ಜೀ 5 ನಲ್ಲಿ ಸಲ್ಮಾನ್ ಖಾನ್ ಸಿನಿಮಾ ಅಂತಿಮ್ ಹಿಂದಿಕ್ಕಿ ನಂ 1 ಸ್ಥಾನಕ್ಕೇರಿದ 'ಗರುಡ ಗಮನ ವೃಷಭ ವಾಹನ'
2021ರ ಕೊನೆಯಲ್ಲಿ ಸ್ಯಾಂಡಲ್ವುಡ್ ಸಿನಿಮಾವೊಂದು ಈ ಮಟ್ಟಿಗೆ ಸದ್ದು ಮಾಡಬಹುದು ಎನ್ನುವ ಕಲ್ಪನೆ ಯಾರಿಗೂ ಇರಲಿಲ್ಲ. ರಾಜ್ ಬಿ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ತೆರೆ ಮೇಲೆ ಇಂಥದ್ದೊಂದು ಜಾದೂ ಮಾಡಿದ್ದರು. 'ಗರುಡ ಗಮನ ವೃಷಭ ವಾಹನ' ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿ ಆಯಿತು. ಈಗ ಓಟಿಟಿಯಲ್ಲೂ ಈ ಸಿನಿಮಾ ಮೋಡಿ ಮಾಡುತ್ತಿದೆ. ಸಿನಿಮಾ ನೋಡಿದವರೆಲ್ಲಾ ಭೇಷ್ ಅನ್ನುತ್ತಿದ್ದಾರೆ.
Recommended Video
'ಗರುಡ ಗಮನ ವೃಷಭ ವಾಹನ' ಚಿತ್ರದ ಬಗ್ಗೆ ಕನ್ನಡಿಗರಷ್ಟೇ ಮೆಚ್ಚುಗೆ ಸೂಚಿಸಿಲ್ಲ. ಭಾರತೀಯ ಚಿತ್ರರಂಗದ ಗಣ್ಯರು ಕೂಡ ಹಾಡಿ ಹೊಗಳಿದ್ದಾರೆ. ಟಾಲಿವುಡ್ನ ಬಲ್ಲಾಳ ದೇವ ರಾಣಾ ದಗ್ಗುಬಾಟಿ ಸಿನಿಮಾ ನೋಡಿ 'ಇದೊಂದು ಅದ್ಭುತ ಸಿನಿಮಾ. ತುಂಬಾ ಇಷ್ಟಪಟ್ಟೆ.' ಎಂದು ಪ್ರತಿಕ್ರಿಯೆ ನೀಡಿದ್ದರು. ಈಗ ಜೀ 5 ಓಟಿಟಿ ವೇದಿಕೆಯಲ್ಲೂ ಹೊಸ ದಾಖಲೆ ಬರೆದಿದೆ. ಸಲ್ಮಾನ್ ಖಾನ್ ಸಿನಿಮಾವನ್ನೇ ಹಿಂದಿಕ್ಕಿದೆ.

'ಅಂತಿಮ್' ಹಿಂದಿಕ್ಕಿದ್ದ ಗರುಡ ಗಮನ
ರಾಜ್ ಬಿ. ಶೆಟ್ಟಿ ಹಾಗೂ ರಿಷಬ್ ಶೆಟ್ಟಿಯ 'ಗರುಡ ಗಮನ ವೃಷಭ ವಾಹನ' ಜೀ 5 ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಸಂಕ್ರಾಂತಿ ಹಬ್ಬಕ್ಕಾಗಿ ಜನವರಿ 13ರಂದು ಸಿನಿಮಾ ಜೀ 5ನಲ್ಲಿ ಗ್ರ್ಯಾಂಡ್ ರಿಲೀಸ್ ಆಗಿತ್ತು. 'ಗರುಡ ಗಮನ ವೃಷಭ ವಾಹನ' ಬಿಡುಗಡೆಯಾದ ಎಂಟೇ ದಿನಕ್ಕೆ ಜೀ 5ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದೆ. ಬಾಲಿವುಡ್ ಸೂಪರ್ ಸ್ಟಾರ್ ನಟಿಸಿದ 'ಅಂತಿಮ್' ಸಿನಿಮಾವನ್ನೇ ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿತ್ತು. ಕನ್ನಡ ಸಿನಿಮಾವೊಂದು ಓಟಿಟಿ ವೇದಿಕೆ ಈ ಮಟ್ಟಿಗೆ ಮೆಚ್ಚುಗೆ ಗಳಿಸಿದ್ದ ಸ್ಯಾಂಡಲ್ವುಡ್ಗೆ ಹೊಸ ಹುರುಪು ತಂದಿದೆ. ಸದ್ಯ ಈ ಗರುಡ ಗಮನ ಮತ್ತೆ ನಂಬರ್ 2 ಸ್ಥಾನದಲ್ಲಿದೆ.

