Don't Miss!
- Finance ಕಬ್ಬನ್ ಪಾರ್ಕ್ನಲ್ಲಿ ಮರ ಅಪ್ಪಿಕೊಳ್ಳುವ ಕಾರ್ಯಕ್ರಮಕ್ಕೆ ತಲಾ 1,500 ರೂ. ಶುಲ್ಕವಿಟ್ಟ ಕಂಪನಿ!
- Technology Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- News ರಜನಿಕಾಂತ್, ವಿಜಯ್ ಸೇತುಪಥಿ, ಧನುಷ್.. ಯಾರೆಲ್ಲಾ ವೋಟ್ ಹಾಕಿದ್ರು?
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಟಿಟಿ ಪ್ಲಾಟ್ಫಾರ್ಮ್ನಲ್ಲಿಯೂ ಮೋಸ ಬೇಡ: ನಿರ್ಮಾಪಕರ ಪರ ಧ್ವನಿ ಎತ್ತಿದ ಜಗ್ಗೇಶ್
ಲಾಕ್ ಡೌನ್ ಸಮಯದಲ್ಲಿ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿದೆ. ಅದರಲ್ಲಿ ಸಿನಿಮಾಗಳಿಗೆ ಕೋಟಿಗಟ್ಟಲೆ ಹಣ ಹೂಡಿ ಅದನ್ನು ಮರಳಿಪಡೆಯಲು ಕಾಯುತ್ತಿರುವ ನಿರ್ಮಾಪಕರೂ ಸೇರಿದ್ದಾರೆ. ಕೆಲವು ನಿರ್ಮಾಪಕರು ಒಟಿಟಿ (ಓವರ್ ದಿ ಟಾಪ್) ಮೂಲಕ ಚಿತ್ರ ಬಿಡುಗಡೆ ಮಾಡಿ ಖರ್ಚು ಮಾಡಿದ ಹಣವನ್ನಾದರೂ ವಾಪಸ್ ಪಡೆಯಲು ಪ್ರಯತ್ನಿಸುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಎಲ್ಲವೂ ಸರಿಯಾಗಿ, ಚಿತ್ರಮಂದಿರಗಳು ತೆರೆದು ಸಿನಿಮಾ ಬಿಡುಗಡೆಯಾದ ಬಳಿಕವೂ ಅವರಿಗೆ ಲಾಭ ಸಿಗುತ್ತದೆ ಎನ್ನುವಂತಿಲ್ಲ.
Recommended Video
ಚಿತ್ರೀಕರಣ, ವಿತರಣೆ, ಬಿಡುಗಡೆ, ಚಿತ್ರಮಂದಿರದ ಬಾಡಿಗೆ ಮುಂತಾದ ಎಲ್ಲ ಪ್ರಕ್ರಿಯೆಗಳೂ ದುಬಾರಿಯಾಗುವ ಸಾಧ್ಯತೆ ಇದೆ. ಹಾಗೆಯೇ ಈ ಸಂದರ್ಭದಲ್ಲಿ ಚಿತ್ರಮಂದಿರಗಳು ಭರ್ತಿಯಾಗುವ ಸಾಧ್ಯತೆಯೂ ಕಡಿಮೆ. ಈಗಾಗಲೇ ಒಟಿಟಿ ಬಿಡುಗಡೆಗೆ ಚಿತ್ರಮಂದಿರಗಳು ಅಡ್ಡಗಾಲು ಹಾಕುತ್ತಿವೆ. ಇದರಿಂದ ನಿರ್ಮಾಪಕರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ ಎನ್ನಲಾಗುತ್ತಿದೆ. ನಟ ಜಗ್ಗೇಶ್, ಸಂಕಷ್ಟದಲ್ಲಿರುವ ನಿರ್ಮಾಪಕರ ಪರ ಧ್ವನಿ ಎತ್ತಿದ್ದಾರೆ. ಮುಂದೆ ಓದಿ..
ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಅಲ್ಲದೆ ಇನ್ನೂ 25 OTT ಗಳಿವೆ
ಒಟಿಟಿಯಲ್ಲಿ ಆಯ್ಕೆ ಇದೆ
ಒಟಿಟಿ ಪ್ಲಾಟ್ಫಾರ್ಮ್ ಪ್ರೇಕ್ಷಕ ಚಿತ್ರ ನೋಡುವ ವ್ಯವಸ್ಥೆ. ಚಿತ್ರಮಂದಿರಕ್ಕೆ ಪ್ರೇಕ್ಷಕ ನಾನಾ ಕಾರಣಕ್ಕೆ ಬರದಿದ್ದಾಗ ಅವನಿರುವ ಜಾಗಕ್ಕೆ ಸಿನಿಮಾ ತೋರುವ ಹೊಸ ವ್ಯವಹಾರ. ಆದರೆ ಟಿವಿಯಲ್ಲಿ ಚಿತ್ರ ನೋಡುವ ಅದೇ ಹಳೆ ವ್ಯವಸ್ಥೆ ಇದೆ. ಟಿವಿಯಲಿ ತಿಂಗಳಿಗೆ ದುಡ್ಡು ಕೊಟ್ಟು ನೋಡೋದು. ಒಟಿಟಿಯಲ್ಲಿ ಇಷ್ಟಪಟ್ಟ ಸಿನಿಮಾ ಆಯ್ಕೆ ಮಾಡಬಹುದು. ಅದನ್ನ ದುಡ್ಡುಕೊಟ್ಟು ನೋಡಬಹುದು.
ನಿರ್ಮಾಪಕರಿಗೆ ವ್ಯತ್ಯಾಸವಿಲ್ಲ
ಆದರೆ ಇದರಲ್ಲಿ ನಿರ್ಮಾಪಕರಿಗೆ ಯಾವ ವ್ಯತ್ಯಾಸವೂ ಇಲ್ಲ. ಕಾರಣ ಟಿವಿ, ಥಿಯೇಟರ್ ಹೆಸರು ದುಡ್ಡು ಉಳ್ಳವರ ಲಾಬಿ ಆಗಿತ್ತು. ಯಾವ ಲಾಬಿಯೂ ಇಲ್ಲದವರ ಗೋಳಾಗಿತ್ತು. ಈಗ ಒಟಿಟಿಯಲ್ಲಿಯೂ ಇದೇ ಗತಿ ಮುಂದುವರಿದು ಉಳ್ಳವರಿಗೆ ಮಾತ್ರ ದಕ್ಕಿ, ಹೊಸಬರು ಅದೇ ಸಂಕಷ್ಟದ ಸುಳಿಯಲ್ಲೆ ಉಳಿಯುತ್ತಾರೆ. ಎಲ್ಲರಿಗೂ ಸಹಾಯ ಆಗಲು ಕೆಲವು ಷರತ್ತುಗಳು ಇರಬೇಕಾದ ಅಗತ್ಯವಿದೆ ಎಂದು ಜಗ್ಗೇಶ್ ಹೇಳಿದ್ದಾರೆ.
ನಿರ್ಮಾಕರಿಗೆ ಹಕ್ಕು ಸಿಗಲಿ
ಹೇಗೆ ಯಡಿಯೂರಪ್ಪ ರವರು ರೈತರು ತಾವು ಬೆಳೆದ ಬೆಳೆ ಇಷ್ಟಬಂದವರಿಗೆ ಮಾರುವ ಕಾನೂನು ಎಪಿಎಂಸಿಯಲ್ಲಿ ತಂದಿದ್ದಾರೋ, ಹಾಗೆಯೇ ಸಿನಿಮಾ ನಿರ್ಮಾಪಕ ತನ್ನ ಸಿನಿಮಾ ಇಷ್ಟಬಂದ ವೇದಿಕೆಯಲ್ಲಿ ಮಾರುವ, ಬಿತ್ತರಿಸುವ ಹಕ್ಕು ಸ್ವಾತಂತ್ರವನ್ನು ಪಡೆದುಕೊಳ್ಳುವಂತೆ ಆಗಬೇಕು. ಹಾಗೆಯೇ ನಮ್ಮ ಶ್ರಮವನ್ನು ನುಂಗುವ ನುಂಗಣ್ಣರನ್ನು ದೂರ ಇಡಬೇಕು. ಅಂದರೆ ಪಾರದರ್ಶಕ ಮಾರುಕಟ್ಟೆ ವ್ಯವಸ್ಥೆ ಬರಬೇಕಿದೆ ಎಂದಿದ್ದಾರೆ.
