ಕ್ಷಮೆ ಕೇಳಿದ 'ಯುವರತ್ನ' ನಿರ್ದೇಶಕ ಸಂತೋಷ್ ಆನಂದ್ ರಾಮ್
ಕೊರೊನಾ ವೈರಸ್ ಸೋಂಕು ಜನರ ಬದುಕಿಗೆ ದೊಡ್ಡ ಬರೆ ಎಳೆದಿದೆ. ಮುಂದಿನ ದಾರಿ ಇನ್ನಷ್ಟು ಭಯಾನಕವಾಗಿರಲಿದೆ ಎಂಬ ಸುಳಿವು ನೀಡಿದೆ. ಆದರೆ ಅದರ ನಡುವೆ ಅನೇಕರು ಬದುಕಿನ ಪರಾಮರ್ಶೆಗೆ ಇಳಿದಿದ್ದಾರೆ. ಎಷ್ಟೋ ಮಂದಿ ಈ ಸಂಕಷ್ಟ ಎದುರಾಗಿದ್ದು ಒಳ್ಳೆಯದೇ ಆಯಿತು. ನಮ್ಮ ಸಂಪ್ರದಾಯ, ಜೀವನ ವ್ಯವಸ್ಥೆ, ಪ್ರಕೃತಿಯ ವಿರುದ್ಧ ಹೋದ ಮನುಷ್ಯನಿಗೆ ನಿಸರ್ಗವೇ ಕಲಿಸುತ್ತಿರುವ ಪಾಠ ಎಂದು ಹೇಳುತ್ತಿದ್ದಾರೆ.
Recommended Video
ವಿದೇಶದ ಉದ್ಯೋಗ, ಸಿಟಿ ಜೀವನ ಎಂದು ಹಳ್ಳಿ, ದೇಶ ತೊರೆದು ಹಣಕ್ಕಾಗಿ ಅಲೆಯುತ್ತಿರುವ ಜನರಿಗೆ ತಮ್ಮ ದೇಶ, ಹಳ್ಳಿಯ ಮಹತ್ವ ಈಗ ಅರಿವಾಗುತ್ತಿದೆ. ಜನರು ನಗರ ತೊರೆದು ಜೀವ ಉಳಿಸಿಕೊಳ್ಳಲು ಹಳ್ಳಿಗೆ ಹೋಗಿ ತಮ್ಮ ಮೂಲ ಮನೆಗಳಲ್ಲಿ ಸೇರಿಕೊಂಡಿದ್ದಾರೆ. ಬದುಕು ಉಳಿಸುವುದು ಹಳ್ಳಿಗಳೇ. ನಮಗೆ ನಿಸರ್ಗದ ಒಡನಾಟವೇ ಬದುಕು ಎಂದು ಅರಿತುಕೊಳ್ಳುತ್ತಿದ್ದಾರೆ. ನಾವು ಮಾಡಿರುವ ತಪ್ಪುಗಳಿಗೆ ಪ್ರಕೃತಿ ನೀಡುತ್ತಿರುವ ಶಿಕ್ಷೆ ಇದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಹೀಗೆ ಭಾವುಕ ಮಾತುಗಳನ್ನಾಡಿದ್ದಾರೆ. ಮುಂದೆ ಓದಿ...

ಸುತ್ತಮುತ್ತಲಿನ ಜನ ಚೆನ್ನಾಗಿದ್ದರೆ...
ನಮ್ಮ ದೇಶ-ನಮ್ಮ ನಾಡು-ನಮ್ಮ ಸಮಾಜ-ನಮ್ಮ ಸುತ್ತ ಮುತ್ತಲಿನ ಜನರು ಚೆನ್ನಾಗಿದ್ದರೆ ನಾವು ಚೆನ್ನಾಗಿರಲು ಸಾಧ್ಯ ಎಂಬುವ ಮಾತು ನಿಜವಾಗಿದೆ! ಎಂದು 'ಯುವರತ್ನ' ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೇಳಿದ್ದಾರೆ. ನಾವು ಚೆನ್ನಾಗಿರಬೇಕು ಎಂದರೆ ನಮ್ಮ ಸುತ್ತಲಿನ ಜನರೂ ಚೆನ್ನಾಗಿರಬೇಕು. ನಾವು ಮಾತ್ರವೇ ಚೆನ್ನಾಗಿ ಇರಬೇಕು ಎನ್ನುವ ಮನಸ್ಥಿತಿ ತಪ್ಪು ಎನ್ನುವುದನ್ನು ಈಗಿನ ಸಂದರ್ಭವೇ ಹೇಳುತ್ತಿದೆ ಎಂಬುದನ್ನು ಅವರು ವಿವರಿಸಿದ್ದಾರೆ.

