'ಮಾದೇವ' ಸಕ್ಸಸ್ ಮೂಡಿನಲ್ಲೇ 'ಬಲರಾಮನ ದಿನಗಳು' ಶೂಟಿಂಗ್ ಮುಗಿಸಿದ ವಿನೋದ್ ಪ್ರಭಾಕರ್
2025 ಕನ್ನಡ ಚಿತ್ರರಂಗದ ಪರಿಸ್ಥಿತಿ ಮತ್ತೂ ಹದಗೆಟ್ಟಿದೆ. ಮೊದಲ ಆರು ತಿಂಗಳು ಬಿಡುಗಡೆಯಾದ ಸಿನಿಮಾಗಳಲ್ಲಿ ಒಂದೇ ಒಂದು ಗೆದ್ದಿರಲಿಲ್ಲ. ಸ್ಟಾರ್ಗಳ ಸಿನಿಮಾಗಳೇ ಬಾಕ್ಸಾಫೀಸ್ನಲ್ಲಿ ಸೋತು ಸುಣ್ಣವಾಗಿದ್ದವು. ಇನ್ನು ಹೊಸ ಸಿನಿಮಾಗಳನ್ನು ಕೇಳಬೇಕಾ? ಕಂಟೆಂಟ್ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬಂದಿದ್ದರೂ, ಹಣ ಗಳಿಕೆಯಲ್ಲಿ ಗೆದ್ದಿರಲಿಲ್ಲ. ಇನ್ನೇನು ಆರು ತಿಂಗಳು ಮುಗಿದೇ ಹೋಯ್ತು ಎನ್ನುವಾಗಲೇ ಅಚ್ಚರಿ ಎಂಬಂತೆ 'ಮಾದೇವ' ಯಶಸ್ಸು ಕಂಡಿತ್ತು.
ಈ ವರ್ಷದ ಮೊದಲ ಹಿಟ್ ಕೊಟ್ಟ ವಿನೋದ್ ಪ್ರಭಾಕರ್ ಮತ್ತೊಂದು ಸಿನಿಮಾವನ್ನು ಮುಗಿಸಿದ್ದಾರೆ. ಅದುವೇ 'ಬಲರಾಮನ ದಿನಗಳು'. ಈ ಸಿನಿಮಾದ ಶೂಟಿಂಗ್ ಕಳೆದ ಕೆಲವು ದಿನಗಳಿಂದ ನಡೆಯುತ್ತಿತ್ತು. 'ಆ ದಿನಗಳು' ಖ್ಯಾತಿಯ ಕೆ.ಎಂ.ಚೈತನ್ಯ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. 'ಮಾದೇವ' ಹಿಟ್ ಲಿಸ್ಟ್ ಸೇರುತ್ತಿದ್ದಂತೆ 'ಬಲರಾಮನ ದಿನಗಳು' ಸಿನಿಮಾ ಮೇಲಿರುವ ನಿರೀಕ್ಷೆ ದುಪ್ಪಟ್ಟಾಗಿದೆ.

