ಜೀ 5 ಜೊತೆ ಸೇರಿ ವೆಬ್ ಸೀರಿಸ್ ನಿರ್ಮಾಣಕ್ಕೆ ಮುಂದಾದ ಅಶ್ವಿನಿ ಪುನೀತ್ ರಾಜ್ಕುಮಾರ್; ಇದು ಕದಂಬರ 'ಮಾರಿಗಲ್ಲು'
ಅಶ್ವಿನಿ ಪುನೀತ್ ರಾಜ್ಕುಮಾರ್ ತಮ್ಮ ಪಿಆರ್ಕೆ ಪ್ರೊಡಕ್ಷನ್ನಲ್ಲಿ ಈಗಾಗಲೇ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗಷ್ಟೇ ಕೆಆರ್ಜಿ ಸ್ಟುಡಿಯೋ ಹಾಗೂ ಜಯಣ್ಣ ಜೊತೆ ಜಂಟಿಯಾಗಿ ನಿರ್ಮಾಣ ಮಾಡಿದ್ದ 'ಎಕ್ಕ' ಸಿನಿಮಾ ರಿಲೀಸ್ ಆಗಿತ್ತು. ಈ ಬೆನ್ನಲ್ಲೇ ತಮ್ಮ ಸಂಸ್ಥೆಯಿಂದ ವೆಬ್ ಸೀರಿಸ್ ಅನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದಾರೆ.
ಕನ್ನಡದಲ್ಲಿ ವೆಬ್ ಸೀರಿಸ್ ಬಂದಿದ್ದು ತೀರಾ ವಿರಳ. ಇಂತಹ ಪ್ರಯತ್ನಗಳು ಈ ಹಿಂದೆ ಆಗಿದ್ದರೂ, ಅದು ಮುಂದುವರೆಯಲಿಲ್ಲ. ಅಮೆಜಾನ್ ಪ್ರೈಂ ವಿಡಿಯೋ, ನೆಟ್ಫ್ಲಿಕ್ಸ್ ಅಂತಹ ಓಟಿಟಿ ವೇದಿಕೆಗಳು ಕನ್ನಡದಲ್ಲಿ ವೆಬ್ ಸೀರಿಸ್ಗಳನ್ನು ನಿರ್ಮಾಣ ಮಾಡುವ ಗೋಜಿಗೆ ಹೋಗಲಿಲ್ಲ. ಆದ್ರೀಗ ಜೀ 5 ಇಂತಹದ್ದೊಂದು ಸಾಹಸಕ್ಕೆ ಮುಂದಾಗಿದೆ. 'ಅಯ್ಯನ ಮನೆ' ವೆಬ್ ಸೀರಿಸ್ನಿಂದ ದೊಡ್ಡ ಯಶಸ್ಸು ಗಳಿಸಿದ ಬಳಿಕ ವೆಬ್ ಸೀರಿಸ್ ನಿರ್ಮಾಣಕ್ಕೆ ಮುಂದಾಗಿದೆ. ಕೆಲವು ದಿನಗಳ ಹಿಂದಷ್ಟೇ 'ಶೋಧ' ಎರಡನೇ ವೆಬ್ ಸೀರಿಸ್ ಅನ್ನು ಸ್ಟ್ರೀಮಿಂಗ್ ಮಾಡಿತ್ತು. ಈಗ ಮೂರನೇ ವೆಬ್ ಸೀರಿಸ್ ಅನ್ನು ಅನೌನ್ಸ್ ಮಾಡಿದೆ.

