'ರಾಮಾಚಾರಿ'ಯಲ್ಲಿ ವಿಷ್ಣುದಾದ.. 'ರಾಜಕುಮಾರ'ದಲ್ಲಿ ಅಣ್ಣಾವ್ರು.. 'ಯುವ'ದಲ್ಲಿ ಅಪ್ಪುನಾ? ನಿರ್ದೇಶಕರು ಏನಂತಾರೆ?
ಈ ವರ್ಷದ ಮತ್ತೊಂದು ಬಹು ನಿರೀಕ್ಷಿತ ಸಿನಿಮಾ 'ಯುವ'. ಈ ಸಿನಿಮಾ ಯಾಕೆ ಅಷ್ಟೊಂದು ಸ್ಪೆಷಲ್ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ದೊಡ್ಮನೆಯ ಮತ್ತೊಂದು ಕುಡಿ ಯುವ ರಾಜ್ಕುಮಾರ್ ಇದೇ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹಾಗೇ ಪುನೀತ್ ರಾಜ್ಕುಮಾರ್ ಅವರ ಫೇವರಿಟ್ ಡೈರೆಕ್ಟರ್ ಸಂತೋಷ್ ಆನಂದ್ರಾಮ್ ಇಂಟ್ರುಡ್ಯೂಸ್ ಮಾಡುತ್ತಿದ್ದಾರೆ. ಹೊಂಬಾಳೆ ನಿರ್ಮಾಣ ಮಾಡಿದೆ.
ಇದೆಲ್ಲಕ್ಕಿಂತ ಹೆಚ್ಚಾಗಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಬರ್ತ್ಡೇ ತಿಂಗಳೇ ಈ ಸಿನಿಮಾನೂ ರಿಲೀಸ್ ಆಗುತ್ತಿದೆ. ಅಪ್ಪು ಅಗಲಿದ ಬಳಿಕ ಅಭಿಮಾನಿಗಳು ಯುವ ರಾಜ್ಕುಮಾರ್ನಲ್ಲಿ ಪವರ್ಸ್ಟಾರ್ ಅನ್ನು ನೋಡುವುದಕ್ಕೆ ಬಯಸಿದ್ದರು. ಕೊನೆಗೂ ಅವರ ಆಸೆ ಇದೇ ತಿಂಗಳು ಈಡೇರುತ್ತಿದೆ. ಇದೇ ಮಾರ್ಚ್ 29ರಂದು ಅದ್ಧೂರಿಯಾಗಿ ಸಿನಿಮಾ ರಿಲೀಸ್ ಆಗುತ್ತಿದೆ.

'ಯುವ' ಚಿತ್ರತಂಡ ಸಿನಿಮಾದ ಒಂದೊಂದೇ ಹಾಡುಗಳನ್ನು ರಿಲೀಸ್ ಮಾಡಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈ ಸಂದರ್ಭದಲ್ಲಿ 'ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ' ಸಿನಿಮಾದಲ್ಲಿ ವಿಷ್ಣುದಾದನ ಛಾಯೆ ಇದ್ದಂತೆ, 'ರಾಜಕುಮಾರ' ಸಿನಿಮಾದಲ್ಲಿ ಅಣ್ಣಾವ್ರು ನೆನಪಾದಂತೆ, 'ಯುವ'ದಲ್ಲಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಕಾಣಿಸಿಕೊಳ್ಳುತ್ತಾರಾ? ಈ ಪ್ರಶ್ನೆಗೆ ಸಂತೋಷ್ ಆನಂದ್ರಾಮ್ ಏನು ಹೇಳಿದ್ರು? ಅನ್ನೋದನ್ನು ತಿಳಿಯಲು ಮುಂದೆ ಓದಿ.
"ಅಪ್ಪು ಸರ್ನಲ್ಲಿ ಅಣ್ಣಾವ್ರನ್ನ ನೋಡುತ್ತಿದ್ರಿ"
ಸಂತೋಷ್ ಆನಂದ್ರಾಮ್ ನಿರ್ದೇಶಿಸಿದ ಸಿನಿಮಾಗಳಲ್ಲಿ ಡಾ.ರಾಜ್ಕುಮಾರ್, ವಿಷ್ಣುವರ್ಧನ್ ಅವರ ಛಾಯೆ ಕಂಡಿದೆ. ಅದಕ್ಕೆ 'ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ' ಹಾಗೂ 'ರಾಜಕುಮಾರ' ಸಿನಿಮಾಗಳೇ ಸಾಕ್ಷಿ. ಈ ಬಗ್ಗೆ ಯುವ ಮೂರನೇ ಹಾಡನ್ನು ರಿಲೀಸ್ ಮಾಡಿದ ಬಳಿಕ ನಿರ್ದೆಶಕ ಸಂತೋಷ್ ಆನಂದ್ರಾಮ್ ಸಮಜಾಯಿಷಿ ಕೊಟ್ಟಿದ್ದಾರೆ.
"ರಾಜಕುಮಾರ ಸಿನಿಮಾವನ್ನು ಗಮನಿಸಿ. ನಾವು ಇಡೀ ಸಿನಿಮಾದಲ್ಲಿ ಅಣ್ಣಾವ್ರನ್ನು ತೆರೆಮೇಲೆ ತರುವುದೇ ಇಲ್ಲ. ಅದ್ಯಾಕೆ ನಿಮಗೆ ಹಾಗೆ ಅನಿಸುತ್ತೆ ಅಂದ್ರೆ, ಅಪ್ಪು ಸರ್ ಅಲ್ಲಿ ನೀವು ಅಣ್ಣಾವ್ರನ್ನು ನೋಡುತ್ತಿದ್ರಿ. ಅದು ಮಗನಲ್ಲಿ ತಂದೆಯನ್ನು ನೋಡುವುದು ಸಹಜ. ಅವರಲ್ಲಿ ನೀವು ಅಣ್ಣಾವ್ರನ್ನು ನೋಡುತ್ತಿದ್ದರಿಂದ ಹಾಗೆ ಅನಿಸಿತ್ತು." ಎಂದಿದ್ದಾರೆ.

