ನಾಲ್ಕೈದು ಬಾರಿ ನೋಡಿದ್ರೇನೆ ಅರ್ಥ ಆಗೋದು ಅನ್ನೋರು ಇನ್ನೊಂದು ಸಾರಿ ಥಿಯೇಟರ್ಗೆ ಬಂದು ಸಿನಿಮಾ ನೋಡ್ತಿದ್ದಾರಾ?
ಒಂದು ಸಿನಿಮಾ ಈ ಮಟ್ಟಿಗೆ ನಿರೀಕ್ಷೆಯನ್ನು ಹುಟ್ಟಾಕಬೇಕು. ಪದೇ ಪದೆ ಹೋಗಿ ಸಿನಿಮಾ ನೋಡಬೇಕು. ಇದು ಉಪೇಂದ್ರ ಅವರ ಸಿದ್ಧ ಸೂತ್ರ. ಈ ಹಿಂದೆ ನಿರ್ದೇಶಿಸಿದ ಸಿನಿಮಾಗಳು ಕೂಡ ಹಾಗೇ ಇದ್ದವು. 'ಎ', 'ಉಪೇಂದ್ರ', 'ಉಪ್ಪಿ 2' ಸಿನಿಮಾಗಳು ಗೆದ್ದಿದ್ದು ಉಪ್ಪಿಯ ಇದೇ ಫಾರ್ಮೂಲ ಇಟ್ಟುಕೊಂಡು. 'ಯುಐ' ಸಿನಿಮಾ ಕೂಡ ಇದೇ ಐಡಿಯಾ ಇಟ್ಟುಕೊಂಡೇ ಮಾಡಿದಂತೆ ಇದೆ.
ಉಪೇಂದ್ರ ನಿರ್ದೇಶನದ ಸಿನಿಮಾಗೆ ಕ್ರೇಜಿ ಫ್ಯಾನ್ ಫಾಲೋವಿಂಗ್ ಇದೆ. ಅವರು ನಟಿಸಿದ ಸಿನಿಮಾ ಇಷ್ಟ ಪಡುತ್ತಾರೋ ಇಲ್ಲವೋ. ಆದರೆ, ಅವರು ನಿರ್ದೇಶಿಸಿದ ಸಿನಿಮಾಗಳನ್ನಂತೂ ಸೋಲಿಸಿದ ಉದಾಹರಣೆಗಳಿಲ್ಲ. ಸ್ವಲ್ಪ ಕಲೆಕ್ಷನ್ ಕಡಿಮೆ ಆಗಿರಬಹುದಷ್ಟೇ. ಆದ್ರೀಗ ಆಡಿಯನ್ಸ್ ಕೂಡ ಅಷ್ಟೇ ಬುದ್ದಿವಂತರಾಗಿದ್ದಾರೆ. ಉಪ್ಪಿ ಕೋಡ್ ಹಾಕಿ ಸಿನಿಮಾ ಮಾಡಿದರೂ ಅದನ್ನು ಕೆಲವರಂತೂ ಡಿ ಕೋಡ್ ಮಾಡಿ ನೋಡುತ್ತಿದ್ದಾರೆ.

ಮೊದಲನೇ ದಿನ ಕೆಲವರು 'ಯುಐ' ಸಿನಿಮಾ ನೋಡಿ ತಲೆಗೆ ಹುಳಬಿಟ್ಟುಕೊಂಡು ಬಂದಿದ್ದರು. ಅವರಿಗೆ ಸಿನಿಮಾ ಅರ್ಥ ಆಗಿರಲಿಲ್ಲ. ನಾಲ್ಕೈದು ಬಾರಿ ಸಿನಿಮಾ ನೋಡಬೇಕು ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇನ್ನು ಕೆಲವರು ಬೇಸರ ವ್ಯಕ್ತಪಡಿಸಿದ್ದರು. ಸಿನಿಮಾ ರಿಲೀಸ್ ಆಗಿ ಎರಡನೇ ದಿನಕ್ಕೆ ಕಾಲಿಟ್ಟಿದೆ. ನಾಲ್ಕೈದು ಬಾರಿ ಸಿನಿಮಾ ನೋಡಬೇಕು ಅಂತ ಅಭಿಪ್ರಾಯ ಪಟ್ಟವರು ಮತ್ತೆ ಮತ್ತೆ ನೋಡುತ್ತಿದ್ದಾರಾ? ಎರಡನೇ ದಿನ ಹೇಗಿದೆ ಕ್ರೇಜ್?
