ವಿಷ್ಣುವರ್ಧನ್ ಅಭಿಮಾನಿ ಸಂಘ 'ವಿಷ್ಣು ಸೇನಾ ಸಮಿತಿ' ಕ್ಲೋಸ್; ಈ ನಿರ್ಧಾರಕ್ಕೇನು ಕಾರಣ?
ಸಾಹಸ ವಿಷ್ಣುವರ್ಧನ್ ಅವರ ಅಧಿಕೃತ ಅಭಿಮಾನಿ ಸಂಘ ' ವಿಷ್ಣು ಸೇನಾ ಸಮಿತಿ'. ಕಳೆದ ಹಲವು ವರ್ಷಗಳಿಂದ ಈ ಸೇನಾ ಸಮಿತಿ ಹಲವು ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದೆ. ವೀರಕಪುತ್ರ ಶ್ರೀನಿವಾಸ್ ಈ ವಿಷ್ಣು ಸೇನಾ ಸಮಿತಿಯನ್ನು ಮುನ್ನಡಿಸಿಕೊಂಡು ಬರುತ್ತಿದ್ದಾರೆ. ಆದರೆ, ಇದೀಗ ದಿಢೀರನೇ ಈ ವಿಷ್ಣು ಸೇನಾ ಸಮಿತಿಯನ್ನು ಕ್ಲೋಸ್ ಮಾಡುವುದಾಗಿ ಹೇಳಿದ್ದಾರೆ.
ಡಾ.ವಿಷ್ಣುವರ್ಧನ್ ಹುಟ್ಟುಹಬ್ಬದಿಂದ ಹಿಡಿದು, ಕೆಲವು ಸಮಾಜ ಮುಖಿ ಕೆಲಸಗಳಲ್ಲಿ 'ವಿಷ್ಣು ಸೇನಾ ಸಮಿತಿ' ಭಾಗಿಯಾಗುತ್ತಿತ್ತು. ಸಾಹಸ ಸಿಂಹ ವಿಷ್ಣುವರ್ಧನ್ ಅಗಲಿದ ಬಳಿಕ ಅವರ ಅಭಿಮಾನಿಗಳನ್ನು ಒಗ್ಗೂಡಿಸುತ್ತಿದ್ದ ಸಂಘವಿದು. ವ್ಯವಸ್ಥಿತವಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿತ್ತು. ಹೀಗಿದ್ದೂ, 'ವಿಷ್ಣು ಸೇನಾ ಸಮಿತಿ'ಯನ್ನು ಕ್ಲೋಸ್ ಮಾಡುವುದಕ್ಕೆ ವೀರಕಪುತ್ರ ಶ್ರೀನಿವಾಸ್ ಮುಂದಾಗಿದ್ದಾರೆ.

2025, ಸೆಪ್ಟೆಂಬರ್ 18ರಂದು ಡಾ.ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುವುದಕ್ಕೆ ವೀರಕಪುತ್ರ ಶ್ರೀನಿವಾಸ್ ಮುಂದಾಗಿದ್ದಾರೆ. ಆ ಬಳಿಕ ವಿಷ್ಣು ಸೇನಾ ಸಮಿತಿಯನ್ನು ಬಂದ್ ಮಾಡುತ್ತಿದ್ದಾರೆ. ಜೊತೆ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯುವುದಕ್ಕೆ ನಿರ್ಧರಿಸಿದ್ದಾರೆ. ಅಷ್ಟಕ್ಕೂ ಯಾಕೆ ಈ ನಿರ್ಧಾರ? ತಿಳಿಯುವುದಕ್ಕೆ ಮುಂದೆ ಓದಿ..