'ಯುವ'ದಲ್ಲಿ ಅಪ್ಪು ಶೇಡ್ ಇದೆಯಾ?
ಹಾಗೇ ಯುವ ರಾಜ್ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಈ ಸಂದರ್ಭದಲ್ಲಿ 'ಯುವ'ದಲ್ಲಿ ಪುನೀತ್ ರಾಜ್ಕುಮಾರ್ ಶೇಡ್ ಇದೆಯಾ? ಅನ್ನೋ ಪ್ರಶ್ನೆಗೂ ಉತ್ತರ ಕೊಟ್ಟಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಎಮೋಷನ್ ಹಾಗೂ ಆಶೀರ್ವಾದ ಇದ್ದೇ ಇರುತ್ತೆ ಎಂದಿದ್ದಾರೆ.
"ರಾಮಾಚಾರಿ ಸಿನಿಮಾ ಹೌದು.. ಅದು ವಿಷ್ಣು ಸರ್ ಅನ್ನು ರೆಫರೆನ್ಸ್ ಇಟ್ಟುಕೊಂಡು ಮಾಡಿದಂತಹ ಸಿನಿಮಾ. ಹಾಗೆ ಅಪ್ಪು ಸರ್ ಸಿನಿಮಾದಲ್ಲಿ ಟೈಟಲ್ ರಾಜಕುಮಾರ ಅಂತ ಇತ್ತಲ್ಲ. ಅದಕ್ಕೆ ಹಾಗೆ ಫೀಲ್ ಆಗಿದೆ. ಆದರೆ, ಈ ಸಿನಿಮಾದಲ್ಲಿ ಸಹಜವಾಗಿ ಯುವನಲ್ಲಿ ಅಪ್ಪು ಸರ್ ಅನ್ನು ಜನ ಹುಡುಕುತ್ತಿದ್ದಾರೆ. ಈ ಸಿನಿಮಾದಲ್ಲಿ ಅಪ್ಪು ಸರ್ ಯಾವುದೇ ಶೇಡ್ ಇಲ್ಲ. ಇದು ಡಿಫ್ರೆಂಟ್ ಸಿನಿಮಾ. ಆದರೆ, ಅವರ ಎಮೋಷನ್, ಆಶೀರ್ವಾದ ಈ ಸಿನಿಮಾ ಜೊತೆ ಇರುತ್ತೆ." ಎಂದು ಸಂತೋಷ್ ಆನಂದ್ರಾಮ್ ಇದ್ದಾರೆ.
ಹೊಸಪೇಟೆಯಲ್ಲಿ ಗ್ರ್ಯಾಂಡ್ ಇವೆಂಟ್
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ಗೂ ಹೊಸಪೇಟೆ ಜನರಿಗೂ ಬಿಡಲಾರದ ನಂಟಿದೆ. ಅಪ್ಪು ನೆಚ್ಚಿನ ಊರು. ಹೀಗಾಗಿ ಅವರ ನೆನಪಿಗಾಗಿ ಅದೇ ಊರಿನಲ್ಲಿ 'ಯುವ' ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಅನ್ನು ಹಮ್ಮಿಕೊಳ್ಳಲಾಗಿದೆ.
'ಯುವ' ಸಿನಿಮಾ ಬಿಡುಗಡೆ ಇನ್ನೇನು ಕೆಲವೇ ದಿನಗಳಿದೆ ಅನ್ನುವಾಗ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಂದು ಯುವ ರಾಜ್ಕುಮಾರ್ ಎಂಟ್ರಿಗೆ ಕ್ರೇಜ್ ಹೇಗಿರುತ್ತೆ? ಅನ್ನೋದರ ಅನಾವರಣ ಆಗುತ್ತೆ. ಸದ್ಯಕ್ಕೆ 'ಯುವ' ಹಾಡುಗಳ ಝಲಕ್ ಕಿಕ್ ಕೊಡುತ್ತವೆ.


Click it and Unblock the Notifications











