'ಕಾಂತಾರ ಚಾಪ್ಟರ್ 1' ಮುನ್ನ ರೆಡಿಯಾಗಿದ್ದ 'ಅಣ್ಣಪ್ಪ-1970' ಕಥೆಯನ್ನು ರಿಷಬ್ ಶೆಟ್ಟಿ ಏನು ಮಾಡಿದ್ರು?
ರಿಷಬ್ ಶೆಟ್ಟಿ ಮತ್ತೊಮ್ಮೆ ದೇಶಾದ್ಯಂತ ಸದ್ದು ಮಾಡುತ್ತಿದ್ದಾರೆ. 2022ರಲ್ಲಿ ತೆರೆಕಂಡ 'ಕಾಂತಾರ' ಮೆಗಾ ಹಿಟ್ ಆಗಿತ್ತು. ಆದರೆ, ಸಿನಿಮಾ ರಿಲೀಸ್ಗೂ ಮುನ್ನವೇ ಕಾಂತಾರ ಪ್ರೀಕ್ವೆಲ್ ಬಗ್ಗೆ ರಿಷಬ್ ಶೆಟ್ಟಿ ಯೋಚನೆ ಮಾಡಿದ್ದರು. ತಮ್ಮ ಐಡಿಯಾವನ್ನು ತನ್ನ ತಂಡಕ್ಕೂ ತಿಳಿಸಿದ್ದರು. ಅಲ್ಲಿಂದ ಸಿನಿಮಾ ಬಿಡುಗಡೆಗೂ ಮೊದಲೇ 'ಕಾಂತಾರ' ಪ್ರೀಕ್ವೆಲ್ ಕಥೆ ಹೆಣೆಯುವುದಕ್ಕೆ ಶುರುವಾಗಿತ್ತು.
ರಿಷಬ್ ಶೆಟ್ಟಿ ತಮ್ಮ ಕೋ-ರೈಟರ್ಗಳಿಗೆ ಹೇಳಿದ್ದ ಎಳೆ ಒಂದು ರೆಡಿಯಾಗುತ್ತಿತ್ತು. 'ಕಾಂತಾರ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸದ್ದು ಮಾಡಿದ ಬಳಿಕ ಪ್ರೀಕ್ವೆಲ್ ಮತ್ತಷ್ಟು ಚುರುಕು ಪಡೆದುಕೊಂಡಿತ್ತು. 'ಕಾಂತಾರ' ಸಿನಿಮಾದಲ್ಲಿ ಎರಡು ಬ್ಯಾಕ್ಗ್ರೌಂಡ್ ಕಥೆಯನ್ನು ಹೇಳಲಾಗಿತ್ತು. ಅದರಲ್ಲೊಂದು ಕಥೆಯನ್ನು ಹೇಳುವುದಕ್ಕೆ ರಿಷಬ್ ಶೆಟ್ಟಿ ನಿರ್ಧರಿಸಿದ್ದರು. ಅದಕ್ಕೆ ತಕ್ಕಂತೆ ಸ್ಕ್ರಿಪ್ಟ್ ರೆಡಿಯಾಗುತ್ತಿತ್ತು. ಅದುವೇ 'ಅಣ್ಣಪ್ಪ-1970'.

'ಕಾಂತಾರ' ಸಿನಿಮಾದ ಶಿವನ ತಂದೆ ಅಣ್ಣಪ್ಪ. ಸಿನಿಮ ಪ್ರೀಕ್ವೆಲ್ ಅಂದಾಗ ಅಣ್ಣಪ್ಪನ ಕಥೆಯನ್ನು ಹೇಳಬೇಕು. ಅದು 1970ರಿಂದ ಶುರುವಾಗುತ್ತೆಂದು ರಿಷಬ್ ಶೆಟ್ಟಿ ಕಲ್ಪಿಸಿಕೊಂಡಿದ್ದರು. ಅದರಂತೆ ಸ್ಕ್ರಿಪ್ಟ ಕೂಡ ರೆಡಿಯಾಗಿತ್ತು. ಅವರ ತಂಡಕ್ಕೂ ಸಿನಿಮಾ ಇಷ್ಟ ಆಗಿತ್ತು. ಆ ಬಳಿಕ ಒಂದಿಷ್ಟು ಬೆಳವಣಿಗೆ ಆಯ್ತು. 'ಅಣ್ಣಪ್ಪ' ಹೋಗ್ತಾ ಹೋಗ್ತಾ 'ಕಾಂತಾರ ಚಾಪ್ಟರ್ 1' ಹೇಗಾಯ್ತು? ಅನ್ನೋದನ್ನು ಸೂರಜ್ ಕುಮಾರ್ ಎನ್ನುವ ಯೂಟ್ಯೂಬ್ ಚಾನೆಲ್ನಲ್ಲಿ ರಿಷಬ್ ಶೆಟ್ಟಿ ವಿವರವಾಗಿ ಹೇಳಿಕೊಂಡಿದ್ದಾರೆ. ಅದರ ಝಲಕ್ ಇಲ್ಲಿದೆ.
