ಬಿಗ್ಬಾಸ್ ರಜತ್ಗೆ ಜೈಲು, ವಿನಯ್ ಗೌಡಗೆ ಯಾಕಿಲ್ಲ? ಬರೀ ದಂಡ ಅಷ್ಟೇ ಯಾಕೆ?
ಲಾಂಗ್ ಹಿಡಿದು ಜೋಷ್ನಲ್ಲಿ ರೀಲ್ಸ್ ಮಾಡಿದ ರಜತ್ ಹಾಗೂ ವಿನಯ್ ಗೌಡಗೆ ಸಂಕಷ್ಟ ಇನ್ನೂ ತಪ್ಪಿಲ್ಲ. ಈಗಾಗಲೇ ಜೈಲು ಸೇರಿದ್ದ ಇಬ್ಬರೂ ಪರತ್ತು ಬದ್ಧ ಜಾಮೀನು ಪಡೆದು ಹೊರ ಬಂದಿದ್ದಾರೆ. ಆದ್ರೀಗ ಮತ್ತೆ ರಜತ್ ಹಾಗೂ ವಿನಯ್ ಗೌಡಗೆ ನ್ಯಾಯಾಲಯ ವಾರೆಂಟ್ ಅನ್ನು ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ರಜತ್ ಅವರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ನಿಲ್ಲಿಸಿದ್ದರು.
ಈಗ 24 ನೇ ಎಸಿಎಂಎಂ ನ್ಯಾಯಾಲಯ ರಜತ್ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ಆದೇಶಿಸಿದೆ. ಏಪ್ರಿಲ್ 29ರವರೆಗೂ ರಜತ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಬೇಕು. ಒಂದು ವೇಳೆ ಜಾಮೀನು ಸಿಕ್ಕರೆ, ಇದಕ್ಕೂ ಮುಂಚಿತವಾಗಿ ಹೊರಬರುವ ಸಾಧ್ಯತೆಯಿದೆ. ಇತ್ತ ವಿನಯ್ ಗೌಡಗೆ ನ್ಯಾಯಾಲಯ 500 ರೂಪಾಯಿಗಳ ದಂಡವನ್ನಷ್ಟೇ ವಿಧಿಸಿದೆ.

ಹಾಗಿದ್ದರೆ, ಲಾಂಗ್ ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಕೇವಲ ರಜತ್ಗಷ್ಟೇ ಯಾಕೆ ಜೈಲು ಆಗಿದೆ. ವಿನಯ್ ಗೌಡ ಯಾಕಿಲ್ಲ. ಅವರಿಗೆ ಬರೀ 500 ರೂಪಾಯಿಗಳ ದಂಡವನ್ನಷ್ಟೇ ಯಾಕೆ ಕಟ್ಟುವಂತೆ ಹೇಳಲಾಗಿತ್ತು? ಗೆಳೆಯ ರಜತ್ಗೆ ನ್ಯಾಯಾಂಗ ಬಂಧನ ಆಗಿದ್ದಕ್ಕೆ ವಿನಯ್ ಗೌಡ ಕೊಟ್ಟಿರುವ ಪ್ರತಿಕ್ರಿಯೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಈ ಹಿಂದೆ ಲಾಂಗ್ ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ರಜತ್ ಹಾಗೂ ವಿನಯ್ ಗೌಡಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿತ್ತು. ಈ ವೇಳೆ ಪ್ರತಿ ವಿಚಾರಣೆಗೆ ಹಾಜರಾಗುವಂತೆ ರಜತ್ ಹಾಗೂ ವಿನಯ್ ಗೌಡಗೆ ಕೋರ್ಟ್ ಸೂಚನೆಯನ್ನು ನೀಡಿತ್ತು. ಆದರೆ, ರಜತ್ ಈ ವಿಚಾರಣೆ ಹಾಜರಾಗಿರಲಿಲ್ಲ. ಜೊತೆಗೆ ಸೂಕ್ತ ಕಾರಣವನ್ನು ನ್ಯಾಯಾಲಯಕ್ಕೆ ನೀಡಿರಲಿಲ್ಲ.
