'ವಿಕ್ರಾಂತ್ ರೋಣ'ಗೆ OTTಯಿಂದ 100 ಕೋಟಿ ಆಫರ್, ದಯಾಳ್ ಪದ್ಮನಾಭ್ ಶಾಕ್!
ಕಿಚ್ಚ ಸುದೀಪ್ ಅಭಿನಯದ ಸಿನಿಮಾ 'ವಿಕ್ರಾಂತ್ ರೋಣ' ಸ್ಯಾಂಡಲ್ವುಡ್ನಲ್ಲಿ ಭಾರೀ ಸಂಚಲನ ಸೃಷ್ಟಿಸುತ್ತಿದೆ. ಕಳೆದರಡು ದಿನಗಳಿಂದ 'ವಿಕ್ರಾಂತ್ ರೋಣ' ಸಿನಿಮಾಗೆ OTT ಸಂಸ್ಥೆ ನೀಡಿದ ಆಫರ್ ಬಗ್ಗೆನೇ ದೊಡ್ಡ ಚರ್ಚೆಯಾಗುತ್ತಿದೆ. ಕನ್ನಡ ಸಿನಿಮಾವೊಂದಕ್ಕೆ 100 ಕೋಟಿ ಆಫರ್ ಕೊಡಲು OTT ವೇದಿಕೆಗಳು ಮುಂದೆ ಬಂದಿದ್ದು ಹೇಗೆ? ಎಂಬ ಪ್ರಶ್ನೆ ಎದುರಾಗಿದೆ. ಕನ್ನಡದ ಮತ್ತೊಬ್ಬ ನಿರ್ದೇಶಕ ದಯಾಳ್ ಪದ್ಮನಾಭ್ ಈ ಆಫರ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
Recommended Video
'ವಿಕ್ರಾಂತ್ ರೋಣ'ಗೆ ಇಷ್ಟು ದೊಡ್ಡ ಆಫರ್ ಬಂದಿರುವ ಬಗ್ಗೆ ನಿರ್ದೇಶಕ ದಯಾಳ ಪದ್ಮನಾಭ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕನ್ನಡ ಸಿನಿಮಾವೊಂದಕ್ಕೆ ಇಷ್ಟೊಂದು ದೊಡ್ಡ ಮೊತ್ತ ಆಫರ್ ಕೊಟ್ಟಿದ್ದು ಈ ನಿರ್ದೇಶಕರ ಶಾಕ್ಗೆ ಕಾರಣ. ಸ್ವತ: 'ವಿಕ್ರಾಂತ್ ರೋಣ' ಸಿನಿಮಾದ ನಿರ್ಮಾಪಕ ಜಾಕ್ ಮಂಜು ಅವರೇ 100 ಕೋಟಿ ಆಫರ್ ಬಂದಿರುವುದು ಸಂಗತಿ ನಿಜವೆಂದು ಮಾಹಿತಿ ನೀಡಿದ್ದರು. ಆ ಬಳಿಕ ಸ್ಯಾಂಡಲ್ವುಡ್ನಲ್ಲಿ ಈ ಬಗ್ಗೆ ಮತ್ತಷ್ಟು ಚರ್ಚೆಯಾಗುತ್ತಿದೆ.

'ವಿಕ್ರಾಂತ್ ರೋಣ' 100 ಕೋಟಿ ಆಫರ್ಗೆ ದಯಾಳ್ ಪ್ರತಿಕ್ರಿಯೆ
ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ'ಗೆ ಎರಡು ಓಟಿಟಿ ಸಂಸ್ಥೆಗಳಿಂದ 100 ಕೋಟಿ ಆಫರ್ ಬಂದಿದೆ ಎಂದು ಜಾಕ್ ಮಂಜು ಹೇಳಿದ್ದರು. ಕನ್ನಡ ಚಿತ್ರವೊಂದಕ್ಕೆ ಇಷ್ಟು ದೊಡ್ಡ ಆಫರ್ ನೀಡಿದ್ದಕ್ಕೆ ಒಂಬತ್ತನೇ ದಿಕ್ಕು ಚಿತ್ರದ ನಿರ್ದೇಶಕ ದಯಾಳ್ ಪದ್ಮನಾಭ್ ಶಾಕ್ ಆಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಶಾಕ್ ಆಗಿದ್ದಕ್ಕೆ ಹಾಗೂ ಖುಷಿಯಾಗಿದ್ದಕ್ಕೆ ಕಾರಣವೇನು ಎಂಬುದನ್ನು ಹಂಚಿಕೊಂಡಿದ್ದಾರೆ. ಈ ವಿಚಾರವಾಗಿ ದಯಾಳ್ ಪದ್ಮನಾಭ್ ಫಿಲ್ಮಿ ಬೀಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

