ಸ್ಟಾರ್ಗಿರಿ ಪಕ್ಕಕ್ಕಿಟ್ಟು ಕಿರಾಣಿ ಅಂಗಡಿಯ ಐಸ್ ಕ್ಯಾಂಡಿ ಸವಿದ ರಾಧಿಕಾ ಪಂಡಿತ್; ಯಶ್ ಸರಳತೆಗೆ ಅಪ್ಪು ನೆನೆದ ಫ್ಯಾನ್ಸ್!
ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗೆ ತಮ್ಮ ಆಪ್ತ ಪಾನಿಪುರಿ ಕಿಟ್ಟಿಯ ಜಿಮ್ ಉದ್ಘಾಟನೆಗೆ ಬಂದಿದ್ದರು. ಈ ವೇಳೆ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಚಿತ್ರರಂಗಕ್ಕೂ ಒಂದಿಷ್ಟು ಸಲಹೆಗಳನ್ನು ನೀಡಿದ್ದರು. ಅದರ ಹಿಂದೆನೇ ಯಶ್ ಹಾಗೂ ರಾಧಿಕಾ ಪಂಡಿತ್ ಫ್ಯಾಮಿಲಿ ಭಟ್ಕಳದ ಶಿರಾಲಿಯ ಚಿತ್ರಾಪುರ ಮಠದಲ್ಲಿ ಪ್ರತ್ಯಕ್ಷ ಆಗಿದ್ದರು. ಈ ವೇಳೆ ಸೆರೆ ಹಿಡಿದ ಕೆಲ ಫೋಟೊಗಳು ಅಭಿಮಾನಿಗೆ ತುಂಬಾನೇ ಇಷ್ಟ ಆಗಿದೆ.
ನಿನ್ನೆ (ಫೆಬ್ರವರಿ 16) ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಫ್ಯಾಮಿಲಿ ಜೊತೆಗೆ ಭಟ್ಕಳಕ್ಕೆ ಬಂದಿದ್ದರು. ಶಿರಾಲಿಯ ಚಿತ್ರಾಪುರ ಮಠಕ್ಕೆ ಭೇಟಿ ಮಾಡಿ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಜೊತೆ ಮಾತುಕತೆ ನಡೆಸಿದರು. ಯಶ್ ಆಗಮಿಸಿದ ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿಗಳು ಕೂಡ ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಯಶ್ ಚಿತ್ರಾಪುರ ಮಠದ ಸ್ವಾಮೀಜಿ ಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಬಳಿಕ 2 ಗಂಟೆಗೂ ಅಧಿಕ ಕಾಲ ಸ್ವಾಮೀಜಿ ಜೊತೆಗೆ ಚರ್ಚೆ ಮಾಡಿದ್ದರು. ಅಸಲಿಗೆ ಇಬ್ಬರ ಭೇಟಿಯ ಹಿನ್ನೆಲೆ ಏನು? ನಡೆದ ಚರ್ಚೆ ಏನು? ಅನ್ನುವುದು ಬಹಿರಂಗಗೊಂಡಿಲ್ಲ. ಆದರೆ, ಯಶ್ ಕುಟುಂಬದೊಂದಿಗೆ ಆಗಮಿಸಿ ಸ್ವಾಮೀಜಿಯ ಆಶೀರ್ವಾದ ಪಡೆಯಲು ಬಂದಿದ್ದರು ಎಂದು ಮೂಲಗಳು ಹೇಳುತ್ತಿವೆ. ಆದರೆ, ಇದೇ ಸಂದರ್ಭದಲ್ಲಿ ಯಶ್ ಕಿರಾಣಿ ಅಂಗಡಿಗೆ ತೆರಳಿ ಪತ್ನಿ ರಾಧಿಕಾ ಪಂಡಿತ್ಗೆ ಐಸ್ ಕ್ಯಾಂಡಿ ಕೊಡಿಸಿದ್ದ ಫೋಟೊಗಳು ವೈರಲ್ ಆಗುತ್ತಿವೆ.
