ವಿನಯ್ ರಾಜ್ಕುಮಾರ್-ಮೇಘಾ ಶೆಟ್ಟಿ 'ಗ್ರಾಮಾಯಣ'ದ "ಏನೇ ಹೇಳು ಕುಸುಮ" ಕೇಳಿದ್ರಾ? ಹೇಗಿದೆ?
ವಿನಯ್ ರಾಜ್ಕುಮಾರ್ ನಟಿಸಿರುವ ಮತ್ತೊಂದು ಸಿನಿಮಾ 'ಗ್ರಾಮಾಯಣ' ರಿಲೀಸ್ಗೆ ಸಜ್ಜಾಗಿದೆ. ಆರಂಭದಲ್ಲಿ ಹಲವು ವಿಘ್ನಗಳನ್ನು ಎದುರಿಸಿದ್ದ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿ ಇದೆ. ಲಹರಿ ಫಿಲ್ಮ್ಸ್ ಈ ಸಿನಿಮಾ ನಿರ್ಮಾಣಕ್ಕೆ ಮುಂದಾದ ಬಳಿಕ 'ಗ್ರಾಮಾಯಣ'ಕ್ಕೆ ವೇಗ ಸಿಕ್ಕಿತ್ತು. ಈಗ ಸಿನಿಮಾ ಮುಗಿದು ಬಿಡುಗಡೆಗೆ ಸಜ್ಜಾಗಿ ನಿಂತಿದೆ. ವಿನಯ್ ರಾಜ್ಕುಮಾರ್ ಹಾಗೂ ಮೇಘಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವೀಗ ಪ್ರಚಾರದಲ್ಲಿ ಬ್ಯುಸಿಯಾಗಿದ್ದು, "ಏನೇ ಹೇಳು ಕುಸುಮ" ಅನ್ನೋ ಹೊಸ ಹಾಡನ್ನು ರಿಲೀಸ್ ಮಾಡಲಾಗಿದೆ.
'ಗ್ರಾಮಾಯಣ' ಸಿನಿಮಾದ ಈ ಹಾಡು ರಿಲೀಸ್ ಆಗುತ್ತಿದ್ದಂತೆ ಯೂಟ್ಯೂಬ್ನಲ್ಲಿ ಸದ್ದು ಮಾಡುತ್ತಿದೆ. ಈ ಮೆಲೋಡಿ ಹಾಡು ವೀಕ್ಷಕರ ಮನಸ್ಸು ಗೆದ್ದಿದೆ. ಸಂಗೀತ ಪ್ರಿಯರು ಅದರಲ್ಲೂ ಮೆಲೋಡಿ ಇಷ್ಟ ಪಡುವವರು ಅಧಿಕ ಸಂಖ್ಯೆಯಲ್ಲಿ ಈ ಹಾಡನ್ನು ವೀಕ್ಷಿಸಿ, ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಸುಂದರ ಹಾಡಿನ ಬಿಡುಗಡೆಯ ಬೆನ್ನಲ್ಲೇ ಚಿತ್ರತಂಡ ಸಿನಿಮಾವನ್ನು ಜುಲೈ 3 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಿದೆ.