ಹಣ, ಅಧಿಕಾರ ಪ್ರಯೋಜನವಾಗುತ್ತಿಲ್ಲ
ಈಗ ದೊಡ್ಡ ಕಾರ್ ಇದ್ದವರು ಓಡಾಡುವಹಾಗಿಲ್ಲ, ಹಣ ಇದ್ದವರು ವಿದೇಶ ಸುತ್ತುವಹಾಗಿಲ್ಲ, ಅಧಿಕಾರವನ್ನು ನಂಬಿದವರು ಅಧಿಕಾರ ತೋರುವಹಾಗಿಲ್ಲ, ಖುಷಿ ಸಮಾರಂಭಕ್ಕೆ ಬಂಧುಗಳು ಸೇರುವ ಹಾಗಿಲ್ಲ ,ಜೇಬಲ್ಲಿ ದುಡ್ಡು ಇದ್ದರು ಖರ್ಚು ಮಾಡುವಹಾಗಿಲ್ಲ !! ಎಂದು ಹಣ, ಅಧಿಕಾರಿಗಳು ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವ ಪ್ರಯೋಜನಕ್ಕೂ ಬರುವುದಿಲ್ಲ ಎಂದಿದ್ದಾರೆ.

ಇರಲಿ ಒಂದು ಕ್ಷಮೆ
ಈಗ ತೋರಿಸಬಹುದಾದದ್ದು ಪ್ರೀತಿ, ಖರ್ಚು ಮಾಡುವಂತದ್ದು ಸಹನೆ, ನಾವು ಉಪಯೋಗಿಸಬಹುದಾದದ್ದು ಕರುಣೆ.. ನಾವು ಬದುಕುತ್ತಿದ್ದಿದ್ದು ಒಂದು "ಭ್ರಮೆ", ಕುಟುಂಬಕ್ಕೆ ಸಮಯ ಕೊಡದೆ-ಪ್ರಕೃತಿ ಕಡೆಗೆ ಗಮನ ಕೊಡದಿದ್ದಕ್ಕೆ ಇರಲಿ ಒಂದು "ಕ್ಷಮೆ" ದೇಶ -ನಾಡು -ಸಮಾಜ ಚೆನ್ನಾಗಿದ್ದರೆ ನಾವು... ಎಂದು ಸಂತೋಷ್ ಆನಂದ್ ರಾಮ್ ಮನಮುಟ್ಟುವಂತೆ ಹೇಳಿದ್ದಾರೆ.
ಪೊಲೀಸರಿಗೆ ನಮನ
ಭಾರತವು ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿದೆ. ಇದು ಆತ್ಮವಿಶ್ವಾಸದೆಡೆಗಿನ ದಿಟ್ಟ ಹೆಜ್ಜೆಗಳು ಎಂದು ಅವರು ಹೇಳಿದ್ದಾರೆ. ತಮ್ಮ ಕುಟುಂಬದ ಸುರಕ್ಷತೆಯನ್ನು ಮೀರಿ ಜನರ ಸುರಕ್ಷತೆಗೆ ಮನೆ ತೊರೆದು ಸರಿಯಾದ ಸಮಯಕ್ಕೆ ಊಟ ಮಾಡದಿದ್ದರೂ ನಿರಾಶ್ರಿತರಿಗೆ ಊಟ ಹಂಚುತ್ತಿರುವ ನಿಮ್ಮ ಕೆಲಸ ದೇವರ ಕೆಲಸ. "ದೇವರು ಕಾಯುತ್ತಾನೆ ಎನ್ನುತ್ತಾರೆ, ಕಾಯುತ್ತಿದ್ದಾನೆ ನಿಮ್ಮ ರೂಪದಲ್ಲಿ" ಕರ್ನಾಟಕ ಪೊಲೀಸ್ ಗೆ ನನ್ನ ಕೋಟಿ ನಮನ ಎಂದು ಪೊಲೀಸರ ಸೇವೆಯನ್ನು ಅವರು ಪ್ರಶಂಸಿಸಿದ್ದಾರೆ.


Click it and Unblock the Notifications