ಹೌದು, ಚಿತ್ರಾಪುರ ಮಠಕ್ಕೆ ಭೇಟಿ ಕೊಟ್ಟು ಹೊರಬಂದ ಬಳಿಕ ಕೆಲವು ಸಮಯ ಅಲ್ಲೇ ಸುತ್ತಮುತ್ತ ತಿರುಗಾಡಿದ್ದಾರೆ. ಅಲ್ಲಿನ ಕಿರಾಣಿ ಅಂಗಡಿಗೆ ತೆರಳಿ ತಿನಿಸುಗಳನ್ನು ಖರೀದಿ ಮಾಡಿದ್ದಾರೆ. ಈ ವೇಳೆ ಪತ್ನಿ ರಾಧಿಕಾ ಪಂಡಿತ್ಗೆ ಅದೇ ಕಿರಾಣಿ ಅಂಗಡಿಯಿಂದ ಐಸ್ ಕ್ಯಾಂಡಿ ಕೊಡಿಸಿದ್ದಾರೆ. ರಾಧಿಕಾ ಪಂಡಿತ್ ಕೂಡ ಲೋಕಲ್ ಐಸ್ ಕ್ಯಾಂಡಿ ಸವಿಯುತ್ತಿರುವುದು ಫೋಟೊಗಳಲ್ಲಿ ಸೆರೆಯಾಗಿದೆ.

ರಾಕಿಂಗ್ ಸ್ಟಾರ್ ದಂಪತಿ ಮಠದ ಬೀದಿಯಲ್ಲಿರುವ ಅಂಗಡಿಗೆ ತೆರಳಿ ತಿಂಡಿ ತಿನಿಸು ಖರೀದಿಸಿದ ಫೋಟೊಗಳು ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಈ ವೇಳೆ ಯಶ್ ಹಾಗೂ ರಾಧಿಕಾ ಪಂಡಿತ್ ನೋಡಲು ಬಂದ ಅಭಿಮಾನಿಗಳೊಂದಿಗೂ ಕಾಲ ಕಳೆದಿದ್ದಾರೆ. ಅವರೊಂದಿಗೆ ಕೆಲ ಕಾಲ ಹರಟೆ ಹೊಡೆದಿದ್ದಾರೆ. ಜೊತೆಗೆ ಕೆಲವರಿಗೆ ಆಟೋಗ್ರಾಫ್, ಸೆಲ್ಫಿ ಕೂಟ್ಟು, ಅವರ ಜೊತೆಯಲ್ಲಿ ನಿಂತು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.
ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಮತ್ತೆ ಕೆಲವರು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ. ಅಪ್ಪು ಕೂಡ ಹೀಗೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುತ್ತಿದ್ದರು. ಯಶ್ ಕೂಡ ಹಾಗೇ ಇದ್ದಾರೆ. ಇದೇ ಕಾರಣಕ್ಕೆ ಯಶ್ ಕೂಡ ತುಂಬಾನೇ ಇಷ್ಟ ಆಗುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ಗಳನ್ನು ಮಾಡುತ್ತಿದ್ದಾರೆ.
ಚಿತ್ರಾಪುರ ಮಠಕ್ಕೆ ಯಶ್ ಹಾಗೂ ರಾಧಿಕಾ ಪಂಡಿತ್ ಜೊತೆಗೆ ಅವರ ಮಗಳು ಐರಾ, ಪುತ್ರ ಯಥರ್ವ ಕೂಡ ಭೇಟಿ ಕೊಟ್ಟಿದ್ದರು. ಇವರೊಂದಿಗೆ ರಾಧಿಕಾ ಪಂಡಿತ್ ತಂದೆ-ತಾಯಿ ಕೂಡ ಜೊತೆಗಿದ್ದರು. ಒಟ್ನಲ್ಲಿ ಯಶ್ ಸರಳತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಎಷ್ಟೇ ಎತ್ತರಕ್ಕೆ ಬೆಳೆದರೂ ಇದೇ ಸರಳತೆ ಇರಲಿ ಅಂತಾನೂ ಕಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