ಕೇಳುಗರ ಹೃದಯಕ್ಕೆ ಹತ್ತಿರವಾಗುವ ಗುಣ ಹೊಂದಿರುವ ಈ ರೋಮ್ಯಾಂಟಿಕ್ ಮೆಲೋಡಿ ಹಾಡಿಗೆ ಜನಪ್ರಿಯ ಸಿನಿ ಸಾಹಿತಿ ಪ್ರಮೋದ್ ಮರವಂತೆ ಪದಗಳನ್ನು ಪೋಣಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸುಮಧುರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡುಗಳನ್ನು ಪ್ರತಿಭಾವಂತ ಗಾಯಕರಾದ ನಿಹಾಲ್ ತವ್ರೊ ಹಾಗೂ ಸಾಕ್ಷಿ ಕಲ್ಲೂರ್ ಸುಮಧುರವಾಗಿ ಹಾಡಿದ್ದಾರೆ. ಹಾಡು ರಿಲೀಸ್ ವೇಳೆ ಇಡೀ ಚಿತ್ರತಂಡ ಹಾಡಿನ ಬಗ್ಗೆ ಹಾಗೂ ಸಿನಿಮಾ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ವಿನಯ್ ರಾಜ್ಕುಮಾರ್
'ಗ್ರಾಮಾಯಣ'ಗೆ ವಿನಯ್ ರಾಜ್ಕುಮಾರ್ ತಂದೆ ರಾಘವೇಂದ್ರ ರಾಜ್ಕುಮಾರ್, ದೊಡ್ಡಪ್ಪ ಶಿವರಾಜ್ಕುಮಾರ್ ಹಾಗೂ ಚಿಕ್ಕಪ್ಪ ಪುನೀತ್ ರಾಜ್ಕುಮಾರ್ ಅವರಿಂದ ಚಾಲನೆ ದೊರಕಿತ್ತು. ಈಗ ಸಿನಿಮಾದ ಬಿಡುಗಡೆ ದಿನಾಂಕ ಕೂಡ ಘೋಷಣೆಯಾಗಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. "ಇದು ನಾನು ನಾಯಕನಾಗಿ ನಟಿಸಿರುವ ಒಂಭತ್ತನೆಯ ಚಿತ್ರ. ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡು ಸೇರಿದಂತೆ ಎಲ್ಲಾ ಹಾಡುಗಳು ಚೆನ್ನಾಗಿದೆ. ಜುಲೈ 3 ರಂದು ಬಿಡುಗಡೆಯಾಗುತ್ತಿರುವ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ" ಎಂದು ನಾಯಕ ವಿನಯ್ ರಾಜಕುಮಾರ್ ಮನವಿ ಮಾಡಿದ್ದಾರೆ.
ಮೇಘಾ ಶೆಟ್ಟಿ
"ಗ್ರಾಮಾಯಣದಲ್ಲಿ ನಟಿಸುವುದಕ್ಕೆ ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ. ನನ್ನ ಪಾತ್ರದ ಹೆಸರು ಕುಸುಮ. ಅದೇ ಹೆಸರಿನಿಂದ ಹಾಡೊಂದು ಬಿಡುಗಡೆ ಮಾಡಲಾಗಿದೆ. ಈ ಹಾಡು ಕೂಡ ಚೆನ್ನಾಗಿದೆ" ಎಂದು ನಾಯಕಿ ಮೇಘ ಶೆಟ್ಟಿ ಸಂತಸ ಪಟ್ಟಿದ್ದಾರೆ.

ನಿರ್ದೇಶಕ ದೇವನೂರು ಚಂದ್ರು
