅಭಿನಯಿಸಿದ್ದರು.

ಮಕ್ಕಳ ಚಿಕಿತ್ಸೆಗೆ ಸಹಾಯಕ್ಕೆ ಮನವಿ ಮಾಡಿದ್ದರು
2013ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನತಾ ದರ್ಶನದ ವೇಳೆ ಅವರನ್ನು ಭೇಟಿ ಮಾಡಿದ್ದ ಶಾಂತಮ್ಮ, ಕ್ಯಾನ್ಸರ್ನಿಂದ ಬಳಲುತ್ತಿದ್ದ ತಮ್ಮ ಇಬ್ಬರು ಮಕ್ಕಳ ಚಿಕಿತ್ಸೆಗೆ ಸಹಾಯ ನೀಡುವಂತೆ ಮನವಿ ಮಾಡಿದ್ದರು. ಆ ಸಮಯದಲ್ಲಿ ದುನಿಯಾ ವಿಜಯ್, ರಾಧಿಕಾ ಕುಮಾರಸ್ವಾಮಿ ಸೇರಿದಂತೆ ಅನೇಕರು ಅವರಿಗೆ ಆರ್ಥಿಕ ನೆರವು ನೀಡಿದ್ದರು. ರಾಜ್ ಕುಮಾರ್ ಅವರ ಕುಟುಂಬವೂ ಅವರಿಗೆ ಸಹಾಯ ಮಾಡಿತ್ತು.

ಪುನೀತ್ ರಾಜ್ಕುಮಾರ್ ಸಂತಾಪ
'ಹಿರಿಯ ಕಲಾವಿದರು ಹಾಗು ನಮ್ಮ ಕುಟುಂಬಕ್ಕೆ ಬಹಳ ಹತ್ತಿರವಾಗಿದ್ದ ಶಾಂತಮ್ಮನವರು ವಿಧಿವಶರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಕುಟುಂಬದ ಆಪ್ತರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ನೋವು ಹಂಚಿಕೊಂಡ ಜಗ್ಗೇಶ್
'ನನ್ನ ಅನೇಕ ಚಿತ್ರದಲ್ಲಿ ನಟಿಸಿದ್ದರು. ಪಾರ್ವತಮ್ಮನವರ ಅನುಯಾಯಿ. ಯಾವಾಗಲೂ ಅಮ್ಮನ ನೋಡಿದಾಗ ಇವರು ಜೊತೆ ಇರುತ್ತಿದ್ದರು. ಹಿರಿತಲೆಗಳು ಅರಿವಾಗದೆ ಸರದಿಂದ ಮುತ್ತು ಕಳಚಿ ನೆಲಕ್ಕೆ ಬಿದ್ದಂತೆ ಬೀಳುತ್ತಿವೆ. ಕಾಲ ಶೀಟಿ ಹೊಡೆದಾಗ ಎಲ್ಲರು ಸಾಲು ನಿಲ್ಲಬೇಕು. ಅದೇ ಕಾಲನ ನಿಯಮ. ಆ ಸಾಲಲ್ಲಿ ಇಂದು ಇವರು ನಿಂತು ನಲಿಸಿ ಹೋದರು. ಓಂ ಶಾಂತಿ' ಎಂದು ಜಗ್ಗೇಶ್ ಹೇಳಿದ್ದಾರೆ.

ಅಗಲಿಕೆ ದುಃಖಕರ- ಎಚ್ಡಿಕೆ
ನೂರಾರು ಚಲನಚಿತ್ರಗಳಲ್ಲಿ ಪೋಷಕ ನಟಿಯಾಗಿ ಅಭಿನಯಿಸಿ ಜನಮನ ಗೆದ್ದಿದ್ದ ಹಿರಿಯ ಕಲಾವಿದೆ ಶಾಂತಮ್ಮ ಅವರ ಅಗಲಿಕೆ ಬಹಳ ದುಃಖಕರ. ಈ ನೋವು ಸಹಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬದ ಸದಸ್ಯರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ- ಎಚ್ ಡಿ ಕುಮಾರಸ್ವಾಮಿ


Click it and Unblock the Notifications