ಉಪೇಂದ್ರ ನಿರ್ದೇಶಿಸಿದ ಸಿನಿಮಾಗಳಿಗೆ ಮಿಶ್ರ ಪ್ರತಿಕ್ರಿಯೆ ಸಿಗೋದು ಕಾಮನ್. ಆದರೆ, ಕ್ರೇಜ್ ಹೇಗಿದೆ ಅಂದರೆ, ಸಿನಿಮಾ ಚೆನ್ನಾಗಿಲ್ಲ ಅಂದರೂ ಯಾಕೆ ಚೆನ್ನಾಗಿಲ್ಲ ಅಂತನಾದ್ರೂ ನೋಡುವುದಕ್ಕೆ ಕೆಲ ಪ್ರೇಕ್ಷಕರು ಹೋಗುತ್ತಾರೆ. 'ಯುಐ' ಕೂಡ ಅದೇ ರೀತಿಯ ಟ್ರೆಂಡ್ ಅನ್ನು ಹುಟ್ಟಾಕಿದೆ. ಉಪ್ಪಿಯ 'ಯುಐ' ನೋಡಿ ಮೊದಲ ದಿನ ಕೆಲವರು ಚೆನ್ನಾಗಿದೆ ಎಂದಿದ್ದರು. ಮತ್ತೆ ಕೆಲವರು ಬೇಸರ ಹೊರ ಹಾಕಿದ್ದರು.

ಎರಡನೇ ದಿನಕ್ಕೆ 'ಯುಐ' ಕಂಪ್ಲೀಟ್ ಆಗಿ ಡ್ರಾಪ್ ಆಗುತ್ತೆ ಅಂತಲೇ ಭವಿಷ್ಯ ನುಡಿದಿದ್ದರು ಸಿನಿಮಾ ಮಂದಿ. ಆದರೆ, ಎರಡನೇ ದಿನ ಬುಕ್ ಮೈ ಶೋನಲ್ಲಿ 'ಯುಐ' ಬುಕಿಂಗ್ ಆಗುತ್ತಿದೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ 'ಯುಐ' ಸಿನಿಮಾ ನೋಡುವುದಕ್ಕೆ ಜನರು ಆಸಕ್ತಿ ತೋರಿಸುತ್ತಿದ್ದಾರೆ. ಬುಕ್ ಮೈ ಶೋನಲ್ಲಿ ಇದೂವರೆಗೂ ಕೇವಲ ಬೆಂಗಳೂರಿನಲ್ಲಿ ಸುಮಾರು 124 ಶೋಗಳು ಫಾಸ್ಟ್ ಫಿಲಿಂಗ್ ಆಗಿವೆ. ಹೀಗಾಗಿ ಸಂಜೆ ಶೋಗಳಿಗೆ ಇನ್ನೂ ಹೆಚ್ಚಿನ ರೆಸ್ಪಾನ್ಸ್ ಸಿಗಬಹುದು ಎಂಬ ನಿರೀಕ್ಷೆಯಿದೆ.