ವಿಷ್ಣುದಾದನ 75ನೇ ಹುಟ್ಟುಹಬ್ಬ
ಸಾಹಸ ಸಿಂಹ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬಕ್ಕೆ ಕೆಲವು ತಿಂಗಳ ಹಿಂದಷ್ಟೇ ಅಭಿಮಾನಿಗಳ ಸಭೆ ಕರೆಯಲಾಗಿತ್ತು. ಆ ವೇಳೆ ಅಭಿಮಾನಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬಳಿಕ ಅದು ಮುಂದಕ್ಕೆ ಹೋಗಲಿಲ್ಲ. "75ನೇ ವರ್ಷ ಬಂದೇ ಬಿಡ್ತು. ನಾವು ನೀವೆಲ್ಲ ಕೂತು 75ನೇ ವರ್ಷ ಹಾಗೆ ಮಾಡ್ಬೇಕು. ಹೀಗೆ ಮಾಡ್ಬೇಕು. ಅದಕ್ಕೆ ವೇದಿಕೆ ಸಮಿತಿಗಳನ್ನು ಮಾಡಬೇಕು ಅಂದುಕೊಂಡೆವು. ಆದರೆ, ಅದ್ಯಾವುದೂ ಆಗಲೇ ಇಲ್ಲ. ಯಾಕಂದ್ರೆ, ಪ್ರತಿಯೊಬ್ಬರಿಗೂ ಅವರದ್ದೇ ಆದ ಕೆಲಸಗಳಿದ್ದಾವೆ, ಕಷ್ಟಗಳಿದ್ದಾವೆ. ಅದರ ಮಧ್ಯದಲ್ಲಿ ಪ್ರತಿ ತಿಂಗಳು ಸಭೆಗೆ ಬರೋ ಕಷ್ಟ. ಈ ಎಲ್ಲಾ ಕಾರಣದಿಂದ ನೆನೆಗುದಿಗೆ ಬಿತ್ತು. ಆದರೆ, ಇದೂವರೆಗೂ ನಾವು ಮಾಡಿದ ಕಾರ್ಯಕ್ರಮಗಳೆಲ್ಲ ಸೂಪರ್ ಹಿಟ್ ಆಗಿವೆ." ಎಂದು ವೀರಕಪುತ್ರ ಶ್ರೀನಿವಾಸ್ ತಮ್ಮ ಮಾಣಿಕ್ಯ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದಾರೆ.

ಎಷ್ಟು ದಿನ ಈ ಉತ್ಸಾಹ ಇರುತ್ತೆ?
ಇದೇ ವಿಡಿಯೋದಲ್ಲಿ ಸಂಘ ಕಟ್ಟಿ, ಅದರ ಮೂಲಕ ಕಾರ್ಯಕ್ರಮಗಳನ್ನು ಮಾಡುವ ಉತ್ಸಾಹ ಎಷ್ಟು ದಿನ ಇರುತ್ತೆ ಅನ್ನುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. "ಎಷ್ಟು ದಿನ ಇದೇ ಉತ್ಸಾಹ ಇರುತ್ತೆ ಅಂತ ನನಗೂ ಅನಿಸುತ್ತಿದೆ. ಪ್ರತಿ ಬಾರಿ ನಾನು ಈ ಮಾತನ್ನು ಹೇಳುತ್ತಲೇ ಇರುತ್ತೇನೆ. ವಯಸ್ಸು ಇರುವಾಗ ಏನಾದರೂ ಮಾಡಬೇಕು. ಉತ್ಸಾಹ ಇರುವಾಗ ಏನಾದರೂ ಮಾಡಬೇಕು ಅಂತ. ಆ ಹಿನ್ನೆಲೆಯಲ್ಲಿ ಇದೊಂದು ಮುಕ್ತಾಯ ಅಂತಲೇ ಅಂದುಕೊಳ್ಳಿ. ಇಷ್ಟು ದಿನದ ಈ ಪಯಣ ಇತ್ತಲ್ಲ ಇದು ಸಾಕು. ಒಬ್ಬ ವ್ಯಕ್ತಿಯನ್ನು ತುಂಬಾ ಮೆರೆಸುವುದಕ್ಕೆ ಹೋದಾಗ ಒಳ್ಳೆ ಅಭಿಪ್ರಾಯ ಬರುವುದಕ್ಕಿಂತ ಕೆಟ್ಟ ಅಭಿಪ್ರಾಯವೇ ಜಾಸ್ತಿ ಆಗುತ್ತೆ. ನಾವು ಸಾಕಷ್ಟು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದ್ದೇವೆ. ಇನ್ನೂ ಹೆಚ್ಚು ಮಾಡಿದರೆ, ಅದು ವ್ಯಕ್ತಿ ಪೂಜೆ ಅಂತ ಅನಿಸಿಕೊಳ್ಳುತ್ತೆ." ಎಂದು ವೀರಕಪುತ್ರ ಶ್ರೀನಿವಾಸ್ ಹೇಳಿಕೊಂಡಿದ್ದಾರೆ.
