ಮತ್ತೊಂದು ಕನ್ನಡ ವೆಬ್ ಸೀರಿಸ್ ಟ್ರೈಲರ್ ರಿಲೀಸ್; ಹೇಗಿದೆ ಸಸ್ಪೆನ್ಸ್ ಥ್ರಿಲ್ಲರ್ 'ಶೋಧ'?
ಕನ್ನಡದಲ್ಲಿ ವೆಬ್ ಸೀರಿಸ್ಗಳು ಬಂದಿದ್ದು ಕಡಿಮೆ. ಬಂದರೂ ವೀಕ್ಷಕರ ಮನಗೆದ್ದು ಸೂಪರ್ ಹಿಟ್ ಅಂತ ಸಾಬೀತಾಗಿದು ಕೂಡ ಅಷ್ಟಕ್ಕಷ್ಟೇ. ಕನ್ನಡ ಚಿತ್ರರಂಗ ಸೋಲಿನ ಸುಳಿಗೆ ಸಿಲುಕಿ ಸೈಲೆಂಟ್ ಆಗಿದ್ದ ವೇಳೆ ಓಟಿಟಿ ವೇದಿಕೆಗಳು ಕೂಡ ಇತ್ತ ಸುಳಿಯಲಿಲ್ಲ. ಈ ವೇಳೆ ಸಿನಿಮಾಗಿಂತ ವೆಬ್ ಸೀರಿಸ್ ಒಂದು ಹೊಸ ಸಂಚಲನವನ್ನು ಸೃಷ್ಟಿಸಿತ್ತು. ವೆಬ್ ಸೀರಿಸ್ ಮಾಡುವ ತಾಕತ್ತು ನಮ್ಮಲ್ಲೂ ಇದೆ ಎಂದು ಸಾರಿ ಹೇಳಿದ್ದು 'ಅಯ್ಯನ ಮನೆ'.
'ಅಯ್ಯನ ಮನೆ' ವೆಬ್ ಸೀರಿಸ್ ಸೂಪರ್ ಸಕ್ಸಸ್ ಕಂಡ ಬೆನ್ನಲ್ಲೇ Z 5 ಮತ್ತೊಂದು ಪ್ರಾಜೆಕ್ಟ್ ಅನ್ನು ಹೊತ್ತು ಬರುತ್ತಿದೆ. ಅದುವೇ 'ಶೋಧ'. ಇದೇ ಆಗಸ್ಟ್ 22 ರಿಂದ 'ಶೋಧ' ವೆಬ್ ಸೀರೀಸ್ ಜೀ 5ನಲ್ಲಿ ಗ್ರ್ಯಾಂಡ್ ಆಗಿ ಸ್ಟ್ರೀಮಿಂಗ್ ಆಗಲಿದೆ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ವೆಬ್ ಸೀರಿಸ್ ಆಗಿದ್ದು, ಸುಹಾಸ್ ನವರತ್ನ ಎಂಬುವವರು ಕಥೆ ಬರೆದಿದ್ದಾರೆ. ಸುನಿಲ್ ಮೈಸೂರು ಈ ವೆಬ್ ಸೀರಿಸ್ ಅನ್ನು ನಿರ್ದೇಶನ ಮಾಡಿದ್ದಾರೆ.

ವಿಶೇಷ ಅಂದರೆ, 'ಶೋಧ'ವನ್ನು ಕೆಆರ್ ಜಿ ಸ್ಟುಡಿಯೋ ನಿರ್ಮಾಣ ಮಾಡಿದೆ. ಈ ವೆಬ್ ಸೀರಿಸ್ ಆರು ಎಪಿಸೋಡ್ಗಳನ್ನು ಒಳಗೊಂಡಿದ್ದು,ಸಿಕ್ಕಾಪಟ್ಟೆ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬರುತ್ತಿದೆ. ಈ ಕನ್ನಡ ವೆಬ್ ಸೀರೀಸ್ ಟ್ರೈಲರ್ ಈಗ ರಿಲೀಸ್ ಆಗಿದೆ.
ಅಂದ್ಹಾಗೆ 'ಶೋಧ' ಕಥೆಯ ಕಡೆಗೆ ಬರೋದಾರೇ, ಪ್ರಾಚೀನ ಕೊಡವ ಜಾನಪದ ಹಾಗೂ ಸಮಕಾಲೀನ ನೈತಿಕ ಸಂದಿಗ್ಥತೆಗಳ ಈ ವೆಬ್ ಸೀರಿಸ್ ಒಳಗೊಂಡಿದೆ. ನಿರ್ದೇಶಕ ಹಾಗೂ ನಟ ಪವನ್ ಕುಮಾರ್ ಈ ವೆಬ್ ಸೀರಿಸ್ನಲ್ಲಿ ರೋಹಿತ್ ಎಂಬ ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪವನ್ ಜೊತೆಗೆ ಸಿರಿ ರವಿಕುಮಾರ್, ಅರುಣ್ ಸಾಗರ್ ಹಾಗೂ ಅನುಷಾ ರಂಗನಾಥ್ ಪ್ರಮುಖ ಪಾತ್ರದಲ್ಲಿ ನೋಡಬಹುದಾಗಿದೆ.
