ಯುವ ರಾಜ್ಕುಮಾರ್ ಮುಂದಿನ 5 ಸಿನಿಮಾಗಳು ಇವೇನಾ? ಆ 5 ನಿರ್ದೇಶಕರು ಇವರೇನಾ?
ದೊಡ್ಮೆನೆ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಇಂದು (ಏಪ್ರಿಲ್ 23) ದೊಡ್ಮೆನೆಯ ಕುಡಿ ಯುವ ರಾಜ್ಕುಮಾರ್ ಹುಟ್ಟುಹಬ್ಬ. ಅದೇ ನಾಳೆ (ಏಪ್ರಿಲ್ 24) ವರನಟ ಡಾ.ರಾಜ್ಕುಮಾರ್ 97ನೇ ಬರ್ತ್ಡೇ. ಹೀಗಾಗಿ ದೊಡ್ಮೆನೆ ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಸಂಭ್ರಮ. ಸದ್ಯ ರಾಜವಂಶದ ಅಭಿಮಾನಿಗಳು ಯುವ ರಾಜ್ಕುಮಾರ್ ಮೇಲೆ ಭರವಸೆಯನ್ನು ಇಟ್ಟುಕೊಂಡಿದ್ದಾರೆ. ಅಪ್ಪು ಸ್ಥಾನದಲ್ಲಿ ಯುವ ರಾಜ್ಕುಮಾರ್ ಇರುತ್ತಾರೆಂಬ ನಿರೀಕ್ಷೆಯನ್ನು ಹೊತ್ತು ತಿರುಗುತ್ತಿದ್ದಾರೆ.
ಯುವ ರಾಜ್ಕುಮಾರ್ ಕನ್ನಡ ಚಿತ್ರರಂಗದ ಮತ್ತೊಂದು ಭರವಸೆ. ಅದರಲ್ಲೂ ದೊಡ್ಮೆನೆಯಿಂದ ಮತ್ತೊಂದು ಸೂಪರ್ಸ್ಟಾರ್ ಬರಲೇಬೇಕು ಅಂತ ಅಭಿಮಾನಿಗಳೇ ಎದುರು ನೋಡುತ್ತಿದ್ದಾರೆ. ಹೀಗಾಗಿ ಯುವ ರಾಜ್ಕುಮಾರ್ಗೆ ಶೀಘ್ರದಲ್ಲಿಯೇ ದೊಡ್ಡದೊಂದು ಸಕ್ಸಸ್ ಸಿಗಬೇಕು ಅಂತ ಬೇಡಿಕೊಳ್ಳುತ್ತಿದ್ದಾರೆ. 'ಎಕ್ಕ' ಸಿನಿಮಾ ಬಳಿಕ ಯುವ ರಾಜ್ಕುಮಾರ್ ಹೊಸ ಸಿನಿಮಾ ಅನೌನ್ಸ್ ಆಗಿಲ್ಲ.

33ನೇ ವರ್ಷಕ್ಕೆ ಕಾಲಿಟ್ಟಿರುವ ಯುವ ರಾಜ್ಕುಮಾರ್ ಸದ್ಯ ವಿದೇಶದಲ್ಲಿ ಇದ್ದಾರೆಂದು ವರದಿಯಾಗಿದೆ. ತಮ್ಮ ಮೂರನೇ ಸಿನಿಮಾಗಾಗಿ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಈ ಕಾರಣಕ್ಕೆ ವಿದೇಶದಲ್ಲಿ ಬೀಡುಬಿಟ್ಟಿದ್ದಾರೆಂದು ನ್ಯೂಸ್ 18 ಕನ್ನಡ ವರದಿ ಮಾಡಿದೆ. ಇತ್ತ ಯುವ ರಾಜ್ಕುಮಾರ್ ಅಭಿಮಾನಿಗಳು ಮೂರನೇ ಸಿನಿಮಾ ಅನೌನ್ಸ್ ಆಗಬಹುದೇನೋ? ಎಂದು ಎದುರು ನೋಡುತ್ತಿದ್ದವರಿಗೆ ಸಿಹಿ ಸುದ್ದಿಯೇನು ಸಿಕ್ಕಿಲ್ಲ. ಹೀಗಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಯುವ ರಾಜ್ಕುಮಾರ್ ಮುಂದಿನ 5 ಸಿನಿಮಾಗಳ ಲಿಸ್ಟ್ ಅನ್ನು ವೈರಲ್ ಮಾಡಲಾಗುತ್ತಿದೆ. ಆ ಐದು ಸಿನಿಮಾಗಳ ಲಿಸ್ಟ್ ಇಲ್ಲಿದೆ.
