"ಹಿಂದೆ ಚಪ್ಪಲಿಯಲ್ಲಿ ಹೊಡೆದು ಬಿಟ್ರು.. ಈಗ ಇದನ್ನು ಶುರು ಮಾಡಿದ್ದಾರೆ": ಸಿಡಿದೆದ್ದ ವಿನೋದ್ ರಾಜ್!
ಕಳೆದೆರಡು ದಿನಗಳಿಂದ ಹಿರಿಯ ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಸುದ್ದಿಯಲ್ಲಿದ್ದಾರೆ. ಪ್ರಕಾಶ್ ರಾಜ್ ಮೇಹು ಮಾಡಿರುವ ಆರೋಪಗಳ ವಿರುದ್ಧ ತಾಯಿ-ಮಗ ಇಬ್ಬರೂ ಸಿಡಿದೆದ್ದಿದ್ದಾರೆ. ವಿನೋದ್ ರಾಜ್ ಅವರ ಮದುವೆ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ನಟಿ ಲೀಲಾವತಿ ಬೇಸರ ವ್ಯಕ್ತಪಡಿಸಿದ್ದರು.
ಮಗನ ಮದುವೆ ಬಗ್ಗೆ ಯಾಕೆ ಹೇಳಿಲ್ಲ ಅಂತಾನೂ ಲೀಲಾವತಿ ಸ್ಪಷ್ಟ ಪಡಿಸಿದ್ದರು. ಈಗ ವಿನೋದ್ ರಾಜ್ ಸಿನಿವುಡ್ ಯೂಟ್ಯೂಬ್ ಚಾನೆಲ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲರದ್ದೂ ಮದುವೆ ನಡೆಯುತ್ತೆ. ಭಯೋತ್ಪಾದನೆ ಆಗಿದೆಯಾ? ಅಂತ ಪ್ರಶ್ನೆ ಮಾಡಿದ್ದಾರೆ. ಯೂಟ್ಯೂಬ್ ಚಾನೆಲ್ಗೆ ವಿನೋದ್ ರಾಜ್ ನೀಡಿದ ಪ್ರತಿಕ್ರಿಯೆ ಸಾರಾಂಶ ಇಲ್ಲಿದೆ.

ಮದುವೆ ಆಗಿದೆ.. ಭಯೋತ್ಪಾದನೆ ಆಗಿದೆಯೇ?
ವಿನೋದ್ ರಾಜ್ ಮದುವೆ ಆಗಿದೆ ಅನ್ನೋದನ್ನು ಒಪ್ಪಿಕೊಂಡಿದ್ದಾರೆ. ಎಲ್ಲರದ್ದೂ ನಡೆಯುತ್ತೆ. ಇದರಿಂದ ಭಯೋತ್ಪಾದನೆ ಆಗಿದೆಯಾ? ನೋವಾಗಿದೆಯಾ? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಯಾವ ಕಲಾವಿದರಿಗೂ ಯಾರೂ ತೊಂದರೆ ಕೊಡಬಾರದು ಎಂದು ಸಿನಿವುಡ್ ಯೂಟ್ಯೂಬ್ ಚಾನೆಲ್ನಲ್ಲಿ ಕಿಡಿಕಾರಿದ್ದಾರೆ.
"ಮದುವೆ ಎಲ್ಲರದ್ದೂ ನಡೆಯುತ್ತಿದೆ. ಏನಾಗಿದೆ? ಭಯೋತ್ಪಾದನೆ ಆಗಿದೆಯೇ? ಅಲ್ಲೋಲ ಕಲ್ಲೋಲ ಆಗಿದೆಯಾ? ನೋವಾಗಿದೆಯಾ? ಏನಾಗಿದೆ? ಏನೋ ಒಂದು ದೊಡ್ಡ ನಿಧಿಯನ್ನು ಕಂಡು ಹಿಡಿದ ಹಾಗೆ. ನನಗೆ ಹೇಳಿದವರು ನರಕಕ್ಕೆ ಹೋಗುತ್ತಾರೆ ಅಂತ ನನ್ನ ತಾಯಿಯವರು ಹೇಳಿದ್ದಾರೆ. ಇವರು ಮಾತ್ರ ಅಲ್ಲ. ಎಲ್ಲಾ ಕಲಾವಿದರು, ಉದಯೋನ್ಮುಖ ಕಲಾವಿದರು, ಹಿಂದಿನ ತಲೆಮಾರಿನ ಕಲಾವಿದರಿಗೆ ಯಾರೂ ತೊಂದರೆ ಕೊಡಬಾರದು." ಎಂದು ಆಕ್ರೋಶ ಹೊರಹಾಕಿದ್ದಾರೆ.