ಜೀ 5ನಲ್ಲಿ ಯಾವ್ಯಾವ ಸಿನಿಮಾವಿದೆ?
ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಕಾಂಬಿನೇಷನ್ನ ಸಿನಿಮಾ ಜೀ 5 ಓಟಿಟಿಯಲ್ಲಿ ಗರುಡ ಗಮನ ಸದ್ಯ ನಂ 2 ಸ್ಥಾನದಲ್ಲಿದೆ. ಸಲ್ಮಾನ್ ಖಾನ್ ಸಿನಿಮಾ 'ಅಂತಿಮ್' ಮತ್ತೆ ನಂ 1 ಸ್ಥಾನಕ್ಕೇರಿದೆ. ಮೂರನೇ ಸ್ಥಾನದಲ್ಲಿ ತೆಲುಗು ಸಿನಿಮಾ 'ವರುಡು ಕಾವಲೇನು' ಇದ್ದರೆ, ನಾಲ್ಕನೇ ಸ್ಥಾನದಲ್ಲಿ 'ಪಂಡು' ಇದೆ. ಐದನೇ ಸ್ಥಾನದಲ್ಲಿ ನಾಸಿರುದ್ದೀನ್ ಷಾ ನಟನೆಯ ಕೌನ್ ಬನೇಗಿ ಶಿಖಾವತ್ ಇದೆ. ಆರನೇ ಸ್ಥಾನದಲ್ಲಿ ಶಿವಣ್ಣನ 'ಭಜರಂಗಿ 2' ಸದ್ದು ಮಾಡುತ್ತಿದೆ.

'ಗರುಡ ಗಮನ ವೃಷಭ ವಾಹನ' ದಾಖಲೆ
'ಗರುಡ ಗಮನ ವೃಷಭ ವಾಹನ' ಜೀ 5 ಓಟಿಟಿಯಲ್ಲಿ ರಿಲೀಸ್ ಆಗುತ್ತಿದ್ದಂತೆ ಹೊಸ ದಾಖಲೆ ಬರೆದಿತ್ತು. ಕೇವಲ ಮೂರು ದಿನಗಳಲ್ಲಿಯೇ 8 ಕೋಟಿಗೂ ಅಧಿಕ ನಿಮಿಷಗಳ ಕಾಲ ಈ ಸಿನಿಮಾವನ್ನು ವೀಕ್ಷಣೆ ಮಾಡಿದ್ದರು. ಅತೀ ಹೆಚ್ಚು ಆಡಿಯನ್ಸ್ ಹೊಂದಿರುವ ಹಿಂದಿ ಸಿನಿಮಾಗಳ ಮಾರುಕಟ್ಟೆಗೆ ಕನ್ನಡದ ಸಿನಿಮಾ 'ಗರುಡ ಗಮನ ವೃಷಭ ವಾಹನ' ಸೆಡ್ಡು ಹೊಡೆದಿದೆ. ಬೇರೆ ಭಾಷೆಯ ವೀಕ್ಷಕರೂ ಈ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.

ಆರ್ಜಿವಿ ಮೆಚ್ಚಿದ ಗರುಡ ಗಮನ
'ಗರುಡ ಗಮನ ವೃಷಭ ವಾಹನ' ಸಿನಿಮಾವನ್ನು ಭಾರತದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮೆಚ್ಚುಗೆ ಸೂಚಿಸಿದ್ದಾರೆ. ರಾಜ್ ಬಿ ಶೆಟ್ಟಿ ನಿರ್ದೇಶನಕ್ಕೆ ಭೇಷ್ ಅಂದಿದ್ದಾರೆ. " ಈ ಚಿತ್ರ ಮತ್ತೊಂದು ಲೆವೆಲ್ನಲ್ಲಿದೆ. ರಾಮ್ ಗೋಪಾಲ್ ವರ್ಮಾ, ರಾಜ್ ಬಿ ಶೆಟ್ಟಿ ಪಾತ್ರಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಈ ಸಿನಿಮಾಗಾಗಿ ಸಂಪೂರ್ಣ ರೂಪಾಂತರ ಹೊಂದಿದ್ದಾರೆ." ಎಂದು ಆರ್ಜಿವಿ ಟ್ವೀಟ್ ಮಾಡಿದ್ದಾರೆ.


Click it and Unblock the Notifications











