ದಿಢೀರನೇ ಪ್ರಜಾಕೀಯದಲ್ಲಿ ಉಪ್ಪಿ ಆಕ್ಟೀವ್ ಆಗಿದ್ದೇಕೆ? ಪವನ್ ಕಲ್ಯಾಣ್, ವಿಜಯ್ ಹಾದಿ ಹಿಡಿದಿರಬಹುದೇ?
ಸಿನಿಮಾ ಸ್ಟಾರ್ಗಳಿಗೂ ರಾಜಕೀಯಕ್ಕೂ ಬಿಡಲಾರದ ನಂಟು. ಸೂಪರ್ಸ್ಟಾರ್ಗಳು ರಾಜಕೀಯಕ್ಕೆ ಎಂಟ್ರಿ ಕೊಡುವುದು ಹೊಸದೇನು ಅಲ್ಲ. ಸಿನಿಮಾ ಗೆದ್ದು ಬೀಗಿದ ಕೆಲವರಿಗೆ ರಾಜಕೀಯದಲ್ಲಿ ಗೆಲುವು ಸಿಕ್ಕಿದೆ. ಇನ್ನು ಕೆಲವರಿಗೆ ಸಕ್ಸಸ್ ಸಿಕ್ಕಿಲ್ಲ. ಇಂತಹ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಕರ್ನಾಟಕದಲ್ಲಿ ಸಿನಿಮಾ ಮತ್ತು ರಾಜಕೀಯ ಸ್ವಲ್ಪ ವಿಭಿನ್ನವಾಗಿ ಕೆಲಸ ಮಾಡಿದೆ.
ಸಿನಿಮಾದಿಂದ ರಾಜಕೀಯಕ್ಕೆ ಬಂದವರಿಗೆ ಯಶಸ್ಸು ಅಷ್ಟು ಸುಲಭಕ್ಕೆ ಸಿಕ್ಕಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಕಂಡವರಲ್ಲಿ ಬೆರಳೆಣಿಕೆಯಷ್ಟು ಮಂದಿ ಅಷ್ಟೇ ಸಿಗುತ್ತಾರೆ. ಅವರಲ್ಲಿ ರೆಬೆಲ್ಸ್ಟಾರ್ ಅಂಬರೀಶ್, ಸಿಪಿ ಯೋಗೇಶ್ವರ್ ಸಿಗುತ್ತಾರಷ್ಟೇ. ಇನ್ನು ನಿರ್ಮಾಪಕರಾಗಿದ್ದ ಎಚ್ಡಿ ಕುಮಾರಸ್ವಾಮಿ ರಾಜಕೀಯದ ಉತ್ತುಂಗ ಸ್ಥಾನದಲ್ಲಿ ಇದ್ದಾರೆ. ಹಾಗೇ ಉಪೇಂದ್ರ ಕೂಡ ರಾಜಕೀಯದಲ್ಲಿ ಯಶಸ್ಸು ಕಾಣಬಹುದೆಂಬ ನಿರೀಕ್ಷೆಯಿತ್ತು.