100 ಕೋಟಿ ಆಫರ್ಗೆ ದಯಾಳ್ ಶಾಕ್
ಕನ್ನಡ ಚಿತ್ರಗಳಿಗೆ ಯಾವುದೇ ಓಟಿಟಿ ವೇದಿಕೆ 100 ಕೋಟಿ ಆಫರ್ ಮಾಡುವುದಿಲ್ಲ. ಎರಡು ದಶಕಗಳಿಂದ ಚಿತ್ರರಂಗದಲ್ಲಿರುವ ದಯಾಳ್ ಪದ್ಮನಾಭ್ 100 ಕೋಟಿ ಡೀಲ್ ಬಗ್ಗೆ ಪರೋಕ್ಷವಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ದಯಾಳ್ ಪೋಸ್ಟ್ ಬಗ್ಗೆ ಸಂಪರ್ಕಿಸಿದಾಗ, ಫಿಲ್ಮಿ ಬೀಟ್ಗೆ ಪ್ರತಿಕ್ರಿಯೆ ನೀಡಿದ್ದು ಹೀಗೆ. "ನನ್ನ ಅಭಿಪ್ರಾಯವೇನು ಅಂದರೆ, ಇಂಥದ್ದೊಂದು ಆಫರ್ ಬಂದಿರುವುದು ನಿಜಕ್ಕೂ ನನಗೆ ಶಾಕ್ ಆಗಿದೆ. ಅದೇ ಇನ್ನೊಂದು ಕಡೆ ಖುಷಿ ಕೂಡ ಆಗಿದೆ. ಶಾಕ್ ಏನಕ್ಕೆ ಅಂದರೆ, ನಾನು ಕನ್ನಡ ಚಿತ್ರರಂಗದಲ್ಲಿ 20 ವರ್ಷಗಳಿಂದ ಇರುವುದರಿಂದ ನನಗೆ ಓಟಿಟಿ ಬ್ಯುಸಿನೆಸ್ ಚೆನ್ನಾಗಿ ಗೊತ್ತಿದೆ. ಅಂತಹದ್ರಲ್ಲಿ ಇಂತಹದ್ದೊಂದು ಆಫರ್ ಬಂದಿದೆ ಅನ್ನುವುದು ನನಗೆ ಶಾಕ್ ಆಗಿದೆ. ಕನ್ನಡ ಸಿನಿಮಾಗಳಿಗೆ ಓಟಿಟಿ ವೇದಿಕೆ ಎಷ್ಟು ಹಣ ನಿಗದಿ ಮಾಡುತ್ತೆ ಅನ್ನುವುದು ನನಗೆ ಗೊತ್ತಿದೆ. ಇಷ್ಟು ದೊಡ್ಡ ಮೊತ್ತದ ಹಣ ಆಫರ್ ಮಾಡಿದ್ದಾರೆ ಅಲ್ಲಿ ಬೇರೆ ಏನೋ ಲೆಕ್ಕಾಚಾರವಿದೆ. ಇಲ್ಲಾ ಈ ಸುದ್ದಿಯೇ ಫೇಕ್ ಅಂತ ಅನಿಸುತ್ತದೆ. ನನ್ನ ಅನುಭವಕ್ಕೆ ಬಂದಂತೆ ಇಷ್ಟು ದೊಡ್ಡ ಆಫರ್ ಅನ್ನು ಓಟಿಟಿ ಕೊಡಲು ಸಾಧ್ಯವಿಲ್ಲ." ಎಂದು ಫಿಲ್ಮಿ ಬೀಟ್ಗೆ ತಿಳಿಸಿದ್ದಾರೆ.

ನಿರ್ಮಾಪಕ ಜಾಕ್ ಮಂಜು ಪ್ರಾಕ್ಟಿಕಲ್ ಆಗಿ ಯೋಚಿಸಬೇಕು
ದಯಾಳ್ ಪದ್ಮನಾಭ್ 'ವಿಕ್ರಾಂತ್ ರೋಣ' ಸಿನಿಮಾದ ನಿರ್ಮಾಪಕರಿಗೆ ಈ ಆಫರ್ ಬಗ್ಗೆ ಪ್ರಾಯೋಗಿಕವಾಗಿ ಯೋಚನೆ ಮಾಡುವಂತೆ ಸಲಹೆ ನೀಡಿದ್ದಾರೆ. ಇಷ್ಟು ದೊಡ್ಡ ಆಫರ್ ಬಂದಾಗ, ಪ್ಯಾಷನ್ಗೋಸ್ಕರ ಥಿಯೇಟರ್ನಲ್ಲಿ ಸಿನಿಮಾ ಮಾಡುವುದು ಸೂಕ್ತವಲ್ಲ. ಇವರಿಗೆ ಬರುವ ಲಾಭದಿಂದ 20 ಬಿಗ್ ಬಜೆಟ್ ಸಿನಿಮಾ ಮಾಡಬಹುದು. ಇಲ್ಲ 2 ರಿಂದ 3 ಸೂಪರ್ಸ್ಟಾರ್ ಸಿನಿಮಾ ಮಾಡಬಹುದು ಎಂದು ದಯಾಳ್ ಅಭಿಪ್ರಾಯ ಪಟ್ಟಿದ್ದಾರೆ. " ಇವತ್ತು ಇರುವ ಪರಿಸ್ಥಿತಿಯಲ್ಲಿ ಏನೇ ಬ್ಯುಸಿನೆಸ್ ಆದರೂ ಅದರನ್ನು ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಬೇಕು. ಸನ್ನಿವೇಶಕ್ಕೆ ತಕ್ಕಂತೆ ನಾವು ನಮ್ಮ ಬ್ಯುಸಿನೆಸ್ ಅನ್ನು ಬದಲಾಯಿಸಿಕೊಂಡು ಹೋಗಬೇಕು. ನಾಳೆ ನಮಗೆ ಸಮಸ್ಯೆ ಆದರೆ, ಯಾರೂ ನಮಗೆ ಸಹಾಯ ಮಾಡುವುದಿಲ್ಲ. ಹೀಗಾಗಿ ನಿಮಗೆ ನೂರು ಕೋಟಿ ಆಫರ್ ಬಂದಿದ್ದೇ ಆದರೆ, ಅದನ್ನು ಸೇಲ್ ಮಾಡಿಬಿಡಿ ಅಂತ ಹೇಳುತ್ತಿದ್ದೇನೆ." ಎನ್ನುತ್ತಾರ ದಯಾಳ್.

