ಅಮ್ಮನ ಮೊದಲ ಸಿನಿಮಾ 'ಕೊತ್ತಲವಾಡಿ' ಟೀಸರ್ ಲಾಂಚ್ಗೆ ಯಶ್ ಯಾಕೆ ಬಂದಿಲ್ಲ?
ಇಂದು (ಮೇ 21) ರಾಕಿ ಭಾಯ್ ಯಶ್ ಅವರ ಅಮ್ಮ ಪುಷ್ಪ ಅರುಣ್ ಕುಮಾರ್ ನಿರ್ಮಿಸಿರುವ ಚೊಚ್ಚಲ ಸಿನಿಮಾ 'ಕೊತ್ತಲವಾಡಿ'ಯ ಟೀಸರ್ ರಿಲೀಸ್ ಆಗಿದೆ. ಈ ಇವೆಂಟ್ಗೆ ರಾಕಿಂಗ್ ಸ್ಟಾರ್ ಯಶ್ ಸರ್ಪ್ರೈಸ್ ವಿಸಿಟ್ ಕೊಡಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಯಶ್ ಅನುಪಸ್ಥಿತಿ ಇತ್ತು. ಅಮ್ಮ ನಿರ್ಮಿಸಿದ ಮೊದಲ ಸಿನಿಮಾಗೆ ಯಶ್ ಯಾಕೆ ಬಂದಿಲ್ಲ ಎನ್ನುವ ಗೊಂದಲ ಎಲ್ಲರಲ್ಲೂ ಇತ್ತು. ಅದಕ್ಕೆ ಪುಷ್ಪ ಅರುಣ್ ಕುಮಾರ್ ಅವರೇ ಉತ್ತರ ಕೊಟ್ಟಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಂತೆಯೇ ಅವರ ಅಮ್ಮ ಪುಷ್ಪ ಅರುಣ್ ಕುಮಾರ್ ಕೂಡ ಅಷ್ಟೇ ಖಡಕ್. ತನಗೆ ಅನಿಸಿದ್ದನ್ನು ನೇರವಾಗಿ ಹೇಳುವ ವ್ಯಕ್ತಿತ್ವ. ಈಗ ಮಗನ ಹೆಸರನ್ನು ಬಳಸಿಕೊಳ್ಳದೆ, ಸಿನಿಮಾ ನಿರ್ಮಾಣ ಮಾಡಿ ಗೆಲ್ಲಬೇಕು ಎನ್ನುವ ಛಲ. ಅದಕ್ಕೆ ಟೀಸರ್ ಲಾಂಚ್ನಲ್ಲಿ ರಾಕಿ ಭಾಯ್ ಯಶ್ ಕೂಡ ಬಂದಿಲ್ಲ. ಅವರ ಸೊಸೆ ರಾಧಿಕಾ ಪಂಡಿತ್ ಅನುಪಸ್ಥಿತಿ ಕೂಡ ಎದ್ದು ಕಾಣುತ್ತಿತ್ತು.

ಮನೆಯಲ್ಲಿ ಯಶ್ ಅಂತ ಸೂಪರ್ ಸ್ಟಾರ್ ಅನ್ನು ಇಟ್ಕೊಂಡು ಪ್ರಚಾರಕ್ಕೆ ಯಾಕೆ ಬಳಸಿಕೊಳ್ಳುತ್ತಿಲ್ಲ ಅನ್ನೋ ಗೊಂದಲ ಎಲ್ಲರಲ್ಲೂ ಇತ್ತು. 'ಕೊತ್ತಲವಾಡಿ' ಸಿನಿಮಾ ಅನೌನ್ಸ್ ಆದಲ್ಲಿಂದ ಎಲ್ಲಿಯೂ ಯಶ್ ಹೆಸರು ಕಂಡಿಲ್ಲ. ಪೋಸ್ಟರ್ನಲ್ಲಿ ಬ್ಯಾನರ್ನಲ್ಲಿ ಯಾವುದರಲ್ಲೂ ಯಶ್ ಹೆಸರು ಕೂಡ ಇಲ್ಲ. ಹೀಗಾಗಿ ಅಮ್ಮ ನಿರ್ಮಿಸಿದ ಮೊದಲ ಸಿನಿಮಾದ ಟೀಸರ್ ಲಾಂಚ್ಗೆ ಯಶ್ ಯಾಕೆ ಬಂದಿಲ್ಲ? ಈ ಪ್ರಶ್ನೆಗೆ ಇದೇ ಇವೆಂಟ್ನಲ್ಲಿ ಉತ್ತರ ಕೂಡ ಸಿಕ್ಕಿದೆ.
