ಹತ್ಯೆಯಾಗಿ 16 ವರ್ಷ ಕಳೆದರೂ ಕಾಡುಗಳ್ಳ ವೀರಪ್ಪನ್ಗೆ ಭಾರಿ ಬೇಡಿಕೆ!
ಒಂದು ಕಾಲದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಜನತೆ ಮತ್ತು ಸರ್ಕಾರಗಳಿಗೆ ತಲೆ ನೋವಾಗಿದ್ದ ಕಾಡುಗಳ್ಳ, ನರಹಂತಕ ವೀರಪ್ಪನ್ ಎನ್ ಕೌಂಟರ್ ನಡೆದು 16 ವರ್ಷಗಳೇ ಕಳೆದಿವೆ. ಆದರೆ ಆತನ ಸದ್ದು ಮಾತ್ರ ಕಡಿಮೆಯಾಗಿಲ್ಲ. ಆಗ ಪೊಲೀಸ್ ಪಡೆಗಳಂತೆ, ಈಗ ಮನರಂಜನೆಯ ಲೋಕ ವೀರಪ್ಪನ್ ಬೆನ್ನಟ್ಟುತ್ತಿದೆ. ವೀರಪ್ಪನ್ ಸತ್ತ ಬಳಿಕ ಆತನ ಕುರಿತು 'ಅಟ್ಟಹಾಸ' ಮತ್ತು 'ಕಿಲ್ಲಿಂಗ್ ವೀರಪ್ಪನ್' ಎಂಬ ಎರಡು ಸಿನಿಮಾಗಳು ಬಂದಿದ್ದವು.
ಎಎಂಆರ್ ನಿರ್ದೇಶನದ 'ಅಟ್ಟಹಾಸ' ಚಿತ್ರ ವೀರಪ್ಪನ್ನ ಬದುಕು, ಆತನ ಕೃತ್ಯಗಳು, ಆತನ ಹತ್ಯೆಯ ವಿವಿಧ ಮಜಲುಗಳನ್ನು ಚಿತ್ರಿಸಿದ್ದರೆ, ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಕಿಲ್ಲಿಂಗ್ ವೀರಪ್ಪನ್' ಚಿತ್ರವು ಆತನ ಹತ್ಯೆಯ ಯೋಜನೆಯ ಮೇಲೆ ಕೇಂದ್ರೀಕರಿಸಿತ್ತು. ಇದನ್ನು ಕಮರ್ಷಿಯಲ್ ಚಿತ್ರದ ಅಗತ್ಯಕ್ಕೆ ಅನುಗುಣವಾಗಿ ಬಳಸಿಕೊಳ್ಳಲಾಗಿತ್ತು.
ಇಡೀ ದೇಶದಾದ್ಯಂತ ಸದ್ದು ಮಾಡಿದ್ದ ವೀರಪ್ಪನ್, ತನ್ನ ಹೇಯ ಕೃತ್ಯಗಳಿಂದ ಕುಖ್ಯಾತಿಗೆ ಒಳಗಾಗಿದ್ದವನು. ಆತನ ಕುರಿತಾದ ಕಥೆ ಎಂದಿಗೂ ರೋಚಕವೇ. ಇದನ್ನು ಗಮನದಲ್ಲಿಟ್ಟುಕೊಂಡು ಎ.ಎಂ.ಆರ್ ರಮೇಶ್ ವೀರಪ್ಪನ್ ಕಥೆಯನ್ನು ವೆಬ್ ಸೀರೀಸ್ ಮಾಡಲು ಹೊರಟಿರುವುದು ವರದಿಯಾಗಿತ್ತು. ಆದರೆ ಅದಕ್ಕೆ ಕಂಟಕವೊಂದು ಎದುರಾಗಿದೆ. ಮುಂದೆ ಓದಿ.

ವೀರಪ್ಪನ್- ಹಂಗರ್ ಫಾರ್ ಕಿಲ್ಲಿಂಗ್
ವೀರಪ್ಪನ್ ಕಥೆ ಆಧರಿಸಿದ 'ಅಟ್ಟಹಾಸ' ಚಿತ್ರವನ್ನು 2013ರಲ್ಲಿ ಎಎಂಆರ್ ರಮೇಶ್ ನಿರ್ದೇಶಿಸಿದ್ದರು. ನಟ ಕಿಶೋರ್ ಈ ಚಿತ್ರದಲ್ಲಿ ವೀರಪ್ಪನ್ ಪಾತ್ರ ನಿಭಾಯಿಸಿದ್ದರು. ಅದೇ ಕಥೆಯನ್ನು ಮತ್ತಷ್ಟು ವಿಸ್ತರಿಸಿ ವೆಬ್ ಸೀರೀಸ್ ಮೂಲಕ ಪ್ರಸ್ತುತಪಡಿಸಲು ಎಎಂಆರ್ ರಮೇಶ್ ಮುಂದಾಗಿದ್ದಾರೆ. ಅದಕ್ಕೆ 'ವೀರಪ್ಪನ್- ಹಂಗರ್ ಫಾರ್ ಕಿಲ್ಲಿಂಗ್' ಎಂಬ ಶೀರ್ಷಿಕೆ ಇರಿಸಿದ್ದಾರೆ. ಸುಮಾರು ಹತ್ತು ಎಪಿಸೋಡ್ಗಳಲ್ಲಿ ಸರಣಿ ಚಿತ್ರಿಸಲು ಅವರು ಉದ್ದೇಶಿಸಿದ್ದಾರೆ.

