"7 ಕೋಟಿ ಮೇಲೆ ಬಲರಾಮನ ದಿನಗಳು ಬಜೆಟ್ ದಾಟಬಾರದು ಅಂತ ಹೇಳಿದ್ದೆ"- ವಿನೋದ್ ಪ್ರಭಾಕರ್
ಜೂನ್ 2026 ಈ ತಿಂಗಳು ರಿಲೀಸ್ ಆಗುತ್ತಿರುವ ಮತ್ತೊಂದು ಎಕ್ಸ್ಪೆಕ್ಟೆಡ್ ಕನ್ನಡ ಸಿನಿಮಾ 'ಬಲರಾಮನ ದಿನಗಳು'. ವಿನೋದ್ ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಸಿನಿಮಾ ಇದೇ ತಿಂಗಳು ಜೂನ್ 26ಕ್ಕೆ ರಿಲೀಸ್ ಆಗುತ್ತಿದೆ. 'ಆದಿನಗಳು' ಬಳಿಕ ಮತ್ತೊಂದು ಭೂಗತಲೋಕದ ಅಧ್ಯಾಯವನ್ನು ಕೆ.ಎಂ ಚೈತನ್ಯ ಹೇಳುವುದಕ್ಕೆ ಹೊರಟಿದ್ದಾರೆ. ಹೀಗಾಗಿ ಈ ಸಿನಿಮಾ ಇಂಟ್ರೆಸ್ಟಿಂಗ್ ಅನಿಸುತ್ತಿದೆ.
'ಮಾದೇವ' ಬಳಿಕ ವಿನೋದ್ ಪ್ರಭಾಕರ್ ಯಶಸ್ಸಿನ ಹಾದಿಯಲ್ಲಿ ಇದ್ದಾರೆ. ಕಳೆದ ವರ್ಷ ಕನ್ನಡ ಚಿತ್ರರಂಗ ಕಷ್ಟದಲ್ಲಿ ಇದ್ದಾಗ ವಿನೋದ್ ಪ್ರಭಾಕರ್ ಸಿನಿಮಾ ಮೊದಲ ಹಿಟ್ ಅನ್ನು ದಾಖಲಿಸಿತ್ತು. ಹೆಚ್ಚು ಕಡಿಮೆ ಒಂದು ವರ್ಷದ ಬಳಿಕ ಮತ್ತೊಂದು ಸಿನಿಮಾ 'ಬಲರಾಮನ ದಿನಗಳು' ರಿಲೀಸ್ಗೆ ರೆಡಿಯಾಗಿದೆ. 'ಆದಿನಗಳು' ಛಾಯೆ ಇರುವುದರಿಂದ ಈ ಸಿನಿಮಾ ಮೇಲೆ ಪ್ರೇಕ್ಷಕರು ನಿರೀಕ್ಷೆಯನ್ನು ಇಟ್ಟಿಕೊಂಡಿದ್ದಾರೆ.

ಇತ್ತೀಚೆಗೆ ಈ ಸಿನಿಮಾದ ಸಾಂಗ್ ರಿಲೀಸ್ ವೇಳೆ 'ಬಲರಾಮನ ದಿನಗಳು' ಬಗ್ಗೆ ವಿನೋದ್ ಪ್ರಭಾಕರ್ ಬಜೆಟ್ ಬಗ್ಗೆ ಮಾತಾಡಿದ್ದಾರೆ. ಈ ಸಿನಿಮಾದ ಬಜೆಟ್ 7 ಕೋಟಿ ರೂಪಾಯಿ ದಾಟಬಾರದು ಎಂದು ನಿರ್ದೇಶಕ ಶ್ರೇಯಸ್ ಅವರಿಗೆ ಹೇಳಿದ್ದಂತೆ. ಅದ್ಯಾಕೆ ಸಿನಿಮಾ ಬಜೆಟ್ಗೆ ಕಡಿವಾಣ ಹಾಕಿದ್ದರು? ಸಿನಿಮಾ ಬಗ್ಗೆ ನಂಬಿಕೆ ಇರಲಿಲ್ವಾ? ಏನಿದು ವಿನೋದ್ ಪ್ರಭಾಕರ್ ಲೆಕ್ಕಾಚಾರ? ತಿಳಿಯುವುದಕ್ಕೆ ಮುಂದೆ ಓದಿ.
