3 ಭಾಗಗಳಲ್ಲಿ ಸಿನಿಮಾ ಆಗುತ್ತೆ 'ಪರ್ವ':'ದಿ ಕಾಶ್ಮೀರಿ ಫೈಲ್ಸ್' ನಿರ್ದೇಶಕನಿಗೆ ಎಸ್ ಎಲ್ ಭೈರಪ್ಪ ಗ್ರೀನ್ ಸಿಗ್ನಲ್!
ಕನ್ನಡದ ಜನಪ್ರಿಯ ಕಾದಂಬರಿಗಳಲ್ಲಿ 'ಪರ್ವ' ಕೂಡ ಒಂದು. ಕನ್ನಡದ ಜನಪ್ರಿಯ ಲೇಖಕ ಎಸ್. ಎಲ್. ಭೈರಪ್ಪ ಬರೆದ ಈ ಕಾದಂಬರಿ ಓದುಗರನ್ನು ಚರ್ಚೆಗೆ ಒಳಪಡಿಸಿತ್ತು. ಕನ್ನಡ ಸಾಹಿತ್ಯ ಲೋಕದ ದಿಗ್ಗಜರು ಕೂಡ 'ಪರ್ವ' ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.
'ಪರ್ವ' ಕೇವಲ ಕನ್ನಡದಲ್ಲಿ ಅಷ್ಟೇ ಅಲ್ಲ. ಮರಾಠಿ, ಇಂಗ್ಲಿಷ್, ಹಿಂದಿ, ಚೈನೀಸ್ ಹಾಗೂ ರಷ್ಯನ್ ಭಾಷೆಗೂ ಅನುವಾದಗೊಂಡಿದೆ. ಎಸ್ ಎಲ್ ಭೈರಪ್ಪ ಬರೆದ ಕಾದಂಬರಿ ಇಷ್ಟೊಂದು ಚರ್ಚೆಗೆ ಒಳಪಟ್ಟಿದ್ದಕ್ಕೆ ಕಾರಣವಿದೆ. ಮಹಾಭಾರತದವನ್ನು ಮತ್ತೊಂದು ದೃಷ್ಟಿಕೋನದಿಂದ ನೋಡಲಾಗಿದೆ. ಮಹಾಭಾರತದ ಕೆಲವು ಅಂಶಗಳನ್ನು ತಾರ್ಕಿಕವಾಗಿ ಹೇಳಲಾಗಿದೆ.

'ಪರ್ವ' ಈ ಕಾದಂಬರಿ ಪಾಂಡವರ ಕೌರವರ ಬಗೆಗಿನ ಚಿತ್ರಣವನ್ನೇ ಬದಲಿಸುತ್ತದೆ. ಪ್ರತಿಯೊಂದು ಪಾತ್ರವನ್ನು ಸಾಮಾನ್ಯರಂತೆ ಕಾಣುತ್ತಾ, ಆ ಪಾತ್ರಗಳಲ್ಲಿರುವ ಕುಂದುಕೊರತೆಗಳನ್ನು ಮನದಟ್ಟು ಮಾಡಿಸುತ್ತಾ ಹೋಗುವ ವಿಶಿಷ್ಟ ಕಾದಂಬರಿ ಎಂದು ಓದುಗರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ 'ಪರ್ವ' ಸಿನಿಮಾ ಆಗುತ್ತಿರುವುದು ಕೂತೂಹಲವನ್ನು ಕೆರಳಿಸಿದೆ.
'ದಿ ಕಾಶ್ಮೀರ್ ಫೈಲ್ಸ್', 'ದಿ ವಾಕ್ಸಿನ್ ವಾರ್' ಅಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ವಿವೇಕ್ ಅಗ್ನಿಹೋತ್ರಿ 'ಪರ್ವ'ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಈ ಸಿನಿಮಾ ಇನ್ನೂ ಸ್ಕ್ರಿಪ್ಟ್ ಹಂತದಲ್ಲಿಯೇ ಇದೆ. ಆದರೆ, ಕನ್ನಡ ಹಾಗೂ ಹಿಂದಿ ಎರಡೂ ಭಾಷೆಯಲ್ಲೂ ಸಿನಿಮಾ ಮಾಡುವುದಕ್ಕೆ ವಿವೇಕ್ ಅಗ್ನಿಹೋತ್ರಿ ನಿರ್ಧರಿಸಿದ್ದಾರೆ.
