ಇದು ರಾಕಿ ಭಾಯ್ ನಿರ್ಮಾಣದ 'ರಾಮಾಯಣ'? ಯಶ್ 'ರಾವಣ'ನಾಗುತ್ತಾರೋ ಇಲ್ವೋ?
'ಕೆಜಿಎಫ್ 2' ಸಿನಿಮಾವೇ ರಾಕಿಂಗ್ ಸ್ಟಾರ್ ಯಶ್ ಕನಸು ಅಂದುಕೊಂಡಿದ್ದವರಿಗೆ ಸರ್ಪ್ರೈಸ್ ಸಿಕ್ಕಿದೆ. ಇಲ್ಲಿವರೆಗೂ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಬಾಲಿವುಡ್ ಸಿನಿಮಾ 'ರಾಮಾಯಣ'ದಲ್ಲಿ ರಾವಣನಾಗಿ ಯಶ್ ನಟಿಸುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿತ್ತು. ಆದ್ರೀಗ ಯಶ್ ಫ್ಯಾನ್ಸ್ಗೆ ಅದಕ್ಕಿಂತ ದೊಡ್ಡ ಸುದ್ದಿಯೊಂದು ಸಿಕ್ಕಿದೆ.
ಭಾರತದ ದಂತಕಥೆ 'ರಾಮಾಯಣ' ಸಿನಿಮಾ ಮಾಡುವುದು ಅಷ್ಟು ಸುಲಭದ ಕೆಲಸ ಅಲ್ಲ. ಸ್ವಲ್ಪ ಯಾಮಾರಿದರೂ 'ಆದಿಪುರುಷ್'ಗೆ ಆದ ಸ್ಥಿತಿಯೇ ಈ ಸಿನಿಮಾಗೂ ಆಗುತ್ತೆ. ಅದಕ್ಕೆ ಸಾಕಷ್ಟು ಸಂಶೋಧನೆ ಮಾಡಿ 'ದಂಗಲ್' ಅಂತಹ 2 ಸಾವಿರ ಕೋಟಿ ರೂಪಾಯಿ ಸಿನಿಮಾ ಕೊಟ್ಟಿರುವ ನಿತೇಶ್ ತಿವಾರಿ ಈ ಸಾಹಸಕ್ಕೆ ಕೈ ಹಾಕಿದ್ದಾರೆ.

ಈಗ ಸರ್ಪ್ರೈಸ್ ಏನಂದ್ರೆ, ಇದೂವರೆಗೂ 'ರಾಮಾಯಣ'ದಲ್ಲಿ ರಾವಣನಾಗಿ ಯಶ್ ನಟಿಸುತ್ತಾರೆ ಅನ್ನೋ ಮಾತು ಕೇಳಿ ಬರುತ್ತಿತ್ತು. ಆದ್ರೀಗ ಯಶ್ ಈ ಬಹುಕೋಟಿ ವೆಚ್ಚದ 'ರಾಮಾಯಣ'ವನ್ನು ನಿರ್ಮಾಣ ಮಾಡುತ್ತಿದ್ದಾರೆ ಅನ್ನೋದು ಕನ್ನಡಿಗರಿಗೆ ದೊಡ್ಡ ಸರ್ಪ್ರೈಸ್. ಬಾಲಿವುಡ್ನ ಮತ್ತೊಬ್ಬ ನಿರ್ಮಾಪಕ ನಮಿತ್ ಮಲ್ಹೋತ್ರಾ ಜೊತೆ ಕೈ ಜೋಡಿಸಿ ಯಶ್ 'ರಾಮಾಯಣ' ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದಾರೆ.
'ರಾಮಾಯಣ'ಕ್ಕೆ ಯಶ್ ನಿರ್ಮಾಪಕ
ಹೌದು, 'ರಾಮಾಯಣ' ಸಿನಿಮಾದ ನಿರ್ಮಾಪಕರಲ್ಲಿ ಯಶ್ ಕೂಡ ಒಬ್ಬರು. ರಾಕಿ ಭಾಯ್ ಒಡೆತನದ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ ಈ ಪೌರಾಣಿಕ ಸಿನಿಮಾವನ್ನು ನಮಿತ್ ಮಲ್ಹೋತ್ರಾ ಒಡೆತನದ ಪ್ರೈಮ್ ಫೋಕಸ್ ಸ್ಟುಡಿಯೋ ಜೊತೆ ಸೇರಿಸಿಕೊಂಡು ನಿರ್ಮಾಣ ಮಾಡುವುದಕ್ಕೆ ಮುಂದಾಗಿದೆ. ಇದು ಯಶ್ ವೃತ್ತಿ ಬದುಕಿನ ಅತೀ ದೊಡ್ಡ ಹೆಜ್ಜೆ ಎಂದು ಹೇಳಬಹುದು.
'ರಾಮಾಯಣ'ದ ಬಗ್ಗೆ ಏನಂತಾರೆ ಯಶ್?
"ಭಾರತೀಯ ಸಿನಿಮಾವನ್ನು ವಿಶ್ವ ಮಟ್ಟಕ್ಕೆ ತೆಗೆದುಕೊಂಡು ಹೋಗುವುದು ನನ್ನ ಬಹುದಿನಗಳ ಕನಸು. ಆ ಹುಡುಗಾಟದಲ್ಲಿ ಇದ್ದಾಗ, ನಾನು ಅತ್ಯುತ್ತಮ VFC ಸ್ಟುಡಿಯೋವನ್ನು ಕಂಡುಕೊಂಡಿದ್ದೇನೆ. ಅದರ ಹಿಂದಿನ ಪ್ರೇರಕ ಶಕ್ತಿ ಒಬ್ಬ ಭಾರತೀಯ. ನಾವು ಸಿನಿಮಾ ರಂಗದ ಬೇರೆ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾಗ, ರಾಮಾಯಣ ವಿಷಯ ಕೂಡ ಬಂದಿತ್ತು. ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸುವ ಸಿನಿಮಾ ಇದಾಗಿದ್ದು, ಈ ಮಹಾಕಾವ್ಯ ಸಿನಿಮಾ ರೂಪ ಪಡೆಯುತ್ತಿದೆ. " ಎಂದು ಯಶ್ 'ರಾಮಾಯಣ'ದ ಸಿನಿಮಾದ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ.

