ಅತ್ಯುತ್ತಮ ಖಳನಟ 2012:ನಿಮ್ಮ ಆಯ್ಕೆ ಯಾರು?
ಯಾವುದೇ ಚಿತ್ರದ ಸೋಲು ಗೆಲುವಿಗೆ ನಾಯಕ, ನಾಯಕಿಯ ಜೊತೆ ಖಳನಾಯಕನ ಪಾತ್ರವೂ ನಿರ್ಣಾಯಕ. ಕೆಲವೊಂದು ಸಿನಿಮಾಗಳು ವಿಲನ್ ಪಾತ್ರಗಳಿಂದಲೂ ಗೆದ್ದ ಉದಾಹರಣೆಗಳಿವೆ.
ಎಂಥೆಂಥಾ ಘಟಾನುಗಟಿ ಖಳನಟರನ್ನು ಕಂಡ ಕನ್ನಡ ಚಿತ್ರರಂಗ ಇತ್ತೀಚಿನ ದಿನಗಳಲ್ಲಿ ಇತರ ಭಾಷೆಯವರಿಗೆ ಹೆಚ್ಚಾಗಿ ಮಣೆ ಹಾಕುತ್ತಿರುವುದು ನಮ್ಮವರಲ್ಲಿ ಪ್ರತಿಭಾನ್ವಿತರ ಕೊರತೆಯೋ ಅಥವಾ ನಮ್ಮವರ ಮೇಲೆ ಉದಾಸೀನತೆಯೋ?
ವಿಭಿನ್ನ ಪ್ರಯತ್ನದ ಚಿತ್ರಗಳು ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ತೆರೆಕಂಡವು. ಕಳೆದ ವರ್ಷಕ್ಕೆ ಹೋಲಿಸಿದರೆ ಚಿತ್ರಗಳ hit ratio ಗಮನಾರ್ಹವಾಗಿ ಸುಧಾರಿಸಿದೆ ಎನ್ನುವುದು ಇನ್ನೊಂದು ಸಂತಸದ ವಿಷಯ.

ಮಕರಂದ್ ದೇಶಪಾಂಡೆ
ಮರಾಠಿ ರಂಗಭೂಮಿ ಪ್ರತಿಭೆ ಮಕರಂದ್ ದೇಶಪಾಂಡೆ. ಚಿತ್ರದಲ್ಲಿನ ಎಲ್ಲಾ ಪಾತ್ರಗಳು ವಿಲನ್ ಪಾತ್ರವೇ. ಅದರಲ್ಲಿ ಇವರ ನಟನೆ ಒಂದು ಕೈ ಮೇಲು. ಜೂನ್ ತಿಂಗಳಲ್ಲಿ ಬಿಡುಗಡೆಯಾದ ಚಿತ್ರ 'ದಂಡುಪಾಳ್ಯ'. ಊಹಿಸಲೂ ಅಸಾಧ್ಯವಾದ ಉತ್ತಮ ಪ್ರತಿಕ್ರಿಯೆ ಚಿತ್ರಕ್ಕೆ ಬಂದರೂ ದಂಡುಪಾಳ್ಯ ಶೈಲಿಯ ಕೊಲೆ, ದರೋಡೆ ಹೆಚ್ಚಾಗಲು ಆರಂಭವಾದ ನಂತರ ಚಿತ್ರಕ್ಕೆ ಹೆಚ್ಚಿನ ಪಬ್ಲಿಸಿಟಿ ನೀಡಲು ಪೆಟ್ಟು ಬಿತ್ತು.

ಅರುಣ್ ಸಾಗರ್
ಯಶಸ್ಸಿನ ಉತ್ತುಂಗದಲ್ಲಿರುವ ದರ್ಶನ್ ಅಭಿನಯದ 'ಚಿಂಗಾರಿ' ಚಿತ್ರದಲ್ಲಿ ಅರುಣ್ ಸಾಗರ್ ವಿಲನ್ ಪಾತ್ರಧಾರಿ. ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾದ ಚಿತ್ರಕ್ಕೆ ಜನ ಮನ್ನಣೆಯ ಜೊತೆಗೆ ಅರುಣ್ ಸಾಗರ್ ವಿಭಿನ್ನ ಪಾತ್ರ ಮೆಚ್ಚುಗೆ ಪಡೆದಿತ್ತು.

ರವಿಶಂಕರ್
ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಕನ್ನಡ ಚಿತ್ರರಂಗದ ಮತ್ತೊಬ್ಬ ಬಾಕ್ಸ್ ಆಫೀಸ್ ಕಿಂಗ್ ಪುನೀತ್ ರಾಜಕುಮಾರ್ ಅಭಿನಯದ ಯಾರೇ ಕೂಗಾಡಲಿ ಚಿತ್ರದಲ್ಲಿ ರವಿಶಂಕರ್ ಅವರದ್ದು ಎಂದಿನಂತೆ ಅಬ್ಬರದ ಪಾತ್ರ. ಕೆಂಪೇಗೌಡ ಚಿತ್ರದ ನಂತರ ರವಿಶಂಕರ್ ಅವರಿಗೆ ತನ್ನದೇ ಆದ ಅಭಿಮಾನಿ ಬಳಗವಿದೆ.