ಪಿಎ ಪ್ರೊಡಕ್ಷನ್ಸ್ ಬ್ಯಾನರ್ ಅನ್ನು ಹುಟ್ಟಾಕಿರುವ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಉತ್ಸಾಹದಲ್ಲಿದ್ದಾರೆ. ಈ ಪ್ರೊಡಕ್ಷನ್ ಹೌಸ್ ಮೂಲಕ ಹೊಸಬರಿಗೆ ಹಾಗೂ ಕನ್ನಡದ ನಟರಿಗೆ ಅವಕಾಶ ಕೊಡಬೇಕು ಎಂದು ತೀರ್ಮಾನ ಮಾಡಿದ್ದಾರೆ. ಅದರ ಮೊದಲ ಪ್ರಯತ್ನವೇ 'ಕೊತ್ತಲವಾಡಿ' ಸಿನಿಮಾ. ಪೃಥ್ವಿ ಅಂಬಾರ್ ಹಾಗೂ ಕಾವ್ಯ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೆಲ್ಲ ಓಕೆ, ಆದರೆ, ಅಮ್ಮ ನಿರ್ಮಿಸಿದ ಸಿನಿಮಾದ ಪ್ರಚಾರದಲ್ಲಿ ಯಶ್ ಯಾಕಿಲ್ಲ? ಎಂಬ ಪ್ರಶ್ನೆಗೆ ಅವರ ಅಮ್ಮ ಕೊಟ್ಟ ಉತ್ತರ ಹೀಗಿತ್ತು.
"ಅವನು ಶೂಟಿಂಗ್ ಅಂತ ಮುಂಬೈನಲ್ಲಿ ಇದ್ದಾನೆ. ಒಂದೂವರೆ ವರ್ಷ, ಎರಡು ವರ್ಷ ಫ್ರೀ ಇಲ್ಲ ಅಮ್ಮ ಅಂತ ಹೇಳಿದ್ದಾನೆ. ಅವನು ಮನೆಗೆ ಬರಬೇಕು ಅಂದರೂ ಪರ್ಮಿಷನ್ ಸಿಗುತ್ತಿಲ್ಲ. ಎಲ್ಲ ಜನರಿಗೋಸ್ಕರ ಮಾಡುತ್ತಿದ್ದಾನೆ" ಎಂದು 'ಕೊತ್ತಲವಾಡಿ' ಟೀಸರ್ ಲಾಂಚ್ಗೆ ಯಶ್ ಯಾಕೆ ಬಂದಿಲ್ಲ ಎನ್ನುವುದನ್ನು ಪುಷ್ಪ ಅರುಣ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪುಷ್ಪ ಅರುಣ್ ಕುಮಾರ್ ಇದೇ ಇವೆಂಟ್ನಲ್ಲಿ ಮಗನ ಹೆಸರಿಟ್ಟುಕೊಂಡು ಬೆಳೆಯುವುದಕ್ಕೆ ಇಷ್ಟವಿಲ್ಲ ಎಂದು ಹೇಳಿಕೊಂಡಿದ್ದಾರೆ. ಯಶ್ ಈಗಾಗಲೇ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಈ ವೇಳೆ ಅವರಿಗೂ ಚಿತ್ರರಂಗದಲ್ಲಿ ಏನಾದರೂ ಕೆಲಸ ಮಾಡಬೇಕು ಎಂದು ನಿರ್ಧರಿಸಿದ್ದರು. ತಮ್ಮದೂ ಒಂದು ಹೆಸರು ಇರಬೇಕು ಎಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.
"ಯಶ್ಗೆ ಗೊತ್ತಿರುತ್ತೆ. ಏನೋ ಅಮ್ಮ ಮಾಡುತ್ತಿದ್ದಾರೆ ಮಾಡಲಿ ಅಂತ ಇದ್ದಾನೆ. ಅವನಿಗೆ ಗೊತ್ತಿಲ್ಲದೆ ಇರೋದು ಏನೂ ಇರಲ್ಲ. ನಮ್ಮ ಮನೆಯಲ್ಲಿ ಅವನು ಮಾಡುತ್ತಿರುವುದಕ್ಕೆ ನಾವು ತಲೆ ಹಾಕಲ್ಲ. ನಾವು ಏನಾದರೂ ಮಾಡುತ್ತಿದ್ದರೆ, ಅವನು ತಲೆ ಹಾಕಲ್ಲ. ಅವನು ಅಷ್ಟು ಸಿನಿಮಾಗಳನ್ನು ಮಾಡುತ್ತಿದ್ದಾನೆ. ನಾನು ಒಂದು ದಿನನೂ ಸೆಟ್ಟಿಗೆ ಹೋಗಿ ನೋಡಿಲ್ಲ. ಅವನಿಗೆ ಗೊತ್ತಿರುತ್ತೆ" ಎಂದು ಪುಷ್ಪ ಅರುಣ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. "ನಾನು ಮಾಡುತ್ತಿರುವ ಪ್ರಯತ್ನ ಯಾರಿಗೂ ಗೊತ್ತಿಲ್ಲ. ಮಗನಿಗೂ ಗೊತ್ತಿರಲಿಲ್ಲ, ಮಗಳಿಗೂ ಗೊತ್ತಿರಲಿಲ್ಲ, ಸೊಸೆಗೂ ಗೊತ್ತಿರಲಿಲ್ಲ." ಎಂದು ಹೇಳಿದ್ದಾರೆ.


Click it and Unblock the Notifications