ನುಂಗಣ್ಣರ ಕೃಪೆ ಬೇಕಾಗಿದೆ
ಇಂದು ಚಿತ್ರಮಂದಿರದಲ್ಲಿ ಕಲೆಕ್ಷನ್ ರಿಪೋರ್ಟ್ನಲ್ಲಿ ಮೋಸ ನಡೆಯುತ್ತಿದೆ. ಟಿವಿಯಲ್ಲಿ ಅವರು ಕೊಟ್ಟಷ್ಟು ಭಿಕ್ಷೆ ಪಡೆದು ವಿತರಣೆ ಹಕ್ಕು ನೀಡುವುದು ಶಾಶ್ವತ ಅವಧಿಗಾಗಿ. ಅಂದರೆ ಸಿನಿಮಾ ಮಾಡಿ ಅವರ ಪಾದಕ್ಕೆ ಸಮರ್ಪಣೆ ಮಾಡಿ ಮರೆತುಬಿಡಬೇಕು. ಹೀಗೆ ಟಿವಿಗೆ ಮಾರಲು ಕೂಡ ಕೆಲವು ನುಂಗಣ್ಣರ ಕೃಪೆ ಇರಬೇಕು. ಇಲ್ಲದಿದ್ದರೆ ಡಬ್ಬ ಸಿನಿಮಾ ಎಂದು ತಿರಸ್ಕರಿಸುವಂತೆ ಟಿವಿಯವರೊಂದಿಗೆ ಸಲಹೆ ನೀಡುತ್ತಾರೆ ಎಂದು ಸ್ಯಾಟಲೈಟ್ ಹಕ್ಕು ಮಾರಾಟದಲ್ಲಿಯೂ ದಲ್ಲಾಳಿಗಳ ಹಸ್ತಕ್ಷೇಪದ ಕುರಿತು ಆರೋಪ ಮಾಡಿದ್ದಾರೆ.
ಮಧ್ಯವರ್ತಿಗಳ ಹಾವಳಿ
ಈಗ ಒಟಿಟಿ ವೇದಿಕೆಗೂ ಇಂಥ ನುಂಗಣ್ಣರ (ಮಧ್ಯವರ್ತಿಗಳ) ಪ್ರವೇಶ ಆಗುತ್ತದೆ. ಪ್ಲಾಟ್ ಫಾರ್ಮ್ ಮುಖ್ಯಸ್ಥರ ಬುಟ್ಟಿಗೆ ಹಾಕಿಕೊಂಡು, ತಮ್ಮ ಹೆಸರಿನದ್ದೇ ಪ್ರಭಾವ ಬಳಸಿ ಎಲ್ಲಾ ತರಹ ಬಿಲ್ಡಪ್ ಕೊಟ್ಟು ಕನ್ನಡ ಚಿತ್ರರಂಗಕ್ಕೆ ನಾವೇ ಎಲ್ಲಾ ಅಂತ ಪುಂಗಿ ಊದಿ, ಒಟಿಟಿಯವರನ್ನು ಬುಟ್ಟಿಗೆ ಹಾಕಿಕೊಂಡು ಅವರ ಬೇಳೆ ಬೇಯಿಸಲು ಶುರು ಮಾಡುತ್ತಾರೆ. ಇದರಿಂದ ಮತ್ತೆ ಸಣ್ಣ ನಿರ್ಮಾಪಕರು, ನಟ ನಟಿರಿಗೆ ದೇವರೇಗತಿ ಎಂದು ಒಟಿಟಿ ಬಂದರೂ ಸಣ್ಣ ನಿರ್ಮಾಪಕರಿಗೆ ತೊಂದರೆ ತಪ್ಪಿದ್ದಲ್ಲ ಎಂಬುದಾಗಿ ಹೇಳಿದ್ದಾರೆ.