ಇನ್ನು ಆಡಿಯನ್ಸ್ ಉಪೇಂದ್ರ ಡೈಲಾಗ್ಸ್ ಕಿಕ್ ಕೊಡುತ್ತಿದ್ದವು. ಈ ಬಾರಿ ಅವರು ಡೈಲಾಗ್ಗಳು ಹೆಚ್ಚೇನು ಕಿಕ್ ಕೊಟ್ಟಿಲ್ಲ. ಆದರೂ, ಹಣ್ಣು ಹಾಗೂ ಹೆಣ್ಣಿನ ಬಗ್ಗೆ ಉಪ್ಪಿ ಹೇಳಿದ ಡೈಲಾಗ್ ಅಭಿಮಾನಿಗಳಿಗೆ ಸಖತ್ ಇಷ್ಟ ಆಗಿದೆ. "ಕಚ್ಚಿರೋ ಆಪಲ್ಗಿಂತ ಬಿಚ್ಚಿರುವ ಹುಡುಗಿಗೆ ಲೈಫ್ ಜಾಸ್ತಿ. ಸೂಪರ್ ಆಗಿದೆ ಸಿನಿಮಾ ನಾಲ್ಕು ಬಾರಿ ಸಿನಿಮಾ ನೋಡಬೇಕು. ಹಾಗಿದ್ದರೆ ಮಾತ್ರ ಫೋಕಸ್ ಸಿಗೋದು. ಅರ್ಥ ಆಗೋದು." ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
ಹಾಗೇ ಎರಡೆರಡು ಬಾರಿ ಸಿನಿಮಾ ನೋಡಿದರೂ ಅರ್ಥ ಆಗದವರು "ಉಪೇಂದ್ರ ಅವರನ್ನು ಹುಡುಕಿಕೊಂಡು ಹೋಗಿ ಕೇಳಿ. ಅವರೇ ಕಥೆ ಹೇಳ್ತಾರೆ." ಅಂತ ರೊಚ್ಚಿಗೆದ್ದಿದ್ದಾರೆ. ಮತ್ತೊಂದು ಕಡೆ "ಉಪೇಂದ್ರ ಅವರು ತಲೆಗೆ ಹುಳ ಬಿಡೋದು ಇನ್ನೂ ಬಿಟ್ಟಿಲ್ಲ" ಎಂದಿದ್ದಾರೆ. "ಜನರು ಕೆಜಿಎಫ್ ಪ್ಯಾಟ್ರನ್ ಅನ್ನು ಮರೆತು ಬಿಡಬೇಕು. ಕ್ಯಾರಿ ಫಾರ್ವರ್ಡ್ ಮಾಡಬಾರದು. ಇದೇ ಬೇರೆನೇ ಶೇಡ್ ಸಿನಿಮಾ" ಎಂದಿದ್ದಾರೆ. ಇನ್ನೊಬ್ಬರಿಗೆ "ಉಪೇಂದ್ರ ಅವರು ಏನು ಹೇಳಬೇಕು ಅಂತಿದ್ದರಲ್ಲ ಅದನ್ನು ಈ ಹಿಂದೆನೇ ಹೇಳಬೇಕಿತ್ತು. ಸ್ವಲ್ಪ ಹಿಂದೆ ಮುಂದೆ ಆಗಿದೆ." ಎಂದು ಅಭಿಪ್ರಾಯ ಪಟ್ಟಿದ್ದಾರೆ. ಒಟ್ನಲ್ಲಿ ಎರಡನೇ ದಿನ ಉಪ್ಪಿ ಸಿನಿಮಾಗೆ ಮಧ್ಯಾಹ್ನದ ವೇಳೆ ಶೇ.50 ರಿಂದ ಶೇ.60ರಷ್ಟು ರೆಸ್ಪಾನ್ಸ್ ಸಿಕ್ಕಿದೆ. ಸಂಜೆ ಹಾಗೂ ರಾತ್ರಿ ಶೋಗಳು ಹೇಗಿರುತ್ತೆ ಅನ್ನೋದು ನೋಡಬೇಕಿದೆ.


Click it and Unblock the Notifications