ವಿಜಯ್ ಕುಮಾರ್ ಪುಸ್ತಕ
ಆದರೆ, ಅದಕ್ಕೆ ಪ್ರತಿಸ್ಪರ್ಧೆಯೊಂದು ಎದುರಾಗಿದೆ. ಚೆನ್ನೈನ ಪ್ರಸಿದ್ಧ ನಿರ್ಮಾಣ ಸಂಸ್ಥೆ 'ಇ4 ಎಂಟರ್ಟೈನ್ಮೆಂಟ್' ಕೂಡ ವೀರಪ್ಪನ್ ಕುರಿತಾಗಿ ವೆಬ್ ಸೀರೀಸ್ ಮಾಡಲು ಮುಂದಾಗಿದೆ. ಐಪಿಎಸ್ ಅಧಿಕಾರಿಯಾಗಿದ್ದ ನಿವೃತ್ತ ಎಡಿಜಿಪಿ ಕೆ. ವಿಜಯ್ ಕುಮಾರ್ ಬರೆದ 'ವೀರಪ್ಪನ್: ಚೇಸಿಂಗ್ ದಿ ಬ್ರಿಗ್ಯಾಂಡ್' ಪುಸ್ತಕದ ಹಕ್ಕುಗಳನ್ನು ನಿರ್ಮಾಣ ಸಂಸ್ಥೆ ಖರೀದಿ ಮಾಡಿದೆ.

ಕಲಾವಿದರ ಆಯ್ಕೆ ಮುಂದಿನ ತಿಂಗಳು
ವೀರಪ್ಪನ್ ಚಿತ್ರವಿರುವ ಪೋಸ್ಟರ್ನೊಂದಿಗೆ ಈ ಮಾಹಿತಿ ಹಂಚಿಕೊಂಡಿರುವ ನಿರ್ಮಾಣ ಸಂಸ್ಥೆ ವೆಬ್ ಸೀರೀಸ್ ಮಾಡುವುದನ್ನು ಖಚಿತಪಡಿಸಿದೆ. ಇದರ ತಾಂತ್ರಿಕ ವರ್ಗ ಮತ್ತು ಕಲಾವಿದರನ್ನು ಮುಂಬರುವ ತಿಂಗಳುಗಳಲ್ಲಿ ಅಂತಿಮಗೊಳಿಸುವುದಾಗಿ ಅದು ತಿಳಿಸಿದೆ.

ಕಾನೂನು ಕ್ರಮದ ಎಚ್ಚರಿಕೆ
'ಈ ಪುಸ್ತಕವನ್ನು ಆಧರಿಸಿ ಯಾವುದೇ ವೆಬ್ ಸೀರೀಸ್ ಅಥವಾ ಸಿನಿಮಾ ಮಾಡುವುದು, ಎಪಿಸೋಡ್ಗಳನ್ನು ತಯಾರಿಸುವುದು ಅಥವಾ ಪುಸ್ತಕದಲ್ಲಿನ ಯಾವುದೇ ಪಾತ್ರವನ್ನು ಅಥವಾ ಪುಸ್ತಕದಲ್ಲಿ ಚಿತ್ರಿಸಿರುವಂತಹ ವ್ಯಕ್ತಿಗಳ ಮ್ಯಾನರಿಸಂಅನ್ನು ನಕಲು ಮಾಡುವುದು ಅಪರಾಧವಾಗುತ್ತದೆ. ಅದನ್ನು ತಪ್ಪಿದರೆ ಅಂತಹವರ ವಿರುದ್ಧ ಹಕ್ಕುಸ್ವಾಮ್ಯದ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಸಹ ಎಚ್ಚರಿಕೆ ನೀಡಿದೆ.

ಎರಡು ವೆಬ್ ಸೀರೀಸ್ ಸಂಘರ್ಷ
ವೀರಪ್ಪನ್ ಕುರಿತಾಗಿ ವೆಬ್ ಸೀರೀಸ್ ಮಾಡುವುದಾಗಿ ಎಎಂಆರ್ ರಮೇಶ್ ಘೋಷಣೆ ಮಾಡಿದ ಕೆಲವೇ ದಿನಗಳಲ್ಲಿ ಈ ನಿರ್ಮಾಣ ಸಂಸ್ಥೆ ಕೂಡ ವೀರಪ್ಪನ್ ಕುರಿತಾದ ಪುಸ್ತಕ ಆಧರಿಸಿದ ವೆಬ್ ಸೀಸರ್ ಘೋಷಣೆ ಮಾಡಿದೆ. ಅದೂ ಪುಸ್ತಕದಲ್ಲಿನ ಅಂಶ ಮತ್ತು ಪಾತ್ರಗಳನ್ನು ಹೋಲುವಂತೆ ಯಾವುದೇ ವೆಬ್ ಸೀರೀಸ್ ಮಾಡುವಂತಿಲ್ಲ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ. ಇದರಿಂದ ಎರಡು ವೆಬ್ ಸೀರೀಸ್ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆ.

ಗೃಹ ಸಚಿವಾಲಯದ ಸಲಹೆಗಾರ
2004ರಲ್ಲಿ ನಡೆದ ವೀರಪ್ಪನ್ ಎನ್ಕೌಂಟರ್ನಲ್ಲಿ ಐಪಿಎಸ್ ಅಧಿಕಾರಿ ಕೆ. ವಿಜಯ್ ಕುಮಾರ್, ತಮಿಳುನಾಡು ವಿಶೇಷ ಕಾರ್ಯಪಡೆಯ ಮುಖ್ಯಸ್ಥರಾಗಿದ್ದರು. ಪ್ರಸ್ತುತ ಅವರು ಕೇಂದ್ರ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಸಲಹೆಗಾರರಾಗಿದ್ದಾರೆ.


Click it and Unblock the Notifications