ಚಿತ್ರರಂಗ ಒಂದಾಗಿ ವೇದಿಕೆ ರಚಿಸಲಿ
ಈಗಲಾದರೂ ಸಿನಿಮಾಗಾಗಿಯೇ ಬಾಳಿದ ಬಾಳುತ್ತಿರುವ ಹಿರಿಯರು ಒಗ್ಗಟ್ಟಾಗಿ ಒಂದು ವೇದಿಕೆ ರಚಿಸಿ ನಿಸ್ವಾರ್ಥಯತ್ನ ಮಾಡಿದರೆ ಉದ್ಯಮ ಎಲ್ಲಾ ವೇದಿಕೆಗಳಲ್ಲಿಯೂ ನಿಲ್ಲುತ್ತದೆ, ಉಳಿಯುತ್ತದೆ. ಇಲ್ಲದಿದ್ದರೆ ಪರಭಾಷೆಯ ಚಿತ್ರಗಳು ರಾಜರಂತೆ ನಮ್ಮ ಭಾಷೆಯ ಸಿನಿಮಾಗಳನ್ನು ಆಕ್ರಮಿಸಿ ನಮ್ಮ ಭಾಷೆ ಗುಲಾಮರಂತೆ ಆಗುವುದು ನಿಶ್ಚಿತ. ನಮ್ಮ ಚಿತ್ರರಂಗಕ್ಕೆ ನಮ್ಮವರೆ ಶತ್ರುಗಳು ಎಂದು ಯಾರನ್ನೂ ನೇರವಾಗಿ ಉಲ್ಲೇಖಿಸದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಲವರ ಕೈಯಲ್ಲಿ ಸಿಲುಕುತ್ತದೆ
ಪರಭಾಷೆ ನಿರ್ಮಾಪಕರು, ನಿರ್ದೇಶಕರಿಗೆ ಬಿಲ್ಡಪ್ ಕೊಟ್ಟು ಕರ್ನಾಟಕ ಎಂದರೆ ಇಷ್ಟೇ ಜನ ಅಂತ ಮುದ್ರೆ ಒತ್ತಿಸಿ ಡಬ್ಬಿಂಗ್ ಸಿನಿಮಾ, ಡಬ್ಬಿಂಗ್ ರೈಟ್ಸ್ ನೂರಾರು ಪಡೆದು ಉದ್ಯಮವನ್ನು ಕಬಳಿಸಿ ಬಲಿಷ್ಟರಾಗಿದ್ದಾರೆ. ಅಂತವರ ಕಪಿಮುಷ್ಟಿಯಿಂದ ಉದ್ಯಮ ಹೊರಬಂದರೆ ಹೊಸ ನಿರ್ಮಾಪಕರು, ನಿರ್ದೇಶಕರು, ನಟ-ನಟಿಯರು ಹೇರಳವಾಗಿ ಬೆಳವಣಿಗೆ ಆಗುತ್ತಾರೆ. ಕನ್ನಡದ ಮುಂದಿನ ಆಸ್ತಿ ಆಗುತ್ತಾರೆ ಎಂದು ಉದ್ಯಮ ಕೆಲವರ ಹಿಡಿತಕ್ಕೆ ಸಿಲುಕುತ್ತಿದೆ ಎಂಬ ವಿಷಾದ ವ್ಯಕ್ತಪಡಿಸಿದ್ದಾರೆ.
ಭಿಕ್ಷುಕರಂತೆ ಮಾಡಬೇಡಿ
ನಮ್ಮ ನೋಡುವ ಕಲಾಭಿಮಾನಿಗಳ ಚಪ್ಪಾಳೆ ನಟ-ನಟಿಯನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ನಮ್ಮನ್ನು ಬೆಳೆಸಿದ ನಿರ್ಮಾಪಕರು ಚಿತ್ರಮಂದಿರ, ಟಿವಿಯವರ ಬಳಿ ಬೇಡುವಂತೆ ಮಾಡಿರುವಂತೆ ಮುಂದೆ ಒಟಿಟಿ ಮುಂದೆಯೂ ಭಿಕ್ಷುಕನ ಹಾಗೆ ಬೇಡುವಂತೆ ಮಾಡಬೇಡಿ. 29 ಚಿತ್ರಗಳನ್ನು ನಿರ್ಮಿಸಿದ ನಿರ್ಮಾಪಕನಾಗಿ ನನ್ನ ಬೇಡಿಕೆ ಇದು, 145 ಸಿನಿಮಾ ನಟಿಸಿದ ನಟನಾಗಿ ಅಲ್ಲ. ನನ್ನ ಮಾತು ಮುಟ್ಟಬೇಕಾದ ಜಾಗ ಮುಟ್ಟಿ ವ್ಯವಸ್ಥೆ ಬದಲಾಗಲಿ ಎನ್ನುವ ಕಾಳಜಿಯಿಂದ ಹೇಳುತ್ತಿದ್ದೇನೆ ಎಂದಿದ್ದಾರೆ.