ಸುಚೇಂದ್ರ ಪ್ರಸಾದ್
ಕನ್ನಡ ಚಿತ್ರರಂಗ ಕಂಡ ಮತ್ತೊಬ್ಬ ಅಪ್ರತಿಮ ಪ್ರತಿಭೆ. ಮಾಸ್ ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನದ ಎಪ್ರಿಲ್ ತಿಂಗಳಲ್ಲಿ ಬಿಡುಗಡೆಯಾದ 'ಭೀಮಾ ತೀರದಲಿ' ಚಿತ್ರದಲ್ಲಿ ಸುಚೇಂದ್ರ ಪ್ರಸಾದ್ ಅವರದ್ದು ಶಾಸಕನ ಪಾತ್ರ. ತನ್ನ ವಿಶಿಷ್ಟ ಡೈಲಾಗ್ ಡೆಲಿವರಿಗೆ ಹೆಸರಾದ ಪ್ರಸಾದ್ ಅವರ ಚಿತ್ರದಲ್ಲಿನ ನಟನೆ ವ್ಯಾಪಕ ಪ್ರಶಂಸೆಗೆ ಒಳಗಾಗಿತ್ತು.

ಜಾಕಿಶ್ರೋಫ್
ಇದುವರೆಗೆ ಬಿಡುಗಡೆಯಾದ ಕನ್ನಡ ಚಿತ್ರಗಳ ಪೈಕಿ ಮಂಗಳವಾರ ಚಿತ್ರ ಬಿಡುಗಡೆಯಾದ ಉದಾಹರಣೆ ಬಹಳ ಕಮ್ಮಿ ಅಥವಾ ಇಲ್ಲವೋ? ಇನ್ನಿಲ್ಲದಂತೆ ಕ್ರೇಜ್ ಹುಟ್ಟಿಸಿದ್ದ ಪುನೀತ್ ಅಭಿನಯದ 'ಅಣ್ಣಾ ಬಾಂಡ್' ಚಿತ್ರದಲ್ಲಿ ಹಿಂದಿ ಮೇರುನಟ ಜಾಕಿ ಶ್ರೋಫ್ ಅವರದ್ದು ಖಳನಾಯಕನ ಪಾತ್ರ.

ದೊಡ್ಡಣ್ಣ
ಕನ್ನಡ ಚಿತ್ರರಂಗದ ಮೊದಲ ಅತ್ಯಂತ ದೊಡ್ಡ ಬಜೆಟಿನ ಚಿತ್ರ ದರ್ಶನ್ ಅಭಿನಯದ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'. ಕಲಾವಿದರ ದಂಡೇ ಇರುವ ಈ ಚಿತ್ರದಲ್ಲಿ ಕನ್ನಡದ ಹಿರಿಯ ಪೋಷಕ, ಖಳನಟ ದೊಡ್ಡಣ್ಣ ಅವರದ್ದು ಬ್ರಿಟಿಷ್ ಅಧಿಕಾರಿಗಳಿಗೆ ಸಹಾಯ ಮಾಡುವ ಪಾತ್ರ.
ಆಶಿಸ್ ವಿದ್ಯಾರ್ಥಿ, ರವಿಶಂಕರ್, ಸೋನು ಸೂದ್ ಮುಂತಾದ ಪರಭಾಷಾ ಖಳನಟರ ಅಬ್ಬರದ ನಡುವೆಯೂ ದೊಡ್ಡಣ್ಣ, ಸುಚೇಂದ್ರ ಪ್ರಸಾದ್, ರಂಗಾಯಣ ರಘು ಮುಂತಾದ ನಟರು ಕನ್ನಡ ಚಿತ್ರರಂಗದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಂಡಿರುವುದು ನೆಮ್ಮದಿಯ ಸಂಗತಿ.
2012ರಲ್ಲಿ ಬಿಡುಗಡೆಯಾದ 'ಶಕ್ತಿ' ಚಿತ್ರದಿಂದ ಹಿಡಿದು ಮೊನ್ನೆ ಮೊನ್ನೆ ಬಿಡುಗಡೆಯಾದ 'ನಂದೀಶ' ಚಿತ್ರದವರೆಗೆ ಖಳನಾಯಕನ ಪಾತ್ರದಲ್ಲಿ ಮಿಂಚಿದವರು ಯಾರು? ಓದುಗರೇ ನಿಮ್ಮ ಆಯ್ಕೆಯಾವುದು?


Click it and Unblock the Notifications