ಆದರೆ, ವಿನಯ್ ಗೌಡ ಕೂಡ ಪ್ರತಿ ವಿಚಾರಣೆಗೆ ಹಾಜರಾಗಿರಲಿಲ್ಲ. ಆದರೆ, ನ್ಯಾಯಾಲಯಕ್ಕೆ ಆರೋಗ್ಯ ಸಮಸ್ಯೆ ಹಾಗೂ ಶೂಟಿಂಗ್ ಇರುವ ಕಾರಣವನ್ನು ನೀಡಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಕಾರಣಕ್ಕೆ ವಿನಯ್ ಗೌಡ ಎರಡನೇ ಬಾರಿ ಜೈಲಿಗೆ ಹೋಗುವುದರಿಂದ ತಪ್ಪಿಸಿಕೊಂಡಿದ್ದಾರೆ. ಅವರಿಗೆ ನ್ಯಾಯಾಧೀಶರು ಕೇವಲ 500 ರೂಪಾಯಿಗಳ ದಂಡವನ್ನಷ್ಟೇ ವಿಧಿಸಿದ್ದಾರೆ. ಇಂದು (ಏಪ್ರಿಲ್ 16) ಕೋರ್ಟ್ಗೆ ಹಾಜರಾದ ವೇಳೆ ಗೆಳೆಯ ರಜತ್ ಹಾಗೂ ಅವರ ಸ್ನೇಹದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
"ನಾನು ಶೂಟಿಂಗ್ನಲ್ಲಿ ಇದ್ದೆ. ಆಗ ನನಗೆ ವಾರೆಂಟ್ ಜಾರಿಯಾಗಿದೆ ಅಂತ ಹೇಳಿದರು. ನನ್ನದು ಅಪ್ಲಿಕೇಶನ್ ಮೊದಲೇ ಹಾಕಿದ್ದರು. ನನ್ನದೇನು ಸಮಸ್ಯೆ ಆಗಲಿಲ್ಲ. ದಂಡ ಕಟ್ಟಿ ಬಂದಿದ್ದೇನೆ. ನನ್ನ ಕಣ್ಣಿಗೆ ಸಮಸ್ಯೆ ಆಗಿತ್ತು. ಜೊತೆ ಶೂಟಿಂಗ್ ಕೂಡ ಇತ್ತು. ಅದಕ್ಕೆ ಸ್ವಲ್ಪ ಲೇಟ್ ಆಗುತ್ತೆ ಅಂತ ನಾನು ಅಪ್ಲಿಕೇಶನ್ ಹಾಕಿದ್ದೆ. ಅದರಿಂದ ಬಹುಶ: ಈ ವಾರೆಂಟ್ ಬಂದಿರಬೇಕು. ಅವನ ಬಗ್ಗೆ ನಾನೇನು ಮಾತಾಡುವುದಕ್ಕೆ ಆಗುವುದಿಲ್ಲ. ಕೇಸ್ ಕೋರ್ಟ್ನಲ್ಲಿ ಇರುವುದರಿಂದ ಅದರ ಬಗ್ಗೆ ಮಾತಾಡಬೇಡ ಅಂತ ಹೇಳಿದ್ದಾರೆ." ಎಂದು ವಿನಯ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ರಜತ್ಗೆ ಮತ್ತೆ ನ್ಯಾಯಾಂಗ ಬಂಧನ ಆಗಿರುವ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. "ಯಾರೇ ಆಗಲಿ ಜೈಲ್ಗೆ ಹೋಗುವುದೆಲ್ಲ ನೋವು ಆಗಿಯೇ ಆಗುತ್ತೆ. ಇನ್ನೊಂದು ರಜತ್ಗೆ ಜೈಲ್ ಆಗಿದೆ. ಇಲ್ಲವೇ ಕಸ್ಟಡಿ ಆಗಿದೆ ಅನ್ನೋದು ಇನ್ನೂ ನನಗೆ ಗೊತ್ತಿಲ್ಲ. ನನ್ನದೇನಿದೆ ನಾನು ಅದನ್ನು ಮುಗಿಸಿಕೊಂಡು ಹೋಗುತ್ತಿದ್ದೇನೆ. ನನಗೆ ಈ ವಿಷಯ ಕೇಳಿದ ಮೇಲೆ ನಿಜಕ್ಕೂ ಬೇಜಾರು ಆಗುತ್ತಿದೆ." ಎಂದು ವಿನಯ್ ಹೇಳಿದ್ದಾರೆ.
ಹಾಗೆಯೇ "ಅವನು ನನ್ನ ಫ್ರೆಂಡ್, ಅವನು ನನ್ನ ಬ್ರದರ್. ಅವನೇ ಹೇಳಿದ್ದಾನೆ ಅಣ್ಣನ ತರ ಅಂತ. ನನ್ನ ತಮ್ಮನನ್ನು ಹೇಗೆ ಬಿಟ್ಟು ಕೊಡಲಿ ಹೇಳಿ. ಈ ರೀಲ್ಸ್ ಇದೆಲ್ಲವೂ ಬೇರೆ. ನಮ್ಮ ಮಧ್ಯೆ ಇರುವ ಸಂಬಂಧವೇ ಬೇರೆ. ಹೇಗೆ ಇರಲಿ. ಅವನು ತಮ್ಮ ಅಂದ್ಮೇಲೆ ತಮ್ಮನೇ ಅಲ್ವಾ? ನಾನು ಕೋಟಿ ಕೊಟ್ಟರೂ ರಜತ್ ಜೊತೆ ರೀಲ್ಸ್ ಮಾಡೋದಿಲ್ಲ ಅಂತ ಎಲ್ಲೂ ಹೇಳಿಲ್ಲ. ಒಬ್ಬರು ತಮಾಷೆಯಾಗಿ ಕೇಳಿದಾಗ ರಜತ್ ಜೊತೆ ಇನ್ಮೇಲೆ ರೀಲ್ಸ್ ಮಾಡಲ್ಲ ಅಂತ ಹೇಳಿದ್ದು. ಅದನ್ನು ಗಂಭೀರವಾಗಿ ಹೇಳಿದ್ದಲ್ಲ. ತಮಾಷೆಯಾಗಿ ಹೇಳಿದ್ದು ಅಷ್ಟೇ. ಇನ್ನು ಮೀಡಿಯಾಗಳಿಗೆ ರಿಯಾಕ್ಷನ್ ಕೊಡಬಾರದು ಅಂತ ಎಲ್ಲೂ ಹೇಳಿಲ್ಲ. ನನಗೆ ಏನು ಅನಿಸುತ್ತೋ ಅದನ್ನು ಮಾಡಿದ್ದೇನೆ. ನನಗೆ ರಜತ್ ಬಗ್ಗೆ ಕೋಪ ಇದೆ. ಆದರೆ, ಬೇಜಾರು ಏನಿಲ್ಲ." ಎಂದು ವಿನಯ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











