ಹೊಸ ಹುಮ್ಮಸ್ಸಿನೊಂದಿಗೆ ಮತ್ತೆ ಬರುತ್ತಿದೆ 'ಕಾಣದಂತೆ ಮಾಯವಾದನು'
ಬಿಡುಗಡೆಯಾದ ವಾರದಲ್ಲಿಯೇ ವಿವಿಧ ಕಾರಣಗಳಿಂದ ಚಿತ್ರಮಂದಿರದಿಂದ ಎತ್ತಂಗಡಿಯಾಗಿದ್ದ 'ಕಾಣದಂತೆ ಮಾಯವಾದನು' ಚಿತ್ರ ಮತ್ತೆ ಮೈಕೊಡವಿಕೊಂಡು ಚಿತ್ರಮಂದಿರದ ಮುಂದೆ ಬರುತ್ತಿದೆ. ಜನವರಿಯಲ್ಲಿ ತೆರೆ ಕಂಡಿದ್ದ ಚಿತ್ರವನ್ನು ಪುನಃ ಚಿತ್ರಮಂದಿರಕ್ಕೆ ತರುತ್ತಿದೆ ಚಿತ್ರತಂಡ.
ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ವಿಕಾಸ್, ನಾಯಕರಾಗಿಯೂ ನಟಿಸಿರುವ ಚಿತ್ರವಿದು. ಸಿಂಧು ಲೋಕನಾಥ್ ನಾಯಕಿಯಾಗಿರುವ ಈ ಚಿತ್ರ, ವಿಮರ್ಶಕರು ಹಾಗೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೂ ವ್ಯಾಪಾರದ ದೃಷ್ಟಿಯಿಂದ ಸಿನಿಮಾಕ್ಕೆ ಒಂದಷ್ಟು ಹಿನ್ನಡೆಯಾಗಿತ್ತು. ಜತೆಗೆ ಸಿನಿಮಾಗಳ ಪೈಪೋಟಿಯಿಂದ ಚಿತ್ರಮಂದಿರಗಳೂ ಸಿಗದೆ ಸಂಕಷ್ಟ ಅನುಭವಿಸಿತ್ತು.
ಒಳ್ಳೆಯ ಸಿನಿಮಾ ಮಾಡಿದ್ದರೂ ಗೆಲುವು ಸಿಗಲಿಲ್ಲ ಎಂಬ ಹತಾಶೆಯಿಂದ ಕೂರದ ಚಿತ್ರತಂಡ ಮರುಪ್ರಯತ್ನ ನಡೆಸಿ ಇನ್ನೊಮ್ಮೆ ಸಿನಿಮಾನವನ್ನು ಬಿಡುಗಡೆ ಮಾಡುತ್ತಿದೆ. ಮಾರ್ಚ್ 6ರಂದು 'ಕಾಣದಂತೆ ಮಾಯವಾದನು' ಪುನಃ ಪ್ರತ್ಯಕ್ಷವಾಗುತ್ತಿದೆ.

ಕನ್ನಡದಲ್ಲಿ ಒಳ್ಳೆಯ ಕಂಟೆಂಟ್ ಇರುವ ಸಿನಿಮಾ ಬರುತ್ತಿಲ್ಲ ಎಂಬ ಆರೋಪ ಮಾಡುತ್ತಾರೆ. ಆದರೆ ಒಳ್ಳೆಯ ಸಿನಿಮಾ ಮಾಡಿದಾಗ ಜನರು ನೋಡುತ್ತಿಲ್ಲ ಎಂಬ ಬೇಸರ ಚಿತ್ರತಂಡದ್ದು. ತೆಲುಗಿನ ಸೂಪರ್ ಹಿಟ್ ಚಿತ್ರ 'ಅಲಾ ವೈಕುಂಠಪುರಮಾಲೋ' ಚಿತ್ರದ ಎದುರು 'ಕಾಣದಂತೆ ಮಾಯವಾದನು' ಬಿಡುಗಡೆಯಾಗಿತ್ತು.
ಫ್ಯಾಂಟಸಿ, ರೊಮ್ಯಾನ್ಸ್, ಆಕ್ಷನ್, ಹಾರರ್ ಮತ್ತು ಸಸ್ಪೆನ್ಸ್ ಹೀಗೆ ನಾನಾ ವಿಧದ ಎಲಿಮೆಂಟ್ಗಳನ್ನು ಒಳಗೊಂಡಿರುವ ಚಿತ್ರ ಮರುಬಿಡುಗಡೆಯಾಗುತ್ತಿದೆ.
ಬುಕ್ ಮೈ ಶೋದ ಕನ್ನಡ ವಿರೋಧಿತನದಿಂದಾಗಿ ತಮ್ಮ ಚಿತ್ರಕ್ಕೆ ಹೊಡೆತ ಬಿದ್ದಿದೆ ಎಂದು ನಟ ವಿಕಾಸ್ ಆರೋಪಿಸಿದ್ದಾರೆ. ಆರು ವರ್ಷ ಸತತ ಪರಿಶ್ರಮದಿಂದ ಮಾಡಿದ ಕೆಲಸವು ವ್ಯರ್ಥವಾಗಬಾರದು ಎಂಬ ಹಠ ಅವರದು. ಮರು ಬಿಡುಗಡೆಯ ಚಿತ್ರದಲ್ಲಿ ಎಡಿಟ್ ಮಾಡಲಾಗಿದ್ದ ಕೆಲವು ಹಾಸ್ಯ ದೃಶ್ಯಗಳನ್ನು ಅಡಕ ಮಾಡಲಾಗಿದೆ. ಹೀಗಾಗಿ ಹೊಸತನಗಳೊಂದಿಗೆ ಸಿನಿಮಾ ಪ್ರೇಕ್ಷಕರ ಎದುರು ಬರುತ್ತಿದೆ.


Click it and Unblock the Notifications