ವಾಣಿಜ್ಯ ಮಂಡಳಿಯಲ್ಲಿ ಚರ್ಚೆಯಾಗಲಿ
ಚಿತ್ರರಂಗದ ಬಗ್ಗೆ ಇಂದು ನಾನು ಬರೆದ ನನ್ನ ಅನಿಸಿಕೆ ಅಕ್ಷರವಾಗಿ ಇಲ್ಲಿ ಉಳಿಯದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚರ್ಚೆಯಾಗಲಿ. ಮಾಧ್ಯಮಮಿತ್ರರು ಈ ವಿಷಯದಲ್ಲಿ ಕನ್ನಡ ನಿರ್ಮಾಪಕರ ಪರವಾಗಿ ನಿಲ್ಲಬೇಕು ಎಂದು ವಿನಂತಿ. ನಾವು ಬೆಳೆದು ದಡಮುಟ್ಟಿದ್ದೇವೆ. ಹೊಸಬರು ನಮ್ಮಂತೆ ಬೆಳೆದು ಕನ್ನಡಚಿತ್ರರಂಗ ಉಳಿಸಲಿ ಎನ್ನುವುದು ನನ್ನ ಆಶಯ ಎಂದು ತಿಳಿಸಿದ್ದಾರೆ.
ಒಟಿಟಿ ವಿರುದ್ಧ ಹೇಳಿಲ್ಲ
ಜಗ್ಗೇಶ್ ಅವರ ಅಭಿಪ್ರಾಯಕ್ಕೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಒಟಿಟಿಯಲ್ಲಿ ಸಿನಿಮಾ ನೋಡುವುದು ನಮ್ಮ ಹಕ್ಕು ಎಂದು ಕೆಲವು ಹೇಳಿದ್ದಾರೆ. ಅದಕ್ಕೆ ಜಗ್ಗೇಶ್ ತಮ್ಮ ಮಾತಿನ ಅರ್ಥ ಅದಲ್ಲ, ಎಂದು ಸ್ಪಷ್ಟನೆ ನೀಡಿದ್ದಾರೆ. ನನ್ನ ಬರವಣಿಗೆ ಒಟಿಟಿಯಲ್ಲಿ ಚಿತ್ರ ಬಿಡುಗಡೆ ಮಾಡುವುದರ ವಿರುದ್ಧ ಅಲ್ಲ. ಒಟಿಟಿ ಬಗ್ಗೆ ಯಾವ ತಕರಾರೂ ಇಲ್ಲ. ಬದಲಾಗಿ ಚಿತ್ರದ ವ್ಯಾಪಾರ ಪಾರದರ್ಶಕವಾಗಿರಲಿ ಎಂದು. ಎಲ್ಲ ನಟರ ಚಿತ್ರಗಳೂ ಮಾರಾಟವಾಗಿ ನಿರ್ಮಾಪಕರು ದಡ ಮುಟ್ಟಲಿ ಎಂದು. ಅಲ್ಲಿ ವಂಚಕರು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಎಂದು.
ನಿರ್ಮಾಪಕನಿಗೆ ನ್ಯಾಯ ಸಿಗಲಿ
ಹಾಗೆಯೇ ನಾನು ಡಬ್ಬಿಂಗ್ ವಿರುದ್ಧ ಮಾತನಾಡಿಲ್ಲ. ಇದನ್ನು ಎಲ್ಲರ ಅರ್ಥ ಮಾಡಿಕೊಂಡು ನಮ್ಮ ಕನ್ನಡ ನಿರ್ಮಾಪಕನಿಗೆ ನ್ಯಾಯ ಸಿಗಲಿ ಎಂದು ಉದ್ದೇಶ. ನಿಮ್ಮ ದುಡ್ಡು ನಿಮ್ಮ ಆಯ್ಕೆ ತಕರಾರಿಲ್ಲ. ಎಲ್ಲರಿಗೂ ಸಿನಿಮಾ ಬೇಕು, ನಟ ಬೇಕು. ಆದರೆ ಅವರನ್ನು ತಯಾರು ಮಾಡಿದ ನಿರ್ಮಾಪಕನ ಮೇಲೆ ಕರುಣೆ ಇಲ್ಲ. ಇದು ನಮ್ಮ ದೌರ್ಭಾಗ್ಯ ಎಂದು ವಿವರಿಸಿದ್ದಾರೆ.