ಯೋಗರಾಜ್ ಭಟ್ ಸಿನಿಮಾದಲ್ಲಿ ಹೀರೋ ಆದ ಕಾಮಿಡಿ ಸ್ಟಾರ್: ಮಡೆನೂರ್ ಮನು ಹೊಸ ಸಿನಿಮಾ ಶುರು!
ಯೋಗರಾಜ್ ಭಟ್ ಇದೇ ವರ್ಷ ಸಂಕ್ರಾಂತಿ ಹಬ್ಬದಂದು ಹೊಸ ಸಿನಿಮಾ ಅನೌನ್ಸ್ ಮಾಡಿದ್ದರು. ಯೋಗರಾಜ್ ಸಿನಿಮಾಸ್ ಹಾಗೂ ಪರ್ಲ್ ಸಿನಿ ಕ್ರಿಯೇಷನ್ಸ್ ಜಂಟಿಯಾಗಿ ಸಿನಿಮಾವೊಂದನ್ನು ನಿರ್ಮಿಸುವುದಕ್ಕೆ ಕೈ ಹಾಕಿತ್ತು ಆ ಸಿನಿಮಾಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ನಾಯಕನಾಗಿ ಆಯ್ಕೆ ಆಗಿದ್ದರು.
ಅಂದ್ಹಾಗೆ ಈ ಸಿನಿಮಾವನ್ನು ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಿಲ್ಲ. ಬದಲಾಗಿ ನಿರ್ಮಾಣಕ್ಕೆ ಮುಂದಾಗಿದ್ದರು. ಅದುವೇ 'ಕುಲದಲ್ಲಿ ಕೀಳ್ಯಾವುದೋ'. ಈ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಲಾಗಿದೆ. ಪಕ್ಕಾ ರಗಡ್ ಅವತಾರದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಕಾಣಿಸಿಕೊಳ್ಳುತ್ತಿದ್ದಾರೆ.

ಇದೇ ವರ್ಷ ಜನವರಿ ತಿಂಗಳಲ್ಲಿ ನವರಸ ನಾಯಕ ಜಗ್ಗೇಶ್ 'ಕುಲದಲ್ಲಿ ಕೀಳ್ಯಾವುದೋ' ಸಿನಿಮಾ ಪೋಸ್ಟರ್ ಅನಾವರಣ ಮಾಡಿ ಶುಭ ಹಾರೈಸಿದ್ದರು. 'ಸತ್ಯಹರಿಶ್ಚಂದ್ರ' ಸಿನಿಮಾ ಎವರ್ಗ್ರೀನ್ ಹಾಡು 'ಕುಲದಲ್ಲಿ ಕೀಳ್ಯಾವುದೋ' ಇಂದಿಗೂ ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಾರೆ. ಈ ಹಾಡು ಹಾಡಿಲ್ಲ ಅಂದರೆ, ಅದು ಪೂರ್ಣಗೊಳ್ಳುವುದೇ ಇಲ್ಲ.
ಈಗ ಇದೇ ಹಾಡಿನ ಸಾಲನ್ನೇ ಟೈಟಲ್ ಆಗಿಟ್ಟುಕೊಂಡು ಸಿನಿಮಾ ಮಾಡುವುದಕ್ಕೆ ಯೋಗರಾಜ್ ಭಟ್ ಮುಂದಾಗಿದ್ದಾರೆ. ಅಂದ್ಹಾಗೆ, ಈ ಸಿನಿಮಾವನ್ನು ಯೋಗರಾಜ್ ಭಟ್ ಜೊತೆ ಸಂತೋಷ್ ಕುಮಾರ್ ಎ. ಕೆ ಹಾಗೂ ವಿದ್ಯಾ ಸೇರಿ ನಿರ್ಮಿಸುತ್ತಿದ್ದಾರೆ. 'ಕುಲದಲ್ಲಿ ಕೀಳ್ಯಾವುದೋ' ಸಿನಿಮಾವನ್ನು ಕೆ.ರಾಮನಾರಾಯಣ್ ನಿರ್ದೇಶನ ಮಾಡುತ್ತಿದ್ದಾರೆ.
'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಮಡೆನೂರ್ ಮನು ನಾಯಕನಾಗಿರುವ ಈ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಮೂಲಕ ಚಿತ್ರತಂಡ ಕುತೂಹಲವನ್ನು ಮೂಡಿಸಿದೆ. ಈ ಸಿನಿಮಾದ ಚಿತ್ರೀಕರಣ ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಆರಂಭವಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಅಂದ್ಹಾಗೆ, ಸಕಲೇಶಪುರ, ಹಾಸನ, ರಾಮನಗರ, ಬೆಂಗಳೂರು ಹಲವೆಡೆ ಈ ಸಿನಿಮಾದ ಶೂಟಿಂಗ್ ನಡೆಯಲಿದೆ.

'ಕುಲದಲ್ಲಿ ಕೀಳ್ಯಾವುದೋ' ಸಿನಿಮಾಗೆ ಯೋಗರಾಜ್ ಭಟ್ ಜೊತೆ ಸೇರಿ ಇಸ್ಲಾಮುದ್ದೀನ್ ಕಥೆ ಬರೆದಿದ್ದಾರೆ. ಕಥೆ ಹಾಗೂ ಸಾಹಿತ್ಯದಲ್ಲೂ ಯೋಗರಾಜ್ ಭಟ್ ಕೈ ಹಾಕಿದ್ದಾರೆ. ಇನ್ನು ಸಿನಿ ಸಾಹಿತಿಯಾಗಿ, ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಕೆ.ರಾಮನಾರಾಯಣ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಸಾಹಿತ್ಯ ರಚಿಸುತ್ತಿದ್ದು, ಮುಂಗಾರು ಮಳೆ ಖ್ಯಾತಿಯ ಮನೋಮೂರ್ತಿ ಸಂಗೀತ ನೀಡುತ್ತಿದ್ದಾರೆ.
ಇನ್ನು ಮಡೆನೂರ್ ಮನು ಜೊತೆ ಮೌನ ಗುಡ್ಡೆಮನೆ, ರಂಗಾಯಣ ರಘು, ದಿಗಂತ್, ಶರತ್ ಲೋಹಿತಾಶ್ವ, ಸೋನಾಲ್ ಮೊಂಥೆರೋ ಸೇರಿದಂತೆ ಹಲವು ಮಂದಿ ನಟಿಸುತ್ತಿದ್ದಾರೆ. ಸದ್ಯ ಸಿನಿಮಾದ ಚಿತ್ರೀಕರಣ ಇನ್ನೂ ಆರಂಭ ಆಗಬೇಕಿದ್ದು, ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ಸಿಗಲಿದೆ.


Click it and Unblock the Notifications