ಕಾಂತಾರ ಶುರುವಾಗಿದ್ದೇಗೆ?
"ಕಾಂತಾರ ಸಿನಿಮಾ ಮುಗಿದಿತ್ತು. ಆಗ ನಾನು ನನ್ನ ತಂಡಕ್ಕೆ ಪ್ರೀಕ್ವೆಲ್ ಮಾಡುತ್ತಿದ್ದೇವೆ. ಕಾಂತಾರದ ಮುಂದಿನ ಕಥೆಯಲ್ಲ. ಹಿಂದಿನ ಕಥೆ ಅಂತ ಹೇಳುತ್ತಿದ್ದೆ. ಇದರ ಬಗ್ಗೆ ಚರ್ಚೆ ನಡೆಯುತ್ತಲೇ ಇತ್ತು. ಕಾಂತಾರ ರಿಲೀಸ್ ಆಯ್ತು. ಆಗ ನಾನು ಮುಂಬೈನಲ್ಲಿಯೇ ಇದ್ದೆ. ಆಗ ನನ್ನ ಕೋ ರೈಟರ್ಸ್ ಫೋನ್ ಮಾಡಿ ಹೀಗೆ ಕಥೆ ಅಂತ ಹೇಳಿದೆ. ಅನಿರುದ್ಧ್ ಮಹೇಶ್, ಶನೀಲ್ ಗೌತಮ್ ಇವರೇ ಕೋರ್ ಮೆಂಬರ್ ಇದ್ದರು. ಇಲ್ಲಿಂದ ಬೆಂಗಳೂರಿಗೆ ಹೋಗಿ, ನನ್ನ ಹಳ್ಳಿಗೆ ಹೋದೆ. ಅಲ್ಲಿ ಎಲ್ಲರನ್ನೂ ಕರೆದೆ. ಅಲ್ಲಿಂದ ನಾವು ಒಂದು ಸ್ಕ್ರಿಪ್ಟ್ ಅನ್ನು ಶುರು ಮಾಡಿದ್ವಿ." ಎಂದು ಹೇಳಿದ್ದಾರೆ.
'ಕಾಂತಾರ 1'ಗೂ ಮುನ್ನ 'ಅಣ್ಣಪ್ಪ-1970'
"ಕಾಂತಾರ ಆದ್ಮೇಲೆ ಮಾಡಿದ ಸ್ಕ್ರಿಪ್ಟ್ನ ಹೆಸರು ಅಣ್ಣಪ್ಪ. ಅದು 'ಕಾಂತಾರ'ದ ಶಿವನ ತಂದೆ. ಈ ಕಥೆ 1970ರಲ್ಲಿ ನಡೆಯುತ್ತೆ ಎಂದು ರಿಷಬ್ ತನ್ನ ಕೋ-ರೈಟರ್ಗಳಿಗೆ ಹೇಳಿದ್ದರು. "ಆ ಸ್ಕ್ರಿಪ್ಟ್ ಸಂಪೂರ್ಣವಾಗಿ ಮುಗೀತು. ಆ ಸ್ಕ್ರಿಪ್ಟ್ ನಮಗೆ ತುಂಬಾನೇ ಮಜಾ ಕೊಟ್ಟಿತ್ತು. ನಾವು ಕಥೆಯನ್ನು ಹೇಳಿದ್ವಿ. ಎಲ್ಲರೂ ಸಿಕ್ಕಾಪಟ್ಟೆ ಖುಷಿಯಾದರು. ಶಿವನ ಬಗ್ಗೆ ಕಥೆಯನ್ನು ಹೇಳುವುದಕ್ಕೆ ಎರಡು ಬ್ಯಾಕ್ಗ್ರೌಂಡ್ ಕಥೆಯನ್ನು ತೆಗೆದುಕೊಂಡು ಬಂದಿದ್ವಿ. 