ಯಶ್ ಅಮ್ಮನ ಚೊಚ್ಚಲ ಸಿನಿಮಾಗೆ 'ಕೊತ್ತಲವಾಡಿ' ಗ್ರಾಮದ ಹೆಸರನ್ನೇ ಟೈಟಲ್ ಆಗಿ ಇಟ್ಟಿದ್ದೇಕೆ?
ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಣಕ್ಕೆ ಇಳಿದಿದ್ದಾರೆ. ಅವರ ಪಿಎ ಬ್ಯಾನರ್ನಲ್ಲಿ ನಿರ್ಮಾಣ ಮಾಡಿರುವ ಚೊಚ್ಚಲ ಸಿನಿಮಾವೇ 'ಕೊತ್ತಲವಾಡಿ'. ಈ ಸಿನಿಮಾದ ಟೀಸರ್ ಅನ್ನು ಇಂದು (ಮೇ 21) ಬಿಡುಗಡೆ ಮಾಡಲಾಗಿದೆ. ಪೃಥ್ವಿ ಅಂಬಾರ್, ಕಾವ್ಯಾ ನಟಿಸಿರುವ ಹಳ್ಳಿ ಸೊಗಡಿನ ಈ ಸಿನಿಮಾ ಮಾಸ್ ಎಂಟರ್ಟೈನರ್. ಶ್ರೀರಾಜ್ ನಿರ್ದೇಶಿಸಿರುವ ಈ ಸಿನಿಮಾ ನೈಜ ಘಟನೆಗಳನ್ನು ಆಧರಿಸಿದೆ.
ಇನ್ನು ಸಿನಿಮಾ ಟೀಸರ್ ನೋಡಿದಾಗ ಟೈಟಲ್ ಕಡೆ ಗಮನ ಹೋಗುತ್ತೆ. ಇದಕ್ಕೆ 'ಕೊತ್ತಲವಾಡಿ' ಟೈಟಲ್ ಯಾಕೆ? ಎನ್ನುವ ಪ್ರಶ್ನೆನೂ ಹುಟ್ಟಿಕೊಳ್ಳುತ್ತೆ. ಅದರಲ್ಲೂ ನೈಜ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದರಿಂದ ಚಾಮರಾಜನಗರ ಜಿಲ್ಲೆಯ 'ಕೊತ್ತಲವಾಡಿ' ಗ್ರಾಮದಲ್ಲಿ ನಡೆದ ಘಟನೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರಾ? ಎಂಬ ಪ್ರಶ್ನೆ ಕೂಡ ಹುಟ್ಟಿಕೊಳ್ಳುತ್ತೆ.

ಆದರೆ, ನಿರ್ದೇಶಕರು 'ಕೊತ್ತಲವಾಡಿ' ಗ್ರಾಮಕ್ಕೂ ನಮ್ಮ ಸಿನಿಮಾಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳುತ್ತಾರೆ. ಹಾಗಿದ್ದರೆ, ಸಿನಿಮಾ 'ಕೊತ್ತಲವಾಡಿ' ಟೈಟಲ್ ಯಾಕೆ ಇಟ್ಟರು? ಈ ಗ್ರಾಮದಲ್ಲಿಯೇ ಶೂಟಿಂಗ್ ಮಾಡುವುದಕ್ಕೆ ಏನು ಕಾರಣ? ಅಸಲಿಗೆ ಸಿನಿಮಾದಲ್ಲಿ ಅಂತಹದ್ದೇನಿದೆ? ಈ ಎಲ್ಲಾ ಸಂಗತಿಗಳ ಬಗ್ಗೆ ಸ್ವತ: ನಿರ್ದೇಶಕ ಶ್ರೀರಾಜ್ ಫಿಲ್ಮಿಬೀಟ್ ಕನ್ನಡಕ್ಕೆ ರಿವೀಲ್ ಮಾಡಿದ್ದಾರೆ.
