PUC Result: 'ಯುವರತ್ನ' ನಟಿ ಅಂಕಿತಾ ಜಯರಾಮ್ ದ್ವಿತೀಯ ಪಿಯುಸಿಯಲ್ಲಿ ಡಿಸ್ಟಿಂಕ್ಷನ್; ಯಾವ್ಯಾವ ವಿಷಯಕ್ಕೆ ಎಷ್ಟೆಷ್ಟು?
ಇಂದು (ಏಪ್ರಿಲ್ 9) ಕರ್ನಾಟಕ ರಾಜ್ಯದ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದೆ. ಕಳೆದ ಬಾರಿಗೆ ಹೋಲಿಸಿದರೆ, ಈ ವರ್ಷದ ಫಲಿತಾಂಶದಲ್ಲಿ ಏರಿಕೆಯಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಯುಸಿ ಫಲಿತಾಂಶದ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಕಳೆದ ವರ್ಷದಂತೆ ಈ ವರ್ಷ ಕೂಡ ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ.
ಈ ವರ್ಷ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ನಟಿ ಉತ್ತಮ ಅಂಕವನ್ನು ಪಡೆದುಕೊಂಡು ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣಗೊಂಡಿದ್ದಾರೆ. ಕನ್ನಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸಿರುವ ಅಂಕಿತಾ ಜಯರಾಮ್ಗೆ ಒಳ್ಳೆಯ ಅಂಕಗಳು ಬಂದಿವೆ. ಅಪ್ಪು ಅಭಿಮಾನಿಯೂ ಆಗಿರುವ ಅಂಕಿತಾ ಜಯರಾಮ್ ನಟನೆಯಲ್ಲಿ ಬ್ಯುಸಿಯಾಗಿರುವಂತೆ ಶಿಕ್ಷಣದಲ್ಲೂ ಉತ್ತಮ ಸಾಧನೆಯನ್ನು ಮಾಡಿದ್ದಾರೆ.

ಕನ್ನಡದ ಧಾರಾವಾಹಿಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಅಂಕಿತಾ ಜಯರಾಮ್ ನಟಿಸುತ್ತಿದ್ದಾರೆ. ನಟನೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರೂ ಶಿಕ್ಷಣದಲ್ಲಿ ಹಿಂದೆ ಬಿದ್ದಿಲ್ಲ. ಅದಕ್ಕೆ ಅವರು ಪಡೆದ ಪಿಯುಸಿ ಫಲಿತಾಂಶವೇ ಪ್ರಮುಖ ಕಾರಣ. ಅಷ್ಟಕ್ಕೂ ಅಂಕಿತಾ ಜಯರಾಮ್ ಪಿಯುಸಿಯಲ್ಲಿ ಪಡೆದ ಅಂಕ ಎಷ್ಟು? ಯಾವ್ಯಾವ ವಿಷಯಕ್ಕೆ ಎಷ್ಟೆಷ್ಟು ಅಂಕಗಳನ್ನು ಪಡೆದಿದ್ದಾರೆ. ತಿಳಿಯುವುದಕ್ಕೆ ಮುಂದೆ ಓದಿ.
ಅಂಕಿತ ಜಯರಾಮ್ ಕನ್ನಡ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ಶ್ರೀಮುರಳಿ ನಟನೆಯ 'ಭರಾಟೆ', ದರ್ಶನ್ 'ಕ್ರಾಂತಿ', ಪುನೀತ್ ರಾಜ್ಕುಮಾರ್ ನಟನೆಯ 'ಯುವರತ್ನ', ಡಾಲಿ ಧನಂಜಯ್ ನಟನೆಯ 'ರತ್ನನ್ ಪ್ರಪಂಚ', ಶಿವರಾಜ್ಕುಮಾರ್ ನಟನೆಯ 'ವೇದ', 'ಶೋಕಿವಾಲ', 'ಸಾರಾ ವಜ್ರ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರೊಂದಿಗೆ 'ಭೂಮಿಗೆ ಬಂದ ಭಗವಂತ' ಅಂತಹ ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ.
ನಟಿ ಅಂಕಿತಾ ಜಯರಾಮ್ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿದ್ದಾರೆ. ಈ ಬಾರಿ ಬಂದ ಫಲಿತಾಂಶದಲ್ಲಿ ಶೇ. 97ರಷ್ಟು ಅಂಕ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ನಟಿ 600ಕ್ಕೆ 579 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣ ಪಡೆದಿದ್ದಾರೆ. ಬ್ಯುಸಿನೆಸ್ ಸ್ಟಡೀಸ್ನಲ್ಲಿ 98, ಅಕೌಂಟೆನ್ಸಿಯಲ್ಲಿ 96, ಸ್ಟ್ಯಾಟಿಸ್ಟಿಕ್ನಲ್ಲಿ 100 ಕಂಪ್ಯೂಟರ್ ಸೈನ್ಸ್ 100 ಅಂಕಗಳನ್ನು ಪಡೆದರೆ, ಇಂಗ್ಲಿಷ್ನಲ್ಲಿ 94, ಕನ್ನಡದಲ್ಲಿ 98 ಅಂಕಗಳನ್ನು ಪಡೆದಿದ್ದಾರೆ.