75ನೇ ಸಂಭ್ರಮಾಚರಣೆಗೆ ಮನವಿ
"2025ರ ಸೆಪ್ಟೆಂಬರ್ 18ಕ್ಕೆ ಯಜಮಾನರಿಗೆ 75 ವರ್ಷ. ಅಲ್ಲಿಂದ ಒಂದು ವರ್ಷಗಳ ಕಾಲ ನಾವೇನಾದರೂ ಮಾಡಬೇಕಿದೆ. ನಾವು ಇಂದಿನಿಂದಲೇ ಶುರು ಮಾಡಬೇಕಿದೆ. ಸಂತೆ ಹೊತ್ತಿಗೆ ಮೂರು ಮೊಳ ಅಂತ ವ್ಯಾಪಾರಕ್ಕೆ ಕೂರುವುದಕ್ಕೆ ಆಗುವುದಿಲ್ಲ. ಇಲ್ಲಿಂದ ಸಿದ್ಧತೆಗಳನ್ನು ಮಾಡಬೇಕಿದೆ. ಅದು ದೊಡ್ಡ ಯಶಸ್ಸನ್ನು ಸಾಧಿಸುವುದಕ್ಕೆ ಕಾರಣವಾಗುತ್ತೆ." ಎಂದು ಕೊನೆಯದಾಗಿ 75ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುವುದಕ್ಕೆ ಕರೆ ನೀಡಿದ್ದಾರೆ.
'ವಿಷ್ಣು ಸೇನಾ ಸಮಿತಿ' ಕ್ಲೋಸ್ ಆಗಬೇಕು
ಇದೇ ಸಂದರ್ಭದಲ್ಲಿ ವಿಷ್ಣು ಸೇನಾ ಸಮಿತಿ ಯಾಕೆ ಕ್ಲೋಸ್ ಆಗಬೇಕು ಅನ್ನೋದನ್ನು ಹೇಳಿಕೊಂಡಿದ್ದಾರೆ. ಈ ಸಂಘಕ್ಕೆ ಬೇರೊಂದು ರೂಪ ಕೊಡಬೇಕು. ತಾನು ಅಧ್ಯಕ್ಷ ಸ್ಥಾನದಿಂದ ಇಳಿಯಬೇಕೆಂದು ಹೇಳಿಕೊಂಡಿದ್ದಾರೆ. "2025ಕ್ಕೆ ವಿಷ್ಣು ಸೇನಾ ಸಮಿತಿ ಕ್ಲೋಸ್ ಆಗಬೇಕು. ನಾನು ಅಧ್ಯಕ್ಷ ಸ್ಥಾನದಿಂದ ಇಳಿಯಬೇಕು. ಯಾಕೆ ಅಂದರೆ, ಇದಕ್ಕೆ ಬೇರೊಂದು ಸಾಂಸ್ಥಿಕ ರೂಪ ಕೊಡಬೇಕು. ಕನ್ನಡ ಸಾಹಿತ್ಯ ಪರಿಷತ್ತು ಇದೆಯಲ್ಲ ಹಾಗೇ ಅದರ ಪಾಡಿಗೆ ಅದು ನಡೆದುಕೊಂಡು ಹೋಗುವ ಸಂಸ್ಥೆಯಾಗಿ ರೂಪಿಸದೇ ಹೋದರೆ, ಬರೆದಿಟ್ಟುಕೊಳ್ಳಿ ಇದು ತುಂಬಾ ದಿನ ನಡೆಯೋದಿಲ್ಲ. ಉದಾಹರಣೆಗಳನ್ನು ಕೊಡಬಲ್ಲೆ. ಆದರೆ, ಅವೆಲ್ಲವೂ ವಿವಾದಗಳಾಗುತ್ತವೆ. ಅದಕ್ಕೆ ಬೇಡ." ಎಂದು ವೀರಕಪುತ್ರ ಶ್ರೀನಿವಾಸ್ ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











