"ಕೇದಾರನಾಥನ ಮುಂದೆ ನಿಂತ ಕ್ಷಣ.. ನಿನ್ನೆ ಇರಲಿಲ್ಲ.. ನಾಳೆ ಇರಲಿಲ್ಲ.. ಇದ್ದಿದ್ದು ಈ ಕ್ಷಣ ಮಾತ್ರ"-ಯುವ ರಾಜ್ಕುಮಾರ್
ಸಿನಿಮಾ ನಟರು ಬಿಡುವು ಸಿಕ್ಕಾಗ ಎಲ್ಲಿಗಾದ್ರೂ ಪ್ರಯಾಣ ಮಾಡುತ್ತಲೇ ಇರುತ್ತಾರೆ. ಎಲ್ಲದರೂ ಒಂದೆರಡು ದಿನಕ್ಕೆ ಗಾಯಬ್ ಆಗಿ ಬಿಡುತ್ತಾರೆ. ಇನ್ನು ಕೆಲವರು ವಿದೇಶಕ್ಕೆ ಹಾರಿ ಬಿಡುತ್ತಾರೆ. ಸುತ್ತಾಡೋದು ಸಾಕು ಅನಿಸಿದರೆ, ದೇವರ ದರ್ಶನ ಮಾಡುವುದಕ್ಕೆ ಮುಂದಾಗುತ್ತಾರೆ. ಈಗ ದೊಡ್ಮನೆ ಕುಡಿ ಯುವ ರಾಜ್ಕುಮಾರ್ ಕೂಡ ಆದ್ಯಾತ್ಮದ ಮೂಡ್ನಲ್ಲಿ ಇದ್ದಾರೆ. ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರೋ ಕೇದಾರನಾಥ ದೇವಸ್ಥಾನಕ್ಕೆ ಭೇಟಿ ಕೊಟ್ಟು ಶಿವನ ದರ್ಶನ ಮಾಡಿದ್ದಾರೆ.
ಯುವ ರಾಜ್ಕುಮಾರ್ ಈ ಕೇದಾರನಾಥ ಯಾತ್ರೆಯ ಬಗ್ಗೆ ತಮ್ಮ ಅನುಭವಗಳನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಮಾನ್ಯರಂತೆ ಕೇದಾರನಾಥ ದೇವಸ್ಥಾನಕ್ಕೆ ಚಾರಣ ಮಾಡುವ ಮೂಲಕ ತಲುಪಿದ್ದಾರೆ. ಈ ವೇಳೆ ಅವರಲ್ಲಿ ಆದ ಬದಲಾವಣೆಗಳನ್ನು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. "ಕೇದಾರನಾಥನ ಮುಂದೆ ನಿಂತ ಕ್ಷಣ.. ನಿನ್ನೆ ಇರಲಿಲ್ಲ.. ನಾಳೆ ಇರಲಿಲ್ಲ.. ಇದ್ದಿದ್ದು ಈ ಕ್ಷಣ ಮಾತ್ರ" ಎಂದು ಯುವರಾಜ್ಕುಮಾರ್ ಬರೆದು ಪೋಸ್ಟ್ ಮಾಡಿದ್ದಾರೆ.

ಯುವ ರಾಜ್ಕುಮಾರ್ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಒಂದಿಷ್ಟು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದು, ಜೊತೆಗೆ ಆಧ್ಯಾತ್ಮಿಕವಾಗಿ ಹೀಗೆ ಬರೆದುಕೊಂಡಿದ್ದಾರೆ.
ಏನಿದೆ ಪೋಸ್ಟ್ನಲ್ಲಿ?