1847ನಲ್ಲಿದ್ದ ರಾಜ ಕಥೆ ಹಾಗೂ ಅವರ ಅಪ್ಪನ ಕಥೆ. ಹೀಗಾಗಿ ಇಲ್ಲಿ ಸ್ಟೋರಿಯನ್ನು ಹೇಳುವುದಕ್ಕೆ ಇನ್ನೂ ಏನಾದರೂ ಬೇಕು ಅಂತ ಹೇಳಿದೆ. ಹೀಗಾಗಿ ರಿಸರ್ಚ್ ಮಾಡುತ್ತಾ ಮಾಡುತ್ತಾ ಹಿಂದಕ್ಕೆ ಹೊರಟು ಹೋದ್ವಿ. ಇಷ್ಟು ಹಿಂದಕ್ಕೆ ಹೋಗುತ್ತೇವೆಂದು ನನಗೂ ಗೊತ್ತಿರಲಿಲ್ಲ. ಕಾಂತಾರದಲ್ಲಿ ಒಂದು ವೃತ್ತದಲ್ಲಿ ಇದ್ವಿ. ಕಾಂತಾರ ಚಾಪ್ಟರ್ 1ನಲ್ಲಿ ಒಂದು ಬಾವಿಯೊಳಗೆ ಹೋದೆವು. ಅದು ಸೀದಾ ಹಿಂದಕ್ಕೆ ಕರೆದುಕೊಂಡು ಹೋಯ್ತು." ಎಂದಿದ್ದಾರೆ.

'ಕಾಂತಾರ ಚಾಪ್ಟರ್ 2'ನೂ ರೆಡಿ
ಇದೇ ಸಂದರ್ಶನದಲ್ಲಿ 'ಕಾಂತಾರ ಚಾಪ್ಟರ್ 2' ಸ್ಕ್ರಿಪ್ಟ್ ಕೂಡ ರೆಡಿಯಿದೆ ಎಂದು ಹೇಳಿಕೊಂಡಿದ್ದಾರೆ. ಹಾಗೇ ಸ್ವಲ್ಪ ಬ್ರೇಕ್ ತೆಗೆದುಕೊಂಡು ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮಾಡಿ, ಅದಾದ್ಮೇಲೆ 'ಕಾಂತಾರ ಚಾಪ್ಟರ್ 2'ಗೆ ಕೈ ಹಾಕಲಿದ್ದಾರೆ. "ಕಾಂತಾರದ ಎರಡನೇ ಭಾಗ ರೆಡಿಯಿದೆ. ಅದನ್ನು ನಾನು ಈಗ ಮಾಡುವುದಿಲ್ಲ. ಸ್ವಲ್ಪ ಸಮಯ ತೆಗೆದುಕೊಂಡು ಮಾಡುತ್ತೇನೆ." ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಜನರ ಸ್ಪೀಡ್ಗೆ ತಕ್ಕಂತೆ ಸಿನಿಮಾ
"ನಾನು ಈ ಕಥೆಯನ್ನು ಮೂರು ವರ್ಷಗಳ ಹಿಂದೆ ಶುರು ಮಾಡಿದೆ. ಅಂದು ನಾನು ಕಥೆಯನ್ನು ಶುರು ಮಾಡಿದ್ದೇನೋ ಸರಿ. ಆದರೆ, ಮೂರು ವರ್ಷಗಳ ಬಳಿಕ ಏನಾಗುತ್ತೆ ಅನ್ನೋದನ್ನು ಯೋಚನೆ ಮಾಡಬೇಕಿದೆ. ಜನರು ತುಂಬಾ ಸ್ಮಾರ್ಟ್ ಆಗಿದ್ದಾರೆ. ಅವರು ಯೋಚನೆ ಮಾಡುವಂತೆ ನಾವು ಮಾಡಬೇಕಿದೆ." ಎಂದು ರಿಷಬ್ ಶೆಟ್ಟಿ ಯೂಟ್ಯೂಬರ್ ಜೊತೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.


Click it and Unblock the Notifications