ರಾವಣನಾಗಿ ನಟಿಸುತ್ತಾರೋ ಇಲ್ವೋ?
ರಾಕಿ ಭಾಯ್ 'ರಾಮಾಯಣ'ದಂತಹ ಸಿನಿಮಾಗೆ ಕೈ ಹಾಕಿದ್ದು ನೋಡಿದರೆ, ರಾವಣನಾಗಿ ನಟಿಸುತ್ತಾರಾ? ಅನ್ನೋ ಅನುಮಾನ ಮೂಡುವುದಕ್ಕೆ ಶುರುವಾಗಿದೆ. ಬಾಲಿವುಡ್ನ ಈ ಬಹುಕೋಟಿ ವೆಚ್ಚದ ಸಿನಿಮಾದಲ್ಲಿ ರಾಕಿ ಭಾಯ್ಯನ್ನು 'ರಾವಣ'ನಾಗಿ ತೆರೆಮೇಲೆ ನೋಡಬೇಕು ಅನ್ನೋದು ಅವರ ಅಭಿಮಾನಿಗಳ ಕನಸು. ಆ ಕನಸನ್ನು ಯಶ್ ಈಡೇರಿಸುತ್ತಾರಾ? ಇಲ್ವಾ? ಅನ್ನೋ ಗೊಂದಲ ಶುರುವಾಗಿದೆ.
ಯಶ್ ಲೆಕ್ಕಾಚಾರವೇನು?
ಕೆಲವು ದಿನಗ ಹಿಂದಷ್ಟೇ ಯಶ್ 'ರಾವಣ'ನಾಗಿ ನಟಿಸುವುದಕ್ಕೆ 80 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದರು ಎನ್ನಲಾಗಿತ್ತು. ಬಳಿಕ ಅದೇ ಹಣವನ್ನು 'ರಾಮಾಯಣ' ಸಿನಿಮಾದಲ್ಲಿ ಹೂಡಿಕೆ ಮಾಡಿದ್ದು ನಿರ್ಮಾಪಕನಾಗುತ್ತಿದ್ದಾರೆ ಎನ್ನಲಾಗಿತ್ತು. ಯಾಕಂದ್ರೆ, ಈಗಾಗಲೇ ಯಶ್ ನಟಿಸುತ್ತಿರುವ 'ಟಾಕ್ಸಿಕ್' ಸಿನಿಮಾವನ್ನು ಕೆವಿನ್ ಪ್ರೊಡಕ್ಷನ್ ಜೊತೆ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ 'ರಾಮಾಯಣ'ದಲ್ಲಿ ರಾವಣನಾಗುವುದಕ್ಕಿಂತ ನಿರ್ಮಾಪಕನಾಗುವುದಕ್ಕೆ ಹೆಚ್ಚು ಒಲವು ತೋರಿಸುತ್ತಿದ್ದಾರೆ ಎನ್ನಲಾಗಿದೆ.


Click it and Unblock the Notifications











