'ಬಾಯ್ಕಾಟ್ ಬನಾರಸ್'ಗೆ ವಿಘ್ನ ವಿನಾಶಕ ಗಣೇಶನ ಮೊರೆ ಹೋದ ಜಮೀರ್ ಪುತ್ರ!
ಬಾಲಿವುಡ್ ಮಂದಿಗೆ ಬಾಯ್ಕಾಟ್ ಅನ್ನೋದು ಕಾಮನ್ ಆಗಿಬಿಟ್ಟಿದೆ. ಕಳೆದೆ ಎರಡ್ಮೂರು ವರ್ಷದಿಂದ 'ಬಾಯ್ಕಾಟ್ ಬಾಲಿವುಡ್' ಅಭಿಯಾನ ನಡೆಯುತ್ತಲೇ ಇದೆ. ಈ ಮಧ್ಯೆ ಸಿನಿಮಾಗಳನ್ನು ಬಾಯ್ಕಾಟ್ ಮಾಡುವ ಹಂತಕ್ಕೆಸ ಬಂದು ನಿಂತಿದೆ.
ಬಾಯ್ಕಾಟ್ ಅಭಿಯಾನದಿಂದ ಬಾಲಿವುಡ್ನ ಸೂಪರ್ಸ್ಟಾರ್ ಸಿನಿಮಾಗಳೇ ಮಕಾಡೆ ಮಲಗಿವೆ. ಬಾಕ್ಸಾಫೀಸ್ನಲ್ಲಿ ಚಿಂದಿ ಉಡಾಯಿಸಬೇಕಿದ್ದ ಸಿನಿಮಾಗಳು ನೆಲಕ್ಕಚ್ಚಿವೆ. ಹೀಗಾಗಿ ಈ ಬಾಯ್ಕಾಟ್ ಅಭಿಯಾನದಿಂದ ಅಕ್ಷರಶ: ಬಾಲಿವುಡ್ ನಲುಗಿ ಹೋಗಿದೆ. ಈಗ ಈ ಬಾಯ್ಕಾಟ್ ಗಾಳಿ ಸ್ಯಾಂಡಲ್ವುಡ್ ಕಡೆಗೂ ಬೀಸಿದೆ.
ಕಳೆದ ನಾಲ್ಕೈದು ದಿನಗಳಿಂದ ಬಾಯ್ಕಾಟ್ ಟ್ರೆಂಡ್ ಸ್ಯಾಂಡಲ್ವುಡ್ಗೂ ಕಾಲಿಟ್ಟಿತ್ತು. ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಅಭಿನಯದ 'ಬನಾರಸ್' ಸಿನಿಮಾಗೂ ತಟ್ಟಿದೆ. ಈ ಬಿಸಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಜಮೀರ್ ಅಹಮದ್ ಖಾನ್ ಹಾಗೂ ಪುತ್ರ ಝೈದ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ ಅನ್ನೋ ಮಾತು ಸ್ಯಾಂಡಲ್ವುಡ್ನಲ್ಲಿ ಕೇಳಿ ಬರುತ್ತಿದೆ.

ಜಮೀರ್ ಪುತ್ರನಿಗೆ ಬಾಯ್ಕಾಟ್ ಬಿಸಿ
ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ 'ಬನಾರಸ್' ಅನ್ನೋ ಸಿನಿಮಾದಲ್ಲಿ ನಟಿಸಿರೋದು ಗೊತ್ತೇ ಇದೆ. ಇದೇ ಸಿನಿಮಾ ಈಗ ಬಿಡುಗಡೆ ಸಜ್ಜಾಗಿ ನಿಂತಿದೆ. ನವೆಂಬರ್ ತಿಂಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಇನ್ನೇನು ರಿಲೀಸ್ಗೆ ಕೆಲವೇ ತಿಂಗಳು ಬಾಕಿಯಿದೆ ಅನ್ನುವಾಗಲೇ 'ಬನಾರಸ್'ಗೆ ಬಾಯ್ಕಾಟ್ ಬಿಸಿ ತಟ್ಟಿದೆ. ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಿಸುವ ವಿಚಾರವಾಗಿ ವಾದ-ವಿವಾದ ನಡೆದಿದ್ದು ಗೊತ್ತೇ ಇದೆ. ಸೋಶಿಯಲ್ ಮೀಡಿಯಾಗಳಲ್ಲಿ ಗಣೇಶ ಹಬ್ಬಕ್ಕೆ ಜಮೀರ್ ಅಹಮದ್ ಖಾನ್ ಶುಭ ಕೋರುತ್ತಾರೆ. ಅ ಕಡೆ ದೆಹಲಿಯಲ್ಲಿ ಕಪಿಲ್ ಸಿಬಲ್ ಭೇಟಿ ಮಾಡಿ ಗಣೇಶೋತ್ಸವ ನಡೆಸದಂತೆ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಹಾಕಿಸುತ್ತಾರೆಂದು ಹಿಂದೂಪರ ಸಂಘಟನೆಗಳು ಆರೋಪ ಮಾಡಿದ್ದವು. ಈ ಬೆನ್ನಲ್ಲೇ ಬಾಯ್ಕಾಟ್ ಬನಾರಸ್ ಬಿಸಿ ತಟ್ಟಿದೆ.