ನರ್ತನ್ ಜೊತೆ ಯುವ ಸಿನಿಮಾ
ಸದ್ಯ ಹಾಟ್ ಟಾಪಿಕ್ನಲ್ಲಿ ಇರೋದು 'ಮಫ್ತಿ', 'ಬೈರತಿ ರಣಗಲ್' ಸಿನಿಮಾದ ನಿರ್ದೇಶಕ ನರ್ತನ್. ಯುವ ರಾಜ್ಕುಮಾರ್ ಮುಂದಿನ ಸಿನಿಮಾ ನರ್ತನ್ ಆಕ್ಷನ್ ಕಟ್ ಹೇಳುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ನರ್ತನ್ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಯಾವುದೂ ಫೈನಲ್ ಆಗಿಲ್ಲ. ಕೆವಿಎನ್ ಸಂಸ್ಥೆಯೊಂದಿಗೆ ಸಿನಿಮಾ ಮಾಡಬೇಕಿದೆ. ಆದರೆ, 'ಜನ ನಾಯಗನ್' ಹಾಗೂ 'ಕೆಡಿ' ರಿಲೀಸ್ ಬಳಿಕ ಗೊತ್ತಾಗುತ್ತೆ" ಎಂದು ಹೇಳಿದ್ದಾರೆ. ಹೀಗಾಗಿ ಯುವಗೆ ನರ್ತನ್ ನಿರ್ದೇಶನ ಮಾಡುತ್ತಾರೋ ಇಲ್ಲವೋ ಅನ್ನೋದಕ್ಕೆ ಉತ್ತರ ಸಿಕ್ಕಿಲ್ಲ.
ಪುನೀತ್ ರುದ್ರನಾಗ್
ಪ್ರಶಾಂತ್ ನೀಲ್ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪುನೀತ್ ರುದ್ರನಾಗ್ ಕೂಡ ಯುವ ರಾಜ್ಕುಮಾರ್ಗೆ ಆಕ್ಷನ್ ಕಟ್ ಹೇಳಲಿದ್ದಾರೆ. ನರ್ತನ್ ಸಿನಿಮಾ ಮುಗಿದ ಕೂಡಲೇ ಪುನೀತ್ ರುದ್ರನಾಗ್ ಆಕ್ಷನ್ ಕಟ್ ಹೇಳಲಿದ್ದಾರೆಂದು ಅಭಿಮಾನಿಗಳು ಹೇಳುತ್ತಿದ್ದಾರೆ. 'ಎಕ್ಕ' ಸಿನಿಮಾದಲ್ಲಿ ಚಿಕ್ಕ ಪಾತ್ರವೊಂದಕ್ಕೆ ಪುನೀತ್ ನಟಿಸಿದ್ದರು. ಸದ್ಯ ಪುನೀತ್ ರುದ್ರನಾಗ್ ಈಗ ಶ್ರೀ ಮುರಳಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೀಗಾಗಿ ಯುವ ರಾಜ್ಕುಮಾರ್ ಜೊತೆ ಸಿನಿಮಾ ಮಾಡುವ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ.