ಜಾಕ್ ಮಂಜು ಫೈನಾನ್ಸ್ ತಂದು ಸಿನಿಮಾ ಮಾಡಿದ್ದಾರೆ
ನಿರ್ಮಾಪಕರು ಎಲ್ಲಿಂದಲೋ ಹಣ ತಂದು ಸಿನಿಮಾ ಮಾಡುತ್ತಾರೆ. ಹೀಗಾಗಿ ಅವರು ಸ್ಮಾರ್ಟ್ ಬ್ಯುಸಿನೆಸ್ ಮಾಡಬೇಕು ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಜಾಕ್ ಮಂಜು ಬಗ್ಗೆ ನನಗೂ ಗೊತ್ತಿದೆ. ಸ್ವಂತ ಹಣ ಹಾಕಿ ಸಿನಿಮಾ ಮಾಡಿಲ್ಲ. ಅವರು ಎಲ್ಲಿಂದಲೋ ಬಡ್ಡಿಗೆ ಹಣ ತಂದು ಸಿನಿಮಾ ಮಾಡಿದ್ದಾರೆ. ಹೀಗಾಗಿ ನಿರ್ಮಾಪಕನ ಸೇಫ್ಟಿ ಕೂಡ ನೋಡಬೇಕಿದೆ. ಅದಕ್ಕೆ ನಾನು ಸೇಲ್ ಮಾಡಿ ಅನ್ನುವ ಸಲಹೆ ನೀಡುತ್ತೇನೆ. ಇದು ಸ್ಮಾರ್ಟ್ ಬ್ಯುಸಿನೆಸ್ ಅನ್ನೋದು ನನ್ನ ಅಭಿಪ್ರಾಯ." ಎಂದು ದಯಾಳ್ ಸಲಹೆ ನೀಡಿದ್ದಾರೆ.

ಫೆಬ್ರವರಿ 24ಕ್ಕೆ ವಿಕ್ರಾಂತ್ ರೋಣ ರಿಲೀಸ್
ವಿಕ್ರಾಂತ್ ರೋಣ ಸಿನಿಮಾಗೆ ಭರ್ಜರಿ ಪ್ರಚಾರವನ್ನಂತೂ ನಿರ್ಮಾಪಕ ಜಾಕ್ ಮಂಜು ಶುರು ಮಾಡಿದ್ದಾರೆ. '83' ಜೊತೆ ಈ ಸಿನಿಮಾ ಗ್ಲಿಮ್ಸ್ ಬಿಡುಗಡೆ ಮಾಡಿದ್ದರು. ರಾಜಮೌಳಿಯ RRR, ಅಜಿತ್ 'ವಲಿಮೈ' ಹಾಗೂ ಪ್ರಭಾಸ್ 'ರಾಧೆ ಶ್ಯಾಮ್' ಚಿತ್ರದೊಂದಿಗೆ 3ಡಿ ಟೀಸರ್ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದರು. ಆದರೆ, ಈ ಎಲ್ಲಾ ಸಿನಿಮಾಗಳೂ ಪೋಸ್ಟ್ಪೋನ್ ಆಗಿದ್ದರಿಂದ ಟೀಸರ್ ರಿಲೀಸ್ ಅನ್ನೂ ಮುಂದೂಡಲಾಗಿದೆ. ಜೊತೆ ಫೆಬ್ರವರಿ 24ಕ್ಕೆ ವಿಕ್ರಾಂತ್ ರೋಣ ಗ್ರ್ಯಾಂಡ್ ರಿಲೀಸ್ ಮಾಡುವುದಕ್ಕೆ ಸಜ್ಜಾಗಿದ್ದಾರೆ.


Click it and Unblock the Notifications











