ಅನುಷ್ಕಾ ಶರ್ಮಾಗೆ ಡೈವೋರ್ಸ್ ಕೊಡಿ: ವಿರಾಟ್ ಕೊಹ್ಲಿಗೆ ಬಿಜೆಪಿ ಶಾಸಕನ ಸಲಹೆ!
ಅನುಷ್ಕಾ ಶರ್ಮಾ ಚೊಚ್ಚಲ ನಿರ್ಮಾಣದ ವೆಬ್ ಸೀರೀಸ್ 'ಪಾತಾಳ್ ಲೋಕ್' ವಿವಿಧ ಕಾರಣಗಳಿಂದ ಸುದ್ದಿಯಲ್ಲಿದೆ. 'ಪಾತಾಳ್ ಲೋಕ್' ಕ್ರೈಂ ಥ್ರಿಲ್ಲರ್ ಕಥೆಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದರೆ, ಅದರ ಜತೆಯಲ್ಲಿಯೇ ವಿವಾದಗಳೂ ಸುತ್ತಿಕೊಳ್ಳುತ್ತಿವೆ. ಇದರಿಂದ ಅನುಷ್ಕಾ ಶರ್ಮಾ ಸಂಕಷ್ಟಕ್ಕೆ ಸಿಲುಕಿದ್ದಾರೆ.
Recommended Video
ವೆಬ್ ಸೀರಿಸ್ನಲ್ಲಿ ಜಾತಿಯ ಅವಹೇಳನೆ ಮಾಡಲಾಗಿದೆ ಎಂದು ಅನುಷ್ಕಾ ಶರ್ಮಾ ಅವರಿಗೆ ಲೀಗಲ್ ನೋಟಿಸ್ ಕಳುಹಿಸಲಾಗಿತ್ತು. ನೇಪಾಳಿ ಸಮುದಾಯವನ್ನು ಅವಮಾನಿಸಲಾಗಿದೆ ಎಂದು ಗೂರ್ಖಾ ಸಮುದಾಯದವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈಗ ತಮ್ಮ ಫೋಟೊ ಬಳಸಿಕೊಳ್ಳುವ ಮೂಲಕ ಚಾರಿತ್ರ್ಯವಧೆ ಮಾಡಲಾಗಿದೆ ಎಂದು ಬಿಜೆಪಿ ಶಾಸಕರೊಬ್ಬರು ದೂರು ನೀಡಿದ್ದಾರೆ. ಅದರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅಷ್ಟಕ್ಕೇ ಶಾಸಕ ಸುಮ್ಮನಾಗಿಲ್ಲ... ಮುಂದೆ ಓದಿ...

ವೆಬ್ ಸೀರೀಸ್ ನಿಷೇಧಕ್ಕೆ ಆಗ್ರಹ
ಉತ್ತರ ಪ್ರದೇಶದ ಲೋನಿ ಕ್ಷೇತ್ರದ ಬಿಜೆಪಿ ಶಾಸಕ ನಂದಕಿಶೋರ್ ಗುರ್ಜರ್, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದಿದ್ದು, 'ಪಾತಾಳ್ ಲೋಕ್' ವೆಬ್ ಸೀರೀಸ್ ಅನ್ನು ನಿಷೇಧಿಸುವಂತೆ ಆಗ್ರಹಿಸಿದ್ದಾರೆ.

ಎನ್ಎಸ್ಎ ಅಡಿ ಪ್ರಕರಣ ದಾಖಲಿಸಿ
ತಮ್ಮ ಅನುಮತಿ ಇಲ್ಲದೆಯೇ ಫೋಟೊ ಬಳಸಿಕೊಂಡಿರುವುದಕ್ಕೆ ಅನುಷ್ಕಾ ಶರ್ಮಾ ಅವರಿಗೆ ನಂದಕಿಶೋರ್ ನೋಟಿಸ್ ಕಳುಹಿಸಿದ್ದರು. ಕೋಮು ಗಲಭೆಗೆ ಪ್ರಚೋದನೆ ನೀಡಿರುವುದಕ್ಕೆ ಅನುಷ್ಕಾ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅನುಷ್ಕಾಗೆ ಡೈವೋರ್ಸ್ ಕೊಡಿ
ಇಷ್ಟೇ ಅಲ್ಲ, ಅವರು ಕ್ರಿಕೆಟಿಗ ಹಾಗೂ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿಗೆ ಸಲಹೆಯೊಂದನ್ನು ನೀಡಿದ್ದಾರೆ. 'ವಿರಾಟ್ ಕೊಹ್ಲಿ ದೇಶಕ್ಕಾಗಿ ಆಡುವುದರಿಂದ ಅವರು ರಾಷ್ಟ್ರೀಯವಾದಿ. ಅವರು ಅನುಷ್ಕಾ ಶರ್ಮಾಗೆ ವಿಚ್ಚೇದನ ನೀಡಬೇಕು' ಎಂದು ಸಲಹೆ ಕೊಟ್ಟಿದ್ದಾರೆ.

ನಂದಕಿಶೋರ್ ಫೋಟೊ ಬಳಕೆ
'ಪಾತಾಳ್ ಲೋಕ್' ವೆನ್ ಸೀರೀಸ್ನಲ್ಲಿ ಶಾಸಕ ನಂದಕಿಶೋರ್ ಅವರ ಫೋಟೊವನ್ನು ಬಳಸಿಕೊಳ್ಳಲಾಗಿದೆ. ಕಾರ್ಯಕ್ರಮವೊಂದರಲ್ಲಿ ನಂದಕಿಶೋರ್ ಭಾಗವಹಿಸಿದ್ದ ಪತ್ರಿಕಾ ವರದಿಯ ಫೋಟೊವನ್ನು ಬಳಸಿಕೊಳ್ಳಲಾಗಿದ್ದು, ಅದರಲ್ಲಿ ಇತರ ವ್ಯಕ್ತಿಗಳ ಫೋಟೊ ಮಸುಕು ಮಾಡಿ ನಂದಕಿಶೋರ್ ಮುಖ ಕಾಣುವಂತೆ ಉಳಿಸಿಕೊಳ್ಳಲಾಗಿದೆ. ಇದು ಅವರ ಕೆಂಗಣ್ಣಿಗೆ ಗುರಿಯಾಗಿದೆ.


Click it and Unblock the Notifications











