ಶಿವಣ್ಣನ ಜೊತೆ ಯುವ ರಾಜ್ಕುಮಾರ್ ನಟಿಸಿದ ಸಿನಿಮಾ ಬಗ್ಗೆ ಗೊತ್ತೇ? ಮತ್ತೆ ಅದೇ ಅವಕಾಶಕ್ಕೆ ಕಾಯ್ತಿರೋದೇಕೆ?
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಎಲ್ಲರಿಗೂ ಬಲು ಪ್ರೀತಿ. ಕನ್ನಡ ಅಷ್ಟೇ ಅಲ್ಲ, ತೆಲುಗು, ತಮಿಳು ಭಾಷೆಯ ಫಿಲ್ಮ್ಮೇಕರ್ಸ್ ಹಾಗೂ ಸ್ಟಾರ್ಗಳಿಗೂ ಶಿವಣ್ಣ ಅಂದರೆ ಇಷ್ಟ. ಹಾಗೆ ಎಲ್ಲರೊಂದಿಗೂ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿರುವ ಕನ್ನಡ ಸೂಪರ್ಸ್ಟಾರ್. ಇವರು ಸಿನಿಮಾ ಜರ್ನಿ ಶುರುವಾಗಿ 40 ವರ್ಷಗಳು ಪೂರೈಸಿದೆ. ಈ ಸಂದರ್ಭದಲ್ಲಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಈಗಾಗಲೇ ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ, ನಾನಿ, ನೆಲ್ಸನ್ ದಿಲೀಪ್ ಕುಮಾರ್, ಕಮಲ್ ಹಾಸನ್, ಕನ್ನಡಿದಂದ ಧ್ರುವ ಸರ್ಜಾ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ. ಇನ್ನೊಂದು ಕಡೆ ಶಿವಣ್ಣನ ಅಭಿಮಾನಿಗಳು 40 ವರ್ಷದ ಜರ್ನಿಯನ್ನು ಸಂಭ್ರಮಿಸುತ್ತಿದ್ದಾರೆ. ಈ ಮಧ್ಯೆ ದೊಡ್ಡಪ್ಪನ ಸಾಧನೆ, ಸಿನಿಮಾ ಯಾನವನ್ನು ಮೆಚ್ಚಿ ಯುವರಾಜ್ಕುಮಾರ್ ಒಂದು ಪೋಸ್ಟ್ ಮಾಡಿದ್ದಾರೆ.

ದೊಡ್ಮನೆಯಿಂದ ಈಗತಾನೇ ಚಿತ್ರರಂಗಕ್ಕೆ ಕಾಲಿಟ್ಟಿರುವ ಯುವ ರಾಜ್ಕುಮಾರ್ಗೆ ಶಿವಣ್ಣ ಹೊಸಬರೇನಲ್ಲ. ಪ್ರತಿ ದಿನ ಅವರನ್ನು ನೋಡಿಕೊಂಡೇ ಬೆಳೆದಿದ್ದಾರೆ. ಬಾಲ್ಯದಲ್ಲಿ ಶಿವಣ್ಣನ ಸಿನಿಮಾದಲ್ಲಿ ನಟಿಸಿದ ನೆನಪು ಕೂಡ ಇದೆ. ಈಗ ನಾಯಕನಾಗಿ ಮಿಂಚುತ್ತಿರುವ ಯುವ ರಾಜ್ಕುಮಾರ್ ಡೊಡ್ಡಪ್ಪನ ಜರ್ನಿಯ ಕುರಿತು ಇನ್ಸ್ಟಾಗ್ರಾಂನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಈ ಪೋಸ್ಟ್ನಲ್ಲಿ ಏನಿದೆ ಅಂತ ತಿಳಿಯುವುದಕ್ಕೆ ಮುಂದೆ ಓದಿ.
