'ಯಾರೋ ನೀನು ಮಾನವ, ಕೇಳುತಿಹುದು ಕೊರೊನಾ...': ಭಟ್ಟರ ಹಾಡಿನ ಮೋಡಿ
ಕೊರೊನಾ ವೈರಸ್ ಕುರಿತಂತೆ ನಿರ್ದೇಶಕ, ಸಾಹಿತಿ ಯೋಗರಾಜ್ ಭಟ್ ಬರೆದಿರುವ 'ಯಾರೋ ನೀನು ಮಾನವ' ಹಾಡು ಶನಿವಾರ ಸಂಜೆ ಬಿಡುಗಡೆಯಾಗಿದ್ದು, ಸಕತ್ ವೈರಲ್ ಆಗಿದೆ.
Recommended Video
ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಯೋಗರಾಜ್ ಭಟ್ಟರ ಸಾಹಿತ್ಯಕ್ಕೆ ವಿಜಯ ಪ್ರಕಾಶ್ ಕಂಠದ ಹಾಡು ಭಾವ ಪೂರ್ಣವಾಗಿ ಮೂಡಿಬಂದಿದೆ. 'ಊರಿಗೂರೇ ಖಾಲಿ ದಾರಿ ತುಂಬಾ ಬೇಲಿ, ತಿಳಿದುಕೊಳ್ಳುವ ಬನ್ನಿ ಬಾನ ಬಣ್ಣ ನೀಲಿ' ಎಂಬ ಸುಂದರವಾದ ಪದಪುಂಜಗಳ ಹೆಣಿಗೆ ಹೊಂದಿರುವ ಸಾಹಿತ್ಯ, ಕೊರೊನಾದಿಂದ ಉಂಟಾಗಿರುವ ಪರಿಸ್ಥಿತಿಯನ್ನು ವಿಷಾದದ ಸ್ಥಾಯಿಯಲ್ಲಿ ಕಟ್ಟಿಕೊಡುತ್ತದೆ.
ಹಾಡಿನುದ್ದಕ್ಕೂ ಇಂದಿನ ಸನ್ನಿವೇಶನದ ಚಿತ್ರಣ, ಮಕ್ಕಳ ಆಟಗಳು, ಜನಸಾಮಾನ್ಯರ ಬದುಕು, ಕೊರೊನಾ ವಾರಿಯರ್ಸ್ ವಿಡಿಯೋಗಳನ್ನು ಬಳಸಿಕೊಳ್ಳಲಾಗಿದೆ. ಮುಂದೆ ಓದಿ...

ಸರ್ಕಾರದ ಸಹಭಾಗಿತ್ವದಲ್ಲಿ ಹಾಡು
ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಸ್ಫೂರ್ತಿಯನ್ನು ನೀಡುವ ಸಾಲುಗಳು ಕರ್ತವ್ಯ ಪ್ರಜ್ಞೆಯನ್ನು ನೆನಪಿಸುತ್ತವೆ. ಸರ್ಕಾರದ ಸಹಭಾಗಿತ್ವದಲ್ಲಿ ಈ ಹಾಡನ್ನು ಸಿದ್ಧಪಡಿಸಲಾಗಿದ್ದು, ಬೆಂಗಳೂರಿನ ವಿವಿಧೆಡೆ ಚಿತ್ರೀಕರಣವನ್ನೂ ಮಾಡಲಾಗಿದೆ. ಈ ಹಾಡಿನ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ.

ಬಣ್ಣ ಧರ್ಮವ ಮಣ್ಣು ಕೇಳುವುದೇ...?
'ರೋಗ ಕೇಳುತಾ ಬರುವುದೇ ಮನುಜನ ಕುಲ ಗೋತ್ರವಾ? ಸಾವು ನೋಡುತ ನಗುತಿದೆ ಬ್ಯಾಂಕ್ ಅಕೌಂಟಿನ ಗಾತ್ರವ! ಬಣ್ಣ ಧರ್ಮವ ಮಣ್ಣು ಕೇಳುವುದೇ...? ಎಂಬ ತತ್ವಜ್ಞಾನದ ಸಾಲುಗಳು ಮನಮುಟ್ಟುತ್ತವೆ.
ಈ ಗೀತೆ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಭಟ್ಟರು ಬರೆದ ಸಾಲುಗಳನ್ನು ಹಂಚಿಕೊಂಡು ಅಭಿಮಾನಿಗಳು 'ಅದ್ಭುತ ಸಾಹಿತ್ಯ' ಎಂದು ಗುಣಗಾನ ಮಾಡುತ್ತಿದ್ದಾರೆ.

ಆಭಾರಿಯಾಗಿದ್ದೇವೆ
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪ ಹಾಗು ನಗರ ಪೋಲಿಸ್ ಆಯುಕ್ತರಾದ ಶ್ರೀ ಭಾಸ್ಕರ್ ರಾವ್ ಅವರು ತಮ್ಮ ಅಮೃತ ಹಸ್ತದಿಂದ ಹಾಡನ್ನು ಬಿಡುಗೊಳಿಸಿ ಮನಃಪೂರ್ವಕವಾಗಿ ಹಾಡನ್ನು ಮೆಚ್ಚಿ ತಂಡದ ಬೆನ್ನುತಟ್ಟಿದ್ದಕ್ಕಾಗಿ ಇಡೀ ತಂಡ ಅವರಿಗೆ ಆಭಾರಿಯಾಗಿದ್ದೇವೆ ಎಂದು ಯೋಗರಾಜ್ ಭಟ್ ಹೇಳಿದ್ದಾರೆ.

ಸ್ಫೂರ್ತಿ ತುಂಬ ಪ್ರಯತ್ನ
ಅದಾಗಲೇ ಹಾಡನ್ನು ಸಾವಿರಾರು ಮಂದಿ ಮೆಚ್ಚಿ ತಮ್ಮ ಪ್ರತಿಕ್ರಿಯೆಗಳನ್ನು ಕಳುಹಿಸುತ್ತಿರುವುದಕ್ಕಾಗಿ ತಮಗೆಲ್ಲಾ ಅನಂತಾನಂತ ವಂದನೆಗಳು.
ಈ ಕೆಟ್ಟ ಪರಿಸ್ಥಿತಿಯಲ್ಲಿ ನಿಮಗೆಲ್ಲಾ ಸ್ಫೂರ್ತಿ ತುಂಬುವ ಪ್ರಯತ್ನ ತಂಡವಾಗಿ ನಾವು ಮಾಡಿದ್ದೇವೆ.. ಹಾಡನ್ನು ನಿಮ್ಮ ಪ್ರೀತಿ ಪಾತ್ರರಿಗೆ ತಲುಪಿಸುವ ಮೂಲಕ ನೀವೂ ಅವರಿಗೆ ಸ್ಫೂರ್ತಿ ತುಂಬಬೇಕೆನ್ನುವುದೇ ಈ ಹಾಡಿನ ಉದ್ದೇಶ ಮತ್ತು ಇಡೀ ತಂಡದ ಆಶಯ ಎಂದು ತಿಳಿಸಿದ್ದಾರೆ.


Click it and Unblock the Notifications











