ರಾಕಿ, ರಾಧಿಕಾ, ಸತೀಶ್, ಸಿಂಧೂ 'ಡ್ರಾಮಾ'ಗೆ 10 ವರ್ಷ: ಬೊಂಬೆ ಆಡಿಸಿದ್ದ ಅಂಬಿನೇ ಸ್ಪೆಷಲ್!
ಸ್ಯಾಂಡಲ್ವುಡ್ ಬ್ಲಾಕ್ಬಸ್ಟರ್ ಸಿನಿಮಾಗಳಲ್ಲಿ ಯೋಗರಾಜ್ ಭಟ್ ನಿರ್ದೇಶಿಸಿದ 'ಡ್ರಾಮಾ' ಕೂಡ ಒಂದು. ಪಕ್ಕಾ ಮಂಡ್ಯ ಶೈಲಿಯ ಈ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್, ಸತೀಶ್ ನೀನಾಸಂ ಹಾಗೂ ಸಿಂಧೂ ಲೋಕನಾಥ್ ಜೋಡಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತ್ತು.
ಮಂಡ್ಯ ಹೈಕ್ಳ ಭಾಷೆ, ಯಶ್, ಸತೀಶ್ ಮ್ಯಾನರಿಸಂ, ರಾಧಿಕಾ, ಸಿಂಧೂ ಲೋಕನಾಥ್ ಪರ್ಫಾಮೆನ್ಸ್ ಎಲ್ಲವೂ ಸಿನಿಪ್ರಿಯರಿಗೆ ಇಷ್ಟ ಆಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಯೋಗರಾಜ್ ಭಟ್ ಡೈರೆಕ್ಷನ್ ಹಾಗೂ ಡೈಲಾಗ್ ಪ್ರೇಕ್ಷಕರಿಗೆ ಕಿಕ್ ಕೊಟ್ಟಿತ್ತು. ಈ ಸಿನಿಮಾ ಬಾಕ್ಸಾಫೀಸ್ನಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಸಿನಿಮಾ ರಿಲೀಸ್ ಆಗಿ ಇಂದಿಗೆ (ನವೆಂಬರ್ 23) ಬರೋಬ್ಬರಿ 10 ವರ್ಷಗಳಾಗಿವೆ. ಈ ವೇಳೆ 'ಡ್ರಾಮಾ' ಸಿನಿಮಾ ಕೆಲವು ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ.

ಮಂಡ್ಯ ಹೈಕ್ಳು ಯಶ್, ಸತೀಶ್ ಸಿನಿಮಾ
ಯೋಗರಾಜ್ ಭಟ್ ಅದೂವರೆಗೂ ಮಂಡ್ಯ ಭಾಗದ ಕಥೆಯನ್ನು ತೆರೆಮೇಲೆ ತರೋ ಪ್ರಯತ್ನ ಮಾಡಿರಲಿಲ್ಲ. 'ಮನಸಾರೆ', 'ಪಂಚರಂಗಿ', 'ಪರಮಾತ್ಮ' ಅಂತಿದ್ದವರು ದಿಢೀರನೇ ಮಂಡ್ಯ ಹುಡುಗರ ಜೊತೆ 'ಡ್ರಾಮಾ' ಮಾಡೋಕೆ ನಿಂತಿದ್ದರು. ಜಯಣ್ಣ ಹಾಗೂ ಭೊಗೇಂದ್ರ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರು. ಫ್ರೆಶ್ ಸ್ಟೋರಿಯೊಂದಿಗೆ ಯೋಗರಾಜ್ ಭಟ್ ಅಖಾಡಕ್ಕೆ ಇಳಿಸಿದ್ದರು. ಅಲ್ಲದೆ ಭಟ್ಟರ ಡೈಲಾಗ್ ಕೂಡ ರೆಗ್ಯೂಲರ್ ಆಗಿ ಇರಲಿಲ್ಲ. ಹೀಗಾಗಿ ಸಿನಿಪ್ರಿಯರಿಗೆ 'ಡ್ರಾಮಾ' ಇಷ್ಟ ಆಗಿತ್ತು. ಈ ಸಿನಿಮಾ 2012, ನವೆಂಬರ್ 23ರಂದು ರಾಜ್ಯಾದ್ಯಂತ ರಿಲೀಸ್ ಆಗಿತ್ತು.

