Doddanna: "ಬೆಳ್ಳಂಬೆಳಗ್ಗೆನೇ ದೊಡ್ಡಣ್ಣ RIP ಅಂತ ಹಾಕಿದ್ದಾರೆ.. ಕಿಡಿಗೇಡಿಗಳನ್ನಂತೂ ಬಿಡೋದಿಲ್ಲ"- ಹಿರಿಯ ನಟ ದೊಡ್ಡಣ್ಣ
ಸೋಶಿಯಲ್ ಮೀಡಿಯಾ ಬಂದ್ಮೇಲೆ ಸೆಲೆಬ್ರೆಟಿಗಳು ನೆಮ್ಮದಿಯಿಂದ ಇರುವುದಕ್ಕೆ ಆಗುತ್ತಿಲ್ಲ. ದಿನ ಬೆಳಗಾದರೆ, ಕಿಡಿಗೇಡಿಗಳು ಇದರಲ್ಲಿ ಫೇಕ್ ಸುದ್ದಿಗಳನ್ನು ಹಬ್ಬಿಸುತ್ತಲೇ ಇದ್ದಾರೆ. ವಿಚ್ಚೇದನ, ಬ್ರೇಕಪ್, ಲವ್ ಸ್ಟೋರಿ, ಸಾವಿ ಸುದ್ದಿಗಳನ್ನು ಮನಸ್ಸೋ ಇಚ್ಛೆ ಹಾಕುತ್ತಿದ್ದಾರೆ. ಹೀಗಾಗಿ ಸಿನಿಮಾ ತಾರೆಯರು ನೆಮ್ಮದಿಯಾಗಿ ಬದುಕುವುದಕ್ಕೆ ಆಗದೇ ಇರುವ ಸ್ಥಿತಿಯಲ್ಲಿ ಇದ್ದಾರೆ.
ಇಂದು (ಜೂನ್ 12) ಬೆಳಗ್ಗೆ ಕೂಡ ಯಾರೋ ಕಿಡಿಗೇಡಿಗಳು ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ನಿಧನರಾಗಿದ್ದಾರೆ ಎಂದು ಶ್ರದ್ಧಾಂಜಲಿ ಪೋಸ್ಟರ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಕೂಡಲೇ ಈ ಫೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದಕ್ಕೆ ಶುರುವಾಗಿತ್ತು. ದೊಡ್ಡಣ್ಣ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಚಿತ್ರರಂಗ ಕೂಡ ಶಾಕ್ಗೆ ಒಳಗಾಗಿತ್ತು.

ಹಿರಿಯ ನಟ ದೊಡ್ಡಣ್ಣ ನಿಧನ ಅನ್ನೋ ಸುಳ್ಳು ಸುದ್ದಿ ಕಾಡ್ಗಿಚ್ಚಿನಂತೆ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿತ್ತು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಖುದ್ದಾಗಿ ಹಿರಿಯ ನಟ ದೊಡ್ಡಣ್ಣ ಸ್ಪಷ್ಟನೆ ನೀಡಿದ್ದಾರೆ. ಹೀಗೆ ಸುಳ್ಳು ಸುದ್ದಿಯನ್ನು ಹಬ್ಬಿಸಿದವರ ವಿರುದ್ಧ ಗರಂ ಆಗಿದ್ದು, ಕಿಡಿಗೇಡಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ವಿಡಿಯೋ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಶುದ್ಧ ಸುಳ್ಳು.. ಶುದ್ಧ ಸುಳ್ಳು
ಈ ಸುಳ್ಳು ಸುದ್ದಿ ಹಬ್ಬುತ್ತಿದ್ದಂತೆ ದೊಡ್ಡಣ್ಣಗೆ ಬೆಳಗ್ಗೆಯಿಂದಲೂ ನೂರಾರು ಕರೆಗಳು ಬರುತ್ತಿವೆ. ಹೀಗಾಗಿ ಈ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ. "ಅನ್ನದಾತರು ಆಶ್ರಯ ದಾತರು ಆದ ಕನ್ನಡದ ನನ್ನ ಎಲ್ಲಾ ತಂದೆ-ತಾಯಿಗಳಿಗೆ ನಿಮ್ಮ ದೊಡ್ಡಣ್ಣನ ಭಕ್ತಿ ಪೂರ್ವಕವಾದ ನಮಸ್ಕಾರಗಳು. ನಿಮಗೆ ಒಂದು ವಿಷಯವನ್ನು ನಾನು ತಿಳಿಸಲೇಬೇಕು. ಇವತ್ತು ಬೆಳ್ಳಂಬೆಳಗ್ಗೆನೇ, ನಾನು ಏಳುವುದಕ್ಕೆ ಮುಂಚೆನೇ ಯಾರೋ ಅವಿವೇಕಿಗಳು ನಾನು ನಿಧನವಾಗಿದ್ದೀನಿ ಅನ್ನೋದನ್ನು ಹಾಕಿದ್ದಾರೆ. ಅದು ಶುದ್ಧ ಸುಳ್ಳು.. ಶುದ್ಧ ಸುಳ್ಳು" ಎಂದು ಹಿರಿಯ ನಟ ದೊಡ್ಡಣ್ಣ ಕ್ಲಾರಿಟಿ ಕೊಟ್ಟಿದ್ದಾರೆ.