ಜಡೇಶ್
ಯುವ ರಾಜ್ಕುಮಾರ್ ಅಭಿಮಾನಿಗಳ ಲಿಸ್ಟ್ನಲ್ಲಿ ಇರುವ ಮತ್ತೊಬ್ಬ ನಿರ್ದೇಶಕ ಜಡೇಶ್. 'ಕಾಟೇರ'ದಂತಹ ಸೂಪರ್ ಹಿಟ್ ಸಿನಿಮಾಗೆ ಕಥೆ ಒದಗಿಸಿದ್ದ ಜಡೇಶ್ ಇತ್ತೀಚೆಗೆ ದುನಿಯಾ ವಿಜಯ್ ಜೊತೆ 'ಲ್ಯಾಂಡ್ ಲಾರ್ಡ್' ಸಿನಿಮಾ ಮಾಡಿದ್ದರು. ಇವರು ಕೂಡ ಯುವ ರಾಜ್ಕುಮಾರ್ಗೆ ಆಕ್ಷನ್ ಕಟ್ ಹೇಳಲಿದ್ದಾರೆಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ರಾಜಗುರು
ಬಾಕ್ಸಾಫೀಸ್ನಲ್ಲಿ ಜೋರಾಗಿ ಸದ್ದು ಮಾಡದೇ ಹೋದರೂ, ವಿಮರ್ಶಕರಿಂದ ಮೆಚ್ಚುಗೆ ಪಡೆದಿದ್ದ ಸಿನಿಮಾ 'ಕೆರೆಬೇಟೆ'. ರಾಜಗುರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದೇ ನಿರ್ದೇಶಕರ ಜೊತೆನೂ ಯುವ ರಾಜ್ಕುಮಾರ್ ಸಿನಿಮಾ ಮಾಡಲಿದ್ದಾರೆಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ, ಈ ಬಗ್ಗೆನೂ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಕೆಆರ್ಜಿ ಜೊತೆ ಯುವ ಸಿನಿಮಾ
ಫ್ಯಾನ್ಸ್ ಹಂಚಿಕೊಂಡ ಪಟ್ಟಿಯಲ್ಲಿ ಕೆಆರ್ಜಿ ಸ್ಟುಡಿಯೋಸ್ ಸಂಸ್ಥೆ ಜೊತೆ ಯುವ ರಾಜ್ಕುಮಾರ್ ಸಿನಿಮಾ ಮಾಡಲಿದ್ದಾರೆ. ಆದರೆ, ಕೆಆರ್ಜಿ ಸ್ಟುಡಿಯೋಸ್ ಹೊಸ ಸಿನಿಮಾವನ್ನು ಅನೌನ್ಸ್ ಮಾಡುತ್ತಿಲ್ಲ. ಅವರೇ ನಿರ್ಮಾಣ ಮಾಡುತ್ತಿದ್ದ ಉತ್ತರಕಾಂಡ ಅರ್ಧಕ್ಕೆ ನಿಂತಿದೆ. ಹೀಗಾಗಿ ಯುವ ಜೊತೆ ಸಿನಿಮಾ ಮಾಡುತ್ತಾರಾ? ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ.
ಇದು ಅಭಿಮಾನಿಗಳೇ ಹಂಚಿಕೊಂಡ ಪಟ್ಟಿ. ಇದರ ಜೊತೆಗೆ ಇನ್ನೂ ಒಂದು ಸಿನಿಮಾದ ಹೆಸರು ಕೇಳಿಬರುತ್ತಿದೆ. ನಿರ್ದೇಶಕ-ನಿರ್ಮಾಪಕ ತರುಣ್ ಸುಧೀರ್ ಕೂಡ ಯುವಗಾಗಿ 'ಉಸ್ತಾದ್' ಅನ್ನೋ ಟೈಟಲ್ ಇಟ್ಟು ಸಿನಿಮಾ ಮಾಡುತ್ತಾರೆಂಬ ಸುದ್ದಿನೂ ಇದೆ. ಅದೂ ಕೂಡ ಅಧಿಕೃತವಾಗಿ ಎಲ್ಲೂ ಹೇಳಿಲ್ಲ.


Click it and Unblock the Notifications