"ಕೇದಾರನಾಥ ಯಾತ್ರೆಯಿಂದ ನಾನು ಏನು ಕಲಿತೆ ಅಂತ ನನ್ನನ್ನೇ ನಾನು ಕೇಳಿಕೊಂಡಾಗ.. ಒಂದು ಮಾತು ನೆನಪಿಗೆ ಬಂತು. ಸಮುದ್ರ ತೀರ ನಮಗೆ ನೋವು, ಒತ್ತಡ ಎಲ್ಲವನ್ನೂ ಬಿಟ್ಟು ಆರಾಮವಾಗಿ ಇರೋದನ್ನು ಕಲಿಸುತ್ತದೆ. ಆದರೆ ಪರ್ವತಗಳು ನೋವನ್ನು ಸಹಿಸಿಕೊಂಡೇ ಶಾಂತವಾಗಿರೋದನ್ನು ಕಲಿಸುತ್ತವೆ. ಕೇದಾರನಾಥ ಯಾತ್ರೆಯಲ್ಲಿ ಆ ಮಾತಿನ ಅರ್ಥ ನನಗೆ ನಿಜವಾಗಿಯೂ ಗೊತ್ತಾಯಿತು.
ಈ ಸಂಪೂರ್ಣ ಪ್ರಯಾಣದಲ್ಲಿ "ಹರ ಹರ ಮಹಾದೇವ" ಅನ್ನೋ ಘೋಷಣೆ ಎಲ್ಲೆಡೆ ಇತ್ತು. ಜನರಲ್ಲಿ, ಪ್ರಾಣಿಗಳಲ್ಲಿ, ಪ್ರಕೃತಿಯಲ್ಲಿ, ಗಾಳಿಯಲ್ಲಿ.. ಮುಖ್ಯವಾಗಿ ನನ್ನ ದೇಹದ ಪ್ರತಿಯೊಂದು ಭಾಗದಲ್ಲೂ.. ಬೇಸ್ ಕ್ಯಾಂಪ್ನಿಂದ ಆ ಕೊನೆಯ ನಡೆ ಮುಗಿಸಿ ಕೇದಾರನಾಥ ದೇವಾಲಯದ ಮುಂದೆ ನಿಂತ ಕ್ಷಣ... ಎಲ್ಲವೂ ನಿಂತ ಹಾಗಾಯಿತು. ಆ ಕ್ಷಣದಲ್ಲಿ ನಾನು ಕೇವಲ ಆ ಕ್ಷಣದಲ್ಲೇ ಇದ್ದೆ. ನಿನ್ನೆ ಇರಲಿಲ್ಲ. ನಾಳೆ ಇರಲಿಲ್ಲ. ಇದ್ದಿದ್ದು ಈ ದಿನ, ಈ ಕ್ಷಣ ಮಾತ್ರ.
ನಿಜವಾಗಿಯೂ ದೇವರ ಸಾನ್ನಿಧ್ಯದಲ್ಲಿದ್ದೇವೆ ಅನ್ನೋ ಭಾವನೆ ಬಂದಾಗ, ಏನನ್ನೂ ಕೇಳಬೇಕು ಅನ್ನಿಸೋದಿಲ್ಲ. ಏನನ್ನೂ ಬೇಡಬೇಕು ಅನ್ನಿಸೋದಿಲ್ಲ. ಅವರು ಇದ್ದಾರೆ ಅನ್ನೋ ಭರವಸೆ ಸಾಕು. ನನ್ನನ್ನು ಇಲ್ಲಿವರೆಗೆ ತಂದ ಪ್ರತಿಯೊಂದು ಹೆಜ್ಜೆ, ಪ್ರತಿಯೊಂದು ನಿರ್ಧಾರ, ಪ್ರತಿಯೊಂದು ತಪ್ಪು, ಪ್ರತಿಯೊಂದು ಸರಿಯಾದ ಕೆಲಸ, ಕಲಿತದ್ದು, ಕಲಿಯದೇ ಉಳಿದದ್ದು, ಒಳ್ಳೆಯದು, ಕೆಟ್ಟದ್ದು.. ಎಲ್ಲವೂ ಸೇರಿ ನನ್ನನ್ನು ಈ ಜಾಗಕ್ಕೆ ತಂದಿವೆ.