ಅಗೌರವ ಒಂದೇ ಉಳಿಯೋದಾ?
ಇಷ್ಟು ವರ್ಷ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ರೂ ಲೀಲಾವತಿಯವರಿಗೆ ಏನೂ ಧಕ್ಕಿಲ್ಲ. ಸಹಾಯ ಧನ, ಗೌರವ ಧನ ಏನೂ ಕೊಟ್ಟಿಲ್ಲ. ಬರೀ ಗೌರವವೇ ಎಂದು ಎಂದು ವಿನೋದ್ ರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
"ಕೆಲಸ ಬಿಟ್ರೆ ಅವರಿಗೆ ಸಹಾಯ ಧನನೂ ಇಲ್ಲ. ಗೌರವ ಧನನೂ ಇಲ್ಲ. ಅಗೌರವ ಒಂದೇ ಉಳಿಯೋದಾ? ಒಂದಿಬ್ಬರು ಕಷ್ಟ ಪಡೋರಿಗೆ ಸಹಾಯ ಮಾಡು ನೋಡೋಣ. ಆದರೆ ಉಪಕಾರ ಮಾಡಿ, ಉಪದ್ರ ಕೊಡಬೇಡಿ. ಇದರಿಂದ ನಿನಗೆ ಏನಾದರೂ ಹಿಂಸೆ ಆಗಿದೆಯಾ?" ಎಂದು ಪ್ರಶ್ನೆ ಮಾಡಿದ್ದಾರೆ.
ಯಾರ ಮರ್ಯಾದೆ ಕಳೆಯುವುದಕ್ಕೆ ಹೊರಟಿದ್ದಾರೆ?
ಹೀಗೆ ಆರೋಪಗಳನ್ನು ಮಾಡುತ್ತಾ ಅಣ್ಣಾವ್ರ ಮರ್ಯಾದೆಯನ್ನು ತೆಗೆಯುವುದಕ್ಕೆ ಹೊರಟಿದ್ದಾರೆ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಅಮ್ಮ ಇಷ್ಟು ವರ್ಷದ ಸರ್ವೀಸ್ನಲ್ಲಿ ಯಾರಿಗೂ ಬೈದಿಲ್ಲ ತೊಂದರೆ ಕೊಟ್ಟಿಲ್ಲ ಎಂದಿದ್ದಾರೆ.
"ಇಷ್ಟು ವರ್ಷದ ಸರ್ವಿಸ್ನಲ್ಲಿ ನನ್ನ ತಾಯಿಯವರು ಬೈದಿದ್ದು ನೋಡಿದ್ದೀರಾ? ಯಾರಿಗಾದ್ರೂ ಕೈ ತೋರಿಸಿದ್ದು ನೋಡಿದ್ದೀರಾ? ನಾನು ಅವತ್ತು ತುಂಬಾ ಹೇಳಿದ್ದೆ. ಯಾರೂ ಈ ಬಗ್ಗೆ ಮಾತಾಡಬೇಡಿ. ಆದರು ಯಾಕೆ? ಇಡೀ ಆರು ಕೋಟಿ ಅಭಿಮಾನಿಗಳಿಗೆ ಅರ್ಥ ಆಗಬೇಕು. ಇದೆಲ್ಲಾ ಅಣ್ಣಾವ್ರ ಅಭಿಮಾನಿಗಳಿಗೆ ಚೆನ್ನಾಗಿ ಅರ್ಥ ಆಗಿರುತ್ತೆ. ಈ ವ್ಯಕ್ತಿ ನಮಗೆ ಚೆನ್ನಾಗಿ ಗೊತ್ತು. ಭಗವಂತನಿಗೆ ಚೆನ್ನಾಗಿ ಗೊತ್ತು. ಇದು ಗೊತ್ತಾಗಿ ನೀನೇನು ಮಾಡುವುದಕ್ಕೆ ಹೊರಟಿದ್ದೀಯಾ? ಇಲ್ಲಾ ಯಾರ ಮರ್ಯಾದೆ ಕಳೆಯುವುದಕ್ಕೆ ಹೊರಟಿದ್ದೀಯಾ ನೀನು? ಪ್ರಜ್ಞೆ ಇದೆಯಾ ನಿನಗೆ?" ಎಂದು ಕಿಡಿ ಕಾರಿದ್ದಾರೆ.