ಜಮೀರ್ ಮಾಸ್ಟರ್ ಪ್ಲ್ಯಾನ್?
ಪುತ್ರ ಝೈದ್ ಖಾನ್ ಸಿನಿಮಾಗೆ ಬಾಯ್ಕಾಟ್ ಭೀತಿ ಶುರುವಾಗುತ್ತಿದ್ದಂತೆ ಜಮೀರ್ ಎಚ್ಚೆತ್ತುಕೊಂಡಿದ್ದಾರೆ. ಅದಕ್ಕೆ ಗಣೇಶೋತ್ಸವ ಮಾಡಲು ಮುಂದಾಗಿದ್ದಾರೆ ಅನ್ನೋ ಗುಸುಗುಸು ಸ್ಯಾಂಡಲ್ವುಡ್ನಲ್ಲಿ ಕೇಳಿ ಬರುತ್ತಿದೆ. ಕೆಲವು ದಿನಗಳ ಹಿಂದೆ ಚಾಮರಾಜಪೇಟೆಯ ಶಾಸಕರಾದ ಜಮೀರ್ ಅಹ್ಮದ್ ಖಾನ್ ತಮ್ಮ ಕಚೇರಿಯಲ್ಲಿ ಗಣೇಶನನ್ನು ಕೂರಿಸಿ, ಪೂಜೆ ಸಲ್ಲಿಸಿದ್ದರು. ಈ ವೇಳೆ ಪುತ್ರ ಝೈದ್ ಖಾನ್ ಕೂಡಾ ಭಾಗಿಯಾಗಿದ್ದರು. ಹೀಗೆ ಗಣೇಶೋತ್ಸವ ಆಚರಣೆ ಮಾಡಿ ಬಾಯ್ಕಾಟ್ನಿಂದ ಸಿನಿಮಾವನ್ನು ಬಚಾವ್ ಮಾಡಲು ಹೀಗೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಝೈದ್ ಖಾನ್ ಗಣಪತಿ ಪೂಜೆ
ಝೈದ್ ಖಾನ್ ಇತ್ತೀಚೆಗೆ ಗಣಪತಿ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಭಕ್ತಿ ಭಾವದಿಂದ ಗಣೇಶ ಹಬ್ಬವನ್ನು ಜನರೊಂದಿಗೆ ಆಚರಣೆ ಮಾಡಿದ್ದಾರೆ. ಅವರೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ. ಈ ಫೋಟೊಗಳು ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆ ಬಳಿಕ ಸೋಶಿಯಲ್ ಮೀಡಿಯಾಗಳಲ್ಲಿ ಇದು 'ಬಾಯ್ಕಾಟ್ ಬನಾರಸ್'ನಿಂದ ತಪ್ಪಿಸಿಕೊಳ್ಳುವುದಕ್ಕೆ ಜಮೀರ್ ಅಹಮದ್ ಖಾನ್ ಮಾಡಿರೋ ಪ್ಲ್ಯಾನ್ ಅಂತ ಟೀಕೆ ಮಾಡುತ್ತಿದ್ದಾರೆ.

'ಬನಾರಸ್' ಸಿನಿಮಾ ಮೇಲೆ ಕುತೂಹಲ
'ಬನಾರಸ್' ಕುತೂಹಲ ಸೃಷ್ಟಿಸುವುದಕ್ಕೆ ಹಲವು ಕಾರಣಗಳಿವೆ. 'ಬ್ಯೂಟಿಪುಲ್ ಮನಸ್ಸುಗಳು', 'ಬೆಲ್ ಬಾಟಂ' ಅಂತಹ ಸಿನಿಮಾಗಳನ್ನು ನಿರ್ದೇಶಿಸಿರೋ ಜಯತೀರ್ಥ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನೊಂದು ಮಾಯಾಗಂಗೆ ಹಾಡು ಈಗಾಗಲೇ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಅಭಿನಯದ ಮೊದಲ ಸಿನಿಮಾವಿದು. ಹೀಗಾಗಿ ಪ್ರೇಕ್ಷಕರಲ್ಲಿ ಸಹಜವಾಗಿಯೇ ಕುತೂಹಲ ಮೂಡಿದೆ.


Click it and Unblock the Notifications











