Vijay Raghavendra: "ಕಣ್ಣೀರು ಹಾಕೋದು ಅವಳಿಗೆ ಇಷ್ಟ ಆಗುತ್ತಿರಲಿಲ್ಲ".. ಪತ್ನಿ ನೆನೆದು ಭಾವುಕರಾದ 'ಚಿನ್ನಾರಿ ಮುತ್ತ'
ಸ್ಯಾಂಡಲ್ವುಡ್ ನಟ ವಿಜಯ್ ರಾಘವೇಂದ್ರ ಇತ್ತೀಚೆಗೆ ಪತ್ನಿ ಸ್ಪಂದನಾರನ್ನು ಕಳೆದುಕೊಂಡಿದ್ದರು. ಆ ನೋವಿನಿಂದ ಹೊರಬಂದು ತಮ್ಮ ಸಿನಿಮಾದ ಕೆಲಸದ ಆರಂಭಿಸಿದ್ದಾರೆ. ಸ್ಪಂದನಾ ಅಗಲುವುದಕ್ಕೂ ಮುನ್ನ ವಿಜಯ್ ರಾಘವೇಂದ್ರ 'ಕದ್ದ ಚಿತ್ರ' ಸಿನಿಮಾದ ಬಿಡುಗಡೆಯ ಕೆಲಸದಲ್ಲಿ ಬ್ಯುಸಿಯಾಗಿದ್ದರು.
ಇನ್ನೇನು 'ಕದ್ದ ಚಿತ್ರ' ಸಿನಿಮಾ ರಿಲೀಸ್ ಆಗಬೇಕು. ಅದಕ್ಕಾಗಿ ಪ್ರಚಾರ ಶುರು ಮಾಡಬೇಕು ಅನ್ನುವ ವೇಳೆಗೆ ವಿಜಯ್ ರಾಘವೇಂದ್ರ ಪತ್ನಿ ಬ್ಯಾಂಕಾಕ್ನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಅಲ್ಲಿಂದ ಸಿನಿಮಾದ ಪ್ರಚಾರ ನಿಂತಿತ್ತು. 'ಕದ್ದ ಚಿತ್ರ' ಬಿಡುಗಡೆಯನ್ನು ಕೆಲವು ದಿನ ಮುಂದೂಡಲಾಗಿತ್ತು.

ವಿಜಯ್ ರಾಘವೇಂದ್ರ ಪತ್ನಿ ಅಗಲಿಕೆಯ ಕಾರ್ಯಗಳನ್ನು ಮುಗಿಸಿದ ಬಳಿಕ ಮತ್ತೆ ಸಿನಿಮಾ ಕಡೆ ಮುಖ ಮಾಡಿದ್ದಾರೆ. ನೋವಿನಲ್ಲಿಯೇ 'ಕದ್ದ ಚಿತ್ರ' ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಇಂದು (ಆಗಸ್ಟ್ 26) ಈ ಸಿನಿಮಾ ಟ್ರೈಲರ್ ರಿಲೀಸ್ ಮಾಡಲಾಗಿದ್ದು, 'ಕದ್ದ ಚಿತ್ರ'ದ ಬಗ್ಗೆ ಮಾತಾಡುವ ವೇಳೆ ಪತ್ನಿ ಸ್ಪಂದನಾರನ್ನು ನೆನೆದು ವಿಜಯ್ ರಾಘವೇಂದ್ರ ಭಾವುಕರಾಗಿದ್ದಾರೆ.
"ತಾಯಿ ಸ್ಥಾನದಲ್ಲಿ ನಿಂತಿದ್ರಿ"
ಪತ್ನಿ ಸ್ಪಂದನಾ ಅಗಲಿದ ಸಮಯದಲ್ಲಿ ವಿಜಯ್ ರಾಘವೇಂದ್ರ ಆತ್ಮೀಯರು, ಅಭಿಮಾನಿಗಳು, ಮಾಧ್ಯಮ ಬೆಂಬಲಕ್ಕೆ ನಿಂತಿತ್ತು. ಆ ಸಂದರ್ಭವನ್ನು ನೆನೆದು ವಿಜಯ್ ರಾಘವೇಂದ್ರ ಭಾವುಕರಾಗಿದ್ದಾರೆ. "ಇತ್ತೀಚೆಗೆ ಆಗಿರುವ ಯಾವುದೇ ಘಟನೆಯಾಗಲಿ, ಯಾರದ್ದೋ ಹತ್ತಿರದ ಮನೆಯಲ್ಲಿ ಆದಾಗ, ಪರಿಚಯದವರ ಮನೆಯಲ್ಲಿ ಆದಾಗ, ಒಂದು ಅನುಕಂಪ ಸೂಚಿಸುತ್ತೇವೆ. ಆ ಮಾತಾಡೋ ಕಥೆ ನಾವೇ ಆದಾಗ, ಹೇಗಪ್ಪ ಅಂತ ಕಣ್ ಕಣ್ಬಿಟ್ಕೊಂಡು ನೋಡುವಂತಹ ಸಂದರ್ಭ ಆಯ್ತು ನನಗೆ. ಆದರೆ, ಆಗ ನೀವೆಲ್ಲರೂ ನಿಂತಿದ್ದು, ತಾಯಿ ಸ್ಥಾನದಲ್ಲಿ ನಿಂತಿದ್ರಿ. ನೀವ್ಯಾರು ಹೊರಗಿನವರ ಹಾಗೆ ಇರಲಿಲ್ಲ." ಎಂದಿದ್ದಾರೆ.