"ಏನೇ ಹೇಳು ಕುಸುಮ" ಹಾಡಿನ ಬಗ್ಗೆ ನಿರ್ದೇಶಕರು ಹೀಗಂತಾರೆ, "ಒಂದು ಮೆಲೋಡಿ ಹಾಡು. ಕೇಳುತ್ತಾ, ಕೇಳುತ್ತಾ ಮನಸ್ಸಿಗೆ ಮುಟ್ಟುವ ಗುಣ ಮೆಲೋಡಿ ಹಾಡುಗಳದ್ದು. ಇಂತಹ ಉತ್ತಮ ಹಾಡು ಕೊಟ್ಟ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರಿಗೆ, ಹಾಡು ಬರೆದುಕೊಟ್ಟ ಪ್ರಮೋದ್ ಮರವಂತೆ ಅವರಿಗೆ ಹಾಗೂ ಗಾಯಕ - ಗಾಯಕಿಗೆ ಧನ್ಯವಾದ. "ಗ್ರಾಮಾಯಣ", ಗ್ರಾಮೀಣ ಸೊಗಡಿನ ಸಿನಿಮಾ. ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳಿರುವ ಸಿನಿಮಾ ಕೂಡ. ಈವರೆಗೂ ಮಾಡಿರದ ಪಾತ್ರದಲ್ಲಿ ವಿನಯ್ ರಾಜಕುಮಾರ್ ಅಭಿನಯಿಸಿದ್ದಾರೆ. ಮೇಘಾ ಶೆಟ್ಟಿ ಅವರ ಪಾತ್ರ ಕೂಡ ವಿಭಿನ್ನವಾಗಿದೆ. ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಬಲ ರಾಜವಾಡಿ, ಅಪರ್ಣ ವಸ್ತಾರೆ, ಸೀತಾ ಕೋಟೆ, ಪ್ರಶಾಂತ್ ಹೊನ್ನಾಳಿ, ಅವಿನಾಶ್ ರೈ ಹೀಗೆ ಅನುಭವಿ ಕಲಾವಿದರ ದೊಡ್ಡ ತಂಡವೇ ಇದೆ. ಈ ಸಿನಿಮಾದ ವಿಶೇಷ ಪಾತ್ರದಲ್ಲಿ ಲೂಸ್ ಮಾದ ಯೋಗಿ ಅಭಿನಯಿಸಿದ್ದಾರೆ. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಕೂಡ ಚಿತ್ರಕ್ಕೆ ಪೂರಕವಾಗಿದೆ. ಒಟ್ಟಾರೆ ಇಡೀ ತಂಡದ ಶ್ರಮದಿಂದ "ಗ್ರಾಮಾಯಣ" ಒಂದೊಳ್ಳೆ ಚಿತ್ರವಾಗಿ ಇದೇ ಜುಲೈ 3 ರಂದು ನಿಮ್ಮ ಮುಂದೆ ಬರಲಿದೆ" ಎಂದು ನಿರ್ದೇಶಕ ದೇವನೂರು ಚಂದ್ರು ಮಾಹಿತಿ ಹಂಚಿಕೊಂಡಿದ್ದಾರೆ.
ಲಹರಿ ವೇಲು
'ಗ್ರಾಮಾಯಣ'ದ ಐದನೇ ಹಾಡನ್ನು ಬಿಡುಗಡೆ ಮಾಡಿ ನಿರ್ಮಾಪಕ ಲಹರಿ ವೇಲು ಹೀಗಂತಾರೆ, "ಗ್ರಾಮಾಯಣ ನಮ್ಮ ಲಹರಿ ಸಂಸ್ಥೆ ನಿರ್ಮಾಣದ ಒಂಭತ್ತನೇ ಸಿನಿಮಾ. ಒಂಭತ್ತು ನಮ್ಮ ಸಂಸ್ಥೆಗೆ ಅದೃಷ್ಟದ ಸಂಖ್ಯೆ. ಸುವರ್ಣ ವರ್ಷದ ಸಂಭ್ರಮದಲ್ಲಿರುವ ನಮ್ಮ ಸಂಸ್ಥೆಯಿಂದ ಗ್ರಾಮೀಣ ಸೊಗಡಿನ ಒಂದೊಳ್ಳೆ ಸದಭಿರುಚಿಯ ಚಿತ್ರ ನಿರ್ಮಾಣವಾಗಿರುವುದು ಖುಷಿಯಾಗಿದೆ. ನಿರ್ದೇಶಕ ದೇವನೂರು ಚಂದ್ರು ಒಂದೊಳ್ಳೆ ಚಿತ್ರ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಒಂಭತ್ತು ಹಾಡುಗಳಿದೆ. ಇಂದು ಐದನೇ ಹಾಡು ಬಿಡುಗಡೆಯಾಗಿದೆ. ಈ ಹಾಡು ಬಹಳ ಚೆನ್ನಾಗಿದೆ. ಈ ಹಿಂದೆ ಶಿವರಾಜಕುಮಾರ್ ಅವರು ಬಿಡುಗಡೆ ಮಾಡಿದ್ದ "ಬೆಂಕಿ" ಹಾಡು ಸೂಪರ್ ಹಿಟ್ ಆಗಿದೆ." ಎಂದರು.


Click it and Unblock the Notifications