"7 ಕೋಟಿ ಮೇಲೆ ಸಿನಿಮಾ ದಾಟಬಾರದು"
'ಬಲರಾಮನ ದಿನಗಳು' ಬಜೆಟ್ಗೆ ಕಡಿವಾಣ ಹಾಕಿ ಅಂತ ವಿನೋದ್ ಪ್ರಭಾಕರ್ ಹೇಳಿದ್ದಕ್ಕೆ ಕಾರಣವಿದೆ. 'ಮಾದೇವ' ಯಶಸ್ಸು ಕಾಣುವುದಕ್ಕೂ ಮುನ್ನವೇ ಸಿನಿಮಾ ಶುರುವಾಗಿತ್ತು. ಹೀಗಾಗಿ ಬಜೆಟ್ ರಿಕವರಿ ಮಾಡುವ ಲೆಕ್ಕಾಚಾರಗಳು ಗೊತ್ತಿರಲಿಲ್ಲ. "ನಿರ್ಮಾಪಕನಾಗಿ ನನಗೇನು ಅನುಭವವಿದೆ. ಅದನ್ನು ನಾನು ಆರಂಭದಲ್ಲಿಯೇ ಶ್ರೇಯಸ್ ಅವರಿಗೆ ಹೇಳಿದ್ದೆ. 7 ಕೋಟಿ ಮೇಲೆ ಸಿನಿಮಾ ದಾಟಬಾರದು. ಯಾಕಂದ್ರೆ, ಈ ಸಿನಿಮಾ ಮಾದೇವಗಿಂತಲೂ ಮೊದಲೇ ಫಿಕ್ಸ್ ಆಗಿತ್ತು. ನನಗೆ ಗೊತ್ತಿರಲಿಲ್ಲ, ಥಿಯೇಟರ್ನಲ್ಲಿ ಎಷ್ಟು ಚೆನ್ನಾಗಿ ಓಪನಿಂಗ್ ಸಿಗುತ್ತೆ ಅಂತ. ಆದರೆ, ಶ್ರೇಯಸ್ ಹಾಗೂ ಅವರ ತಾಯಿಯವರು ತುಂಬಾನೇ ಉತ್ಸಾಹದಲ್ಲಿ ಇದ್ದರು. ಈ ಸಿನಿಮಾ ಮಾಡಬೇಕು ಅಂದರೆ, ದೊಡ್ಡ ಸ್ಕೇಲ್ನಲ್ಲಿಯೇ ಮಾಡಬೇಕು ಅಂತ ಇದ್ದರು. ಚೈತನ್ಯ ಸರ್ ಬಜೆಟ್ನಲ್ಲಿ ಏನೂ ಇರಲಿಲ್ಲ." ಎಂದು ವಿನೋದ್ ಪ್ರಭಾಕರ್ ಹೇಳಿದ್ದಾರೆ.
ಬಂಡವಾಳ ವಾಪಸ್ ಬರುತ್ತೆ
7 ಕೋಟಿ ರೂಪಾಯಿಗೆ 'ಬಲರಾಮನ ದಿನಗಳು' ಮುಗಿಸಬೇಕು ಅಂತ ಅಂದುಕೊಂಡಿದ್ದಷ್ಟೇ. ಆದರೆ, ಬಜೆಟ್ ಹೆಚ್ಚಾಗುತ್ತಲೇ ಹೋಯ್ತು. "ನಾವು ಬಜೆಟ್ ಅನ್ನು ಎಷ್ಟು ಕಂಟ್ರೋಲ್ ಮಾಡುವುದಕ್ಕೆ ಹೋದರೂ, ಸ್ಕೇಲ್ ದೊಡ್ಡದಾಗುತ್ತಲೇ ಹೋಗುತ್ತಿತ್ತು. ಯಾವಾಗ ಸಂತೋಷ್ ನಾರಾಯಣ್ ಒಳಗೆ ಬಂದರೋ ಆಗ ಸ್ಕೇಲ್ ಅದಕ್ಕಿಂತ ಇನ್ನೊಂದು ಲೆವೆಲ್ಗೆ ಹೋಯ್ತು. ಇವತ್ತು ಕೂತು ನೋಡಿದಾಗ, ಮಾದೇವ ಚೆನ್ನಾಗಿದ್ದರಿಂದ ಇವತ್ತು ಟಿ ಸೀರಿಸ್ ಅವರು ಸಿನಿಮಾವನ್ನು ಖರೀದಿ ಮಾಡಿದರು. ಎಲ್ಲಾ ಚೆನ್ನಾಗಿ ಆಗುತ್ತಿದೆ. ನಿರ್ಮಾಪಕರಿಗೆ ಹಾಕಿರುವ ಬಂಡವಾಳ ಅಂತೂ ವಾಪಸ್ ಬರುತ್ತೆ ಅನ್ನೋ ನಂಬಿಕೆ ಇವತ್ತಿಗೆ ಇದೆ." ಎಂದಿದ್ದಾರೆ.