'ಡ್ರಾಮಾ'ಗೆ ಅಂಬಿನೇ ಅತಿಥಿ
ಯೋಗರಾಜ್ ಭಟ್ ನಿರ್ದೇಶಿಸಿದ 'ಡ್ರಾಮಾ'ದ ಮತ್ತೊಂದು ಹೈಲೈಟ್ ಅಂದ್ರೆ, ಅದು ರೆಬೆಲ್ ಸ್ಟಾರ್ ಅಂಬರೀಶ್. ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಅಂಬರೀಶ್ ನಟಿಸಿದ್ದರು. ಅದರಲ್ಲೂ ಇವರಿಗಾಗೇ ಕಂಪೋಸ್ ಮಾಡಿದ್ದ "ಬೊಂಬೆ ಆಡ್ಸೋನು.." ಸಾಂಗ್ ಈ ಸಿನಿಮಾದ ಹೈಲೈಟ್ಗಳಲ್ಲಿ ಒಂದಾಗಿತ್ತು. ರೆಬೆಲ್ ಸ್ಟಾರ್ ಒಂದು ಹಾಡು ಹಾಗೂ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರೂ, ಪ್ರೇಕ್ಷಕರು ಅಂಬರೀಶ್ಗೆ ಜೈ ಎಂದಿದ್ದರು.

'ಡ್ರಾಮಾ' ಬಾಕ್ಸಾಫೀಸ್ನಲ್ಲಿ ಗಳಿಸಿದ್ದೆಷ್ಟು?
'ಡ್ರಾಮಾ' ಬಾಕ್ಸಾಫೀಸ್ನಲ್ಲೂ ಸೂಪರ್ ಕಲೆಕ್ಷನ್ ಮಾಡಿತ್ತು. ಈ ಹಿಂದೆ ತೆರೆಕಂಡಿದ್ದ ಯೋಗರಾಜ್ ಭಟ್ಟರ ಸಿನಿಮಾ 'ಪರಮಾತ್ಮ' ಬಾಕ್ಸಾಫೀಸ್ನಲ್ಲಿ ಆ ಮಟ್ಟಿಗೆ ಸದ್ದು ಮಾಡಿರಲಿಲ್ಲ. ಆದರೆ, ಹೆಚ್ಚು-ಕಡಿಮೆ ಅಂದಿನ ಕಾಲಕ್ಕೆ 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ 'ಡ್ರಾಮಾ' ಬಾಕ್ಸಾಫೀಸ್ನಲ್ಲಿ ಬರೊಬ್ಬರಿ 20 ಕೋಟಿ ರೂ. ಕಲೆಕ್ಷನ್ ಮಾಡಿತ್ತು ಎಂದು ವರದಿಯಾಗಿದೆ. ಅಲ್ಲದೆ, ಅಮೆರಿಕ, ಜರ್ಮನಿ, ಯುಎಇಯಲ್ಲೂ ಈ ಸಿನಿಮಾ ರಿಲೀಸ್ ಆಗಿತ್ತು.

ಯೋಗರಾಜ್ ಭಟ್ರನ್ನು ನೆನೆದ ಸತೀಶ್
'ಡ್ರಾಮಾ' ಸಿನಿಮಾ ಬಾಕ್ಸಾಫೀಸ್ನಲ್ಲಿ ಸದ್ದು ಮಾಡಿದ್ದಷ್ಟೇ ಅಲ್ಲ. ಹಲವು ಚಿತ್ರಮಂದಿರಗಳಲ್ಲಿ 100 ದಿನಗಳನ್ನು ಪೂರೈಸಿತ್ತು. ಅಲ್ಲದೆ ನೀನಾಸಂ ಸತೀಶ್ಗೆ ಒಂದೊಳ್ಳೆ ಇಮೇಜ್ ತಂದುಕೊಟ್ಟ ಸಿನಿಮಾ ಕೂಡ ಹೌದು. ಹೀಗಾಗಿ ಯೋಗರಾಜ್ ಭಟ್ಟರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. "ಯೋಗರಾಜ್ ಸಾರ್ ಪ್ರೀತಿಯಿಂದ ಬರೆದ ಈ ಡ್ರಾಮಾ, ಯಶ್, ರಾಧಿಕಾ,ಸಿಂಧೂ, ಅಂತ ಒಳ್ಳೆಯ ಗೆಳೆಯರನ್ನು ಕೊಟ್ಟಿತು. 100 ದಿನಗಳನ್ನು ಪೂರೈಸಿದ ಈ ಚಿತ್ರ ನನ್ನ ಬದುಕಿನ ಹರಿವನ್ನೇ ಬದಲಾಯಿಸಿತು. ನೀವೆಲ್ಲರೂ ನನ್ನ ಅಪ್ಪಿಕೊಂಡಿರಿ. ಇಂದು ನಾನು ಚಿತ್ರರಂಗದಲ್ಲಿ ನಾಯಕ ನಟನಾಗಿ ಬೇರೂರಲು ಈ ಚಿತ್ರ ಪ್ರಮುಖ ಕಾರಣ. ಲವ್ ಯೂ ಯೋಗರಾಜ್ ಸಾರ್.." ಎಂದು ನೀನಾಸಂ ಸತೀಶ್ ಬರೆದುಕೊಂಡಿದ್ದಾರೆ.


Click it and Unblock the Notifications