ಆದರೆ, ರಾಜಕೀಯದ ಪರಿಕಲ್ಪನೆಯನ್ನು ಒಪ್ಪದೆ ಪ್ರಜಾಕೀಯದ ಪಾಠ ಮಾಡುತ್ತಿದ್ದಾರೆ. ಇಂದಲ್ಲ ನಾಳೆ ಗೆದ್ದೇ ಗೆಲ್ಲುತ್ತೇನೆ ಅನ್ನೋ ಉತ್ಸಾಹದಲ್ಲಿ ಇದ್ದಾರೆ. ಪ್ರಜಾಕೀಯ ಆರಂಭ ಆಗಾದ ಉಪ್ಪಿನೂ ಚುನಾವಣೆಗೆ ನಿಲ್ಲಬಹುದೆಂಬ ನಿರೀಕ್ಷೆಯಿತ್ತು. ಆದರೆ, ಉಪ್ಪಿ ಚುನಾವಣಾ ಕಣಕ್ಕೆ ನಿಲ್ಲಲಿಲ್ಲ. ನಾನು ಸಿಎಂ ಆಗೋದಿಲ್ಲ ಅನ್ನೋ ಹೇಳಿಕೆಯನ್ನು ಕೊಟ್ಟಿದ್ದರು. ಬಳಿಕ ಸೈಲೆಂಟ್ ಆಗಿದ್ದ ಉಪ್ಪಿ, ಈಗ ಮತ್ತೆ ಪ್ರಜಾಕೀಯ ಆಪ್ ಮೂಲಕ ಆಕ್ಟೀವ್ ಆಗಿದ್ದಾರೆ. ಅಸಲಿಗೆ ಈ ನಡೆಯ ಹಿಂದಿನ ಲೆಕ್ಕಾಚಾರವೇನು? ದಿಢೀರನೇ ಉಪ್ಪಿ ಆಕ್ಟಿವ್ ಆಗಿದ್ದು ಯಾಕೆ?
ದಕ್ಷಿಣ ಭಾರತದಲ್ಲಿ ಸಿನಿಮಾ ಮಂದಿ ರಾಜಕೀಯದಲ್ಲಿ ಆಕ್ಟೀವ್ ಆಗಿದ್ದಾರೆ. ಸಿನಿಮಾ ಪ್ರಚಾರದಿಂದ ಹಿಡಿದು ಚುನಾವಣೆಗೆ ಸ್ಪರ್ಧಿಸುವವರೆಗೂ ಆಸಕ್ತಿ ತೋರುತ್ತಿದ್ದಾರೆ. ಉಪ್ಪಿ ಕೂಡ ಪ್ರಜಾಕೀಯ ಪಕ್ಷವನ್ನು ಕಟ್ಟಿದಾಗ, ಅವರ ರಾಜಕೀಯ ಆಸಕ್ತಿಯ ಬಗ್ಗೆ ಚರ್ಚೆಯಾಗಿತ್ತು. ಅವರ ವೃತ್ತಿ ಜೀವನದ ಆರಂಭದಲ್ಲಿಯೇ ರಾಜಕೀಯ ಇಚ್ಛೆಯ ಬಗ್ಗೆ ಆಡಿದ್ದ ಮಾತಿನ ವಿಡಿಯೋ ಒಂದು ವೈರಲ್ ಆಗಿತ್ತು. ಹೀಗಾಗಿ ಪ್ರಜಾಕೀಯದ ಆರಂಭಿಸಿದ ಬಳಿಕ ಉಪ್ಪಿ ಕರ್ನಾಟಕದ ರಾಜಕೀಯದಲ್ಲಿ ಬದಲಾವಣೆ ತರಬಹುದೆಂಬ ನಿರೀಕ್ಷೆಯನ್ನು ಹುಟ್ಟಾಕಿದ್ದರು.
ಆದರೆ, ರಾಜಕೀಯ ಹಾಗೂ ಪ್ರಜಾಕೀಯ ಎರಡನ್ನೂ ಪ್ರತ್ಯೇಕ ಮಾಡಿದ್ದರು. ಪ್ರಜಾಕೀಯದ ಉದ್ದೇಶಗಳನ್ನು ಕೇಳಿದ ಜನರಿಗೆ ಇದು ನಿಜಕ್ಕೂ ಸಾಧ್ಯನಾ ಅಂತ ಅನಿಸಿತ್ತು. ಇನ್ನೊಂದು ಕಡೆ ತಾವೇ ಚುನಾವಣೆಗೆ ಸ್ಪರ್ಧೆ ಮಾಡದೇ ಹಿಂದೆ ಸರಿದಿದ್ದರು. ಇದೆಲ್ಲವೂ ಪ್ರಜಾಕೀಯದ ಉದ್ದೇಶಗಳು ಜನರಿಗೆ ತಲುಪುವಲ್ಲಿ ಹಿಂದೆ ಬಿದ್ದಿದ್ದವು. ಹೀಗಾಗಿ ಜನರು ಕೂಡ ಉಪ್ಪಿ ಪಕ್ಷವನ್ನು ಗಂಭೀರವಾಗಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು. ಈಗ ಉಪ್ಪಿ ದಿಢೀರನೇ ಮತ್ತೆ ಪ್ರಜಾಕೀಯದಲ್ಲಿ ಆಕ್ವೀವ್ ಆಗಿದ್ದಾರೆ. ಅದಕ್ಕೆ ಕಾರಣವೇನಿರಬಹುದು?

ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿವೆ. ನಟ ವಿಜಯ್ ಸ್ವಂತ ಪಕ್ಷ ಕಟ್ಟಿ ರಾಜಕೀಯಕ್ಕೆ ಧುಮುಕಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ವಿಜಯ್ ಪಕ್ಷದ ಮೇಲೆ ಎಲ್ಲರ ಕಣ್ಣಿದೆ. ವಿಜಯ್ ಸಿಎಂ ಆಗದೇ ಹೋದರೂ, ತಮಿಳುನಾಡು ರಾಜಕೀಯದಲ್ಲಿ ಬದಲಾವಣೆ ತರಬಹುದೆಂಬ ನಿರೀಕ್ಷೆಯಿದೆ. ಇತ್ತ ಕಳೆದ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಕ್ಕೆ ಜನ ಬೆಂಬಲ ಸಿಕ್ಕಿತ್ತು. ಹೀಗಾಗಿ ಆಂಧ್ರದ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದೆ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿರೋ ಉಪೇಂದ್ರ ತಮ್ಮ ಪಕ್ಷವನ್ನು ಮುಂದಿನ ಚುನಾವಣೆಗೆ ಬಲ ಪಡಿಸುತ್ತಿರಬಹುದು. ಪವನ್ ಕಲ್ಯಾಣ್ ಹಾಗೂ ವಿಜಯ್ ರಾಜಕೀಯ ನಡೆಯಿಂದ ಪ್ರೇರಣೆ ಹೊಂದಿ ಮತ್ತೆ ಆಕ್ಟೀವ್ ಆಗಿರಬಹುದೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ನಿನ್ನೆ (ಮಾರ್ಚ್ 1) ನಡೆದ ಪತ್ರಿಕಾಗೋಷ್ಠಿಯಲ್ಲಿ ಉಪೇಂದ್ರ 'ದಿ ರಿಯಲ್ ಪ್ರಜಾಕೀಯ' ಆಪ್ ಅನ್ನು ಲಾಂಚ್ ಮಾಡಿದ್ದಾರೆ. ಈ ವೇಳೆ ಚುನಾವಣೆಗೆ ಸ್ಪರ್ಧಿಸುವ ಸುಳಿವನ್ನು ನೀಡಿದ್ದಾರೆ. 2028ಕ್ಕೆ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಇನ್ನು ಎರಡು ವರ್ಷಗಳಲ್ಲಿ ಉಪೇಂದ್ರ ತಮ್ಮ ಪ್ರಜಾಕೀಯವನ್ನು ಬಲಪಡಿಸಲು ಮುಂದಾಗಿರಬಹುದು. ಆದರೆ, ಈ ಎರಡು ವರ್ಷಗಳಲ್ಲಿ ಅವರ ಪ್ರಜಾಕೀಯದ ಉದ್ದೇಶಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗುತ್ತಾರಾ? ಇಲ್ಲಾ ಆಪ್ ಲಾಂಚ್ ಮಾಡಿ ಸೈಲೆಂಟ್ ಆಗುತ್ತಾರಾ? ಈ ಪ್ರಶ್ನೆಗೆ ಮುಂದಿನ ಎರಡು ವರ್ಷಗಳಲ್ಲಿ ಉತ್ತರವಂತೂ ಸಿಕ್ಕೇ ಸಿಗುತ್ತೆ.


Click it and Unblock the Notifications