ಇನ್ನು ವೆಬ್ ಸೀರಿಸ್ನ ಒಂದೆಳೆ ಸ್ಟೋರಿ ಕಡೆಗೆ ಬರೊದಾರೇ ವಕೀಲ ವೃತ್ತಿಯಲ್ಲಿ ಹೆಸರು ಮಾಡಿರುವ ರೋಹಿತ್ ಪತ್ನಿ ನಿಗೂಢವಾಗಿ ಕಣ್ಮರೆಯಾಗ್ತಾಳೆ. ಅಲ್ಲಿಂದ ರೋಹಿತ್ ಪ್ರಪಂಚ ತೆರೆದುಕೊಳ್ಳುತ್ತಾ ಹೋಗುತ್ತೆ. ಇದನ್ನೇ ಟ್ವಿಸ್ಟ್ ಆಗೇನೂ ಇಟ್ಟಿಲ್ಲ. ಕಳೆದು ಹೋದ ಪತ್ನಿ ಮರಳಿ ಸಿಕ್ತಾಳೆ. ಇಲ್ಲಿಂದ ವೆಬ್ ಸೀರಿಸ್ನ ಅಸಲಿ ತಿರುವು ಆರಂಭ ಆಗುತ್ತಾ ಹೋಗುತ್ತೆ.
ಈ ವೆಬ್ ಸೀರಿಸ್ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪವನ್ ಕುಮಾರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ."ನಾನು ಮೊದಲು ಶೋಧ ಚಿತ್ರಕಥೆಯನ್ನು ಓದಿದಾಗ, ಅದರ ತಿರುವುಗಳಿಂದ ಮಾತ್ರವಲ್ಲ, ಕಥೆಯು ಎಷ್ಟು ಆಳವಾಗಿ ಎಂಬುದಕ್ಕೂ ನಾನು ಆಕರ್ಷಿತನಾದೆ. ನಾನು ನಿರ್ವಹಿಸುವ ಪಾತ್ರ ರೋಹಿತ್ ಈ ವೆಬ್ ಸೀರಿಸ್ನ ಪರಿಪೂರ್ಣ ನಾಯಕನಲ್ಲ. ಅವನು ಸದಾ ತಪ್ಪುಗಳನ್ನು ಮಾಡುತ್ತಾನೆ. ಆದರೆ, ನೀವು ಅವನ ಸ್ಥಾನದಲ್ಲಿ ನಿಂತು ನೋಡಿದಾಗ, ಅದೇ ರೀತಿ ಮಾಡುತ್ತಿದ್ರಿ ಎಂದು ಆಶ್ಚರ್ಯ ಪಡದೆ ಇರಲು ಸಾಧ್ಯವಿಲ್ಲ. ZEE5 ಮತ್ತು KRG ಸ್ಟುಡಿಯೋಸ್ ಸಹಯೋಗದೊಂದಿಗೆ ಇದೊಂದು ಅದ್ಭುತ ಪಯಣ. ಒಂದು ವಿಷಯ ಖಚಿತ, ನೀವು ರೋಹಿತ್ನ ಪ್ರಪಂಚಕ್ಕೆ ಕಾಲಿಟ್ಟಾಗ, ಕೊನೆಯ ಚೌಕಟ್ಟಿನವರೆಗೂ ನೀವು ಪ್ರತಿಯೊಂದು ಸತ್ಯವನ್ನು ಪ್ರಶ್ನಿಸುತ್ತಲೇ ಇರುತ್ತೀರಿ." ಎಂದು ಪವನ್ ಕುಮಾರ್ ಹೇಳಿದ್ದಾರೆ.
ಇನ್ನು 'ಅಯ್ಯನ ಮನೆ' ಯಶಸ್ಸಿನ ಬಳಿಕ ಇದೇ ಜೋಷ್ನಲ್ಲಿ ಮತ್ತೊಂದು ವೆಬ್ ಸೀರಿಸ್ ಕೈಗೆತ್ತಿಕೊಂಡಿದ್ದರ ಬಗ್ಗೆ ಜೀ5 ಕನ್ನಡದ ವ್ಯವಹಾರ ಮುಖ್ಯಸ್ಥ ದೀಪಕ್ ಶ್ರೀರಾಮುಲು ಕೂಡ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. "ಅಯ್ಯನ ಮನೆ ವೆಬ್ ಸೀರಿಸ್ ಅದ್ಭುತ ಯಶಸ್ಸಿನ ಬಳಿಕ ಶೋಧ ಮೂಲಕ ಮತ್ತೆ ನಮ್ಮ ವೀಕ್ಷಕರಿಗೆ ಪವರ್ಫುಲ್ ಕಥೆಯನ್ನು ತರುವ ಉತ್ಸಾಹದಲ್ಲಿ ಇದ್ದೇವೆ. ಕೆ.ಆರ್.ಜಿ ಸ್ಟುಡಿಯೋಸ್ನ ಪ್ರತಿಭಾನ್ವಿತ ತಂಡ ಮತ್ತು ಪವನ್ ಕುಮಾರ್ರಂತಹ ಬಹುಮುಖ ಕಲಾವಿದರು ಸೇರಿಕೊಂಡಿರುವುದಕ್ಕೆ ಈ ಪ್ರಾಜೆಕ್ಟ್ ನಿಜವಾಗಿಯೂ ವಿಶೇಷ. ಶೋಧ ಒಂದು ಸಸ್ಪೆನ್ಸ್ ಥ್ರಿಲ್ಲರ್ಗಿಂತ ಹೆಚ್ಚಾಗಿ, ಇದೊಂದು ಭಾವನಾತ್ಮಕವಾಗಿ ಚಿಂತನೆಗೆ ಎಡೆ ಮಾಡಿಕೊಡುವ ಪ್ರಯಾಣ. ಎಂದು ಹೇಳಿದ್ದಾರೆ. 'ಶೋಧ' ವೆಬ್ ಸೀರಿಸ್ ಇದೇ ಆಗಸ್ಟ್ 22 ರಿಂದ ಜೀ5 ಒಟಿಟಿಯಲ್ಲಿ ವೀಕ್ಷಕರಿಗೆ ನೋಡುವುದಕ್ಕೆ ಸಿಗಲಿದೆ.


Click it and Unblock the Notifications