ಇಂದು ನಾನು ಅವರ ಸಾನ್ನಿಧ್ಯದಲ್ಲಿ ನಿಂತಿದ್ದೇನೆ. ನಾನು ಇರಬೇಕಾದ ಜಾಗದಲ್ಲೇ ಇದ್ದೇನೆ.. ನನ್ನನ್ನು ಇಲ್ಲಿವರೆಗೆ ತಂದಿದ್ದರೆ, ನಾನು ಮಾಡಿದ ಪ್ರತಿಯೊಂದನ್ನೂ ಮತ್ತೆ ಮಾಡುತ್ತೇನೆ. ಹೆಮ್ಮೆಯಿಂದ ಮಾಡುತ್ತೇನೆ. ಯಾಕಂದ್ರೆ ಎಲ್ಲವೂ ಅವರೇ. ಹರ ಹರ ಮಹಾದೇವ. ಇನ್ನೊಂದು ವಿಷಯವೂ ಕಲಿತೆ. ಸುತ್ತಲೂ ನೋಡಿದಾಗ, ಕಿವಿಗೊಟ್ಟಾಗ....ಆ ಹಿಮಾಲಯ ಪರ್ವತಗಳು, ಮಧ್ಯದಲ್ಲಿ ದೇವಾಲಯ, ಆ ಜನ, ಆ ಕುದುರೆಗಳು, ಪ್ರಾರ್ಥನೆಗಳು, ಗಂಟೆಗಳ ಶಬ್ದ, ಹರಿಯುವ ನದಿ... ಇಷ್ಟೆಲ್ಲಾ ಶಬ್ದಗಳ ಮಧ್ಯೆಯೂ, ಅತ್ಯಂತ ಜೋರಾಗಿ ಕೇಳಿಸಿದ್ದು ಮೌನ." ಎಂದು ಯುವ ರಾಜ್ಕುಮಾರ್ ಬರೆದುಕೊಂಡಿದ್ದಾರೆ.
ಮುಂದಿನ ಹೆಜ್ಜೆ ಏನು?
ಹಾಗೇ ಯುವ ರಾಜ್ಕುಮಾರ್ ತನ್ನ ಮುಂದಿನ ಹೆಜ್ಜೆಯ ಬಗ್ಗೆನೂ ಬರೆದುಕೊಂಡಿದ್ದಾರೆ. "ಹಾಗಾಗಿ ನನ್ನ ಮುಂದಿನ ಹೆಜ್ಜೆ ಏನು? ಮುಂದಿನ ಸಿನಿಮಾ ಯಾವುದು? ಮುಂದಿನ ಉತ್ತರ ಏನು? ಅಂತ ಕೇಳುವ ಎಲ್ಲರಿಗೂ... ಮೌನವನ್ನು ಆನಂದಿಸಿ. ಯಾಕಂದ್ರೆ... ಹರ ಹರ ಮಹಾದೇವ." ಎಂದು ತಮ್ಮ ಮುಂದಿನ ಸಿನಿಮಾ ಘೋಷಣೆ ಮಾಡುವ ಬಗ್ಗೆ ಯುವ ರಾಜಕುಮಾರ್ ಸುಳಿವನ್ನು ನೀಡಿದ್ದಾರೆ.
ಕೇದಾರನಾಥ ದೇವಸ್ಥಾನ
ಕೇದಾರನಾಥ ದೇವಸ್ಥಾನ ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿದೆ. ಇದು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು. ಪವಿತ್ರ ಚಾರ್ಧಾಮ್ ಯಾತ್ರೆಯಲ್ಲಿ ಇದೂ ಒಂದಾಗಿದೆ. ಕೇದಾರನಾಥ ದೇವಸ್ಥಾನಕ್ಕೆ ಏಪ್ರಿಲ್ ಇಲ್ಲವೇ ಮೇ ತಿಂಗಳು ಉತ್ತಮ. ಈ ವೇಳೆ ದೇವಸ್ಥಾನದ ಬಾಗಿಲು ತೆರೆಯಲಾಗುತ್ತೆ. ಅಕ್ಟೋಬರ್ ಇಲ್ಲವೇ ನವೆಂಬರ್ವರೆಗೂ ಭಕ್ತರ ದರ್ಶನಕ್ಕೆ ಅವಕಾಶವಿರುತ್ತೆ. ಸುಮಾರು 16 ರಿಂದ 18 ಕಿ.ಮೀ. ಚಾರಣ ಮಾಡಬೇಕು. ಇಲ್ಲವೇ ಹೆಲಿಕಾಪ್ಟರ್ ಮೂಲಕವೂ ಇಲ್ಲಿಗೆ ತಲುಪಬಹುದು.


Click it and Unblock the Notifications
