ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ತರುಣ್ ಸುಧೀರ್; ದಾಸನಿಗೆ ಕೊಟ್ಟ ಆ ಎರಡು ಪುಸ್ತಕ ಯಾವುದು?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಆರೋಪಿಯಾಗಿದ್ದಾರೆ. ಈ ಸಂಬಂಧ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಸೆರೆಮನೆ ವಾಸ ಅನುಭವಿಸುತ್ತಿದ್ದಾರೆ. ಹೀಗಾಗಿ ದರ್ಶನ್ರನ್ನು ನೋಡುವುದಕ್ಕೆ ಅವರ ಆಪ್ತರು ಹಾಗೂ ಚಿತ್ರರಂಗದ ಗಣ್ಯರು ಆಗಮಿಸುತ್ತಿದ್ದಾರೆ.
ಪರಪ್ಪನ ಅಗ್ರಹಾರಕ್ಕೆ ಇಂದು (ಜುಲೈ 19) ದರ್ಶನ್ರನ್ನು ನೋಡುವುದಕ್ಕೆ ತರುಣ್ ಸುಧೀರ್, ಯಶಸ್ ಸೂರ್ಯ ಹಾಗೂ ಮೇಲುಕೋಟೆ ಶಾಸನ ದರ್ಶನ್ ಪುಟ್ಟಣ್ಣಯ್ಯ ಹೋಗಿದ್ದರು. ಈ ವೇಳೆ ದರ್ಶನ್ ಜೊತೆ ಕೆಲ ಹೊತ್ತು ಈ ಮೂವರೂ ಯೋಗಕ್ಷೇಮ ವಿಚಾರಿಸಿ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ತರುಣ್ ಸುಧೀರ್ ತನ್ನ ನೆಚ್ಚಿನ ನಟ ದರ್ಶನ್ಗೆ ಮದುವೆ ವಿಷಯವನ್ನು ತಿಳಿಸಿದ್ದರು. ಈ ವೇಳೆ ದರ್ಶನ್ಗೆ ಎರಡು ಪುಸ್ತಕಗಳನ್ನು ಕೊಟ್ಟು ಬಂದಿದ್ದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇತ್ತ ಹೈ ಕೋರ್ಟ್ನಲ್ಲಿ ದರ್ಶನ್ ಪರ ವಕೀಲರು ಮನೆಯೂಟ, ಹಾಸಿಗೆ ಹಾಗೂ ಓದಲು ಪುಸ್ತಕವನ್ನು ನೀಡುವಂತೆ ವಾದ ಮಂಡಿಸುತ್ತಿದ್ದರು. ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿ ಕೃಷ್ಣ ಕುಮಾರ್ ಏಕಸದಸ್ಯ ಪೀಠ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಕೇಸ್ ಫೈಲ್ ಮಾಡಲಿ, ಅವರು ವಿಚಾರಣೆ ಮಾಡಿ ಸೌಲಭ್ಯ ಕಲ್ಪಿಸಿವ ಬಗ್ಗೆ ನಿರ್ಧಾರ ಮಾಡಲಿ ಎಂದು ನ್ಯಾಯಾಧೀಶರು ಅಭಿಪ್ರಾಯ ಪಟ್ಟಿದ್ದಾರೆ.
ಸದ್ಯಕ್ಕೀಗ ದರ್ಶನ್ಗೆ ಓದಲು ಪುಸ್ತಕಗಳನ್ನು ಕೊಡಬಹುದಾ? ಇಲ್ವಾ? ಅನ್ನೋ ಗೊಂದಲವಂತೂ ಇದೆ. ಅಷ್ಟಕ್ಕೂ ದರ್ಶನ್ಗೆ ತರುಣ್ ಸುಧೀರ್ ಎರಡು ಪುಸ್ತಕಗಳನ್ನು ಕೊಟ್ಟು ಬಂದಿದ್ದಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಹಾಗಿದ್ದರೆ, ಆ ಎರಡು ಪುಸ್ತಕಗಳು ಯಾವುವು? ತಿಳಿಯಲು ಮುಂದೆ ಓದಿ.