ಮುಂದಿನ ಹೈಲೈಟ್ಸ್
ಶಿವಣ್ಣ 40 ವರ್ಷಗಳ ಸಿನಿ ಪಯಣಕ್ಕೆ ಯುವ ಶುಭಾಶಯ
ಶಿವಣ್ಣನ ಜೊತೆ ನಟಿಸಿದ ಸಿನಿಮಾದ ಮೆಲುಕು ಹಾಕಿದ ಯುವ
"ಮತ್ತೆ ಅದೇ ಥರದ ಅವಕಾಶಕ್ಕೆ ಕಾಯ್ತಿದ್ದೀನಿ" ಎಂದ ಯುವ
1986ರಲ್ಲಿ 'ಆನಂದ್' ಸಿನಿಮಾ ಮೂಲ ಶಿವಣ್ಣ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ 'ರಥಸಪ್ತಮಿ', 'ಮನಮೆಚ್ಚಿದ ಹುಡುಗಿ' ಸೇರಿ ಮೂರು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟು ಹ್ಯಾಟ್ರಿಕ್ ಹೀರೋ ಆದರು. ಇಲ್ಲಿಂದ ಶಿವಣ್ಣ ತಿರುಗಿ ನೋಡಿದ್ದೇ ಇಲ್ಲ. 'ಜೋಗಯ್ಯ' ಸಿನಿಮಾ ಮೂಲಕ ಸೆಂಚುರಿ ಸ್ಟಾರ್ ಆದರು. ಇನ್ನು 150 ಸಿನಿಮಾಗಳ ಕಡೆಗೆ ಇವರ ಪಯಣ ಮುನ್ನುಗ್ಗುತ್ತಿದೆ. ಈ ಹಾದಿಯಲ್ಲಿ ಚಿತ್ರರಂಗದಲ್ಲಿ 40 ವರ್ಷಗಳನ್ನು ಪೂರೈಸಿದ್ದಾರೆ.
40 ವರ್ಷಗಳ ಈ ಸುದೀರ್ಘ ಪಯಣವನ್ನು ಯುವ ರಾಜ್ಕುಮಾರ್ ನೆನಪಿಸಿಕೊಂಡಿದ್ದಾರೆ. ಹಾಗೇ ಶಿವಣ್ಣನೊಂದಿಗೆ ಎವರ್ಗ್ರೀನ್ ಸಿನಿಮಾದಲ್ಲಿ ಯುವ ನಟಿಸಿದ್ದರು. ಅದುವೇ ಉಪೇಂದ್ರ ನಿರ್ದೇಶಿಸಿದ 'ಓಂ'. ಈ ಸಿನಿಮಾದಲ್ಲಿ ಬಾಲ ನಟನಾಗಿ ಕಾಣಿಸಿಕೊಂಡಿದ್ದರು. ಆ ನೆನಪುಗಳನ್ನು ಕೂಡ ನೆನೆದು ಮತ್ತೆ ಈ ಅವಕಾಶಕ್ಕಾಗಿ ಕಾಯುತ್ತಿರುವುದಾಗಿ ಯುವ ರಾಜ್ಕುಮಾರ್ ಹೇಳಿದ್ದಾರೆ. ಅವರು ಬರೆದ ಪೋಸ್ಟ್ ಹೀಗಿದೆ.
ಯುವ ರಾಜ್ಕುಮಾರ್ ಪೋಸ್ಟ್
"ದೊಡಪ್ಪನವರ 40 ವರ್ಷಗಳ ಸಿನಿ ಜರ್ನಿ.. ದೊಡ್ಡಪ್ಪ ನನಗೆ ಚಿಕ್ಕವನಾಗಿದ್ದಾಗಿನಿಂದಲೂ ಫೇವರೆಟ್ ನಟ ಅಷ್ಟೆ ಅಲ್ಲ, ಅವರು ನನ್ನ ಜೀವನದ ಮಾರ್ಗದರ್ಶಕರು ಕೂಡ.
