ರಾಜ್ಕುಮಾರ್ ತಮಿಳಿನಲ್ಲಿ ಡೈಲಾಗ್.. ರೊಚ್ಚಿಗೆದ್ದಿದ್ದ ಪ್ರೇಕ್ಷಕರು: ಭಾರತಿಯೂ ಇದ್ದ ಆ ಸಿನಿಮಾ ಯಾವುದು?
ರಾಜ್ಕುಮಾರ್ ಅಂದರೆ ಕನ್ನಡ, ಕನ್ನಡ ಅಂದರೆ ರಾಜ್ಕುಮಾರ್. ಆ ಮಟ್ಟಿಗೆ ಅಣ್ಣಾವ್ರು ಕನ್ನಡಿಗರ ಮಧ್ಯೆ ಒಬ್ಬರಾಗಿದ್ದರು. ಕರ್ನಾಟಕದಲ್ಲಿ ಕನ್ನಡ ಉಳಿಯಲು ಇವರು ನಟಿಸಿದ ಸಿನಿಮಾಗಳು ಕೂಡ ಅಷ್ಟೇ ಪ್ರಮುಖ ಎನಿಸಿಕೊಂಡಿವೆ. ರಾಜ್ಕುಮಾರ್ ಸಿನಿಮಾಗಳು ಆ ಮಟ್ಟಿಗೆ ಕನ್ನಡಿಗರ ಮೇಲೆ ಪರಿಣಾಮವನ್ನು ಬೀರಿದ್ದವು. ಅಣ್ಣಾವ್ರು ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಡೈಲಾಗ್ ಬಿಟ್ಟರೆ, ಕನ್ನಡಿಗರಿಗೆ ಸಹಿಸಿಕೊಳ್ಳುವುದಕ್ಕೆ ಆಗುತ್ತಿರಲಿಲ್ಲ.
ರಾಜ್ಕುಮಾರ್ ಹಾಗೂ ಭಾರತಿ 'ಮನಸಾಕ್ಷಿ' ಅನ್ನುವ ಸಿನಿಮಾದಲ್ಲಿ ನಟಿಸಿದ್ದರು. ಇವರೊಂದಿಗೆ ನರಸಿಂಹರಾಜು, ಬಿ. ವಿ. ರಾಧಾ ಸೇರಿದಂತೆ ಇನ್ನೂ ಹಲವು ದಿಗ್ಗಜರು ನಟಿಸಿದ್ದರು. ಈ ಸಿನಿಮಾದಲ್ಲಿ ಅಣ್ಣಾವರು ಒಂದು ಸನ್ನಿವೇಶದಲ್ಲಿ ತಮಿಳಿನಲ್ಲಿ ಒಂದು ಡೈಲಾಗ್ ಬಿಡುತ್ತಾರೆ. ಅದನ್ನು ಅದೇ ಕನ್ನಡಿಗರಿಗೆ ಸಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ.

ಆ ಡೈಲಾಗ್ ಬಂದಾಗ ಥಿಯೇಟರ್ನಲ್ಲಿಯೇ ಪ್ರೇಕ್ಷಕರು ಕೋಪಗೊಂಡಿದ್ದ ಉದಾಹರಣೆಗಳು ಇವೆ. ಇಂತಹದ್ದೊಂದು ಸನ್ನಿವೇಶವನ್ನು ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ವಿವರಿಸಿದ್ದಾರೆ. ಹಾಗಿದ್ದರೆ, 'ಮನಸಾಕ್ಷಿ' ಸಿನಿಮಾದ ಆ ದೃಶ್ಯ ಯಾವುದು? ಪ್ರೇಕ್ಷಕರ ಪ್ರತಿಕ್ರಿಯೆ ಏನಾಗಿತ್ತು? ತಿಳಿಯಲು ಮುಂದೆ ಓದಿ.
'ಮನಸಾಕ್ಷಿ' ಸಿನಿಮಾದ ದೃಶ್ಯವೊಂದರಲ್ಲಿ ರಾಜ್ಕುಮಾರ್ ವಿರುದ್ಧವೇ ಪ್ರೇಕ್ಷಕರು ಪ್ರತಿಭಟನೆಯನ್ನು ಸೂಚಿಸಿದ ಘಟನೆ ನಡೆಯಿತು. ಅದೇನಂದ್ರೆ, ಅಣ್ಣನನ್ನು ಹುಡುಕಿಕೊಂಡು ಗೌರಿ (ಭಾರತಿ) ಬೆಂಗಳೂರಿಗೆ ಬಂದಾಗ, ಇಲ್ಲಿ ದುಷ್ಕರ್ಮಿಗಳ ಕೈಗೆ ಸಿಕ್ಕು ಸಾಕಷ್ಟು ಕಷ್ಟವನ್ನು ಅನುಭವಿಸಬೇಕಾಗುತ್ತೆ. ಅದನ್ನು ತಪ್ಪಿಸಲು ರಾಜ್ಕುಮಾರ್ ಅವರು ಗುಂಡಾಗಳ ಜೊತೆ ಹೊಡೆದಾಡಿ ಆಕೆಯನ್ನು ರಕ್ಷಣೆ ಮಾಡುವ ಸನ್ನಿವೇಶ. ಇಲ್ಲಿಂದ ನಾಯಕ-ನಾಯಕಿಯ ಪರಿಚಯವಾಗುತ್ತೆ.