ಬಜೆಟ್ ಜಾಸ್ತಿಯಾಗಿದ್ದೇಕೆ?
"ಆದಿನಗಳು ಸಿನಿಮಾದಲ್ಲಿರುವ ಎಲ್ಲಾ ಪಾತ್ರಗಳು ಬರಬೇಕು ಅಂತ ಇಷ್ಟ ಪಟ್ಟವರು ಶ್ರೇಯಸ್ ಅವರು. ಅವರೆಲ್ಲ ಬಂದಾಗ ಬಜೆಟ್ ಎಷ್ಟು ಆಗುತ್ತೆ ಅನ್ನೋದು ಗೊತ್ತಿದೆಯಲ್ಲ. ಸಿನಿಮಾ ಬಹಳ ಚೆನ್ನಾಗಿ ಬಂದಿದೆ. ದೊಡ್ಡ ಸ್ಕೇಲ್ನಲ್ಲಿ ಬಂದಿದೆ. ಕೆವಿಎನ್ ಅವರು ಆನೆ ಬಲ ಇದ್ದಂತೆ. ಇವತ್ತಿಗೆ ಅವರು ಬಹಳ ದೊಡ್ಡ ಡಿಸ್ಟ್ರಿಬ್ಯೂಟರ್. ಅವರು ಸಿನಿಮಾ ನೋಡಿ, ಖುಷಿ ಪಟ್ಟು ಡಿಸ್ಟ್ರಿಬ್ಯೂಷನ್ ಅನುಭವವನ್ನು ದುಪ್ಪಟ್ಟು ಮಾಡಿದ್ದಾರೆ" ಎಂದು ವಿನೋದ್ ಪ್ರಭಾಕರ್ ಬಜೆಟ್ ಜಾಸ್ತಿ ಆಗಿದ್ದರ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.
ಭೂಗತಲೋಕದ ಪಾತ್ರಕ್ಕೆ ಭಯವಿಲ್ಲ
"ಮೊದಲನೆಯದಾಗಿ ಒಬ್ಬ ನಟ ಯಾವುದಕ್ಕೂ ಹೆದರಬಾರದು. ಯಾವುದೇ ಪಾತ್ರ ಬಂದರೂ ನಿಭಾಯಿಸಬಲ್ಲ ಅನ್ನೋ ನಂಬಿಕೆ ಇದ್ದರೆ, ಯಾವುದೇ ಒಂದು ಪಾತ್ರ ಬಂದರೂ ಮಾಡಿಯೇ ಮಾಡುತ್ತಾರೆ. ಎರಡನೆಯದಾಗಿ ಇದು ಕಾಲ್ಪನಿಕ ಸಿನಿಮಾ. ಹಾಗಾಗಿ ಸಿನಿಮಾವನ್ನು ಸಿನಿಮಾ ರೀತಿ ನೋಡಿದಾಗ ಏನೂ ಅನಿಸೋದಿಲ್ಲ. ಇದು ಬಯೋಪಿಕ್ ಅಲ್ಲ. ಅದೇನಾದರೂ ಮಾಡಿದ್ದರೆ, ಪರ್ಮಿಷನ್ ಬೇಕಾಗುತ್ತೆ. ನನಗೆ ಬಲರಾಮನ ಪಾತ್ರವನ್ನು ನಿಭಾಯಿಸುವುದು ನನಗೆ ಇಷ್ಟವಿತ್ತು. ಯಾಕಂದ್ರೆ, ನಾನು ಹುಟ್ಟಿ ಬೆಳೆದಿದ್ದು ಫ್ರೆಜರ್ ಟೌನ್ನಲ್ಲಿ. ನನ್ನ ಬಾಲ್ಯದಲ್ಲಿ ನಾನು ಎಲ್ಲೂ ನೋಡಿಕೊಂಡೇ ಬೆಳೆದಿದ್ದೇನೆ. ಯಾವುದೋ ಗಾಳಿಪಟಕ್ಕೆ, ಪಾರಿವಾಳಕ್ಕೆ ಜಗಳಗಳಾಗಿದ್ದು ಉಂಟು. ಆ ಫೀಲ್ಡ್ ಅನ್ನು ನೋಡಿಕೊಂಡು ಬೆಳೆದಿದ್ದೀನಿ" ಎಂದು ಅಂಡರ್ವರ್ಲ್ಡ್ ಪಾತ್ರದ ಬಗ್ಗೆ ರಿವೀಲ್ ಮಾಡಿದ್ದಾರೆ.


Click it and Unblock the Notifications