ಚಿತ್ರ ಹಾಗೂ ಚಿತ್ರರಂಗದ ಮೇಲಿನ ಅವರ ಬದ್ಧತೆ ನಮಗೆಲ್ಲ ಪಾಠಗಳಂತೆ. ನಟನೆ ಮೇಲಿನ ಅವರ ಉತ್ಸಾಹ, ನನ್ನಂತೆಯೇ ಎಷ್ಟೋ ಜನರ ಜೀವನೋತ್ಸಾಹಕ್ಕೆ ಕಾರಣವಾಗಿದೆ.
ಒಬ್ಬ ನಟ, ಶ್ರೇಷ್ಠ ನಟನಾಗುವುದು ಹೇಗೆ ಅಂತ ನಮ್ಮ ದೊಡ್ಡಪ್ಪನವರ ಒಂದೊಂದು ಸಿನಿಮಾಗಳು ತೋರಿಸಿಕೊಟ್ಟಿವೆ.
ಸದಾ ಇತರರಿಗಾಗಿ ಮಿಡಿಯುವ ದೊಡ್ಡಪ್ಪನ ಹೃದಯ ಪ್ರೀತಿ, ವಿಶ್ವಾಸ, ಬಾಂಧವ್ಯಕ್ಕೆ ಎಂದಿಗೂ ನಿರಾಸೆ ಮೂಡಿಸದೆ, ಎಲ್ಲರನ್ನ ಕಾಯಲು ನಿಲ್ಲುತ್ತದೆ. ತನ್ನ ಅನಾರೋಗ್ಯದ ಸಂದರ್ಭದಲ್ಲೂ ಕೂಡ ತನ್ನನ್ನ ನಂಬಿದವರಿಗೆ ಭರವಸೆಯ ಸಾಂತ್ವನ ಹೇಳಿದ್ದು, ದೊಡ್ಡಪ್ಪನವರ ವಿಶಾಲ ಹೃದಯವಂತಿಕೆ.
ಅವರ ಈ ಐತಿಹಾಸಿಕ ಸಿನಿ ಜರ್ನಿಯಲ್ಲಿ ಅದೆಷ್ಟೋ ಸೂಪರ್ ಹಿಟ್, ಬ್ಲಾಕ್ ಬಾಸ್ಟರ್ ಚಿತ್ರಗಳು ಹೊರಬಂದಿವೆ. ಅದ್ರಲ್ಲಿ ಬೆಸ್ಟ್ ಆಫ್ ಬೆಸ್ಟ್ ಚಿತ್ರವಾದ 'ಓಂ' ಚಿತ್ರದಲ್ಲಿ ನಾನು ಅವರೊಂದಿಗೆ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದ್ದು ನನ್ನ ಸೌಭಾಗ್ಯ, ನಾನ್ ಅದನ್ನ ಯಾವತ್ತು ಮರೆಯೋಲ್ಲ. ಮತ್ತೆ ಅದೇ ಥರದ ಅವಕಾಶಕ್ಕೆ ಕಾಯ್ತಿದ್ದೀನಿ.
40 ವರ್ಷಗಳ ನಿಮ್ಮ ಜರ್ನಿ ಭಾರತದ ಚಿತ್ರರಂಗದಲ್ಲಿ ಇತಿಹಾಸ ಸೃಷ್ಠಿಸಿದೆ. ನಿಮ್ಮ ಅಭಿನಯ ನಮ್ಮಂತಹ ಅದೆಷ್ಟೋ ಪೀಳಿಗಳಿಗೆ ಸ್ಪೂರ್ತಿ ನೀಡಿದೆ. ನಿಮ್ಮ ಈ ಸಿನಿ ಪಯಣ ಹೀಗೆ ಮುಂದುವರೆಯಲಿ. ನಿಮ್ಮ 40 ವರ್ಷದ ಸಿನಿ ಪಯಣವನ್ನ ನಾನು ಸಂಭ್ರಮದಿಂದ, ಸಂಭ್ರಮಿಸುತ್ತೇನೆ." ಎಂದು ಯುವ ರಾಜ್ಕುಮಾರ್ ಹೇಳಿದ್ದಾರೆ.


Click it and Unblock the Notifications