"ಕಿಡಿಗೇಡಿಗಳನ್ನಂತೂ ಬಿಡೋದಿಲ್ಲ"
ಸುಳ್ಳು ಸುದ್ದಿಯನ್ನು ಹಬ್ಬಿಸಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ದೊಡ್ಡಣ್ಣ ಎಚ್ಚರಿಕೆ ಕೊಟ್ಟಿದ್ದಾರೆ. "ನಾನು ಆರೋಗ್ಯವಾಗಿ ಇದ್ದೀನಿ. ನೆಮ್ಮದಿಯಾಗಿ ಇದ್ದೀನಿ. ನನಗೆ ಬೆಳಗ್ಗೆಯಿಂದ ಮುಖವನ್ನು ತೊಳೆದುಕೊಳ್ಳುವುದಕ್ಕೂ ಬಿಡುತ್ತಿಲ್ಲ. ಎಲ್ಲಾ ನನ್ನ ಪ್ರೀತಿಪಾತ್ರರು, ಅಭಿಮಾನಿಗಳು, ನನ್ನ ಬಂಧು-ಬಳಗದವರು, ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಫೋನ್ ಮಾಡುತ್ತಿದ್ದರು. ಅದಕ್ಕೋಸ್ಕರ ಈ ವಿಡಿಯೋವನ್ನು ಮಾಡಿ ನಾನು ಹಾಕುತ್ತಿದ್ದೇನೆ. ಅದಕ್ಕೆ ಈ ವಿಡಿಯೋ ಮಾಡಿ ಹಾಕುತ್ತಿದ್ದೇನೆ. ಎಲ್ಲಿವರೆಗೂ ನಿಮ್ಮ ಆಶೀರ್ವಾದ ಇರುತ್ತೋ ಅಲ್ಲಿವರೆಗೂ ನೂರು ಕಾಲ ಚೆನ್ನಾಗಿ ಇರುತ್ತೇನೆ ಅನ್ನೋದೇ ನನ್ನ ನಂಬಿಕೆ. ನನ್ನ ಮೇಲೆ ಪ್ರೀತಿ ವಿಶ್ವಾಸ ಇಟ್ಟಿದ್ದಕ್ಕೆ ಒಂದನೆ. ಕಿಡಿಗೇಡಿಗಳನ್ನಂತೂ ಬಿಡೋದಿಲ್ಲ. ಅವರ ಬೆನ್ನತ್ತಿ, ಅವರಿಗೆ ಶಿಕ್ಷೆಯನ್ನಂತೂ ಕೊಡಿಸುತ್ತೇನೆ." ಎಂದು ನಟ ದೊಡ್ಡಣ್ಣ ಹೇಳಿದ್ದಾರೆ.
"ಆಯಸ್ಸು ಜಾಸ್ತಿ ಆಯ್ತು"
ಕಿಡಿಗೇಡಿಗಳು ಇಂತಹ ಕೃತ್ಯ ಎಸಗಿದ್ದಕ್ಕೆ ದೊಡ್ಡಣ್ಣ ಬೇಸರ ಹೊರ ಹಾಕಿದ್ದಾರೆ. ಅಲ್ಲದೇ ಆಯಸ್ಸು ಜಾಸ್ತಿ ಆಯ್ತು, ಕಂಟಕ ಬಗೆ ಹರಿಯಿತು ಎಂದಿದ್ದಾರೆ. "ಕನ್ನಡಿಗರ ಪ್ರೀತಿ ವಿಶ್ವಾಸ ಇರೋವರೆಗೂ ದೊಡ್ಡಣ್ಣನಿಗೆ ಏನೂ ಆಗಲ್ಲ. ಆಯಸ್ಸು ಜಾಸ್ತಿ ಆಯ್ತು. ಯಾವುದೋ ಕಂಟಕ ಬಗೆ ಹರಿಯಿತು ಅಂದುಕೊಂಡಿದ್ದೇನೆ. ಈ ಮೂಲಕ ನಾನು ಆರೋಗ್ಯವಾಗಿದ್ದೇನೆ ಎಂದು ಹೇಳುವುದಕ್ಕೆ ಮತ್ತೊಮ್ಮೆ ಇಷ್ಟ ಪಡುತ್ತೇನೆ" ಎಂದು ದೊಡ್ಡಣ್ಣ ಸುಳ್ಳು ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಹಾಗೇ ಕಿಡಿಗೇಡಿಗಳಿಗೂ ಎಚ್ಚರಿಕೆಯನ್ನು ನೀಡಿದ್ದಾರೆ.


Click it and Unblock the Notifications