"ಕಣ್ಣೀರು ಸ್ಪಂದನಾಗೆ ಇಷ್ಟ ಆಗುತ್ತಿರಲಿಲ್ಲ"
ವಿಜಯ್ ರಾಘವೇಂದ್ರ ಎಷ್ಟೇ ಕಂಟ್ರೋಲ್ ಮಾಡಿಕೊಂಡರೂ, ವೇದಿಕೆ ಮೇಲೆ ಭಾವುಕರಾದರು. ಪತ್ನಿಯನ್ನು ನೆನೆದು ಅವರ ಕಣ್ಣುಗಳು ಒದ್ದೆಯಾದವು. "ಕಣ್ಣೀರು ಹಾಕಬಾರದು ಅಂತ ನಿರ್ಧಾರ ಮಾಡಿಕೊಂಡು ಬಂದಿದ್ದೆ. ಯಾಕಂದ್ರೆ, ಅದು ಅವಳಿಗೆ ಇಷ್ಟ ಆಗುತ್ತಿರಲಿಲ್ಲ. ಈ ಚಿತ್ರತಂಡದ ಮೇಲೆ ಅವಳಿಗೆ ಪ್ರೀತಿಯಿತ್ತು. ವಿಶ್ವಾಸವಿತ್ತು. ಧೈರ್ಯ ಇತ್ತು. ನೀವೆಲ್ಲರೂ ಕೈ ಹಿಡಿದು ನಡೆಸಿದ್ದೀರಿ. ಮಾರ್ಗದರ್ಶನ ನೀಡಿದ್ದೀರಿ. ನನ್ನ ಕುಟುಂಬದಲ್ಲಿ ನೀವು ಒಬ್ಬರಿಗಿದ್ದಿರೋ ಇಲ್ಲವೋ ಗೊತ್ತಿಲ್ಲ. ಆದರೆ, ನಿಮ್ಮ ಕುಟುಂಬದಲ್ಲಿ ನನ್ನನ್ನು ಒಬ್ಬನಾಗಿ ಮಾಡಿಕೊಂಡಿದ್ರಿ. ಇದು ನನಗೆ ಬಹಳ ದೊಡ್ಡ ಆಸ್ತಿ." ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ.
ನೋವಲ್ಲೂ ಸಿನಿಮಾ ಜೊತೆ ನಿಂತ ನಟ
ವಿಜಯ್ ರಾಘವೇಂದ್ರ ಪತ್ನಿಯನ್ನು ಕಳೆದುಕೊಂಡ ನೋವಲ್ಲಿದ್ದಾರೆ. ಆದರೂ, ಅದೆನ್ನೆಲ್ಲ ತನ್ನೊಳಗೆ ಇಟ್ಟುಕೊಂಡು ನಿರ್ಮಾಪಕರ ಜೊತೆ ನಿಂತಿದ್ದಾರೆ. ತಮ್ಮ ಸಿನಿಮಾ 'ಕದ್ದ ಚಿತ್ರ'ದ ಪ್ರಚಾರಕ್ಕೆ ನಿಂತಿದ್ದಾರೆ. "ನಾನೇನು ಯಾರು ಮಾಡದೇ ಇರೋ ಕೆಲಸ ಮಾಡುತ್ತಿಲ್ಲ. ನಿರ್ಮಾಪಕನ ಜೊತೆ ನಿಲ್ಲಬೇಕಿರೋದು ಪ್ರತಿಯೊಬ್ಬ ಕಲಾವಿದನ ಕರ್ತವ್ಯ. ಅವಕಾಶ ಕೊಡ್ತಾರೆ. ಕೆಲಸ ಕೊಡುತ್ತಾರೆ. ದುಡ್ಡು ಕೊಡುತ್ತಾರೆ. ಅನುಕೂಲತೆ ಕೊಡುತ್ತಾರೆ. ಹೆಸರು ಕೊಡುತ್ತಾರೆ. ಇಷ್ಟೆಲ್ಲ ಕೊಡೊ ನಿರ್ಮಾಪಕರ ಜೊತೆ ನಿಂತು ಪ್ರಚಾರ ಮಾಡೋದು ನಮ್ಮ ಕರ್ತವ್ಯ ಆಗುತ್ತೆ. ಆ ಕರ್ತವ್ಯ ಪ್ರಜ್ಞೆಯಿಂದ ನಿಮ್ಮೆಲ್ಲರ ಮುಂದೆ ನಿಂತು ಕದ್ದ ಚಿತ್ರಕ್ಕೆ ಪ್ರಚಾರ ಮಾಡುತ್ತಿದ್ದೇನೆ." ಎಂದು ಹೇಳಿದ್ದಾರೆ.
'ಕದ್ದ ಚಿತ್ರ' ರಿಲೀಸ್ ಯಾವಾಗ?
ಈ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಲೇಖಕರಾಗಿ ಕಾಣಿಸಿಕೊಂಡಿದ್ದಾರೆ. ಕ್ರೈಂ ಎಮೋಷನಲ್ ಡ್ರಾಮ ಶೈಲಿಯ ಈ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಇದೇ ಮೊದಲ ಬಾರಿಗೆ ಇಂತಹ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮುಂದಿನ ತಿಂಗಳು ಸೆಪ್ಟೆಂಬರ್ 8ರಂದು ಬಿಡುಗಡೆಯಾಗುತ್ತಿದೆ.


Click it and Unblock the Notifications