ಯಶ್ ಕುಟುಂಬದಿಂದ ಮತ್ತೊಂದು ನಿರ್ಮಾಣ ಸಂಸ್ಥೆ ಆರಂಭ ಆಗಿದ್ದು ಸಿನಿಪ್ರಿಯರಿಗೆ ಕಿಕ್ ಕೊಟ್ಟಿದೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಪರ್ವ ಆರಂಭ ಆಗಬಹುದೇ? ಎಂಬ ನಿರೀಕ್ಷೆ ಕೂಡ ಇದೆ. ಇದರೊಂದಿಗೆ 'ಕೊತ್ತಲವಾಡಿ' ಸಿನಿಮಾದ ಟೈಟಲ್ ಕೂಡ ಅಷ್ಟೇ ಗಮನ ಸೆಳೆಯುತ್ತಿದೆ. ಚಾಮರಾಜನಗರದ ಪುಟ್ಟ ಹಳ್ಳಿಯಲ್ಲಿ ಚಿತ್ರೀಕರಣ ಮಾಡುವಾಗ ಆ ಊರಿನೊಂದಿಗೆ ಒಂದು ಬಾಂಧವ್ಯ ಬೆಳೆದು ಬಿಟ್ಟಿದೆ. ಜೊತೆಗೆ ಕಥೆಗೂ ಆ ಊರಿಗೂ ಸಾಮ್ಯತೆ ಇದೆ. ಹೀಗಾಗಿ 'ಕೊತ್ತಲವಾಡಿ' ಟೈಟಲ್ ಕೂಡ ಸಿನಿಮಾದಷ್ಟೇ ಮುಖ್ಯ. ಈ ಬಗ್ಗೆ ಶ್ರೀರಾಜ್ ಹೀಗೆ ಹೇಳುತ್ತಾರೆ.
"ಹೌದು ಈ ಸಿನಿಮಾ ನೈಜ ಘಟನೆಗಳನ್ನು ಆಧರಿಸಿದೆ. ಕತೆಯಷ್ಟೇ ಅಲ್ಲ, ಪಾತ್ರಗಳು ಕೂಡ ಕಣ್ಮುಂದೆ ಬಂದು ಹೋಗುತ್ತಿರುತ್ತವೆ. ಆತರನೇ ನಾನು ಪ್ರತಿ ಪಾತ್ರವನ್ನೂ ಆಯ್ಕೆ ಮಾಡಿಕೊಂಡಿದ್ದೇನೆ. ಹಾಗಾಗಿ ಕೊತ್ತಲವಾಡಿ ಸಿನಿಮಾ ಕಥೆಯನ್ನು ಬರೆದುಕೊಂಡಿದ್ದೇನೆ. ಆದರೆ, ನಾನು ಟೈಟಲ್ ಅನ್ನು ಇಟ್ಟುಕೊಂಡಿರಲಿಲ್ಲ. ಇದನ್ನು ಇತ್ತೀಚೆಗಷ್ಟೇ ಇಟ್ಟುಕೊಂಡಿದ್ದೇನೆ. ನಮ್ಮ ಕಥೆಗೆ ಆ ಊರು ಹೊಂದಿಕೆಯಾಗುತ್ತೆ ಎಂದು ಇಟ್ಟಿದ್ದೇವೆ." ಎನ್ನುತ್ತಾರೆ ಶ್ರೀರಾಜ್.

ಅಂದ್ಹಾಗೆ, ಈ ಸಿನಿಮಾ ಒಂದು ಊರಿನ ಕಥೆ. ಆದರೆ, ಕೊತ್ತಲವಾಡಿ ಗ್ರಾಮಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲ. ಇಲ್ಲಿ ಕೇವಲ ಸಿನಿಮಾದ ಚಿತ್ರೀಕರಣವನ್ನು ಮಾಡಲಾಗಿದೆ. ಸಿನಿಮಾ ಶೂಟಿಂಗ್ ಮಾಡುತ್ತ ಕಥೆಗೆ ಹೊಂದಾಣಿಕೆ ಆಗುತ್ತೆ ಅಂತ ಅನಿಸುವುದಕ್ಕೆ ಶುರುವಾಗಿದೆ. "ನಾವು ಈಗ ಶೂಟಿಂಗ್ ಮಾಡಿರುವ ಊರಿನ ಹೆಸರು ಕೊತ್ತಲವಾಡಿ. ನಮ್ಮ ಕಥೆಗೆ ಆ ಊರಿನ ಟೈಟಲ್ ಹೊಂದಿಕೆಯಾಗಿದ್ದರಿಂದ ಆ ಟೈಟಲ್ ಅನ್ನು ಇಟ್ಟಿದ್ದೇವೆ. ನನ್ನ ಕಥೆಗೆ ಆ ಊರು ತುಂಬಾನೇ ಹತ್ತಿರವಿತ್ತು. ಈಗ ಎಲ್ಲರೂ ಸೆಟ್ಗಳನ್ನು ಹಾಕಿ ಸಿನಿಮಾ ಮಾಡುತ್ತಾರೆ. ಆದರೆ, ಊರಿಗೆ ಒಮ್ಮೆ ಹೋಗಿ ನೋಡಿದರೆ, ಪ್ರತಿಯೊಂದೂ ರಿಯಲಿಸ್ಟಿಕ್ ಆಗಿ ಕಾಣುತ್ತೆ. ಆ ಊರಿನಲ್ಲಿರುವ ಪ್ರತಿಯೊಂದು ಮನೆಯೂ ಹಳ್ಳಿ ಮನೆಯೇ. ಪ್ರತಿಯೊಂದು ರಸ್ತೆ ಕೂಡ ಹಾಗೆ ಇದೆ. ಆ ನೆಟಿವಿಟಿಯನ್ನು ಅಲ್ಲಿನ ಜನರು ಉಳಿಸಿಕೊಂಡಿದ್ದಾರೆ. ಹಾಗಾಗಿ ಆ ಊರು ನನಗೆ ಅಚ್ಚು ಮೆಚ್ಚು. ನಮ್ಮ ಕರ್ನಾಟಕದಲ್ಲಿಯೇ ಇಂತಹದ್ದೊಂದು ಊರು ಇದೆಯಲ್ಲ ಅನಿಸಿತ್ತು. ನಮ್ಮ ಕಥೆಗೂ ಸರಿ ಹೊಂದುವಂತೆ ಇತ್ತು. ಅದಕ್ಕಾಗಿ ಕೊತ್ತಲವಾಡಿಯನ್ನು ಆಯ್ಕೆ ಮಾಡಿಕೊಂಡೆವು." ಎನ್ನುತ್ತಾರೆ.
ಇನ್ನು 'ಕೊತ್ತಲವಾಡಿ' ಸಿನಿಮಾ ಪ್ರಚಾರವನ್ನು ವಿಭಿನ್ನವಾಗಿ ಮಾಡಲಾಗುತ್ತಿದೆ. ತೆಲುಗು ಹಾಗೂ ಮಲಯಾಳಂ ಪತ್ರಕರ್ತರನ್ನು ಕರೆಸಿ ಟೀಸರ್ ತೋರಿಸಲಾಗಿದೆ. ಹಾಗಂತ ಮಾತ್ರಕ್ಕೆ ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿಲ್ಲ. ಕನ್ನಡದ ಸಿನಿಮಾವನ್ನು ತೆಲುಗು, ತಮಿಳು, ಮಲಯಾಳಂ ಜನರು ನೋಡಿ. ಒಳ್ಳೆಯ ಕಂಟೆಂಟ್ ಸಿನಿಮಾ ಮಾಡಿದ್ದೇವೆ ಎಂದು ಹೇಳುವ ಪ್ರಯತ್ನ. "ನಮ್ಮಲ್ಲೂ ಕ್ಯಾಲಿಟಿ ಕಂಟೆಂಟ್ ಬರುತ್ತಿದೆ ಎನ್ನುವುದನ್ನು ಹೇಳುವುದಕ್ಕೆ ಅವರನ್ನು ಕರೆಸಿದ್ವಿ. ಪ್ರತಿ ಬಾರಿ ಮಲಯಾಳಂನಲ್ಲಿ ಬರುತ್ತಿದೆ. ನಮ್ಮಲ್ಲಿ ಬರುತ್ತಿಲ್ಲ ಎನ್ನುತ್ತಿದ್ದರು. ಇಲ್ಲ ನಮ್ಮಲ್ಲೂ ಒಳ್ಳೊಳ್ಳೆಯ ರೈಟರ್ಸ್ ಇದ್ದಾರೆ ಅನ್ನೋದನ್ನು ಹೇಳುವುದಕ್ಕೆ ಈ ಪ್ರಯತ್ನ ಮಾಡಿದ್ದೇವೆ ಅಷ್ಟೇ." ಎಂದು ನಿರ್ದೇಶಕ ಶ್ರೀರಾಜ್ ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