ಕನ್ನಡದ ದೊಡ್ಡ ನಿರ್ಮಾಣ ಸಂಸ್ಥೆಗಳ ಜೊತೆ ಕೈ ಜೋಡಿಸಿರುವ ಜೀ 5, ಶ್ರುತಿ ನಾಯ್ಡು, ಕೆಆರ್ಜಿ ಸ್ಟುಡಿಯೋ ಸಹಯೋಗದೊಂದಿಗೆ ವೆಬ್ ಸೀರಿಸ್ ಅನ್ನು ಸ್ಟ್ರೀಮಿಂಗ್ ಮಾಡಿದೆ. ಈಗ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಜೊತೆ ಸೇರಿ 'ಮಾರಿಗಲ್ಲು' ವೆಬ್ ಸೀರಿಸ್ ಅನ್ನು ಅನೌನ್ಸ್ ಮಾಡಿದೆ. ಹಾಗಿದ್ರೆ. ಅಶ್ವಿನಿ ಪುನೀತ್ ರಾಜ್ಕುಮಾರ್ ನಿರ್ಮಾಣ ಮಾಡುತ್ತಿರುವ 'ಮಾರಿಗಲ್ಲು' ಕಥೆಯೇನು? ಈ ವೆಬ್ ಸೀರಿಸ್ ಯಾಕಿಷ್ಟು ಮುಖ್ಯ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ಜೀ 5 ಸಹಯೋಗದೊಂದಿಗೆ ನಿರ್ಮಾಣ ಆಗಿರುವ 'ಮಾರಿಗಲ್ಲು' ಟೈಟಲ್ ಕುತೂಹಲ ಮೂಡಿಸಿದೆ. ಇದೊಂದು ದೈವಿಕ ಕಥೆಯನ್ನು ಹೇಳುವುದಕ್ಕೆ ಹೊರಟಿದೆ ಅನ್ನೋದನ್ನು ಗೆಸ್ ಮಾಡಬಹುದು. ಈ ಥ್ರಿಲ್ಲರ್ ಕಥೆಗೆ ಸಾಂಸ್ಕೃತಿ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಸೇರಿಸಿರುವುದು ಗಮನಿಸಬೇಕಾದ ವಿಷಯ.
ಅಂದ್ಹಾಗೆ 'ಮಾರಿಗಲ್ಲು' ವೆಬ್ ಸೀರಿಸ್ ನಾಲ್ಕನೇ ಶತಮಾನದ ಕದಂಬರ ಆಳ್ವಿಕೆಯ ಕಾಲಘಟ್ಟದ ಕಥೆ. ಕದಂಬರ ಪ್ರಥಮ ರಾಜನಾದ ಮಯೂರ ಶರ್ಮನ ಪರಂಪರೆಯ ಹಾಗೂ ಆ ಕಾಲದಲ್ಲಿದ್ದ ನಿಧಿಯ ಕುರಿತಾದ ಕಥೆಯನ್ನು ಈ ವೆಬ್ ಸೀರಿಸ್ ಮೂಲಕ ವೀಕ್ಷಕರ ಮುಂದೆ ಇಡುವ ಪ್ರಯತ್ನ ನಡೆಯುತ್ತಿದೆ. ಕದಂಬರ ಕಾಲದಿಂದಲ್ಲೂ 'ಮಾರಿ' ಎಂಬ ದೇವತೆಯಿಂದ ರಹಸ್ಯವಾಗಿಟ್ಟಿರುವ ನಿಧಿಯ ಕಾಪಾಡುತ್ತಿದ್ದಾಳೆ ಎಂಬುವುದು ನಂಬಿಕೆ.
ಈ ನಿಧಿಯನ್ನು ಹುಡುಕುವುದಕ್ಕೆ ಸ್ವಾರ್ಥ, ದುರಾಸೆಯ ಮನಸ್ಥಿತಿಯ ಪಾತ್ರಗಳು ಯಾವ ರೀತಿಯ ರಣತಂತ್ರ ಹೂಡುತ್ತವೆ. ಅವರು ನಿಧಿಯ ರಹಸ್ಯವನ್ನು ಹೇಗೆ ಭೇದಿಸುತ್ತಾರೆ? ಎಂಬುವುದನ್ನು 'ಮಾರಿಗಲ್ಲು' ವೆಬ್ ಸೀರಿಸ್ನಲ್ಲಿ ರೋಚಕವಾಗಿ ತೋರಿಸುವ ಪ್ರಯತ್ನಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಪಿಆರ್ಕೆ ಸ್ಟುಡಿಯೋ ಹಾಗೂ ಜೀ 5 ಮುಂದಾಗಿದೆ. ಈ ವೆಬ್ ಸೀರಿಸ್ನಲ್ಲಿ ಕದಂಬರ ಕಾಲದ ಸಾಂಸ್ಕೃತಿಕ ಶ್ರೀಮಂತಿಕೆ, ದೈವ ಭಕ್ತಿಯನ್ನು ಬಿಂಬಿಸಲಾಗುತ್ತಿದೆ.