ಭಾರತಿ ಅಣ್ಣನನ್ನು ಹುಡುಕೊಂಡು ಬಂದಿರುವ ವಿಷಯ ರಾಜ್ಕುಮಾರ್ ಅವರಿಗೆ ತಿಳಿಯುತ್ತೆ. ಆ ವೇಳೆ ಭಾರತಿಯೊಂದಿಗೆ ಸೇರಿಕೊಂಡು ಅವರನ್ನು ಹುಡುಕುವ ಕೆಲಸ ಮಾಡುತ್ತಾರೆ. ಭಾರತಿಗೆ ತನ್ನ ಅಣ್ಣನ ಬಗ್ಗೆ ಮಾಹಿತಿನೇ ಇರುವುದಿಲ್ಲ. ಶೇಖರನ್ ಎನ್ನುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಷ್ಟು ಮಾತ್ರ ಗೊತ್ತಿದೆ. ಹೀಗಾಗಿ ಆ ಕಂಪನಿಯನ್ನು ಹುಡುಕಿಕೊಂಡು ಹೋಗುತ್ತಾರೆ. ಈ ದೃಶ್ಯವನ್ನು ಹರಿಹರಪುರ ಮಂಜುನಾಥ್ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.
"ಅಲ್ಲಿದ್ದವರನ್ನು ಶೇಖರನ್ ಕಂಪನಿ ಬಗ್ಗೆ ಕೇಳಿದಾಗ ಕನ್ನಡದಲ್ಲಿ ಉತ್ತರಿಸುವ ಬದಲು ತೆಲುಗಿನಲ್ಲಿ, ತಮಿಳಿನಲ್ಲಿ ಉತ್ತರ ಕೊಡುತ್ತಾರೆ. ಆಗ ರಾಜ್ಕುಮಾರ್ ಮುಂದೆ ಒಬ್ಬ ವ್ಯಕ್ತಿ ಸಿಕ್ಕಾಗ "ಇಂಗೆ ಶೇಖರನ್ ಅಂಡ್ ಕಂಪನಿ ಎಂಗ ಇರುಕಮು ತಿರಿಯಮೋ" ಎಂದು ತಮಿಳಿನಲ್ಲಿ ಕೇಳುತ್ತಾರೆ. ರಾಜ್ಕುಮಾರ್ ಬಾಯಲ್ಲಿ ತಮಿಳು ಭಾಷೆ ಬಂದಿದ್ದರಿಂದ ಅವರ ಅಭಿಮಾನಿಗಳಿಗೆ ಅದು ಇಷ್ಟ ಆಗಲಿಲ್ಲ. ಹಾಗಾಗಿ ಥಿಯೇಟರ್ನಲ್ಲಿ ಆ ಸಂಭಾಷಣೆ ಬಂದಾಗ ಏಯ್ ಅಂತ ಕೂಗುತ್ತಿದ್ದರು. ತ್ರಿವೇಣಿ ಚಿತ್ರಮಂದಿರಲ್ಲಿ ಮಾರ್ನಿಂಗ್ ಶೋ ಹಾಕಿದ್ದಾಗ, ನಾನೇ ಎಷ್ಟೋ ಬಾರಿ ಏಯ್ ಕೂಗಿದ್ದನ್ನು ಕಿವಿಯಾರೆ ಕೇಳಿದ್ದೀನಿ" ಎಂದು ಹರಿಹರಪುರ ಮಂಜುನಾಥ್ ಹೇಳಿಕೊಂಡಿದ್ದಾರೆ.
ಹೀಗೆ ಒಂದು ದೃಶ್ಯ ಅಣ್ಣಾವ್ರ ವಿರುದ್ಧವೇ ಪ್ರೇಕ್ಷಕರು ಸಿಡಿದೇಳುವಂತೆ ಮಾಡಿತ್ತು. ಅಲ್ಲಿಂದ ಅಣ್ಣಾವ್ರು ಕನ್ನಡ ಭಾಷೆಯ ಬಗ್ಗೆ ಮತ್ತಷ್ಟು ಜಾಗರೂಕರಾಗುತ್ತಿದ್ದರು. 'ಮನಸಾಕ್ಷಿ' ಸಿನಿಮಾದ ಈ ದೃಶ್ಯವನ್ನು ನೋಡಿದರೇ 70 ದಶಕದ ಆರಂಭದಲ್ಲಿ ಬೆಂಗಳೂರಿನಲ್ಲಿ ಪರಭಾಷೆಯ ಹಾವಳಿ ಎಷ್ಟಿತ್ತು? ಅನ್ನೋದನ್ನು ಹೇಳುತ್ತೆ.


Click it and Unblock the Notifications