"ಹಿಂದೆ ಚಪ್ಪಲಿಯಲ್ಲಿ ಹೊಡೆದು ಬಿಟ್ರು"
"ಹಿಂದೆ ಚಪ್ಪಲಿ ಏಟು ಹೊಡೆದುಬಿಟ್ರು. ಈಗ ಇದನ್ನು ಶುರುವಿಟ್ಕೊಂಡಿದ್ದಾರೆ. ಇದನ್ನು ಬಿಟ್ಟು ಜೀವನದಲ್ಲಿ ಬೇರೆ ಅವಿಷ್ಕಾರಗಳು ಏನೂ ಬರೋದಿಲ್ವಾ? ನೀವೆಲ್ಲ ಯಾರೂ ಅಲ್ಲ. ಕೆಲವು ತಪ್ಪಾದ ಪ್ರಶ್ನೆಗಳಿಗೆ ಉತ್ತರ ಕೊಡೋದಕ್ಕೆ ನಮಗೆ ಇಷ್ಟವಿಲ್ಲ. ನನ್ನ ತಾಯಿಗೆ ನಾನು ಮಾತು ಕೊಟ್ಟಿದ್ದೇನೆ. ಅದರಂತೆಯೇ ನಡೆಯುತ್ತೇನೆ. ಈ ಮಣ್ಣಿನೊಳಗೆ ಹೋಗೋನು." ಎಂದು ವಿನೋದ್ ರಾಜ್ ತಿರುಗೇಟು ನೀಡಿದ್ದಾರೆ.
"ನಾವು ಸಿನಿಮಾ ಮಾಡಲ್ಲ.. ಸಿನಿಮಾ ಬೇಕಾಗಿಲ್ಲ"
"ಲೀಲಾವತಿ ವಿನೋದ್ ರಾಜ್ ಬಗ್ಗೆ ಹೆಚ್ಚು ಕಡಿಮೆ ಏನಾದರೂ ಮಾತಾಡಿದರೆ, ಅದರ ಪರಿಸ್ಥಿತಿ ಹಾಗೂ ಪರಿಣಾಮ ಏನಾಗ್ಬಹುದು ಅಂತ ಪ್ರತಿಯೊಬ್ಬರಿಗೂ ಅರ್ಥ ಆಗಬೇಕು. ನಮಗೆ ಏನೂ ಬೇಕಾಗಿಲ್ಲ. ಯಾಕಂದ್ರೆ, ನಾವು ಸಿನಿಮಾ ಮಾಡಲ್ಲ. ಸಿನಿಮಾ ಬೇಕಾಗಿಲ್ಲ ನಮಗೆ. ನಾವು ಜೀವನ ಮಾಡೋಕೆ ಬಂದಿದ್ದೇವೆ. ಇಲ್ಲೇನಾದ್ರೂ ಮಾಡುತ್ತಿದ್ದೇವಾ? ನೋಡಿ. ಇಷ್ಟ ಆದರೆ ಹೊಗಳಿ, ಇಲ್ಲಾ ಅಂದ್ರೆ, ತೆಗಿಲೇ ಬೇಡಿ. ಇದೆಲ್ಲಾ ಯಾತಕ್ಕೆ? ಬೇಕಾ ಇದೆಲ್ಲಾ? ನಾವೆಲ್ಲ ನೆಮ್ಮದಿಯಾಗಿದ್ದೇವಿ. ಯಾಕೆ ಸುಮ್ಮನೆ ಅದರ ಬಗ್ಗೆ ಮಾತು?" ಎಂದು ವಿನೋದ್ ರಾಜ್ ಆಕ್ರೋಶ ಹೊರಹಾಕಿದ್ದಾರೆ.


Click it and Unblock the Notifications