ದರ್ಶನ್ಗೆ ಓದುವುದಕ್ಕಾಗಿ ತರುಣ್ ಸುಧೀರ್ 'ದಿ ಅಲ್ಕೆಮಿಸ್ಟ್' ಕನ್ನಡ ಅನುವಾದ ಪುಸ್ತಕವನ್ನು ಕೊಟ್ಟಿದ್ದಾರೆ. ಇದು ಬದುಕಿನ ಕೆಲವು ಫಿಲಾಸೋಫಿಗಳನ್ನು ಓದುಗನಿಗೆ ಮನವರಿಗೆ ಮಾಡಿಕೊಡುತ್ತದೆ. ಹಾಗೇ ದರ್ಶನ್ಗೆ ಪ್ರಾಣಿಗಳಂದರೆ ಇಷ್ಟ. ಈ ಕಾರಣಕ್ಕೆ ಆನೆ ಅರ್ಜುನನ ಕುರಿತಾದ ಪುಸ್ತಕವನ್ನು ದರ್ಶನ್ಗೆ ಕೊಟ್ಟಿ ಬಂದಿದ್ದಾಗಿ ಹೇಳಿಕೊಂಡಿದ್ದಾರೆ.

"ಅಲ್ಕೆಮಿಸ್ಟ್ ಕನ್ನಡ ವರ್ಷನ್ ಬುಕ್ ಹಾಗೂ ಅರ್ಜುನ ಆನೆ ಬಗ್ಗೆ ಒಂದು ಪುಸ್ತಕ ಬಂದಿದೆ. ಅರ್ಜುನ ಅಂತ ಈ ಎರಡು ಪುಸ್ತಕ ಕೊಟ್ಟಿದ್ದೇನೆ. ಅಲ್ಕೆಮಿಸ್ಟ್ ಒಂದು ಲೈಫ್ ಜರ್ನಿ ಬಗ್ಗೆ ಪುಸ್ತಕವಿದೆ. ಅದರಲ್ಲೊಂದು ಫಿಲಾಸಫಿ ಇದೆ. ಒಳಗಡೆ ಲೈಫ್ ಬಗ್ಗೆ ಚಿಕ್ಕದೊಂದು ಪ್ರೇರಣೆ ಬರುತ್ತೆ. ಅಂದರೆ, ಯಾವುದೇ ಸಂದರ್ಭದಲ್ಲೂ ಅದರಲ್ಲಿ ಏನು ಪಾಸಿಟಿವ್ ಅನ್ನು ನೋಡಬಹುದು ಅನ್ನೋದು ಆ ಪುಸ್ತಕದಲ್ಲಿದೆ." ಎಂದು ನಿರ್ದೇಶಕ ತರುಣ್ ಸುಧೀರ್ ಹೇಳಿಕೊಂಡಿದ್ದಾರೆ.
ಇದೇ ವೇಳೆ ದರ್ಶನ್ಗೆ ಜ್ವರವಿದ್ದು ಈಗ ಚೇತರಿಸಿಕೊಂಡಿದ್ದಾರೆ ಅನ್ನುವ ಮಾಹಿತಿಯನ್ನು ನೀಡಿದ್ದಾರೆ. ಹಾಗೇ ತಮ್ಮ ಮದುವೆ ಬಗ್ಗೆನೂ ಮಾಹಿತಿ ನೀಡಿದ್ದು, ಆಮಂತ್ರಣ ಕೊಟ್ಟು ಬಂದಿದ್ದಾರೆ. "ನನ್ನ ಮದುವೆ ವಿಷಯ ಮೊದಲೇ ಗೊತ್ತಿತ್ತು. ಅದು ನಮ್ಮ ಮನಸ್ಸಿನಲ್ಲಿ ತೊಳಲಾಟವಿತ್ತು. ಯಾವುದೇ ಕಾರಣಕ್ಕೂ ನೀನು ಡೇಟ್ ಬದಲಾಯಿಸಬಾರದು. ಏನಿದೆ ಆ ಡೇಟ್ನಲ್ಲಿಯೇ ಮದುವೆಯಾಗು. ಆರಾಮಾಗಿರು ನಾನು ಬರುತ್ತೇನೆ ಅಂತ ಹೇಳಿದರು. ಅವರು ಏನೂ ತಪ್ಪು ಮಾಡಿಲ್ಲ ಅನ್ನೋ ನಂಬಿಕೆಯಲ್ಲಿ ಇದ್ದೇವೆ. ಹಾಗೇ ಆಗಲಿ ಅಂತ ನಾವೂ ಪಾರ್ಥನೆ ಮಾಡಿಕೊಳ್ಳುತ್ತೇವೆ." ಎಂದು ಈ ಸಂದರ್ಭದಲ್ಲಿ ತರುಣ್ ಸುಧೀರ್ ಹೇಳಿಕೊಂಡಿದ್ದಾರೆ.


Click it and Unblock the Notifications