"ಪರ್ವ ಕಾದಂಬರಿಯನ್ನು ಸಿನಿಮಾ ಮಾಡಲು ಬಂದಿದ್ದಾರೆ. ವಿವೇಕ್ ಅಗ್ನಿಹೋತ್ರಿ ಅವರಿಗೆ ಸಾಕಷ್ಟು ಅನುಭವವಿದೆ. ಇವರು ಮಾಡಿರುವ ಸಿನಿಮಾಗಳು ಸಕ್ಸಸ್ ಆಗಿವೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಇಂಗ್ಲಿಷ್ನಲ್ಲಿ ಸಿನಿಮಾ ಮಾಡಬೇಕು. ನಿಜವಾದ ಮಹಾಭಾರತ ಏನೋ ಅನ್ನೋದನ್ನು ತೋರಿಸಬಹುದು. ಸಿನಿಮಾ ಮಾಡಲು ನನ್ನ ಒಪ್ಪಿಗೆ ಇದೆ. ಹಾರೈಕೆ ಇದೆ" ಎಂದು ಎಸ್.ಎಲ್. ಭೈರಪ್ಪ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
"ಒಂದು ವರ್ಷದ ಹಿಂದೆ ಪ್ರಕಾಶ್ ಬೆಳವಾಡಿ ನನಗೆ ಕರೆ ಮಾಡಿದ್ದರು. ಭೈರಪ್ಪನವರ ಜೊತೆ ಮಾತನಾಡುವಂತೆ ಹೇಳಿದ್ದರು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ನೋಡಿ ಅವರು ಪರ್ವ ಸಿನಿಮಾ ಮಾಡುವಂತೆ ಹೇಳಿದರು. ಮಹಾಭಾರತದಲ್ಲಿ ನಾವು ಕೇಳದೆ ಇರುವಂತಹ ವಿಷಯಗಳನ್ನ ಬರೆದಿದ್ದಾರೆ. ಇದಕ್ಕಾಗಿ ಸಾಕಷ್ಟು ವರ್ಷಗಳ ಕಾಲ ಶ್ರಮಿಸಿದ್ದಾರೆ. ಈ ಸಿನಿಮಾ ಮೂರು ಪಾರ್ಟ್ಗಳಲ್ಲಿ ಬರುತ್ತದೆ" ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.
"ಪರ್ವ ಕಾದಂಬರಿಯನ್ನು ಸಿನಿಮಾ ಮಾಡುತ್ತಿರುವ ಜವಾಬ್ದಾರಿ ಹೆಚ್ಚಿಸಿದೆ. ಈ ವಿಷಯವನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಭೈರಪ್ಪ ಸರ್ ಗುರಿಯನ್ನು ಸಿನಿಮಾ ರೂಪಕ್ಕಿಳಿಸುತ್ತಿರುವುದು ಖುಷಿ ಕೊಟ್ಟಿದೆ. ಪರ್ವ ಸಿನಿಮಾವನ್ನು 3 ಭಾಗದಲ್ಲಿ ಕನ್ನಡ ಹಾಗೂ ಹಿಂದಿ ಎರಡು ಭಾಷೆಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಪ್ರಕಾಶ್ ಇಲ್ಲದೇ ಇದು ಆಗುತ್ತಿರಲಿಲ್ಲ" ಎಂದು ಪಲ್ಲವಿ ಜೋಷಿ ಹೇಳಿದ್ದಾರೆ.
ಮಹಾಭಾರತವನ್ನು ಆಯಾ ಪಾತ್ರಗಳ ಮೂಲಕ ವರ್ಣಿಸಿರುವುದೇ 'ಪರ್ವ' ಕಾದಂಬರಿಯ ವಿಶೇಷ. ಹೀಗಾಗಿ ಈ ವಿಶಿಷ್ಟ ಕಾದಂಬರಿ ಸಿನಿಮಾ ಆದರೆ ಹೇಗೆ ಮೂಡಿ ಬರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಇನ್ನು ಮೂರು ಪಾರ್ಟ್ಗಳಲ್ಲಿ ಈ ಸಿನಿಮಾ ಹೇಗೆ ಮೂಡಿಬರುತ್ತೆ ಅನ್ನೋ ಕೌತುಕವೂ ಇಲ್ಲಿದೆ.


Click it and Unblock the Notifications