ಈ ಮೂಲಕ ಅಂಕಿತಾ ಜಯರಾಮ್ ನಟನೆ ಹಾಗೂ ಶಿಕ್ಷಣ ಎರಡರಲ್ಲೂ ಆಸಕ್ತಿ ಬೆಳೆಸಿಕೊಂಡವರಿಗೆ ಸ್ಪೂರ್ತಿಯಾಗಿದ್ದಾರೆ. ನಟನೆಯಲ್ಲಿ ಸಕ್ರಿಯರಾಗಿರುವವರು ಶಿಕ್ಷಣದಲ್ಲಿ ಹಿಂದೆ ಬೀಳಬಹುದು ಎನ್ನುವ ಭಯ ಪೋಷಕರಿಗೆ ಇರುತ್ತೆ. ಆದರೆ, ಅಂಕಿತಾ ಜಯರಾಮ್ ಅದನ್ನು ಸುಳ್ಳು ಎಂದು ಸಾಬೀತು ಮಾಡಿದ್ದಾರೆ. ಇವರ ಈ ಸಾಧನೆ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದೆ.
ಅಂಕಿತಾ 2024ರಲ್ಲಿ ತೆರೆಕಂಡಿರೋ 'ಕಾಗದ' ಸಿನಿಮಾದಲ್ಲಿ ನಾಯಕಿಯಾಗಿಯೂ ಮಿಂಚಿದ್ದಾರೆ. 'ಕಾಗದ' ಸಿನಿಮಾದಲ್ಲಿ ಅಂಕಿತಾಗೆ ಆದಿತ್ಯ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಬಾಲರಾಜವಾಡಿ, ನೇಹಾ ಪಾಟೀಲ್, ಶಿವಮಂಜು, ಅಶ್ವತ್ಥ್ ನೀನಾಸಂ, ಗೌತಮ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. 2005ರ ಸಮಯದಲ್ಲಿ ನಡೆಯುವ ಕಾಲ್ಪನಿಕ ಲವ್ ಸ್ಟೋರಿಯಾಗಿದೆ. ಮೊಬೈಲ್ ಇಲ್ಲದ ಕಾಲಘಟ್ಟದಲ್ಲಿ ಕಾಗದ ಎಷ್ಟು ಮುಖ್ಯ ಪಾತ್ರ ವಹಿಸುತ್ತಿತ್ತು ಅನ್ನೋದು ಈ ಸಿನಿಮಾದ ಕಥೆಯಾಗಿತ್ತು.


Click it and Unblock the Notifications