ಇದೇ ಮೊದಲ ಬಾರಿಗೆ ವೆಬ್ ಸೀರಿಸ್ಗೆ ಕೈ ಹಾಕಿರುವ ಅಶ್ವಿನಿ ಪುನೀತ್ ರಾಜ್ಕುಮಾರ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ನಮ್ಮ ನೆಲದ ಸಂಸ್ಕೃತಿಯನ್ನು ಬಿಂಬಿಸುವ ಕಥೆಗಳು ಹಾಗೂ ಜನರ ಜೀವನವನ್ನು ಪ್ರತಿಬಿಂಬಿಸುವ ಕಥೆಗಳನ್ನು ನಾವು ಹೆಚ್ಚು ನಂಬುತ್ತೇವೆ. ಅಂತಹ ಕಥೆಗಳಿಗೆ ಉತ್ತೇಜನ ನೀಡುತ್ತೇವೆ. ಮಾರಿಗಲ್ಲು ಅಂತಹದ್ದೇ ಒಂದು ಕಥೆ. ಇದು ಕೇವಲ ರಹಸ್ಯ, ಥ್ರಿಲ್, ಆಕ್ಷನ್ಗಳನ್ನಷ್ಟೇ ಒಳಗೊಂಡಿರದೆ ಕರ್ನಾಟಕ ಜಾನಪದ ಸಂಸ್ಕೃತಿ, ದೈವ ಭಕ್ತಿ ಅಂತಹ ಅಂಶಗಳನ್ನು ನೋಡಬಹುದು. ಈ ವೆಬ್ ಸೀರಿಸ್ ಪ್ರತಿಯೊಬ್ಬರು ಕಣ್ಣರಳಿಸಿ ನೋಡುವಂತಹ ಥ್ರಿಲ್ಲರ್ ಕಥೆ" ಎಂದು ಹೇಳಿದ್ದಾರೆ.
ಹಾಗೇ "ಮಾರಿಗಲ್ಲು ನಾವು ಹಿಂದೆಂದೂ ಮಾಡದ ಪ್ರಯೋಗ. ದುರಾಸೆ, ರಹಸ್ಯ, ಮೋಹ, ದೈವ ಭಕ್ತಿ ಮುಂತಾದ ಅನೇಕ ವಿಷಯಗಳನ್ನು ಸೇರಿಸಿ ಈ ಕಥೆಯನ್ನು ಸಿದ್ಧಪಡಿಸಲಾಗಿದೆ. ಇದು ಕನ್ನಡ ನಾಡಿನ ಜಾನಪದವನ್ನು ಕೂಡ ಎತ್ತಿ ಹಿಡಿಯಲಿದೆ. ಕದಂಬ ವಂಶಸ್ಥರ ಸಾಧನೆಗಳನ್ನು ಜೀವಂತವಾಗಿಸುವ ಪ್ರಯತ್ನವನ್ನು ಇದರಲ್ಲಿ ಕಾಣಬಹುದು. 'ಮಾರಿ' ದೇವತೆಯಿಂದ ಕಾಯಲ್ಪಟ್ಟಿದ ಕದಂಬರ ನಿಧಿಯ ಕಳವಾಗುತ್ತೆ. ಅದನ್ನು ಮತ್ತೆ ಹುಡುಕಾಡುವ ಸುತ್ತ ಇಡೀ ಕಥೆಯನ್ನು ಹೆಣೆಯಲಾಗಿದೆ" ಎಂದು ಕನ್ನಡ ಜೀ 5ನ ಬಿಸಿನೆಸ್ ಹೆಡ್ ಶ್ರೀ ದೀಪಕ್ ಶ್ರೀರಾಮುಲು ಹೇಳಿದ್ದಾರೆ.
ಇಂತಹ ಕುತೂಹಲಕಾರಿ ಕಥೆಗಳನ್ನು ಓಟಿಟಿ ವೇದಿಕೆಗಳ ಮೂಲಕ ವೀಕ್ಷಕರಿಗೆ ಮುಟ್ಟಿಸಬೇಕು ಅನ್ನೋದು ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರ ಕನಸಾಗಿತ್ತು. ಆ ಕನಸಿಗೆ 'ಮಾರಿಗಲ್ಲು' ಮುನ್ನುಡಿಯಾಗಿದೆ. ಅಪ್ಪು ಕನಸನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಈಡೇರಿಸುತ್ತಿದ್ದಾರೆ.


Click it and Unblock the Notifications