ಕೆ.ಎಂ ಚೈತನ್ಯ 'ಬಲರಾಮನ ದಿನಗಳು' ಸಿನಿಮಾವನ್ನು ಸುಮಾರು 80 ದಿನಗಳ ಕಾಲ ಚಿತ್ರೀಕರಣ ಮಾಡಿದ್ದಾರೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಸಕಲೇಶಪುರ ಸೇರಿದಂತೆ ಹಲವೆಡೆ ಈ ಸಿನಿಮಾದ ಚಿತ್ರೀಕರಣವನ್ನು ಮಾಡಲಾಗಿದೆ. ಈ ಸಿನಿಮಾ ಟೈಗರ್ ವಿನೋದ್ ಪ್ರಭಾಕರ್ ನಟಿಸುತ್ತಿರುವ 25ನೇ ಸಿನಿಮಾ ಅನ್ನೋದು ವಿಶೇಷ. 1908ರ ಕಾಲಘಟ್ಟದಲ್ಲಿ ನಡೆದಿದ್ದ ಘಟನೆಗಳನ್ನು ಇಟ್ಟುಕೊಂಡು ಈ ಸಿನಿಮಾ ಚಿತ್ರಕಥೆಯನ್ನು ಹೆಣೆಯಲಾಗಿದೆ. 'ಆ ದಿನಗಳು' ಸಿನಿಮಾದಂತೆ ಮತ್ತೆ ಕಿರುತೆರೆಯಲ್ಲಿ ಮೋಡಿ ಮಾಡುತ್ತಾರಾ ಕೆ.ಎಂ. ಚೈತನ್ಯ ಅನ್ನೋ ಕುತೂಹಲವಿದೆ.
'ಬಲರಾಮನ ದಿನಗಳು' ಟೈಟಲ್ ಹೇಳುವಂತೆ ಇದೊಂದು ಭೂಗತಲೋಕದ ಛಾಯೆ ಇರುವ ಸಿನಿಮಾ. 'ಆ ದಿನಗಳು' ಸಿನಿಮಾ ನೋಡಿದವರಿಗೆ ನಿರ್ದೇಶಕ ಕೆ.ಎಂ.ಚೈತನ್ಯ ಅವರ ಶೈಲಿ ಹೇಗಿರುತ್ತೆ ಅನ್ನೋದು ಗೊತ್ತಿರುತ್ತೆ. ಭೂಗತಲೋಕದ ಎಳೆಯೊಂದಿಗೆ ಲವ್ ಸ್ಟೋರಿಯನ್ನು ಮಿಕ್ಸ್ ಮಾಡುವ ಕಲೆ ಇವರಿಗೆ ಚೆನ್ನಾಗಿಯೇ ಗೊತ್ತಿದೆ. ಹೀಗಾಗಿ 'ಬಲರಾಮನ' ಬಗ್ಗೆನೂ ಅದೇ ನಿರೀಕ್ಷೆಯಿದೆ. 'ಆ ದಿನಗಳು' ಸಿನಿಮಾಗೆ ಸಂಗೀತ ನಿರ್ದೇಶಕ ಇಳೆಯರಾಜರನ್ನು ಕರೆದುಕೊಂಡು ಬಂದಿದ್ದರು. 'ಬಲರಾಮ'ನಿಗಾಗಿ ತಮಿಳಿನ ಮತ್ತೊಬ್ಬ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಅವರನ್ನು ಕರೆದುಕೊಂಡು ಬಂದಿದ್ದಾರೆ.
ಸೂಪರ್ಸ್ಟಾರ್ ರಜನಿಕಾಂತ್ ನಟಿಸಿದ 'ಕಬಾಲಿ', 'ಕಾಲ', ಪ್ರಭಾಸ್ ಸಿನಿಮಾ 'ಕಲ್ಕಿ'ಯಂತಹ ಮೆಗಾ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿರುವ ತಮಿಳಿನ ಜನಪ್ರಿಯ ಮ್ಯೂಸಿಕ್ ಡೈರೆಕ್ಟರ್ ಸಂತೋಷ್ ನಾರಾಯಣನ್ ಟ್ಯೂನ್ ಹಾಕಿದ್ದಾರೆ. ಹೀಗಾಗಿ ಈ ಸಿನಿಮಾ ಕಥೆಯಷ್ಟೇ ಅಲ್ಲ, ಹಾಡುಗಳನ್ನು ಕೇಳುವುದಕ್ಕೂ ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ ಇದು ವಿನೋದ್ ಪ್ರಭಾಕರ್ ವೃತ್ತಿ ಬದುಕಿನಲ್ಲಿಯೇ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ಆಗುವ ನಿರೀಕ್ಷೆಯಿದೆ.

'ಬಲರಾಮನ ದಿನಗಳು' ಇದೊಂದು 1980ರ ಕಾಲಘಟ್ಟದಲ್ಲಿ ನಡೆಯುವ ಕಥಾಹಂದರ ಹೊಂದಿರುವ ಸಿನಿಮಾ. ಅಂದಿನ ಭೂಗತ ಲೋಕದ ನೈಜ ಪಾತ್ರಗಳನ್ನು ಹೋಲುವ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ವಿನೋದ್ ಪ್ರಭಾಕರ್ಗೆ ನಾಯಕಿಯಾಗಿ ಪ್ರಿಯಾ ಆನಂದ್ ನಟಿಸುತ್ತಿದ್ದಾರೆ. ಇವರೊಂದಿಗೆ ಅತುಲ್ ಕುಲಕರ್ಣಿ, ಆಶಿಶ್ ವಿದ್ಯಾರ್ಥಿ ಅಂತಹ ಜನಪ್ರಿಯ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಬಿಗ್ ಬಾಸ್' ಖ್ಯಾತಿಯ ವಿನಯ್ ಗೌಡ ಈ ಸಿನಿಮಾದ ಮತ್ತೊಂದು ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸದ್ಯ ಈ ಸಿನಿಮಾದ ಶೂಟಿಂಗ್ ಅಷ್ಟೇ ಮುಗಿಸಿದೆ. ಇನ್ನು ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಇದೆಲ್ಲ ಮುಗಿದ ಬಳಿಕ 'ಬಲರಾಮನ ದಿನಗಳು' ರಿಲೀಸ್ ಆಗಬಹುದು. ಇನ್ನು ಈ ಸಿನಿಮಾವನ್ನು ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ನಿರ್ಮಾಣ ಮಾಡುತ್ತಿದ್ದಾರೆ. ಇದು ನಿರ್ಮಾಪಕರ ಚೊಚ್ಚಲ ನಿರ್ಮಾಣದ ಸಿನಿಮಾ. ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ ಮಾಡುತ್ತಿದ್ದರೆ, ಇನ್ನೊಂದು ಕಡೆ ಹಿರಿಯ ಛಾಯಾಗ್ರಾಹಕ ವೇಣು ಕ್ಯಾಮರಾ ವರ್ಕ್ ಮಾಡುತ್ತಿದ್ದಾರೆ.\


Click it and Unblock the Notifications











